ಸೆಪ್ಟೆಂಬರ್ ೧೯ ರ ಪ್ರಜಾವಾಣಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಹಾಗೂ ಭಾರತದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆ -ಇವುಗಳ ನಡುವಿನ ಸಂಬಂಧದ ಬಗ್ಗೆ ಶ್ರೀಯುತ ಸಿ. ಎನ್. ರಾಮಚಂದ್ರ ಅವರು ಬರೆದಿದ್ದರು. ಉಪಯುಕ್ತ ಮಾಹಿತಿಗಳು ಮತ್ತೆ ಉದಾಹರಣೆಗಳ ಜೊತೆಗೆ. ಅಲ್ಲಿ ಅವರಿಗೆ ಕಾನೂನು ಕಲಾವಿದರ ಸ್ವಾತಂತ್ರ್ಯಕ್ಕೆ ತೊಡಕು ತಂದಿಟ್ಟಿದೆ ಅನ್ನುವ ಭಾವವಿದ್ದಂತನಿಸಿತು. ಹೌದು ಅಲ್ಲಗಳ ಲೆಕ್ಕಾಚಾರದ ಮಟ್ಟಿಗೆ ಮತ್ತು ಲಾಜಿಕ್ ನ ಮೂಲಕ ಯೋಚಿಸುವುದಾದರೆ ಅದು ನಿಜವೆನಿಸುತ್ತದೆ. ಆದರೆ ಎಲ್ಲೋ ಒಂದು ಕಡೆ ಎಲ್ಲ ಸಂವಿಧಾನ, ಕಾನೂನು, ರೂಲ್ಸ್-ರೆಗುಲೇಶನ್ಸ್ ಗಳಿಗೆ ಮೀರಿದ ಒಂದು ನೀತಿಸಂಹಿತೆ ನಮ್ಮೊಳಗೇ ತುಂಬ ಸ್ಪಷ್ಟವಾಗಿಯೇ ಮೂಡಿಸಲ್ಪಟ್ಟಿದೆ, ಮನಸ್ಸಾಕ್ಷಿಯ ಮಾತು ಮೀರದಂತೆ ಮಾಡುವ ಯಾವುದೇ ಕೆಲಸವೂ ಸಾಮಾನ್ಯ ಇತರರನ್ನು ನೋಯಿಸುವ, ಗೊಂದಲಕ್ಕೆ ಹಾಕುವ ಹಾದಿಯಲ್ಲಿರಲಾರದು ಅನ್ನಿಸುತ್ತದೆ. ಯಾಕೆಂದರೆ ಉದ್ದೇಶ ಸ್ಪಷ್ಟ ಮತ್ತು ನಮ್ಮ ಸಮಾಜದ ಹಿತವನ್ನು ಕಾಪಾಡುವದ್ದು ಅಲ್ಲವಾಗಿರುವ ಪಕ್ಷದಲ್ಲಿ ಅಂಥ ಒಂದು ಪ್ರಯತ್ನಕ್ಕೆ ನಮ್ಮೊಳಗಿನಿಂದ ಪೂರ್ಣಪ್ರಮಾಣದ ಬೆಂಬಲ ದೊರೆಯಲಾರದು. ಆಗ ನಾವು ಅಭಿವ್ಯಕ್ತಿಯಲ್ಲಿ ಸ್ವಾತಂತ್ರ್ಯ ವಹಿಸದೇ ಇರುವುದು ಸಾಧ್ಯವಾದರೆ ಅದು ಯಾವುದೇ ಕಲಾವಿದರಾಗಿರಬಹುದು, ನಮ್ಮ ಜವಾಬ್ದಾರಿ ಅನ್ನುವುದು ಒಂದಿರುತ್ತಲ್ಲಾ ಅದಕ್ಕೆ ಮರ್ಯಾದೆ ಕೊಟ್ಟಂತಾಗುತ್ತದೆ. ಮತ್ತೆ ಬರಹಗಾರರೇ ಆಗಿರಲಿ, ಇನ್ಯಾವುದೇ ಕಲಾಕಾರರಾಗಿರಲಿ, ಒಟ್ಟಿನಲ್ಲಿ ಮನುಷ್ಯರೆಲ್ಲರ ಅತ್ಯಂತ ಮೂಲ ಜೀವನಧರ್ಮ ಅಂದರೆ ಇನ್ನೊಂದು ಜೀವಿಯನ್ನು ನೋಯಿಸದೆ ಬಾಳುವುದು. ಅದುಬಿಟ್ಟು ಒಳಗಿನ ದನಿಯನ್ನು ಕಡೆಗಾಣಿಸಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಭಿವ್ಯಕ್ತಿಯಲ್ಲಿ ಸ್ವಚ್ಛಂದತೆ ತೋರಿದರೆ, ಅದು ಒಂದು ವರ್ಗದ, ಒಂದು ಸಮುದಾಯದ, ಒಂದು ಮನಸ್ಥಿತಿಯ ಮತ್ತು ಆ ಮೂಲಕ ಸಮಾಜದ ಶಾಂತಿಯನ್ನು ಕದಡುವುದು ಖಂಡಿತ. ಅದೂ ಸಮಾಜದ ಸರಾಗ ನಡೆಗೆ ತೊಡಕಾಗಿರುವ ಯಾವುದಾದರೊಂದು ಅಡೆತಡೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಡೆಯುವ ಯತ್ನವಾದರೆ, ಮತ್ತದು ಪುರಾವೆ, ಆಧಾರಗಳ ಮೂಲಕ ನಿರೂಪಿತ ಕಹಿಸತ್ಯವನ್ನೇ ಸಮಾಜದ ಮುಂದಿಟ್ಟರೆ ಅಲ್ಲಿ ಉದ್ದೇಶ ಒಳ್ಳೆಯದೇ ಅಂದುಕೊಂಡು ಸುಮ್ಮನಿರಬಹುದು. ಆದರೆ ನಂಬಿಕೆ ಶ್ರದ್ಧೆಗಳನ್ನೇ ಆಧಾರಸ್ತಂಭವಾಗಿಟ್ಟುಕೊಂಡು ಮುನ್ನಡೆಯುತ್ತಿರುವ ನಮ್ಮ ಸಮಾಜದಲ್ಲಿ, ಸಾಧನೆ ಎಂದು ನಾವು ಕರೆದುಕೊಳ್ಳುವ ನಮ್ಮ ಪ್ರಯತ್ನಗಳ ಮೂಲಕ ಬರೀ ನಮ್ಮೊಳಗಿನ ಅಹಂ ನ್ನು ತಣಿಸಲಿಕ್ಕಾಗಿ ಇಂಥ ಸಂಶೋಧನೆಗಳ ಮೊರೆಹೋಗುವುದು ಮತ್ತು ಅದನ್ನು ಸಮಾಜದ ಮುಂದಿಟ್ಟು ಅಲ್ಲಿ ಪರವಿರೋಧಗಳ ಒಂದು ಅಲೆಯನ್ನು ಹುಟ್ಟುಹಾಕಿ ವೃಥಾ ಅಶಾಂತಿ ಸೃಷ್ಟಿಸುವುದು ಸರಿಯೇ? ಇದಕ್ಕೆ ಕಾನೂನು, ಸಂವಿಧಾನಗಳ ಆಧಾರ ತೋರಿಸಿದರೆ ಸಮಂಜಸವಾಗಲಾರದು ನನ್ನ ಪ್ರಕಾರ. ಎಲ್ಲ ಕಲೆಗಳು ಮನುಷ್ಯತ್ವಕ್ಕೆ ಒತ್ತು ಕೊಡುವಂತಿರಬೇಕೇ ಹೊರತು ಬರೀ ಪಾಂಡಿತ್ಯ, ಪರಿಶ್ರಮಗಳ ಮತ್ತು ಆ ಮೂಲಕ ನಾವು ತಲುಪಿದೆವು ಅನಿಸುವ ಒಂದು ಸತ್ಯದ ಪ್ರದರ್ಶನವಾಗುಳಿದರೆ, ಕಲೆಯ ಮೂಲ ಉದ್ದೇಶವಾದ ಮನೋರಂಜನೆ ಸಾಧ್ಯವಾಗದು. ಮತ್ತೆ ಅಂಥ ಪ್ರಯತ್ನ ಅದು ಸಂಶೋಧನೆಯೇ ಇರಬಹುದು, ಅಥವಾ ಕಾಲ್ಪನಿಕ ಕತೆಯೇ ಇರಬಹುದು, ಒಂದು ಸರಾಗ ನಡೆದುಕೊಂಡು ಹೋಗುತ್ತಿರುವ ವ್ಯವಸ್ಥೆಯ ಸುಸ್ಥಿತಿಯನ್ನು ಕದಡುವ ಅಪಾಯವಿರುವಂಥದ್ದಾದರೆ ಅದು ಖಂಡಿತಾ ಅನಗತ್ಯ ಅನಿಸುತ್ತದೆ. ಸತ್ಯ ಬದುಕಿಗೆ ಪೂರಕವಾಗುವಂತಿದ್ದರೆ ಕಂಡುಕೊಳ್ಳುವಾ ಹರಸಾಹಸ ಪಟ್ಟು. ಅದಿಲ್ಲದೆಯೂ ಬದುಕು ಸುಲಲಿತವಾಗಿ ನಡೆದುಕೊಂಡು ಹೋಗುತ್ತಿರಬೇಕಾದರೆ ಸಂಶೋಧನೆಯ ಅಥವಾ ಕಲ್ಪನೆಯ ಮೂಲಕ ಹೊಸದಾರಿ ಕಂಡುಕೊಳ್ಳುವ ಅಗತ್ಯವಿರುವ ಜ್ವಲಂತ ಸಮಸ್ಯೆಗಳೆಷ್ಟೋ ಇರುವಾಗ ಎಲ್ಲ ಬಿಟ್ಟು ಚಂದದ ಪರಿಕಲ್ಪನೆಯೊಂದು,ಮನಸಿಗೆ ಮುದ ಕೊಡುವಂಥದ್ದನ್ನು ವಿರೂಪಗೊಳಿಸುವ ಮಾತು ಅದೆಷ್ಟು ಪುರಾವೆ, ಆಧಾರಗಳ ಮೂಲಕ ಪ್ರಸ್ತುತವಾದರೂ ಅನಗತ್ಯವೇ ಹೌದು ಅಂತ ಅನಿಸುವುದು ನನಗೆ. ಯಾವುದೇ ಒಂದು ವಿಷಯವನ್ನು ಇದಮಿತ್ಥಂ ಅಂತ ಯಾರೂ ಹೇಳಲಾಗದ ಸಾಪೇಕ್ಷ ಜಗತ್ತು ಇದು . ಹಾಗಿರುವಾಗ ಕಣ್ಮುಂದಿರುವುದು ಸತ್ಯವೆಷ್ಟೋ ಅಷ್ಟೇ ಸುಳ್ಳೂ ಹೌದು. ಹಾಗಂತ ಸತ್ಯವೆಂಬುದು ಸಾಧಿಸಲ್ಪಡದೆ ಇದ್ದಲ್ಲಿರುವುದು ಬರೀ ಸುಳ್ಳು ಎಂದೂ ಹೇಳಲಾಗದು ಅಲ್ಲವೇ? ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು ಅಂದ ಮಾತ್ರಕ್ಕೆ ಚಂದದಲ್ಲಿ ನಡೆದುಕೊಂಡು ಹೋಗುತ್ತಿರುವ ಒಂದು ವ್ಯವಸ್ಥೆ ಅದು ಸತ್ಯಸಾಧನೆಯ ಕೋರಿಕೆಯಿಡದೆಯೇ ತನ್ನಷ್ಟಕ್ಕೆ ತಾನು ಇರುವಾಗ , ನಾವು ನಮ್ಮ ಹಕ್ಕನ್ನು ಸಾಧಿಸಿ ಅಲ್ಲಿನ ಶಾಂತಿ ಕದಡುವ ಪ್ರಯತ್ನ ಮಾನವೀಯ ನೆಲೆಯಲ್ಲಿ ಸರಿಯಲ್ಲ. ಕಾನೂನು ಎಷ್ಟೇ ಸಮರ್ಥಿಸಲಿ, ಅಥವಾ ಸಮರ್ಥಿಸದಿರಲಿ, ಅದು ಕಲಾವಿದನ ಜವಾಬ್ದಾರಿಗೆ ಅವನು ತೋರುವ ಸಣ್ಣ ಉಪೇಕ್ಷೆ ಅನಿಸುತ್ತದೆ ನನಗೆ.
nicely expressed your views.
ReplyDeletethank you
Deleteಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿ ಕುರಿತು ಚೆನ್ನಾಗಿ ವ್ಯಾಖ್ಯಾನ ಮಾಡಿದ್ದೀರಿ.... ಮನಸಾಕ್ಷಿಗಿಂತ ದೊಡ್ಡದು ಯಾವುದೂ ಇಲ್ಲ
ReplyDelete