Monday, July 29, 2013

2.ಇಂದು ಮುಂಜಾವಿನೊಂದು ಗಳಿಗೆ

 
ಬೆಳಿಗ್ಗೆ ಅಂಗಳ ಗುಡಿಸುತ್ತಿದ್ದೆ. ಆರು ಗಂಟೆಯ ಆಸುಪಾಸು. ಪ್ರತಿದಿನವೂ ಇದು ನನಗೆ ತುಂಬಾ ಪ್ರಿಯವಾದ ಹೊತ್ತು. ಧ್ಯಾನದ ಸಣ್ಣದೊಂದು ಸೆಶನ್ ನ ನಂತರ ತೇಲುವಂತೆ ಭಾಸವಾಗುತ್ತಿರುವ ದೇಹವನ್ನು ನಸುಕಿನ ತಂಗಾಳಿ ತಾಗಿದಾಗ ತುಂಬಾ ಮುದವೆನಿಸುತ್ತದೆ, ಅಪ್ರಯತ್ನ ಮುಖದಲ್ಲೊಂದು ಮುಗುಳ್ನಗು ಓಡಾಡುತ್ತದೆ..
 
ಇಂದಿನ ಮುಂಜಾವು ಇನ್ನೂ ಸವಿಯೆನಿಸುತಿತ್ತು.. ಏನೋ ಭಾರವೊಂದು ಕಳಚಿಕೊಂಡಾಗಿನ ನಿರಾಳ ಭಾವನೆ..
ಅಂಗಳದ ಸೆರಗನ್ನ ಪಾರಿಜಾತ ಹೂಗಳು ಹೆಚ್ಚಿನವು ಕೆಂಪು ತೋರುತ್ತಾ, ಇನ್ನಷ್ಟು ಬಿಳಿ ತೋರುತ್ತಾ, ಇನ್ನುಳಿದವು ಎರಡೂ ತೋರುತ್ತಾ ಅಲಂಕರಿಸಿದ್ದವು. ನಿಶೆ ಬಿಡುವ ಈ ಬಣ್ಣಬಣ್ಣದ ರಂಗೋಲಿಯ ಮುಂದೆ ನಾನು ಬೆಳಿಗ್ಗೆ ಬಹಳ ಆಸಕ್ತಿ, ಮುತುವರ್ಜಿಯಿಂದ ಬಿಡಿಸುವ ಬಿಳಿ ರಂಗೋಲಿ ಯಾವಾಗಲೂ ಪೀಚೆನಿಸುತ್ತದೆ ನನಗೆ... ಅಲ್ಲೇ ಸ್ವಲ್ಪ ದೂರದಲ್ಲಿ ಗಸಗಸೆ ಮರವುದುರಿಸಿದ ಉದ್ದುದ್ದ ಹಳದಿ ಎಲೆಗಳ ನಡುನಡುವೆ ರತ್ನಗಂಧಿಯ ಪುಟಾಣಿ ದುಂಡಗಿನ ಹಳದಿ ಎಲೆಗಳು ಹರಡಿದ್ದವು.. ಆ ವಿನ್ಯಾಸ ಅಸ್ತವ್ಯಸ್ತವಾಗಿದ್ದರೂ ಇಂದು ಮುಂಜಾನೆಯೊಳಗದು ಚಂದ ಇದೆ ಅನಿಸುತ್ತಿತ್ತು.. ಮನಸು ಪ್ರಸನ್ನವಾಗಿತ್ತು, ಕಂಡದ್ದೆಲ್ಲ ಚಂದವೆನಿಸುತ್ತಿತ್ತು. ಚಂದವೆನಿಸಿದ್ದನ್ನೆಲ್ಲ ಕೂಡಿಟ್ಟುಕೊಳ್ಳಲಾಗುವುದಿಲ್ಲವಲ್ಲ! ಎಲೆಯ ಕಸವೆತ್ತಿ ಹೊರಹಾಕಬೇಕು, ಹೂ ಉದುರಿದವನ್ನೂ ಮತ್ತೆ ಗಿಡದಲ್ಲಿರುವವನ್ನೂ ಕೊಯ್ದು ಒಳಗೆ ಒಯ್ಯಲೇಬೇಕು. ಹೊರಹಾಕಿದ ಕಸವೆತ್ತಿ ಒಟ್ಟು ಮಾಡಿ ಡಬ್ಬಿಯೊಂದಕ್ಕೆ ತುಂಬಬೇಕು, ಕಸವೆತ್ತುವವನ ಗಮನಕ್ಕೆ ಬರುವಲ್ಲಿ ಆ ಡಬ್ಬಿಯನಿಡಬೇಕು. ಅಂದರೆ ನಿರ್ಮಲವಾಗಿರಬೇಕಾದರೆ ಕಸ ನನ್ನಂಗಳದಿಂದ ದೂರ ಹೋಗಲೇಬೇಕು. ಸಾಮಾನ್ಯ ಎಲ್ಲರೂ ಬೆಳ್ಳಂಬೆಳಗ್ಗೆ ಮೊದಲು ಆ ಕೆಲಸವನ್ನೇ ನಿಗದಿ ಪಡಿಸಿಕೊಳ್ಳುವ ನಿಲುವೇ ಅದರ ಪ್ರಾಮುಖ್ಯತೆಗೆ ಸಾಕ್ಷಿ. ಗುಡಿಸುತ್ತಿದ್ದೆ, ಮೆಲುವಾಗಿ ಬೀಸುತ್ತಿದ್ದ ತಂಗಾಳಿಯ ವೇಗ ಮೆಲ್ಲಮೆಲ್ಲನೆ ಹೆಚ್ಚುತ್ತಾ, ಜೋರಾದ ಅಲೆಯೊಂದು ಅಷ್ಟೂ ಎಲೆಯ ಕಸವನ್ನು ಹರಡಿ ಮತ್ತೆ ಅಂಗಳದೊಳಕ್ಕೆ ತಳ್ಳಿತು, ಮತ್ತೆ ಗುಡಿಸಿ ನಾನೆಲ್ಲ ಹೊರತಳ್ಳಿ ಇನ್ನೇನು ಡಬ್ಬಿಗೆ ತುಂಬಬೇಕು, ಅಷ್ಟರಲ್ಲೇ ಇನ್ನೊಂದು ಅಂಥದ್ದೇ ತಂಗಾಳಿಯಲೆ... ನೆಲದ ಮಟ್ಟದಲೇ ಕಳ್ಳ ಹೆಜ್ಜೆಯಿಡುತ್ತಾ ಬಳಿಸಾರಿದ್ದು, ಹತ್ತಿರಾದಂತೆ ಭರ್ರನೇ ಬೀಸತೊಡಗುತಿತ್ತು... ಮುಂಗಾಲಿಗೆ ತಾಗುತ್ತಾ, ಹಿತವಾದ ಚಳಿಯ ಸ್ಪರ್ಶವಾಗಿಸುತ್ತಾ, ಕಚಗುಳಿಯಿಡುತ್ತಾ ಛೇಡಿಸಿದಂತನಿಸುವಂತೆ ಬೀಸುತ್ತಿರುವ ತುಂಟಗಾಳಿಯಲೆ.. ಆ ಗಳಿಗೆಗೆ ನನ್ನ ಕಂದಮ್ಮನಷ್ಟೇ ಮುದ್ದೆನಿಸಿತು, ಆಪ್ತವೆನಿಸಿತು.. ಅಲ್ಲೊಂದು ಹಿಡಿಹಿಡಿಯಾಟ ನಡೆಯುತ್ತಿದ್ದಂತಿತ್ತು. ತಂಗಾಳಿ ಎಲೆಗಳ ಹಿಂದೆ, ಎಲೆ ನನ್ನಂಗಳದ ಹಿಂದೆ, ನನ್ನ ಪೊರಕೆ ಚದುರಿದ ಎಲೆಗಳ ಹಿಂದೆ.. ಮತ್ತೆ ನಾನು ತಂಗಾಳಿಯ ಆಕರ್ಷಣೆಯ ಹಿಂದೆ.. ಒಮ್ಮೆಯಲ್ಲ, ಎರಡು ಬಾರಿಯಲ್ಲ, ನಾನು ಮುದಗೊಳ್ಳುತ್ತಿರುವುದು ಅರಿವಾಗಿದೆಯೋ ಎಂಬಂತೆ, ಮತ್ತೆ ಮತ್ತೆ ಆಡಿಸುತ್ತಿತ್ತು, ತಂಟೆಯೊಂದು ಜರುಗಿಬಿಟ್ಟಾಗಿದ್ದಾಗ, ಅಮ್ಮನ ಮುಖವನ್ನೇ ಕಳ್ಳದೃಷ್ಟಿಯಲಿ ನೋಡುವ ಕಂದ ಅಲ್ಲೊಂದು ಮುಗುಳ್ನಗು ಕಂಡರೆ ಮತ್ತೆ ನಿರಾಳವಾಗಿ ಆ ತುಂಟಾಟ ಮುಂದುವರೆಸುವ ಹಾಗೆ.. ಕೊನೆಗೂ ನನ್ನ ಹುಸುಮುನಿಸು "ಅಯ್ಯೋ..." ಅನ್ನುವೆರಡು ಅಕ್ಷರಗಳಲ್ಲಿ ವ್ಯಕ್ತವಾದ ಮೇಲೆಯೇ ಸುಮ್ಮನಾದದ್ದು ಅದು.  
ಗುಡಿಸಿ, ತೊಳೆದು ರಂಗೋಲಿಯಿಟ್ಟು ಒಳಬಂದವಳ ಯೋಚನೆ ಮನೆಯಂಗಳದಿಂದ ಮನದಂಗಳಕೆ ಚಾಚಿತು.

ಅಲ್ಲೂ ಹೀಗೆಯೇ. ಅಲ್ಲಿನ ಚಂದಕ್ಕೆ ಸರಿಹೊಂದದ ಆದರೆ ನಮಗಲ್ಲೇ ಇದ್ದರೂ ಅದೀತು ಅನಿಸುವ ಎಲೆಕಸ, ಚಂದ ಹೆಚ್ಚಿಸುವ ಹೂವು, ಮತ್ತೆ ಬಲಾತ್ಕಾರವಾಗಿ ಕಸ ಹೆಕ್ಕಿ ಹೊರಗೆಸೆವಲ್ಲಿ ಅದನ್ನು ಮತ್ತೆಮತ್ತೆ ಒಳನೂಕುವ ತಂಗಾಳಿ ಇವುಗಳನ್ನು ಕ್ರಮವಾಗಿ ಚಿಂತೆಗೆಡೆ ಮಾಡುವ ಕೆಲ ನೇತ್ಯಾತ್ಮಕ ವಿಷಯಗಳು, ಮುದಕೊಡುವ ಧನಾತ್ಮಕ ಸಂಗತಿಗಳು ಮತ್ತು ರಾಗಾದಿ ವ್ಯಸನಗಳ ಜೊತೆಗೆ ಸಮೀಕರಿಸಿ ನೋಡಿತು ನನ್ನೊಳಗಿನ ಭಾವನಾಲಹರಿ. ಹೂವು ಸಂತಸದ ಪ್ರತೀಕ. ಎಲೆಕಸವೆಂಬುವುದು ಅಂಗಳದ ಚಂದದ
ಪ್ರಶ್ನೆ ಬಂದಾಗ ವರ್ಜ್ಯಾರ್ಹ ಸಂಗತಿಯ ಪ್ರತೀಕ. ಹೂವರಳುವ ಪ್ರಕ್ರಿಯೆ ಹಲಕ್ರಿಯೆಗಳ ಸರಣಿಯ ಫಲ. ಎಲೆ ಚಿಗುರಿ ಆಹಾರ ತಯಾರಿಸುವ ಘಟ್ಟವೂ ಆ ಸರಣಿಯ ಒಂದು ಕೊಂಡಿ. ಆದರೆ ಕಾಲಕ್ರಮೇಣ, ಕಾಲವಶ ಆ ಎಲೆ ತನ್ನ ಸ್ವರೂಪ, ತನ್ನ ಪ್ರಾಮುಖ್ಯತೆ, ತನ್ನ ಬಂಧನದ ಬಿಗಿ ಎಲ್ಲವುದರಲ್ಲೂ ಬದಲಾವಣೆಗೊಳಗಾಗುತ್ತದೆ. ಅದು ನೈಸರ್ಗಿಕ ಬೆಳವಣಿಗೆ. ಹಾಗೆಯೇ ನಮ್ಮೊಳಗೊಂದು ಸಂತಸ ಹುಟ್ಟಬೇಕಾದರೆ ಅದು ಭಾವಸರಣಿಯೊಂದರ ಎಲ್ಲ ಕೊಂಡಿಗಳ ಮೂಲಕ ಹಾದು ಬಂದಿರುತ್ತದೆ. ಹಲಬಾರಿ ಮೇಲ್ಮೈಯ್ಯಲ್ಲಿ ನಮಗದರ ಬೆಳವಣಿಗೆಯ ಘಟ್ಟಗಳು ಗೋಚರವಾಗದಿದ್ದರೂ ಅದು ಹುಟ್ಟುವ ಪ್ರಕ್ರಿಯೆ ನವಮಾಸ ಮಗುವೊಂದು ಅಮ್ಮನ ಗರ್ಭದಲ್ಲಿ ರೂಪುಗೊಳ್ಳುವ ಹಾಗೆಯೇ ಸಾಗಿ ಬಂದಿರುತ್ತದೆ. ಅಲ್ಲಿ ಚಿಂತೆ, ನೋವು, ತ್ಯಾಗ, ಪರಿಶ್ರಮ, ಅಥವಾ ದುಖಃ ಎಂಬ ಈ ಯಾವುದದರೂ ಒಂದು ಅಸಹನೀಯ ನೆಲೆಯಲ್ಲಿ ನಾವು ಅರೆಗಳಿಗೆಯ ಮಟ್ಟಿಗಾದರೂ ಹಾದುಬಂದಿರುತ್ತೇವೆ. ಆದರೆ ಕಾಲಕ್ರಮೇಣ ಹೂವರಳಿ ಕಾಲವಶ ಆ ಅಸಹನೀಯವೆನಿಸುವ ವಿಷಯ ತನ್ನ ಪ್ರಾಮುಖ್ಯತೆಯನ್ನು ನಮ್ಮೊಳಗೆ ತಾನೇ ತಾನಾಗಿ ಕಳಕೊಂಡುಬಿಟ್ಟಿರುತ್ತದೆ, ಬಹುಶಃ ಅರಿವಿನೊಳಗಿಂದ ಕಳಚಿಕೊಂಡು ಮನದಂಗಳಕ್ಕೆ ಬಿದ್ದಿರುತ್ತದೆ. ಈಗ ಅದರ ವಿನ್ಯಾಸವೋ ಅಥವಾ ಅದರ ಅಂದಿನ ಪ್ರಾಮುಖ್ಯತೆಯ ಋಣೀಮನೋಭಾವವೋ ಅಥವಾ ನನ್ನದೆಂಬ ಮೋಹವೋ ಎತ್ತಿ ಹೊರಬಿಸುಡುವ ಮನಸಾಗುವುದಿಲ್ಲ. ಈ ಮೋಹ, ಮಾಯೆ, ರಾಗದಿ ವ್ಯಸನಗಳೆಂಬ ತಂಗಾಳಿ ಮತ್ತೆಮತ್ತೆ ಆ ವರ್ಜ್ಯಾರ್ಹ ವಿಷಯವನ್ನು ಒಳದೂಡುತ್ತದೆ, ಮನದಂಗಳದ ಅಂದಗೆಡಲು ಕಾರಣವಾಗುತ್ತದೆ. ಮನುಷ್ಯ ಎಂದ ಮೇಲೆ ರಾಗಾದಿ ವ್ಯಸನಗಳ ಇರುವಿಕೆ ಅಂಗಳದಲ್ಲಿ ತಂಗಾಳಿಯ ಬೀಸುವಿಕೆಯಷ್ಟೇ ಸಹಜ. ಆದರೆ ಇಲ್ಲಿ ಪ್ರಶ್ನೆ ಬರುವುದು ನಮ್ಮ ಪ್ರಯತ್ನದ್ದು.
 
ಅಂಗಳದಿಂದ ಹೊರಕ್ಕೆ ಗುಡಿಸಿದ ಎಲೆಕಸವನ್ನು ಅದೆಷ್ಟೋ ಬಾರಿ ಮತ್ತಂಗಳದೊಳಕ್ಕೆಳೆತಂದ ಗಾಳಿಯಲೆಯ ಮೇಲೆ ಮುನಿಸಿಕೊಳ್ಳದೇ ನಾನು ಅಷ್ಟೂ ಬಾರಿ ಮೊದಲ ಬಾರಿಯ ಶ್ರದ್ಧೆಯಿಂದಲೇ ಹೊರತಳ್ಳುವ ಪ್ರಯತ್ನದಲ್ಲಿ ತೊಡಗಿಕೊಳ್ಳಬಲ್ಲವಳು ಮನದಂಗಳದ ಕಸಕ್ಕಾಗುವಾಗ ಮೋಹವನ್ನು "ಬಿಟ್ಟೆನೆಂದರೆ ಬಿಡದೀ ಮಾಯೆ" ಎಂದು ದೂರುವುದೇಕೆ? ಕೆಲವೇ ಪ್ರಯತ್ನಗಳಲ್ಲಿ ನನ್ನ ತಾಳ್ಮೆ ಕಳೆದುಕೊಳ್ಳುವುದೇಕೆ? ಮನೆಯಂಗಳದಂತೆ ಮನದಂಗಳವೂ ಚೊಕ್ಕವಾಗಿರಬೇಕಾದರೆ ಕಸವದೆಷ್ಟೇ ಪ್ರಿಯವೆನಿಸಿದರೂ ಹೊರಗಟ್ಟಲೇಬೇಕಲ್ಲವೇ? ಮನೆಯಂಗಳದಂತೆ ಮನದಂಗಳವನ್ನೂ ಅಂದವಾಗಿಟ್ಟುಕೊಳ್ಳುವ ಜಾವಾಬ್ದಾರಿ ನನ್ನದೇ ಹೌದಲ್ಲವೇ... ಅನಿಸಿತು.

1.

ಶ್ರೀ ಬಸವರಾಜ ಸೂಳಿಭಾವಿಯವರ ದೀಪದ ಗಿಡ ದ್ವಿಪದಿಗಳ ಪುಸ್ತಕ ಓದಿದೆ, ಒಂದು ಬಾರಿಯಲ್ಲ ತುಂಬಾ ಸಲ ಓದಿದೆ. ಅಂತರ್ಜಾಲದಲ್ಲಿ ಅವರ ದ್ವಿಪದಿಗಳ ಪ್ರಕಟಣೆಗಳ ಮೂಲಕವಷ್ಟೇ ಪರಿಚಯವಿದ್ದ ಆ ದಿನಗಳಲ್ಲೂ ಸೀದಾ ಮನದ ಕೇಂದ್ರಕ್ಕೇ ತಲುಪುವ ಅವರ ಅಭಿವ್ಯಕ್ತಿಯ ಶೈಲಿಯಿಂದಾಗಿ ಆತ್ಮೀಯರೆನಿಸುತಿದ್ದವರು ಅವರು.
ಅಷ್ಟರವರೆಗೆ ಅದೆಷ್ಟೋ ದ್ವಿಪದಿಗಳು ತುಂಬಾ ಪ್ರಭಾವಶಾಲಿಗಳೆನಿಸಿ "ಆಹಾ!" ಎಂಬ ಮಾತು ಅಪ್ರಯತ್ನ ಮನಸಿಂದ ಹೊರಟಿದ್ದವಾದರೂ ಈ ಕೆಳಗಿನ ದ್ವಿಪದಿ ಪ್ರತಿಕ್ರಿಯೆಯೊಂದನ್ನು ಮೊದಲ ಬಾರಿಗೆ ನನ್ನಿಂದ ಬರೆಸಿತು.
"
ನಿನ್ನ ಬಳಿ ಬರುವುದೆಂದರೆ ನಾನೇ ಇಲ್ಲವಾಗುವುದು ನಾನಿದ್ದರೆ ಬೆಟ್ಟ ಮಳೆ ಮಂಜು ಮುಳ್ಳಕಂಟಿ ಮತ್ತು ಆ ಸುಡುವ ಸಮಾಜ ಎದುರಾಗುವುದು"
ಇದಕ್ಕೆ ನಾನು
" ಸರ್, ದೇವರ ದರ್ಶನಕ್ಕೆಂದು ಹೋಗುವಾಗ ಅಡೆತಡೆಗಳನ್ನು ದಾಟಿ, ಮುಳ್ಳುಕಂಟಿಗಳನ್ನು ಹಾದು ಹೋದರೆನೇ, ಆ ನಂತರ ಅವನ ದರ್ಶನವಾದರೆನೇ ಸಾರ್ಥಕ ಅಂತ ಹೇಳ್ತಾರೆ ಹಿರಿಯರು" ಅಂತ ಬರೆದಿದ್ದೆ. ಅದಕ್ಕವರು "ನನ್ನ ಮನಸಲ್ಲಿ ಇದನ್ನು ಬರೆಯುವಾಗ ದೇವರ ಪರಿಕಲ್ಪನೆಯಂತೂ ಖಂಡಿತಾ ಇರಲಿಲ್ಲ, ನಿಮ್ಮ ಸ್ಪಂದನೆಗೆ ನಮನ" ಅಂತ ಪ್ರತಿಕ್ರಿಯಿಸಿದ್ದು ನಮ್ಮ ನಡುವಿನ ಸಂಪರ್ಕವನ್ನು ಒಂದು ಪರಿಚಯವನ್ನಾಗಿಸಿತು. ಆ ನಂತರದಲ್ಲಿ ಹಲವು ಬರಹಗಳು ಎದೆಯನ್ನೇ ತಾಕುತ್ತಾ ನಡೆದಿದ್ದವು. ಅದರಲ್ಲೂ
"ಈ ಬಾರಿ ಯಾತನೆಯ ಬದುಕನ್ನಲ್ಲ ಬರೆದದ್ದು ನಗುವಿನ ಬಗೆಗೆ ದೋಷ ಎಲ್ಲಾಗಿತ್ತೋ ಅದನೋದಿಯೂ ಅವಳ ಕಣ್ಣಲಿ ನೀರಾಡಿತು" ಆಳವಾದೊಂದು ಸತ್ಯದ ಅನಾವರಣವನ್ನು ಸಹಜವಾಗಿ ನಮಗೆ ತಲುಪಿಸುವ ಅವರ ಬರವಣಿಗೆಯ ಶೈಲಿ ಮೋಡಿ ಮಾಡಿದ ಬರಹಗಳಲ್ಲಿ ಇದೂ ಒಂದು. ನೋವು ಅವರೊಳಗೆ ಚಿಗುರಿದ್ದರೆ ಅದು ಬರವಣಿಗೆಯ ಮೂಲಕ ನನ್ನೊಳಗೆ ಇಷ್ಟಗಲದ ಗಿಡವಾಗಿ ಹರಡಿಕೊಳ್ಳುತ್ತಿದ್ದದ್ದಂತೂ ನಿಜ.
"
ಈ ಸಾಲುಗಳು ಯಾರಾದರೂ ಬರೆಯಬಹುದೆಂಬ ಮಾತಿಗೆ ಎದುರಾಡಲಾರೆ ನನ್ನದೆಂಬ ಬದುಕೊಂದಿದ್ದರೆ ನನ್ನಲೂ ಈ ಸಾಲುಗಳು ಹುಟ್ಟುತಿರಲಿಲ್ಲ. "
ಈ ತಣ್ಣನೆಯ ಆದರೆ ಚುಚ್ಚುವ ಪ್ರತಿಕ್ರಿಯೆ,
"
ಪ್ರೀತಿಯಕ್ಷರಗಳನು ತಿರುತಿರುಗಿ ರೂಪ ಬದಲಿಸಿ ಬರೆದೆ ದ್ವೇಷದ ರೋಗಕ್ಕೆ ನನಗೆ ಗೊತ್ತಿರುವ ಮದ್ದು ಇದೊಂದೇ.."
ತನ್ನ ಬರಹದ ತಿರುಳಿನ ಆಯ್ಕೆಗೆ ಕಾರಣ ಕಂಡುಕೊಂಡ ಈ ಪರಿ,
"
ಈಗಷ್ಟೇ ಅಲ್ಲ ಪ್ರತಿಸಾರಿಯೂ ಮನೆ ಬದಲಿಸುವಾಗ ಏನು ಮಾಡಿದರೂ ಅಳಿಸಲಾಗಲಿಲ್ಲ ಗೋಡೆ ಮೇಲಿನ ಮೊಳೆಗಳ ಗುರುತು್"
ಈ ಹತಾಶೆ,
"
ನನ್ನ ಆಸೆಯ ಸೂರ್ಯನನ್ನು ಚರಿತ್ರೆ ಚಿನ್ನದ ಕಾಗದದಲ್ಲಿ ಚಿತ್ರಿಸಿತು ನನ್ನ ಬಯಕೆಯ ಬಟ್ಟಲು ಒಂದು ಚಮಚ ಸಕ್ಕರೆ ಉಪ್ಪು ಖಾರ ಕಣ್ಣೀರಿಂದ ತುಂಬಿತ್ತು"
ಈ ನೋವು,
"
ನಿನ್ನೂರ ಬೆಲ್ಲವೇ ಸವಿಯೆಂದು ನಾಡು ನೀಡಿದ ಸರ್ಟಿಫಿಕೇಟು ನಿನ್ನ ಗಲ್ಲದೆದುರು ಎಷ್ಟೊಂದು ಖೊಟ್ಟಿಯಾಗಿ ಕಂಡಿತು"
ಈ ರಸಿಕತೆ,
"
ಎಲ್ಲ ದಿನಗಳಲ್ಲಿ ನಸುಕು ಮನೆಯೊಳಗೆ ಬರುವ ಪೇಪರ್ ತಣ್ಣಗಿರುವುದು ಆ ಕರುಣಾಳು ಪೇಪರ್ ಹಂಚುವ ಹುಡುಗನ ಕಣ್ಣೀರ ಹಂಚಿಕೊಂಡಿರಬೇಕು"
ಈ ಸೂಕ್ಷ್ಮ ಸಂವೇದನೆ,
"
ಮೌನದ ತುಟಿಗಳಿಗೆ ದುಃಖದ ಕಂದೀಲು ತೂಗಿಬಿದ್ದಿದೆ ಗಾಯದ ತೈಲ ತುಂಬಿದ ಕಂದೀಲು ಗಾಳಿ ತಾಗಿತಾಗಿ ಉರಿದಿದೆ."
ತನದೋ ಅಥವಾ ಇನ್ಯಾರದೋ ಆದ ನೋವಿನ ಬೆಳವಣಿಗೆಯನ್ನು ನೋಡುವ ಈ ನಿರ್ಲಿಪ್ತದಂತೆ ಕಾಣುವ ಆದರೆ ನೊಂದ ದೃಷ್ಟಿ
"ಮನ್ನಿಸು ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಅಕ್ಷರಗಳನ್ನಿಟ್ಟೆ ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು"
ಈ ಸತ್ಯಪೂರ್ಣ ನಿವೇದನೆ ಮತ್ತದರ ಪ್ರಾಮಾಣಿಕತೆ
"ನೀ ಹರ್ಷದಿಂದ ಹೂಮಾಲೆ ತಂದಾಗ ತಲೆಬಾಗದೆ ಇರಲಾರೆ ಹೂಗೋಣು ಮುರಿದು ಮಾಲೆ ಮಾಡಿರುವಾಗ ತಲೆಯೆತ್ತುವುದಾದರೂ ಹೇಗೆ?"
ಮೂಕ ಹೂವಿನ ಗೋಣು ಮುರಿದುದಕೆ ಸ್ಪಂದಿಸಿದ ಈ ರೀತಿ
"ಲೋಕವ ಮಲಗಸಿ ತಾನಷ್ಟೇ ಎಚ್ಚರಿರುವ ಇರುಳ ನಿದ್ದೆ ಕದ್ದವರಾರು?"
ಇಲ್ಲಿ ಮೂರ್ತ ಹಾಗೂ ಅಮೂರ್ತ ನೋವುಗಳೆರಡನ್ನು ಸಮೀಕರಿಸಿದ ರೀತಿ
"ಹಣತೆ ಹಚ್ಚಿಟ್ಟ ಮೇಲೂ ಎದುರಿನ ಮುಖ ಕಾಣಲಿಲ್ಲವೆಂದಾದರೆ ದೋಷ ಎಲ್ಲಿದೆಯೆಂದು ಈಗಲಾದರೂ ಹುಡುಕು"
ಇಲ್ಲಿನ ದಾರ್ಶನಿಕ ಸಾರ್ವಕಾಲಿಕಸತ್ಯ.
"
ಬರಿಬರಿ ಎನುವ ನಿನ ಸೊಲ್ಲು ಕೇಳಿಸಿಕೊಂಡಾಗಿದೆ ಜೀವವೇ ಒಮ್ಮೆ ಎದೆಗೊರಗು, ಮಣ್ಣ್ಣಿಗೆ ಬೀಜ ಬೀಳದೆ ಹೋದರೆ ಮೊಳಕೆ ಏಳದು"
ಈ ಸರಳ ಸ್ಪಷ್ಟೀಕರಣ
"ಬೇರು ಕಾಮದ ಕುಂಡದಲ್ಲಿತ್ತು ನಾನು ಪ್ರೇಮದ ದೇಟಿಗೆ ನೀರುಣಿಸಿದೆ ಹೌದು ಬೆಳಕಿಗಾಗಿ ಕತ್ತಲೆಯ ಕೌದಿ ಹೊದ್ದು ಮಲಗಲೇಬೇಕು"
ಅರಿವಾದ ಸತ್ಯವೊಂದನ್ನು ಹೋಲಿಕೆಯೊಂದರ ಮೂಲಕ ಹೇಳಿದ ಈ ಸುಂದರ ರೀತಿ
"ಲೋಕವೇ ನೀ ಏನೇ ಮುಂದಿಟ್ಟರೂ ಈ ಕಾಲು ಜಾರದು ಅವಳು ಭೂಮಿ ಮೇಲಿದ್ದೇ ನಕ್ಷತ್ರ ನೋಡುವುದ ಕಲಿಸಿದಳು"
ಇಲ್ಲಿನ ದೃಢತೆ
"ಈ ಹೊತ್ತು ಹೃದಯಕ್ಕೇನೋ ಆಗಿದೆಯೆಂದು ಮುಟ್ಟಿಕೊಂಡೆ ನಿನ್ನ ಹೃದಯ ತಾಕಿ ಮುಟ್ಟಿಕೊಂಡ ಬೆರಳು ಒದ್ದೆಯಾದವು"
ಒಂದಾದ ಪರಿಯನ್ನು ಹೇಳಿದ ಚಂದದ ರೀತಿ
"ಅವಳೆಡೆಗೆ ಕೈ ಚಾಚಿದಾಗ ರಾಧೆಯಾಗಿದ್ದಳು, ತಲೆ ಚಾಚಿದಾಗ ಯಶೋದೆಯಾದಳು"ಈ ಕಾಣ್ಕೆ,
"
ಕಣ್ಣೆ ಮಂಜಾಗಿರುವಾಗ ಕನ್ನಡಿಯದೇನು ತಪ್ಪು?""
ನೀ ಕೇಳಿದೆ ಕಲ್ಲಿನ ಕತೆಯೇನು, ಹೇಗೆ ಹೇಳುವುದ ಕಲ್ಲಾದ ಮೇಲೆ ಕತೆ"ಇಲ್ಲಿನ ಅಸಹಾಯಕತೆ
"ಕತ್ತಲಲಿ ದೀಪ ಹಚ್ಚಿಡುವ ದಡ್ಡತನವಷ್ಟೇ ಜತೆಯಲಿತ್ತು ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ"
ಇಲ್ಲಿ ಬಿಚ್ಚಿಟ್ಟ ತನ್ನ ಚಿಂತನೆಗಳ ವಾಸ್ತವಿಕ ತಳಹದಿ
"ನಿನ್ನ ಕಾಲುನೋವಿನ ಸುದ್ದಿ ಈಗಷ್ಟೇ ತಲುಪಿತು ರಾತ್ರಿ ನನ್ನ ಕನಸಲ್ಲಿ ನೀ ಅಷ್ಟು ಓಡಾಡಬಾರದಿತ್ತು"
ಇಲ್ಲಿನ ಚಿತ್ರಣ ಮತ್ತೆ ಕಲ್ಪನೆ
"ಸುಮ್ಮನೆ ದೀಪ ಹಚ್ಚಿಟ್ಟೆ ಕಾಣುವುದು ನಿಚ್ಚಳವಾದಂತೆ ಹುಡುಕುವ ಉತ್ಸಾಹವೇ ತಣ್ಣಗಾಯಿತು"
ಇಲ್ಲಿನ ಭ್ರಮನಿರಸನ
ಹೀಗೆ ಬರೆಯುತ್ತಾ ಹೋದರೆ ಅಲ್ಲಿರುವ ಐದುನೂರಕ್ಕೆ ಮಿಕ್ಕಿದವೆಲ್ಲವನ್ನೂ ನೆನೆಸುವಾ ಅನಿಸುತ್ತದೆ. ಆ ಎಲ್ಲಾ ಬರಹಗಳೂ ಒಂದಲ್ಲ ಒಂದು ರೀತಿಯಲ್ಲಿ ಮುದಗೊಳಿಸಿದವು, ಅಚ್ಚರಿಗೊಳಿಸಿದವು, ಕಣ್ತೆರೆಸಿದವು, ಕಣ್ತುಂಬಿಸಿದವು, ಎದೆ ಭಾರ ಮಾಡಿದವು, ಭ್ರಮೆಯ ಪೊರೆ ಕಳಚಿದವು, ಚುಚ್ಚಿದವು, ಆತ್ಮವಿಮರ್ಶೆಗೆ ಹಚ್ಚಿದವು, ವಿಧಿ ಎನುವದ್ದರ ಮೇಲೆ ಮುನಿಸಾಗುವಂತೆ ಮಾಡಿದವು, ಅವರ ಮನಸು ತುಂಬಿದ ಆ ಪ್ರೇಮಕ್ಕೆ ಅರ್ಹವಾಗಿ ಈಗಿಲ್ಲವಾದ ವ್ಯಕ್ತಿತ್ವದ ಬಗ್ಗೆ ಅತೀವ ಗೌರವ ಹುಟ್ಟಿಸುವವು ಮತ್ತೆಲ್ಲಕ್ಕಿಂತ ಹೆಚ್ಚಾಗಿ ಅವರನ್ನು ನಮಗೆ ತುಂಬಾ ಬೇಕಾದವರು ಅನಿಸುವಂತೆ ಮಾಡಿ ಅವರ ಎಲ್ಲಾ ಬರಹಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಣುಕುವ ಅವರೊಳಗನ್ನೆಲ್ಲ ಗಾಢವಾಗಿ ಆವರಿಸಿಕೊಂಡಿರುವ ದುಃಖವನ್ನು ಹೇಗಾದರೂ ಪರಿಹರಿಸಪ್ಪಾ ಅಂತ ಈ ಜಗನ್ನಿಯಾಮಕ ಶಕ್ತಿಯಲ್ಲಿ ಅರಕೆ ಮಾಡಿಕೊಳ್ಳುವಂತೆ ನನ್ನನ್ನು ಪ್ರಭಾವಿಸಿದವುಗಳು. ಇನ್ನೂ ಒಂದಿದೆ, ಗಗನಕುಸುಮಕ್ಕೆ ಕೈಚಾಚುವುದು ಅನಿಸಿದರೂ ಸರಿ, ನಾನೂ ಇದೇ ರೀತಿ ಇಷ್ಟೇ ಪ್ರಭಾವಶಾಲಿಯಾಗಿ ಬರೆಯಬೇಕೆಂಬ ಆಸೆಗೆ ಕಾರಣವಾದವು ಮತ್ತೆ ಸೀಮಿತ ಓದಿನ ನನ್ನ ಅತಿಸಣ್ಣ ಸಾಹಿತ್ಯ ಪ್ರಪಂಚದಲ್ಲಿನ ಪುಟ್ಟಪುಟ್ಟ ಪ್ರಯತ್ನಗಳಿಗೆ ಸ್ಫೂರ್ತಿಯಾದವುಗಳು.
"
ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ ಕವಿಯೇ, ನೂರುಸಾಲು ಬರೆದರೂ ಕವಿತೆ ಹುಟ್ಟದು"
ಈ ಸಾಲುಗಳು ಅವರ ಈ ದ್ವಿಪದಿಗಳ ಬರವಣಿಗೆಯ ಸತ್ವದ ಗುಟ್ಟನ್ನು ಮತ್ತದರ ಸತ್ಯವನ್ನು ಸಾರಿ ಹೇಳುತ್ತವೆ.
ನೋವು ತನ್ನನ್ನು ತಾನು ಅಭಿವ್ಯಕ್ತಿಸಿಕೊಂಡಷ್ಟು ಪ್ರಭಾವಶಾಲಿಯಾಗಿ ಇನ್ನು ಯಾವ ಸಂವೇದನೆಯೂ ಮಾಡಿಕೊಳ್ಳಲಾಗದು- ಇದು ಈ ಬರಹಗಳನ್ನು ನೋಡಿದಾಗಲೆಲ್ಲಾ ನನಗನಿಸುವುದು. ಅವರ ನೋವು ನಮ್ಮನ್ನು ಆಕರ್ಷಿಸಿ, ಪ್ರಭಾವಿಸಿ, ಅವರ ಬರಹಗಳನ್ನು, ಅಲ್ಲಿನ ಸರಳಸಹಜ ಸತ್ಯವನ್ನು ನಾವು ಸಂಭ್ರಮಿಸುವಂತೆ ಮಾಡಿದೆ ಎಂಬುವುದು ನಿಜ. ಅವರಿನ್ನೂ ತುಂಬಾ ಬರೆಯಬೇಕೆಂಬುವ, ಅದನ್ನೋದಿ ನಾವು ಸಂಭ್ರಮಿಸುತ್ತಲೇ ಇರಬೇಕು ಅನ್ನುವ ಆಶಯವಿರುವುದೂ ನಿಜ. ಆದರೆ ಕಾಲ ಅವರ ನೋವಿಗೆ ತಕ್ಕ ಲೇಪ ಹಚ್ಚಲಿ, ಅವರ ಮನಸು, ಬದುಕು ತಂಪಾಗಿರಲಿ ಅನ್ನುವ ಹಾರೈಕೆ ಅದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾದದ್ದು ಎನ್ನುವುದೂ ಅಷ್ಟೇ ನಿಜ.
(
ಬಸವರಾಜ ಸೂಳಿಭಾವಿಯವರ ಸಂಪರ್ಕವಿಲ್ಲದವರಿಗಾಗಿ: ಅವರ ಬ್ಲಾಗ್ ನ ಹೆಸರು ಲಡಾಯಿ ಪ್ರಕಾಶನ ladaiprakashanabasu.blogspot.com , ಅವರ ಈ ಮೂರು ಕವನ ಸಂಕಲನಗಳು ಕವಿ ಪ್ರಕಾಶನ ಕವಲಕ್ಕಿ- ಹೊನ್ನಾವರ ಇವರಿಂದ ಪ್ರಕಟಣೆಯಾಗಿವೆ- ) ದೀಪದ ಗಿಡ ೨) ಬಟ್ಟೆಯೆಂಬುದು ಬೆಂಕಿಯ ಹಾಗೆ ೩) ತೇವಕಾಯುವ ಬೀಜ .ಅಲ್ಲಿನ ವಿಳಾಸ: ಕವಿ ಪ್ರಕಾಶನ, ಜಲಜ ಜನರಲ್ ಅಂಡ್ ಮೆಟರ್ನಿಟಿ ಕ್ಲಿನಿಕ್, ಕವಲಕ್ಕಿ, ಹೊನ್ನಾವರ, ಉತ್ತರಕನ್ನಡ.
ಫೋನ್: ೯೪೮೦೨೧೧೩೨೦)