Monday, September 30, 2013

ನಾನು..

ನಾನು ಅಂದರೆ ಇದು ಅಂತ ಸ್ಪಷ್ಟಪಡಿಸುವ ನಿಟ್ಟಿನಲ್ಲಿ ತನ್ನ ಮನಸು, ಆತ್ಮ ಸೇರಿದಂತೆ ದೈಹಿಕ ಅಂಗಗಳು, ಅಥವಾ ಲೌಕಿಕ ಅಂಗಗಳಾದ ಸಂಬಂಧಗಳು, ಗಳಿಕೆಗಳು ಹೀಗೆ ಯಾವುವೂ ನೀ ನಾನು ಅನ್ನುವುದು ನಮ್ಮನ್ನೇ ಅಂತ ಘಂಟಾಘೋಷವಾಗಿ ಸಾರುವುದು ಬಿಡಿ, ಪಿಸುಗುಟ್ಟುತ್ತಲೂ ಇಲ್ಲ ಅನ್ನುವ ಗೆಳೆಯರೊಬ್ಬರ ಮಾತಿಗೆ ನನ್ನೊಳಗಿಂದ ಈ ವಿಚಾರಗಳು ಹೊರಬಂದವು.
ನಾನು ಅನ್ನುವ ಸಂಬೋಧನೆ ನಮ್ಮ ದೇಹದ ಮಾತು ಬಂದಾಗ ಪ್ರಾಯಶಃ ಆಯಾಯಾ ಸಂದರ್ಭಕ್ಕೆ ತಕ್ಕಂತೆ ಆ ಸಂದರ್ಭ ಯಾವ ಕ್ರಿಯೆಯನ್ನು ನಿರೀಕ್ಷಿಸುತ್ತದೋ ಆ ಕ್ರಿಯೆಯ ಕರ್ತೃವಾದ ಒಂದು ಅಂಗವನ್ನು ಉದ್ದೇಶಿಸಿದ್ದಾಗಿರಬೇಕಾದರೂ ಅಲ್ಲಿ ಮೂಲಕರ್ತೃವಾಗಿ ದರ್ಶಿಸಲ್ಪಡುವುದು ಆ ಅಂಗವೂ ಸೇರಿದಂತೆ ನಮ್ಮ ಇಡೀ ವ್ಯಕ್ತಿತ್ವದ ಒಂದು ಸಮಗ್ರ ಆಯಾಮ. ಉದಾಹರಣೆಗೆ ನಾನು ನೋಡಿದೆ ಅನ್ನುವಾಗ ನೋಡಿದ್ದು ಕಣ್ಣಾದರೂ ನನ್ನ ಕಣ್ಣು ನೋಡಿತು ಅನ್ನುವುದಿಲ್ಲ, ಇನ್ನೂ ಸ್ವಲ್ಪ ಮುಂದುವರೆದು ನಾನು ಕಣ್ಣಾರೆ ನೋಡಿದೆ ಅನ್ನುವಲ್ಲಿಯೂ ನೋಟಕ್ಕೊದಗಿದ್ದು ಕಣ್ಣು ಅನ್ನುವ ಅರ್ಥ ಬಂದರೂ ನೋಡಿದ್ದು ನಾನೇ ಅಂದ ಹಾಗಿರುತ್ತದೆ ನಾವು ಆ ಕ್ರಿಯೆಯನ್ನು, ಅದರ ಕರ್ತೃವನ್ನು ಪರಿಗಣಿಸುವ ರೀತಿ. ಇನ್ನೊಂದೆಡೆ ಹಾಲಿನ ಲೋಟ ತರುತ್ತಿರುವಾಗ ಅಕಾಸ್ಮತ್ತಾಗಿ ಲೋಟ ಕೆಳಗೆ ಬಿದ್ದು ಹಾಲು ಚೆಲ್ಲಿಹೋದ ಸಂದರ್ಭ. ಕಾಲು ಎಡವಿರುತ್ತದೆ, ದೇಹ ಮುಗ್ಗರಿಸಿರುತ್ತದೆ, ಕೈ ಆಯ ತಪ್ಪಿ ಆ ಲೋಟವನ್ನು ಕೆಳಹಾಕಿರುತ್ತದೆ. ಇಷ್ಟೆಲ್ಲ ವಿವರಣೆಗೆ ಹೋಗುವುದೇ ಇಲ್ಲ, ನಾನು ಹಾಲು ಚೆಲ್ಲಿದೆ ಅನ್ನುತ್ತೇವೆ. ಅಂದರೆ ಅದು ನನ್ನ ಕಾಲು, ನನ್ನ ಕೈ, ನನ್ನ ದೇಹಗಳ ಒಟ್ಟಾರೆ ಸಮತೋಲನ ಕಳಕೊಂಡ ಸಂದರ್ಭ, ಅದರ ಹೊಣೆಗಾರಿಕೆಯನ್ನು ಹೊರಬೇಕಾದದ್ದು ಬರೀ ಕಾಲಲ್ಲ, ಕೈಯಲ್ಲ, ಬದಲಿಗೆ ಅವೆಲ್ಲವೂ ನನ್ನವು ಎಂದು ಹೇಳಿಕೊಳ್ಳುವ ನಾನು. ಇಲ್ಲಿ ನಾವು ಎಷ್ಟರಮಟ್ಟಿಗೆ ನಮ್ಮ ದೈಹಿಕ ಅಂಗಾಂಗಗಳನ್ನು ಸಹಜವಾಗಿ ಸ್ವಂತದ್ದನ್ನಾಗಿ ಪರಿಗಣಿಸಿರುತ್ತೇವೆ ಅಂದರೆ ಅಲ್ಲಿ ಅದನ್ನೆಲ್ಲ ನಾನು ಎನ್ನುವ ಸಮಗ್ರ ದೃಷ್ಟಿಯೊಳಗಿಟ್ಟು ನೋಡುವುದು ಒಂದು ಕ್ಷಣದ ಮಟ್ಟಿಗೂ ಯಾವುದೇ ಪ್ರಯತ್ನವನ್ನು ನಮ್ಮಿಂದ ನಿರೀಕ್ಷಿಸುವದ್ದಾಗಿರುವುದಿಲ್ಲ. ಸಾಧನೆಯ ಮಾತೇ ಆಗಿರಬಹುದು, ಅಥವಾ ತಪ್ಪು ಘಟಿಸಿದ ಮಾತೇ ಆಗಿರಬಹುದು, ಸಣ್ಣದಿರಲಿ ಅಥವಾ ಬಹಳ ದೊಡ್ದ ಮಟ್ಟಿಗೆ ಜೀವನಕ್ಕೆ ಪ್ರಭಾವ ಬೀರುವದ್ದಾಗಿರಲಿ, ಅಲ್ಲೆಲ್ಲ ಅದು ನನ್ನಿಂದಾದದ್ದು ಅನ್ನುವಾಗ ಅದು ನಮಗೆ ಪ್ರಯತ್ನಪೂರ್ವಕವಾಗಿ ಸಂಭವಿಸುವ ಯೋಚನೆಯಲ್ಲ. ಅತಿ ಸಹಜವಾಗಿ ನಾನು ಸಾಧಿಸಿಬಿಟ್ಟೆ ಅಂತಲೋ ನಾನು ತಪ್ಪು ಮಾಡಿಬಿಟ್ಟೆ ಅಂತಲೋ ಅಂದುಬಿಡುತ್ತೇವೆ ಮಾತ್ರವಲ್ಲ ನೂರಕ್ಕೆ ನೂರು ನಾನು ಅನ್ನುವದ್ದೇ ಅಲ್ಲಿ ಆ ಘಟನೆಗೆ, ಅದರ ಹಿಂದುಮುಂದಿಗೆ, ಆಗುಹೋಗುಗಳಿಗೆ ಬದ್ಧವಾಗಿರುತ್ತದೆಯೇ ಹೊರತು ನನ್ನ ಮನಸು ತಪ್ಪು ಮಾಡಿತು, ನನ್ನ ಮೆದುಳು ಸಾಧಿಸಿಬಿಟ್ಟಿತು ಅಂದುಕೊಳ್ಳುವುದಾಗಲಿ, ಹೇಳಿಕೊಳ್ಳುವುದಾಗಲಿ ತುಂಬ ಅಸಹಜ ಅನಿಸುವುದಿಲ್ಲವೇ? ಒಂದುವೇಳೆ "ಅಯ್ಯೋ ಆ ಗಳಿಗೆ ನನ್ನ ಮನಸು ಹಿಡಿತ ತಪ್ಪಿಬಿಟ್ಟಿತು" ಅಂತಲೋ ಅಥವಾ "ಸದ್ಯ ಆ ಹೊತ್ತಿಗೆ ನನ್ನ ತಲೆ ಸರಿಯಾಗಿ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಯಿತು" ಅಂತಲೋ ಅನ್ನಬಹುದಾದರೂ ಆಗ ಪುನಃ ಅಲ್ಲಿ ಮೊದಲನೆಯ ಸ್ಥಾನದಲ್ಲಿ ಕರ್ತೃವಾಗಿ ನಾನು ಅನ್ನುವ ಪದವೇ ನಿಂತಿರುತ್ತದೆ. ಹೀಗೆ ನಾನು ಅನ್ನುವದ್ದು ಸಮಯೋಚಿತವಾಗಿ ಒಂದೊಂದು ನಮ್ಮದು ಅನಿಸಿಕೊಳ್ಳುವ ಅಂಗಾಂಗಗಳಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ನಮ್ಮ ಒಟ್ಟಾರೆ ಸ್ವರೂಪ ಅನ್ನಬಹುದು. ನಾನು ಅನ್ನುವುದನ್ನು ಪ್ರತ್ಯೇಕವಾಗಿ ಮನಸು ಅನ್ನಲೂ ಆಗುವುದಿಲ್ಲ, ಆತ್ಮ ಅನ್ನಲೂ ಆಗುವುದಿಲ್ಲ ಅಥವಾ ಈ ದೇಹವೆಂದು ಅಂತೂ ಅನ್ನಲು ಸಾಧ್ಯವೇ ಇಲ್ಲ, ಆದಾಗ್ಯೂ ಅವೆಲ್ಲವೂ ಸಂದರ್ಭಾನುಸಾರ ಬಿಡಿಬಿಡಿಯಾಗಿ ಕೆಲವೊಮ್ಮೆ ಮತ್ತು ಸಮಗ್ರವಾಗಿ ಕೆಲವೊಮ್ಮೆ ನಾನು ಅಂತ ಅನ್ನಿಸಬಹುದು. ಒಂದು ಕಾರ್ಯಕ್ಕೆ ಪ್ರೇರೇಪಿಸುವಾಗ ಮನಸು ನಾನಾಗಿರುತ್ತದೆ, ಅದನ್ನು ಕಾರ್ಯರೂಪಕ್ಕೆ ತರುವ ಯೋಜನೆಯಾಗುವಾಗ ಜೊತೆಗೆ ಬುದ್ಧಿಯೂ ನಾನು ಅನ್ನುವ ಅವಕಾಶದೊಳಗೆ ಸೇರಿಕೊಳ್ಳುತ್ತದೆ, ಮುಂದುವರೆದು ಕಾರ್ಯಗತಗೊಳಿಸುವಾಗ ಭೌತಿಕ ಅಂಗಾಂಗಗಳೂ ಒಳಸೇರಿಕೊಳ್ಳುತ್ತವೆ. ಮುಂದುವರೆದು ಆ ಹೆಜ್ಜೆಯ ನಿತ್ಯಾನಿತ್ಯತೆಯನ್ನು, ಸರಿತಪ್ಪುಗಳನ್ನು ವಿವೇಚಿಸುವಾಗ ಮನಸಾಕ್ಷಿ ಅಲ್ಲಿ ಸೇರಿಕೊಳ್ಳುತ್ತದೆ. ಆತ್ಮ ಅನ್ನುವದ್ದು ಇವೆಲ್ಲದರೊಳಗೂ ಹಾಸುಹೊಕ್ಕಾಗಿರುತ್ತದೆ. ಹಾಗಾಗಿ ನಾನು ಅನ್ನುವದ್ದು ಯಾವುದೇ ಸಂದರ್ಭದಲ್ಲೂ ಆತ್ಮಕ್ಕೆ ಹೊರತಾದುದಲ್ಲ, ಮತ್ತು ಇದೇ ಅಂತ ಪ್ರಮಾಣೀಕರಿಸಲ್ಪಡಬಲ್ಲದ್ದೂ ಅಲ್ಲ, ಗುಣಲಕ್ಷಣಗಳಿಗೆ ಮತ್ತದಕ್ಕನುಸಾರವಾಗಿ ಒಂದು ನಿರ್ದಿಷ್ಟ ಸ್ವರೂಪಕ್ಕೊಳಪಡಬಲ್ಲದ್ದೂ ಅಲ್ಲ.
ಈಗ ನಮ್ಮ ಸಂಬಂಧಗಳ ಬಗ್ಗೆ ಮಾತಾಡುವುದಾದರೆ, ಅಲ್ಲಿ ನಾವು ಅತಿಹೆಚ್ಚಿನ ಮಟ್ಟಿಗಿನ ವಿಲೀನತೆ ಸಾಧಿಸುವ ಕನಸು ಕಾಣುತ್ತಿರುತ್ತೇವೆ. ಆದರದನ್ನು ನನಸಾಗಿಸುವ ನಿಟ್ಟಿನಲ್ಲಿ ಸ್ವಲ್ಪಮಟ್ಟಿನ ಚಿಂತನೆ ಅಗತ್ಯ.ಯಾಕೆಂದರೆ ನಮ್ಮದೇ ದೇಹದ ಅಂಗಗಳ ಮಾತು ಬಂದಾಗ ಒಂದೇ ಮನಸಿನ ಕಾರ್ಯಕ್ಷೇತ್ರದ ಮಿತಿಯೊಳಗೆ ಭಾವನೆಗಳೂ ಇರುತ್ತವೆ ಮತ್ತು ಆ ಅಂಗಾಂಗಗಳೂ. ಆದರೆ ಇನ್ನೊಂದು ವ್ಯಕ್ತಿತ್ವದ ಒಡನಾಟದ ಮಾತು ಬಂದಾಗ ಅಲ್ಲೆರಡು ಮನಸುಗಳಿರುತ್ತವೆ, ಎರಡು ನಾನುಗಳೊಳಗೆ. ಅವು ಒಂದೇ ಅನಿಸುವ ಹಾಗೆ, ತಾದಾತ್ಮ್ಯ ಸಾಧಿಸುವ ನಿಟ್ಟಿನಲ್ಲಿ ನಡೆಯಬೇಕಾದರೆ ಸ್ವಲ್ಪ ಮಟ್ಟಿನ ವಿಶಾಲ ಚಿಂತನೆ ಅಗತ್ಯ. ಚಿಂತನೆ ವಿಶಾಲವಾಗುವವರೆಗೆ ಭಾವನೆಗಳು ಮುಂದುವರೆಯುವುದಿಲ್ಲ. ಏಕಪಕ್ಷೀಯ ತಿಳುವಳಿಕೆಯ ಗೋಜಲುಗಳಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುತ್ತವೆ. ಅಂದರೆ ನಾನು ಅನುಭವಿಸುವುದನ್ನೆಲ್ಲ ನನಗೆ ಸಂಬಂಧಪಟ್ಟವರು ನನ್ನಷ್ಟೇ ತೀವ್ರವಾಗಿ ಅನುಭವಿಸಬೇಕು, ನನ್ನದೇ ದೃಷ್ಟಿಕೋನದಲ್ಲಿ ಅದನ್ನು ನೋಡಿ, ನನ್ನಂಥದ್ದೇ ಪ್ರತಿಕ್ರಿಯೆ ನೀಡಬೇಕು ಅನ್ನುವುದು ಸಾಮಾನ್ಯ ಮನುಷ್ಯನಲ್ಲಿ ತನ್ನವರು ಅನಿಸಿಕೊಂಡವರ ಬಗೆಗಿನ ನಿರೀಕ್ಷೆಯ ಭಾವವಾಗಿರುತ್ತದೆ. ಒಂದು ಹಂತದವರೆಗೆ ನಮ್ಮವರೆನಿಸಿಕೊಂಡವರಲ್ಲಿನ ಸಲುಗೆಯಿಂದಾಗಿ ಆ ನಿರೀಕ್ಷೆ ಸಹಜ ಅನಿಸಬಹುದು. ಆದರೆ ಅವರನ್ನೆಷ್ಟರ ಮಟ್ಟಿಗೆ ನಮ್ಮವರನ್ನಾಗಿಸಿಕೊಂಡಿದ್ದೇವೆ ಅನ್ನುವುದು ಅಲ್ಲಿಂದ ನಮಗೆ ನಿರೀಕ್ಷಿಸದಿದ್ದ ಪ್ರತಿಕ್ರಿಯೆ ಎದುರಾದಾಗ ನಮ್ಮ ಮನದಲ್ಲೇಳುವ ಭಾವಗಳಿಂದ ಸ್ಪಷ್ಟವಾಗುತ್ತದೆ. ಇಲ್ಲಿ ನಮ್ಮ ಅಂಗಾಂಗಗಳನ್ನೊಪ್ಪಿಕೊಂಡಂತೆ ಇತರ ವ್ಯಕ್ತಿತ್ವಗಳನ್ನೊಪ್ಪಿಕೊಳ್ಳುವುದಾಗದು. ಒಂದೊಮ್ಮೆ ಒಂದೈದಾರು ಕಿಲೋಮೀಟರ್ ವರೆಗೆ ನಡೆಯಬೇಕೆಂದುಕೊಂಡಿರುತ್ತೇವೆ, ಎರಡು ಕಿಲೋಮೀಟರ್ ನಡೆಯುವಾಗ ಇದ್ದಕ್ಕಿದ್ದಂತೆ ಕಾಲು ಇನ್ನೊಂದು ಹೆಜ್ಜೆಯೂ ಮುಂದಿಡುವುದು ಅಸಾಧ್ಯ ಅನಿಸುವಂತೆ ಮುಷ್ಕರ ಹೂಡಿತು ಅಂತಿಟ್ಟುಕೊಳ್ಳುವಾ.. ಆಗ ನಮ್ಮ ಮನಸಿನಲ್ಲಿ ಯಾಕಿರಬಹುದು? ಮುಂಚೆ ಹೀಗಾಗುತ್ತಿರಲಿಲ್ಲವಲ್ಲಾ.. ವಯಸ್ಸಾಗುತ್ತ ಬಂತು ನನಗೆ, ಅದಕ್ಕೆ ಹೀಗಾಗಿರಬಹುದು ಅಂತಲೋ, ಇವತ್ತು ಮಧ್ಯಾಹ್ನ ಊಟ ಸರಿಯಾಗಿ ಮಾಡಿಲ್ಲ, ಅದಕ್ಕೆ ಸುಸ್ತು ಅನಿಸುತ್ತಿದೆ ಅಂತಲೋ, ಬೆಳಿಗ್ಗೆಯಿಂದ ಮನೆ ಕ್ಲೀನ್ ಮಾಡಿದ್ದಕ್ಕೆ ಇವತ್ತು ದೇಹಕ್ಕೆ ಹೆಚ್ಚಿನ ಶ್ರಮವಾಗಿದೆ ಹಾಗಾಗಿ ನಡೆಯಲಾಗುತ್ತಿಲ್ಲ ಅಂತಲೋ, ಕಾಲಿನ ಅಸಾಮರ್ಥ್ಯಕ್ಕೆ ಅನುಕಂಪ ಹುಟ್ಟುವ ನಿಟ್ಟಿಗೆ ಪೂರಕವಾಗಿ ಯೋಚನೆ ಮಾಡುತ್ತೇವೆಯೇ ಹೊರತು, ಕಾಲಿನ ಬಗ್ಗೆ ಅಸಹನೆ, ಸಿಟ್ಟು, ಅಸಮಾಧಾನಗಳನ್ನು ತಳೆಯುವುದಿಲ್ಲ ಅಲ್ಲವೇ? ಅದೇ ಅತ್ಯಂತ ಪ್ರೀತಿಪಾತ್ರ ವ್ಯಕ್ತಿತ್ವವೊಂದು ಹಲಕಾಲದ ಬಳಿಕ ನಮ್ಮನ್ನು ಭೇಟಿಯಾಗುವ ಅವಕಾಶ, ಕಾಣುವ ಮಾತಾಡುವ ತುಡಿತದಲ್ಲಿರುತ್ತೇವೆ, ನಾಳೆ ಖಂಡಿತಾ ನಿನ್ನ ಕಾಣಲು ಬರುತ್ತೇನೆ ಅಂದಿದ್ದವರು, ಬರಲೂ ಇಲ್ಲ, ಬರಲಾಗದ್ದನ್ನು ಮುಂಚಿತವಾಗಿ ತಿಳಿಸಲೂ ಇಲ್ಲ ಅಂತಿಟ್ಟುಕೊಳ್ಳಿ, ಕಾದುಕೂತು ನಾವು ನಿರಾಶರಾದ ಸಂದರ್ಭ, ಮೊದಲ ಕೆಲ ಕ್ಷಣಗಳಲ್ಲಿ ಅವರ ಮೇಲೇ ದೂರುಗಳು, ಅವರ ಅನಿರೀಕ್ಷಿತ ನಡವಳಿಕೆಯ ಬಗ್ಗೆ ಅಸಮಾಧಾನ, ವಿನಾಕಾರಣ ನೇತ್ಯಾತ್ಮಕ ಕಲ್ಪನೆ ಮತ್ತು ಅದರ ಮುಂದುವರಿಕೆಯಾಗಿ ತಪ್ಪುಗ್ರಹಿಕೆಗಳು..ಹೀಗೇ ಅಪ್ರಿಯವಾದದ್ದೊಂದು ನಡೆದುದರ ಹೊಣೆಗಾರಿಕೆಯನ್ನು ಎದುರಿದ್ದವರ ಮೇಲೆ ಹೊರಿಸುವ, ತನ್ನನ್ನು ಸ್ವಾನುಕಂಪದ ತೆರೆಯಲ್ಲಿ ಮುಳುಗೇಳಿಸುವ ತರಾತುರಿಯಲ್ಲಿ ಇರುವುದೇ ಹೆಚ್ಚು ಮನಸು. ಆ ಕ್ಷಣಗಳಲ್ಲಿ ಮನಸಿನ ಮೇಲೆ ಹಿಡಿತ ಸಾಧಿಸಿ ಅಲ್ಲಿಂದಾಚೆ ಬಂದು ಸ್ವಲ್ಪ ಬೇರೆ ದಿಕ್ಕಿನಲ್ಲಿ ಯೋಚಿಸಿದರೇನೋ ಬಚಾವಾಗಬಹುದು ಸ್ವಲ್ಪಮಟ್ಟಿಗೆ. ಅಂದರೂ ಅತೃಪ್ತಿ ಕೆಲಗಳಿಗೆಗಳ ಕಾಲ ಅಧಿಪತ್ಯ ಸಾಧಿಸಿ ಸಂಬಂಧದೊಳಗೆ ಅಶಾಂತಿ ಸಾಧಿಸುವ ತನ್ನ ಕೆಲಸ ಮಾಡಿಬಿಟ್ಟಿರುತ್ತದೆ. ಆದರೆ ಆ ಯೋಚನೆಯ ಎಳೆಯನ್ನು ಹಾಗೇ ಬೆಳೆಯಗೊಟ್ಟರೆ, ಪ್ರೀತಿಪಾತ್ರವಾಗಿದ್ದ ಆ ವ್ಯಕ್ತಿತ್ವ ತುಂಬಾ ಕಾಡುವ ಒಂದು ಅಸಹನೀಯ ವಿಷಯವಾಗಿ ಪರಿವರ್ತಿತವಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆ ಹೀಗಾಗುತ್ತದೆ? ಕಾಲು ನನದು, ಹಾಗಾಗಿ ಅದರ ಮೇಲೆ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಅನ್ನಬಹುದಾ? ಹಾಗಾದರೆ ಸಣ್ಣಸಣ್ಣ ವಿಷಯಕ್ಕೂ ನಮ್ಮ ದೂರುಗಳಿಗೀಡಾಗುವ, ತುಂಬಾ ನೋವಿಗೀಡಾಗಿಸಿದರು ಅನ್ನುವ ಆಪಾದನೆಗೀಡಾಗುವ ಪ್ರೀತಿಪಾತ್ರರನ್ನು ಇವರು ನಮ್ಮವರು ಅಂತ ನಾವು ಕರೆಯುವುದಷ್ಟೇ ಹೊರತು ವಾಸ್ತವದಲ್ಲಿ ಅವರು ನಮ್ಮವರಲ್ಲ ಅಂತಾಯಿತಲ್ಲಾ.. ಹೀಗೆ ನಮ್ಮವರು ಅಂತ ನಾವಂದುಕೊಂದವರು ನಮ್ಮ ಮನವರಿತು ನಡೆಯುವಷ್ಟರ ಮಟ್ಟಿಗೆ ನಮ್ಮ ಭಾವಗಳೊಂದಿಗೆ, ಇಷ್ಟಾನಿಷ್ಟಗಳೊಂದಿಗೆ ಪರಿಚಿತರಾಗಿರುವುದಷ್ಟೇ ಅಲ್ಲ, ಅವನ್ನೊಪ್ಪಿಕೊಂಡು ತಮ್ಮವಾಗಿಸಿಕೊಂಡಿರಬೇಕು, ಆ ಪ್ರಕಾರ ಸದಾ ನಾನು ಅನ್ನುವ ಅಸ್ತಿತ್ವದೊಡನೆ ತಾದಾತ್ಮ್ಯ ಸಾಧಿಸುವ ದಾರಿಯಲ್ಲಿರಬೇಕು ಅನ್ನುವುದು ಎಷ್ಟರಮಟ್ಟಿಗೆ ನಾವು ಅವರನ್ನು ನಮ್ಮದಾಗಿಸಿಕೊಂಡಿದ್ದೇವೆ ಅನ್ನುವದರ ಮೇಲೇ ನೂರಕ್ಕೆ ನೂರರಷ್ಟು ಅವಲಂಬಿತ. ಇದು ಹೆಚ್ಚು ಪೂರ್ಣತೆಯೆಡೆಗೆ ಸಾಗಿದಷ್ಟೂ ಅದೂ ಹೆಚ್ಚು ಪರಿಪೂರ್ಣ ಅನುಭೂತಿಯೆಡೆಗೆ ಸಾಗಬಲ್ಲುದು. ಈ ಸಾಪೇಕ್ಷ ಜಗತ್ತಿನಲ್ಲಿ ಪೂರ್ಣತೆ, ಪರಿಪೂರ್ಣತೆ ಅನ್ನುವದ್ದು ಅಥವಾ ಸರ್ವಕಾಲಿಕ ಸತ್ಯ, ಸರ್ವಕಾಲಿಕ ಸರಿ ಅನ್ನುವ ವಿಷಯಗಳು ಆಯಾ ಕ್ಷಣದಲ್ಲಿ ಘಟಿಸುವ ಒಂದು ಘಟನೆಯೆಂಬ ನಾಣ್ಯದ ಒಂದು ಮುಖದ ರೂಪರೇಷೆಗಳು. ಅದೇ ನಾಣ್ಯಕ್ಕೆ ಅಪೂರ್ಣತೆ, ಸುಳ್ಳು ಮತ್ತು ತಪ್ಪು ಅನ್ನುವ ಇನ್ನೊಂದು ಮುಖದ ಆಯಾಮಗಳಿರುತ್ತವೆ. ಹಾಗಾಗಿ ಒಂದು ವ್ಯಕ್ತಿತ್ವ ಇನ್ನೊಂದರೊಳಗೆ ಪೂರ್ಣ ವಿಲೀನವಾಗುವುದು ಅನ್ನುವುದು ಅದೇ ಸಾಪೇಕ್ಷತೆಯೊಳಗೆ ತನ್ನ ಮಿತಿಗಳನ್ನಿಟ್ಟುಕೊಂಡಿರುವ ವಿಷಯ. ಅಲ್ಲಿ ಸಾಧ್ಯವೆನಿಸಬಹುದಾದ ವಿಷಯ ಅಂದರೆ ಆ ವಿಲೀನವಾಗುವ ಪ್ರಕ್ರಿಯೆಯಲ್ಲಿ ಅತಿಹೆಚ್ಚಿನ ತೊಡಗಿಕೊಳ್ಳುವಿಕೆಯಲ್ಲಿರುವುದು. ಹೀಗೆ ನಾನು ಅನ್ನುವದ್ದನ್ನು ನಾವು ನಮ್ಮ ಅನುಬಂಧಗಳಲ್ಲಿ ಹುಡುಕಿದರೆ ತಪ್ಪಾದೀತು. ಅಲ್ಲಿ ಅದು ನನ್ನದು ಅನ್ನುವ ಆಪ್ತತೆ, ಆತ್ಮೀಯತೆ, ಪ್ರೀತಿ, ಪ್ರೇಮಗಳನ್ನು ಅತಿ ಸಹಜವಾಗಿ ಹಾಗೂ ಅತ್ಯಂತ ಪ್ರಾಮಾಣಿಕವಾಗಿ ಮೈಗೂಡಿಸಿಕೊಳ್ಳುವ ಮೂಲಕ ನನ್ನೊಳಗೆ ಅದು, ಅದರೊಳಗೆ ನಾನು ವಿಲೀನತೆ ಸಾಧಿಸುವ ಪ್ರಯತ್ನವಿರಬಹುದೇ ಹೊರತು ನಾನು ಅದೇ ಅನ್ನಿಸುವುದು, ಅಥವಾ ಅದು ನಾನೇ ಅನಿಸುವುದು ಸಾಧ್ಯವಿಲ್ಲದ ಮಾತು. ಯಾಕೆಂದರೆ ಪ್ರಪಂಚದಲ್ಲಿ ಎಷ್ಟು ಬೆರಳುಗಳೋ ಅಷ್ಟು ಬೆರಳಚ್ಚುಗಳು ಅನ್ನುವಷ್ಟೇ ಸತ್ಯ ಎಷ್ಟು ಅಸ್ತಿತ್ವಗಳೋ ಅಷ್ಟು ಆತ್ಮಗಳು ಮತ್ತು ಎಷ್ಟು ಆತ್ಮಗಳೋ ಅಷ್ಟು ಪ್ರತ್ಯೇಕ ವ್ಯಕ್ತಿತ್ವಗಳು ಅಂದರೆ ನಾನುಗಳು ಅನ್ನುವದ್ದು. ಇದನ್ನು ಮನಸಲ್ಲಿಟ್ಟುಕೊಂಡು ಇನ್ನೊಂದು ವ್ಯಕ್ತಿತ್ವ ಅದೆಷ್ಟೇ ಹತ್ತಿರದ್ದಾದರೂ "ನೀನೇ ನಾನು ನಾನೇ ನೀನು" ಅನ್ನುವ ಮಾತು ಒಂದು ಸುಂದರ ಕನಸಾಗಿಯೇ ಉಳಿಯುವದ್ದು, ಆದರೆ ಅದನ್ನು ನನಸಾಗಿಸುವ ನಿರಂತರ ಪ್ರಯತ್ನವಿದೆಯಲ್ಲಾ, ಅದು ಕಣ್ಮುಂದಿರುವ ಬಾಳನ್ನು ಆ ಕನಸಿನಷ್ಟೇ ಸುಂದರವಾಗಿಸುತ್ತಾ ಸಾಗುತ್ತದೆ ಅನ್ನುವ ಮಾತು ಸ್ಪಷ್ಟವಾಗುವಲ್ಲಿಗೆ ಆ ಆತ್ಮೀಯರಿಂದ ಚಾಲನೆ ಪಡೆದುಕೊಂಡ ನನ್ನ ಆಲೋಚನೆಯ ಸರಣಿ ಒಂದು ಘಟ್ಟಕ್ಕೆ ಬಂದು ನಿಂತಿತು. .

Tuesday, September 24, 2013

**

ಸೆಪ್ಟೆಂಬರ್ ೧೯ ರ ಪ್ರಜಾವಾಣಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಹಾಗೂ ಭಾರತದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆ -ಇವುಗಳ ನಡುವಿನ ಸಂಬಂಧದ ಬಗ್ಗೆ ಶ್ರೀಯುತ ಸಿ. ಎನ್. ರಾಮಚಂದ್ರ ಅವರು ಬರೆದಿದ್ದರು. ಉಪಯುಕ್ತ ಮಾಹಿತಿಗಳು ಮತ್ತೆ ಉದಾಹರಣೆಗಳ ಜೊತೆಗೆ. ಅಲ್ಲಿ ಅವರಿಗೆ ಕಾನೂನು ಕಲಾವಿದರ ಸ್ವಾತಂತ್ರ್ಯಕ್ಕೆ ತೊಡಕು ತಂದಿಟ್ಟಿದೆ ಅನ್ನುವ ಭಾವವಿದ್ದಂತನಿಸಿತು. ಹೌದು ಅಲ್ಲಗಳ ಲೆಕ್ಕಾಚಾರದ ಮಟ್ಟಿಗೆ ಮತ್ತು ಲಾಜಿಕ್ ನ ಮೂಲಕ ಯೋಚಿಸುವುದಾದರೆ ಅದು ನಿಜವೆನಿಸುತ್ತದೆ. ಆದರೆ ಎಲ್ಲೋ ಒಂದು ಕಡೆ ಎಲ್ಲ ಸಂವಿಧಾನ, ಕಾನೂನು, ರೂಲ್ಸ್-ರೆಗುಲೇಶನ್ಸ್ ಗಳಿಗೆ ಮೀರಿದ ಒಂದು ನೀತಿಸಂಹಿತೆ ನಮ್ಮೊಳಗೇ ತುಂಬ ಸ್ಪಷ್ಟವಾಗಿಯೇ ಮೂಡಿಸಲ್ಪಟ್ಟಿದೆ, ಮನಸ್ಸಾಕ್ಷಿಯ ಮಾತು ಮೀರದಂತೆ ಮಾಡುವ ಯಾವುದೇ ಕೆಲಸವೂ ಸಾಮಾನ್ಯ ಇತರರನ್ನು ನೋಯಿಸುವ, ಗೊಂದಲಕ್ಕೆ ಹಾಕುವ ಹಾದಿಯಲ್ಲಿರಲಾರದು ಅನ್ನಿಸುತ್ತದೆ. ಯಾಕೆಂದರೆ ಉದ್ದೇಶ ಸ್ಪಷ್ಟ ಮತ್ತು ನಮ್ಮ ಸಮಾಜದ ಹಿತವನ್ನು ಕಾಪಾಡುವದ್ದು ಅಲ್ಲವಾಗಿರುವ ಪಕ್ಷದಲ್ಲಿ ಅಂಥ ಒಂದು ಪ್ರಯತ್ನಕ್ಕೆ ನಮ್ಮೊಳಗಿನಿಂದ ಪೂರ್ಣಪ್ರಮಾಣದ ಬೆಂಬಲ ದೊರೆಯಲಾರದು. ಆಗ ನಾವು ಅಭಿವ್ಯಕ್ತಿಯಲ್ಲಿ ಸ್ವಾತಂತ್ರ್ಯ ವಹಿಸದೇ ಇರುವುದು ಸಾಧ್ಯವಾದರೆ ಅದು ಯಾವುದೇ ಕಲಾವಿದರಾಗಿರಬಹುದು, ನಮ್ಮ ಜವಾಬ್ದಾರಿ ಅನ್ನುವುದು ಒಂದಿರುತ್ತಲ್ಲಾ ಅದಕ್ಕೆ ಮರ್ಯಾದೆ ಕೊಟ್ಟಂತಾಗುತ್ತದೆ. ಮತ್ತೆ ಬರಹಗಾರರೇ ಆಗಿರಲಿ, ಇನ್ಯಾವುದೇ ಕಲಾಕಾರರಾಗಿರಲಿ, ಒಟ್ಟಿನಲ್ಲಿ ಮನುಷ್ಯರೆಲ್ಲರ ಅತ್ಯಂತ ಮೂಲ ಜೀವನಧರ್ಮ ಅಂದರೆ ಇನ್ನೊಂದು ಜೀವಿಯನ್ನು ನೋಯಿಸದೆ ಬಾಳುವುದು. ಅದುಬಿಟ್ಟು ಒಳಗಿನ ದನಿಯನ್ನು ಕಡೆಗಾಣಿಸಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಭಿವ್ಯಕ್ತಿಯಲ್ಲಿ ಸ್ವಚ್ಛಂದತೆ ತೋರಿದರೆ, ಅದು ಒಂದು ವರ್ಗದ, ಒಂದು ಸಮುದಾಯದ, ಒಂದು ಮನಸ್ಥಿತಿಯ ಮತ್ತು ಆ ಮೂಲಕ ಸಮಾಜದ ಶಾಂತಿಯನ್ನು ಕದಡುವುದು ಖಂಡಿತ. ಅದೂ ಸಮಾಜದ ಸರಾಗ ನಡೆಗೆ ತೊಡಕಾಗಿರುವ ಯಾವುದಾದರೊಂದು ಅಡೆತಡೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಡೆಯುವ ಯತ್ನವಾದರೆ, ಮತ್ತದು ಪುರಾವೆ, ಆಧಾರಗಳ ಮೂಲಕ ನಿರೂಪಿತ ಕಹಿಸತ್ಯವನ್ನೇ ಸಮಾಜದ ಮುಂದಿಟ್ಟರೆ ಅಲ್ಲಿ ಉದ್ದೇಶ ಒಳ್ಳೆಯದೇ ಅಂದುಕೊಂಡು ಸುಮ್ಮನಿರಬಹುದು. ಆದರೆ ನಂಬಿಕೆ ಶ್ರದ್ಧೆಗಳನ್ನೇ ಆಧಾರಸ್ತಂಭವಾಗಿಟ್ಟುಕೊಂಡು ಮುನ್ನಡೆಯುತ್ತಿರುವ ನಮ್ಮ ಸಮಾಜದಲ್ಲಿ, ಸಾಧನೆ ಎಂದು ನಾವು ಕರೆದುಕೊಳ್ಳುವ ನಮ್ಮ ಪ್ರಯತ್ನಗಳ ಮೂಲಕ ಬರೀ ನಮ್ಮೊಳಗಿನ ಅಹಂ ನ್ನು ತಣಿಸಲಿಕ್ಕಾಗಿ ಇಂಥ ಸಂಶೋಧನೆಗಳ ಮೊರೆಹೋಗುವುದು ಮತ್ತು ಅದನ್ನು ಸಮಾಜದ ಮುಂದಿಟ್ಟು ಅಲ್ಲಿ ಪರವಿರೋಧಗಳ ಒಂದು ಅಲೆಯನ್ನು ಹುಟ್ಟುಹಾಕಿ ವೃಥಾ ಅಶಾಂತಿ ಸೃಷ್ಟಿಸುವುದು ಸರಿಯೇ? ಇದಕ್ಕೆ ಕಾನೂನು, ಸಂವಿಧಾನಗಳ ಆಧಾರ ತೋರಿಸಿದರೆ ಸಮಂಜಸವಾಗಲಾರದು ನನ್ನ ಪ್ರಕಾರ. ಎಲ್ಲ ಕಲೆಗಳು ಮನುಷ್ಯತ್ವಕ್ಕೆ ಒತ್ತು ಕೊಡುವಂತಿರಬೇಕೇ ಹೊರತು ಬರೀ ಪಾಂಡಿತ್ಯ, ಪರಿಶ್ರಮಗಳ ಮತ್ತು ಆ ಮೂಲಕ ನಾವು ತಲುಪಿದೆವು ಅನಿಸುವ ಒಂದು ಸತ್ಯದ ಪ್ರದರ್ಶನವಾಗುಳಿದರೆ, ಕಲೆಯ ಮೂಲ ಉದ್ದೇಶವಾದ ಮನೋರಂಜನೆ ಸಾಧ್ಯವಾಗದು. ಮತ್ತೆ ಅಂಥ ಪ್ರಯತ್ನ ಅದು ಸಂಶೋಧನೆಯೇ ಇರಬಹುದು, ಅಥವಾ ಕಾಲ್ಪನಿಕ ಕತೆಯೇ ಇರಬಹುದು, ಒಂದು ಸರಾಗ ನಡೆದುಕೊಂಡು ಹೋಗುತ್ತಿರುವ ವ್ಯವಸ್ಥೆಯ ಸುಸ್ಥಿತಿಯನ್ನು ಕದಡುವ ಅಪಾಯವಿರುವಂಥದ್ದಾದರೆ ಅದು ಖಂಡಿತಾ ಅನಗತ್ಯ ಅನಿಸುತ್ತದೆ. ಸತ್ಯ ಬದುಕಿಗೆ ಪೂರಕವಾಗುವಂತಿದ್ದರೆ ಕಂಡುಕೊಳ್ಳುವಾ ಹರಸಾಹಸ ಪಟ್ಟು. ಅದಿಲ್ಲದೆಯೂ ಬದುಕು ಸುಲಲಿತವಾಗಿ ನಡೆದುಕೊಂಡು ಹೋಗುತ್ತಿರಬೇಕಾದರೆ ಸಂಶೋಧನೆಯ ಅಥವಾ ಕಲ್ಪನೆಯ ಮೂಲಕ ಹೊಸದಾರಿ ಕಂಡುಕೊಳ್ಳುವ ಅಗತ್ಯವಿರುವ ಜ್ವಲಂತ ಸಮಸ್ಯೆಗಳೆಷ್ಟೋ ಇರುವಾಗ ಎಲ್ಲ ಬಿಟ್ಟು ಚಂದದ ಪರಿಕಲ್ಪನೆಯೊಂದು,ಮನಸಿಗೆ ಮುದ ಕೊಡುವಂಥದ್ದನ್ನು ವಿರೂಪಗೊಳಿಸುವ ಮಾತು ಅದೆಷ್ಟು ಪುರಾವೆ, ಆಧಾರಗಳ ಮೂಲಕ ಪ್ರಸ್ತುತವಾದರೂ ಅನಗತ್ಯವೇ ಹೌದು ಅಂತ ಅನಿಸುವುದು ನನಗೆ. ಯಾವುದೇ ಒಂದು ವಿಷಯವನ್ನು ಇದಮಿತ್ಥಂ ಅಂತ ಯಾರೂ ಹೇಳಲಾಗದ ಸಾಪೇಕ್ಷ ಜಗತ್ತು ಇದು . ಹಾಗಿರುವಾಗ ಕಣ್ಮುಂದಿರುವುದು ಸತ್ಯವೆಷ್ಟೋ ಅಷ್ಟೇ ಸುಳ್ಳೂ ಹೌದು. ಹಾಗಂತ ಸತ್ಯವೆಂಬುದು ಸಾಧಿಸಲ್ಪಡದೆ ಇದ್ದಲ್ಲಿರುವುದು ಬರೀ ಸುಳ್ಳು ಎಂದೂ ಹೇಳಲಾಗದು ಅಲ್ಲವೇ? ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು ಅಂದ ಮಾತ್ರಕ್ಕೆ ಚಂದದಲ್ಲಿ ನಡೆದುಕೊಂಡು ಹೋಗುತ್ತಿರುವ ಒಂದು ವ್ಯವಸ್ಥೆ ಅದು ಸತ್ಯಸಾಧನೆಯ ಕೋರಿಕೆಯಿಡದೆಯೇ ತನ್ನಷ್ಟಕ್ಕೆ ತಾನು ಇರುವಾಗ , ನಾವು ನಮ್ಮ ಹಕ್ಕನ್ನು ಸಾಧಿಸಿ ಅಲ್ಲಿನ ಶಾಂತಿ ಕದಡುವ ಪ್ರಯತ್ನ ಮಾನವೀಯ ನೆಲೆಯಲ್ಲಿ ಸರಿಯಲ್ಲ. ಕಾನೂನು ಎಷ್ಟೇ ಸಮರ್ಥಿಸಲಿ, ಅಥವಾ ಸಮರ್ಥಿಸದಿರಲಿ, ಅದು ಕಲಾವಿದನ ಜವಾಬ್ದಾರಿಗೆ ಅವನು ತೋರುವ ಸಣ್ಣ ಉಪೇಕ್ಷೆ ಅನಿಸುತ್ತದೆ ನನಗೆ.

Friday, September 6, 2013

ಅವಳಂತೆ ಇವಳಲ್ಲವೇ

ಹೆಲ್ಲೊ
, ಹಾಯ್, ನಮಸ್ಕಾರ, ಗುಡ್ ಡೇ, ನೀವು ಕೇಳುತಿದ್ದೀರಿ ನೈನ್ಟಿ ಟು ಪಾಯಿಂಟ್ ಸೆವೆನ್ ಎಫ್ ಎಮ್ ನಲ್ಲಿ ಕೇಳಿರಿ ಹೇಳಿರಿ ಇದು ನಮ್ಮ ನಿಮ್ಮನಿಲುವು ಕಾರ್ಯಕ್ರಮ-------- "
ಹೀಗೆ ಅರಳು ಹುರಿದಂತೆ ಮುಂದೆ ಸಾಗುತ್ತಿದ್ದ ಆ ರೇಡಿಯೊ ಜಾಕಿಯ ಧ್ವನಿ ಕರ್ಣಾಕರ್ಷಕವಾಗಿತ್ತು. ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರವನಾಗಿರಬಹುದಾದ ಆ ತರುಣನ ವಿಷಯಜ್ಞಾನ, ಹಾಸ್ಯಮಯ ಹಿನ್ನೆಲೆಯಲ್ಲಿ ಲಘುವಾದ ನಿಲುವುಗಳನ್ನೂ ಸ್ವಾರಸ್ಯಕರವಾಗಿ ಸಾದರಪಡಿಸುತ್ತಿದ್ದ ರೀತಿ, ಆತನೊಳಗಿನ ಜೀವನಾಸಕ್ತಿಯ ಸಹಾಯದಿಂದ ಪರ ಹಾಗೂ ವಿರುಧ್ಧ ನಿಲುವುಗಳೆರಡರ ಮಾತುಕತೆಗಳಲ್ಲೂ ಸಮವಾದ ಭಾಗವಹಿಸುವಿಕೆ, ಅಲ್ಲೂ ಸಲ್ಲುವ, ಇಲ್ಲೂ ಗೆಲ್ಲುವ ಚಾಕಚಕ್ಯತೆ, ಮಧ್ಯೆ ಮಧ್ಯೆ ಬಿಚ್ಚುದನಿಯ ನಗು, ಸ್ವಲ್ಪ ನೇರದಾರಿಯಿಂದ ಆಚೆ ಈಚೆ ಸಾಗುವ ಶ್ರೋತೃಗಳ ಮಾತಿನ ಸರಣಿಯನ್ನು ಮತ್ತೆ ತನ್ನ ದಾರಿಗೆ ಎಳೆದು ತರುವ ಚುರುಕುತನ----------
ಈ ಎಫ್. ಎಮ್. ಎಂದರೆ ಲಘುವಾದ ಕಾರ್ಯಕ್ರಮಗಳು, ತೂಕವಿಲ್ಲದ ಕಾರ್ಯಕ್ರಮ ನಿರ್ವಹಣೆಗಳು ಎಂದೇ ಭಾವಿಸಿದ್ದ ಕಾವ್ಯಾಳನ್ನು ಈ ಮಾತುಗಾರನ ವರಸೆ ಆಕರ್ಷಿಸಿ ಈ ವೇಳೆಗೆ ಸರಿಯಾಗಿ ರೇಡಿಯೋದ ಮುಂದೆ ಕೂರುವಂತೆ ಮಾಡಿತ್ತು. ಇದರ ರುಚಿ ಹತ್ತಿಸಿದ್ದು ಮಗಳು ಶ್ರಾವ್ಯಾ. ಸಂಜೆ ನಾಲ್ಕಕ್ಕೆ "ಅಮ್ಮಾ ಬಂದೇ" ಎಂದು ಒಂದೇ ಉಸಿರಿಗೆ ಓಡಿ ಬಂದವಳು ಬ್ಯಾಗ್ ಎಸೆದು ಧಡ ಧಡನೇ ಮಹಡಿ ಏರಿ ರೂಮ್ ಸೇರಿಕೊಂಡರೆ ಆರೂವರೆಯವರೆಗೂ ಅವಳು ಎಫ್ ಎಮ್ -ನ ಜೊತೆ ,ಎಫ್ ಎಮ್ ಅವಳ ಜೊತೆ. ಎಷ್ಟೋ ಬಾರಿ ನಾಲ್ಕಕ್ಕೇ ಬಂದರೂ ಆರೂವರೆಯವರೆಗೂ ಇವಳ ಮುಖ ಕಾಣುವಂತಿಲ್ಲವಲ್ಲಾ ಎಂದು ಕಾವ್ಯ ಚಡಪಡಿಸಿದ್ದುಂಟು. ಎಷ್ಟೋ ಬಾರಿ ಆ ಹಿಂದಿನ ದಿನಗಳನ್ನು ನೆನೆಸಿಕೊಂಡು ಅವಕ್ಕಾಗಿ ಕಾತರಿಸಿದ್ದೂ ಉಂಟು.
ಒಂದು ಹೊತ್ತು ಶಾಲೆಗೆ ಹೋಗುವ ಬಾಲೆ ಶ್ರಾವ್ಯಾ ಆಗ. ಒಂದುಘಂಟೆಗೆ ಬಿಡುವ ಶಾಲೆಯ ಬಳಿ ಹನ್ನೆರಡೂಮುಕ್ಕಾಲಕ್ಕೇ ಹೋಗಿ ಕಾಯ್ತಾ ಕೂತಿರುತ್ತಿದ್ದಳು ಕಾವ್ಯಾ. ಒಂದಾಗುತ್ತಲೇ ಅವಳೂ ಅಷ್ಟೆ- ಎಲ್ಲರಿಗಿಂತ ಮೊದಲು ಬ್ಯಾಗನ್ನೆತ್ತಿಕೊಂಡು ಓಡಿ ಬಂದು ಅಮ್ಮಾ ಎಂದು ತಬ್ಬಿಕೊಳ್ಳದಿದ್ದರೆ ಅವಳಿಗೆ ಸಮಾಧಾನವೇ ಇರುತ್ತಿರಲಿಲ್ಲ. "ಮುಂದಿನ ವರ್ಷ ಸಂಜೆಯ ತನಕ ಸ್ಕೂಲ್ ಇದೆ ಮರೀ" ಎಂದು ಅವಳಿಗೆ ಪ್ರಿಯವಾದ ಮಧ್ಯಾಹ್ನದ ತುತ್ತಿನೂಟ ತಿನ್ನಿಸುತ್ತಾ ವಿವರಿಸುತ್ತಿದ್ದಳು ಕಾವ್ಯಾ. "ಆಗ ನೀನೇ ಊಟ ಮಾಡಬೇಕು. ನಾನು ತಿನ್ನಿಸಲು ಬರಲಾಗದು. ಈಗ್ಲೇ ಶುರುಮಾಡಮ್ಮ" ಎಂದರೆ "ಆಗ ಹೇಗೂ ನಾನೇ ತಿನ್ನ್ಬೇಕು ಅಲ್ಲಿಯವರೆಗಾದ್ರೂ ತಿನ್ನಿಸಮ್ಮಾ" ಎನ್ನುತಿದ್ದ ಪುಟಾಣಿ ಎಷ್ಟೋ ಬಾರಿ "ಮುಂದಿನ ವರ್ಷ ನಿನ್ನನ್ನು ಸಂಜೆಯವರೆಗೂ ಬಿಟ್ಟಿರಬೇಕಲ್ಲಮ್ಮಾ" ಎಂದು ಕಣ್ಣೀರಿಟ್ಟದ್ದಿತ್ತು. ಅದೇ ಪುಟ್ಟಮರಿ ಈಗ ಐದಡಿ ಎರಡು ಇಂಚಿನ ಷೋಡಶಿ. ಹಿಂದಿನವರ್ಷವಷ್ಟೇ ಕಾಲೇಜು ಸೇರಿರುವ ತನ್ನ ಮಗಳು ನೋಡನೋಡುತ್ತಿದ್ದಂತೆ ಜಗತ್ತಿನಲ್ಲಿ ಎಲ್ಲರೂ ಮಾಡುವಂತೆ ಅಪ್ರಯತ್ನವಾಗಿ ಮೃದುತನ ಕಳೆದುಕೊಂಡು ಕಾಠಿಣ್ಯತೆ ಮೈಗೂಡಿಸಿಕೊಳ್ಳುತ್ತಿರುವಳಲ್ಲಾ ಅನ್ನಿಸಿತು.ಅವಳು ರೂಮ್ ಸೇರಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದಾಗ ಕುತೂಹಲದಿಂದ ತಾನು ಒಳಗೆ ಇಣುಕಹೋದರೆ ಅವಳಿಗದು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚಾಗಿ ಕಾವ್ಯಾ ಅವಳನ್ನು ಹಿಂಬಾಲಿಸುತ್ತಿರಲಿಲ್ಲ. ಹೀಗೆ ಮೊದಲೊಂದು ಬಾರಿ ಅವಳ ಹಿಂದೆ ಹೋಗಿದ್ದಾಗ ಅವಳು ಕೇಳುತ್ತಿದ್ದ ಎಫ್. ಎಮ್. ನ ಚರ್ಚೆಯ ವಿಷಯ, ಆ ವಾದಸರಣಿಯ ಧಾಟಿಯನ್ನು ಗಮನಿಸಿ "ಏನಮ್ಮಾ ಚಿನ್ನೀ ನೀನೂ ಹೀಗೇ ಯೋಚಿಸ್ತೀಯಾ?" ಅಂದಿದ್ದಳು. "ಇಲ್ಲಮ್ಮಾ, ಇದರ ವಿಶಿಷ್ಠತೆನೇ ಇದು. ಒಂದೇ ವಿಷಯದ ಬಗ್ಗೆ ಪರ ಹಾಗೂ ವಿರುಧ್ಧ ಎರಡೂ ತರದ ವಾದಗಳು ನಡೆಯುತ್ತವೆ. ಹೆಚ್ಚಿನವರು ಕಾಲೇಜಿನ ಮಕ್ಕಳೇ ಭಾಗವಹಿಸುತ್ತಾರೆ. ಹಾಗಾಗಿ ನಮ್ಮ ನಿಲುವುಗಳೇನೇ ಇದ್ದರೂ ಅದರ ಒಳಿತು ಕೆಡುಕುಗಳನ್ನು ಚರ್ಚಾರೂಪದಲ್ಲಿ ಕೇಳಿ ಒಂದೋ ನಮ್ಮ ನಿಲುವು ಭದ್ರವಾಗುತ್ತದೆ ಇಲ್ಲಾ ಬದಲಾಗುತ್ತದೆ. ಸಾಕಷ್ಟು ಪುಷ್ಠಿ ಪಡೆದ ನಿಲುವು ನಮ್ಮದಾಗುವುದು ಒಳ್ಲೆಯದಲ್ಲ್ವಾ ಅಮ್ಮ? ಕೆಲವೊಮ್ಮೆ ಅಮ್ಮಂದಿರೂ ಈ ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತುಕತೆಗೆ ತಮ್ಮ ಅನುಭವದ ಮೆರುಗು ನೀಡುತ್ತಾರೆ. ಆಗ ನಿಲುವುಗಳು ಇನ್ನಷ್ಟು ಸುಂದರವಾಗುತ್ತವೆ- ಮತ್ತು ಹೆಚ್ಚಿನ ಆಧಾರ ಪಡೆಯುತ್ತವೆ. ನಮ್ಮ ಯೋಚನೆಗೆ ಸಾಕಷ್ಟು ಗ್ರಾಸ ಸಿಕ್ಕುವುದಂತೂ ಖಂಡಿತಾ. ಈ ಜೀವನ್ ನಡೆಸುವ ನಮ್ಮ ನಿಮ್ಮ ನಿಲುವು ಕಾರ್ಯಕ್ರಮ ಮತ್ತೆ ನಿವೇದಿತಾ ನಡೆಸುವ ಇದೇ ನನ್ನ ಉತ್ತರ ಕಾರ್ಯಕ್ರಮಗಳು ಎರಡು ಘಂಟೆಗಳ ಕಾಲ ನನ್ನ ಕಟ್ಟಿಹಾಕುವಷ್ಟು ಮೋಡಿ ಮಾಡಿ ಬಿಟ್ಟಿವೆಯಮ್ಮಾ" ಅಂದಿದ್ದಳು." ಒಂದೈದೇ ನಿಮಿಷ ಕೇಳಿ ಗಾಭರಿಯಾಗ್ಬೇಡಮ್ಮಾ, ಕೂತ್ಕೋ ಪೂರ್ತಿ ವಿಷಯ ಕೇಳು" ಎಂದು ಕೈ ಹಿಡಿದು ಕೂರಿಸಿಕೊಂಡಿದ್ದಳು. ಕೇಳುತ್ತಾ ಕೇಳುತ್ತಾ ಕಾವ್ಯಾಳ ಮನ ಹಗುರಾಗಿತ್ತು, ತಿಳಿಯಾಗಿತ್ತು, ಸ್ವಲ್ಪ ಗೆಲುವಾಗಿದ್ದೂ ನಿಜವೇ. ಕಾವ್ಯಾ ಗಾಭರಿಯಾಗಲು ಕಾರಣವೇನೆಂದರೆ ಅಂದು ಜೀವನ್ ಕೊಟ್ಟಿದ್ದ ವಿಷಯ "ಲೈಂಗಿಕ ಶಿಕ್ಷಣ ಶಾಲೆಗಳಲ್ಲಿ ಬೇಕೇ ಬೇಡವೇ" ಎಂದಾಗಿತ್ತು. ಮೊದಲಿಗೆ ಕಾವ್ಯಾ ಕೇಳಿಸಿಕೊಂಡ ಮಾತುಕತೆ "ಬೇಕು" ಎಂಬುದಕ್ಕೆ ಪೂರಕವಾಗಿದ್ದು, ತಲೆಯಾಡಿಸುತ್ತಾ ಕೇಳುತ್ತಿದ್ದ ಮಗಳ ಮುಖಚರ್ಯೆ ಆ ಮತುಕತೆಗೇ ಬೆಂಬಲವಾಗಿದ್ದಂತೆ ಅನ್ನಿಸಿ ತಾಯಿ ಮನ ಕಸಿವಿಸಿಗೊಂಡಿತ್ತು. ಆಮೇಲೆ "ಬೇಡ" ಎಂಬುವುದಕ್ಕೆ ಪೂರಕವಾಗಿಯೂ ನಡೆದ ಚರ್ಚೆ ಕೇಳಿ ಮನ ತಿಳಿಯಾಗಿತ್ತು. ಅಂದಿನಿಂದ ಪ್ರತೀದಿನ ಬೆಳಿಗ್ಗೆ ಮುಂಚಿನ ದಿನದ ಕಾರ್ಯಕ್ರಮ ಮರುಪ್ರಸಾರವಾಗುವ ವೇಳೆ ತನ್ನೆಲ್ಲ ಕೆಲಸ ಮುಗಿಸಿ ಚಹಾದ ಕಪ್ ನೊಂದಿಗೆ ರೇಡಿಯೋದೆದುರು ಹಾಜರಾಗುತ್ತಿದ್ದಳು ಕಾವ್ಯಾ.
ಇಂದು ಆತನಿತ್ತ ವಿಷಯ "ಮದುವೆ ಜೀವನಾನಂದಕ್ಕೆ ಪೂರಕವೇ ಮಾರಕವೇ" ಎಂದಾಗಿತ್ತು. ಈಗ ಹದಿನೈದು ವರ್ಷಗಳ ಹಿಂದೆ- ವಯಸ್ಸು ಮೂವತ್ತಾದರೂ ಇನ್ನೂ ಮದುವೆ ಒಲ್ಲೆ ಎನ್ನುತ್ತಿದ್ದ ದೊಡ್ಡಪ್ಪನ ಮಗನನ್ನು " ಯಾವಗಲೋ ಮುರಳಿ ಮದುವೆ?" ಎಂದು ಕೇಳಿದ್ದ ಸಂದರ್ಭ ನೆನಪಾಯಿತು. "ಬಿಡಿ ಅಕ್ಕಾ ಇನ್ನೂ ಒಂದೆರಡು ವರ್ಷ ಆರಾಮಾಗಿರ್ತೇನೆ, ಆಮೇಲೆ ಮದುವೆ" ಎಂದಾತ ಅಂದಾಗ " ಯಾಕೋ ತಮ್ಮಾ ಮದುವೆ ಅಂದರೆ ಅರಾಮ ಎಲ್ಲ ಮುಗಿದುಹೋದಂತೆ ಎಂದು ಯಾಕಂದುಕೊಳ್ಳಬೇಕು? ಅದು ಹಾಗಲ್ಲಾಪ್ಪಾ-----" ಎಂದೆಲ್ಲಾ ಒಂದೈದು ನಿಮಿಷ ಬಡಬಡಿಸಿ ಆತನ ಯೋಚನೆಯೇ ತಪ್ಪೆಂಬಂತೆ ಬಾಯಿ ಮುಚ್ಚಿಸಿದ್ದಳು. ಆದರೆ ಈಗ? ಬಾಳಿನಲ್ಲಿ ಮಧುರವೆಂದೋ, ಬೇಕೇ ಬೇಕು ಎಂದೋ, ಅನಿವಾರ್ಯವೆಂದೋ ಸುತ್ತಿಕೊಳ್ಳುವ ಬಂಧನಗಳೆಲ್ಲ ಮನಸ್ಸಿನ ಗೋಜಲನ್ನು ಇನ್ನಷ್ಟು ಕ್ಲಿಷ್ಟವಾಗಿಸುತ್ತವೆ ಎಂಬ ಸತ್ಯ ಗೋಚರವಾಗಿರುವ ಕಾವ್ಯಾಳಿಗೆ ಸಂಬಂಧಗಳ ಬಗ್ಗೆ ಯಾವುದೇ ನಿಲುವನ್ನೂ ಮುಂಚಿನಷ್ಟು ನಿಖರವಾಗಿ ಪ್ರಸ್ತುತ ಪಡಿಸುವುದು ಸಾಧ್ಯವಾಗದು, ಯಾಕೆಂದರೆ ನಿಖರನಿಲುವೊಂದನ್ನು ಹೊಂದುವುದೂ ಈಗ ಆಕೆಗೆ ಸಾಧ್ಯವಾಗದು. ಆದರೆ ಹಿಡಿದ ಮಾತಿನ ಎಳೆಯನ್ನು ಅತ್ತ ಇತ್ತ ಗೋಜಲಾಗಗೊಡದೆ ಭದ್ರವಾಗಿರಿಸಿಕೊಂಡು, ತಮ್ಮ ಮೂಗಿನ ನೇರಕ್ಕೇ ಪ್ರತಿಪಾದಿಸುವ ಮಕ್ಕಳ ವಾದ ಹಿತವಾಗಿತ್ತು. ಒಪ್ಪುವಂತಿಲ್ಲದಿದ್ದರೂ, ಸಾರಾಸಗಟಾಗಿ ನಿರಾಕರಿಸುವಂತೆಯೂ ಇರಲಿಲ್ಲ. ತೀರಾ ಪರಿಚಿತವೆನಿಸುವ ಒಂದು ದನಿ ಮಾತಾಡತೊಡಗಿತು. " ಮದುವೆ ಎಂಬುದನ್ನು ಸುಖದ ಸುಪ್ಪತ್ತಿಗೆಯ ಅನುಭವವೇ ಎಂದು ನಮ್ಮದಾಗಿಸಿಕೊಳ್ಳ ಹೊರಟರೆ ಭ್ರಮನಿರಸನವಾಗುವುದಂತೂ ಖಂಡಿತಾ. ಈಗ ನೋಡಿ ನಮ್ಮ ಅಪ್ಪ ಅಮ್ಮನ ಜೊತೆಗಿನ ಬಾಳು ನಾವಾಗಲಿ, ಅವರಾಗಲಿ ಬಯಸಿ ಪಡೆದದ್ದಲ್ಲ. ಆದರೆ ವಿಧಿಯ ಆಣತಿಯಂತೆ ನಾವೆಲ್ಲ ಒಂದು ಪರಿವಾರವೆನಿಸಿಕೊಂಡಿದ್ದೇವೆ. ಇಲ್ಲಿ ನಾವು ಹೆಚ್ಚಿನ ವಿಷಯಗಳನ್ನು ತೀರಾ ಸ್ವಾಭಾವಿಕವೆಂಬಂತೆ ಒಪ್ಪಿಕೊಂಡಿರುತ್ತೇವೆ. ಮುನಿಸುಗಳ ಆಯುಷ್ಯ ಹೆಚ್ಚಿರುವುದಿಲ್ಲ, ಪ್ರೀತಿ ಎಲ್ಲ ಸಂಭಾವ್ಯ ಎಡೆಗಳಲ್ಲೂ ಇಣುಕಿ ಇಣುಕಿ ಹೊರಸೂಸುತ್ತಿರುತ್ತದೆ, ಕ್ಷಮೆ ಸುತ್ತಲೆಲ್ಲ ಆವರಿಸಿರುತ್ತದೆ. ಅತೃಪ್ತಿಯನ್ನು ಶಮನ ಮಾಡಲು ಈ ಎರಡೂ ತುಂಬಾ ಶ್ರಮಿಸಿ ಕೊನೆಗೆ ತಾಳ್ಮೆಯ ಸಹಾಯದಿಂದ ಸದಾ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವಂತೆ ನಮ್ಮ ಬಾಳನ್ನು ರೂಪಿಸುತ್ತವೆ.ನಾವು ಯಾವತ್ತೂ ಅಪ್ಪ ಅಮ್ಮನಿಂದ ಭಾವನಾತ್ಮಕವಾಗಿ ಬೇರ್ಪಡುವ ಬಗ್ಗೆ ಯೋಚಿಸುವುದೇ ಇಲ್ಲ. ಇಂಥಹುದೇ ಒಂದು ಸುಂದರ ಬೆಸುಗೆ ಮದುವೆಯ ಪರಿಣಾಮವಾದರೆ ಅದು ಜೀವನಾನಂದಕ್ಕೆ ಪೂರಕವೇ ಹೌದು. ನಿಜ, .ಅಪ್ಪ ಅಮ್ಮ ಮಕ್ಕಳ ಹೊಂದಾಣಿಕೆ ಕರುಳಬಳ್ಳಿಯ ಮೂಲಕ ಅದರಷ್ಟಕ್ಕೆ ಬಂದದ್ದಾಗಿರುತ್ತದೆ. ಆದರೆ ಮದುವೆಯ ಬಂಧನವೇರ್ಪಡುವಾಗ ಅಲ್ಲಿ ಈ ತರಹದ ಬೆಸುಗೆಯ ಸಾಕ್ಷಾತ್ಕಾರಕ್ಕಾಗಿ ನಾವು ತುಂಬಾ ಯತ್ನಿಸಬೇಕಾಗುತ್ತದೆ. ನಾನು ಎಂಬುದು ಕಳೆದುಹೋಗಬೇಕಾಗಿಲ್ಲ- ಆದರೆ ಸಂಗಾತಿಯೊಳಗೆ ಮಿಳಿತವಾಗಬೇಕು. ಆದಾಗ್ಗ್ಯೂಅಲ್ಲಿ ನನ್ನತನ ಆ ವ್ಯಕ್ತಿತ್ವದೊಳಗೆ ವಿಶಿಷ್ಠವಾಗಿರಬೇಕು. ಆ ಎರಡು ವ್ಯಕ್ತಿತ್ವಗಳು ಪರಸ್ಪರ ಗುದ್ದಾಡದೇ ಮುದ್ದಾಡುವಂತಿರಬೇಕು. ಆದರ್ಶದ, ಅಸಂಭವ ಮಾತೆನಿಸಿದರೂ ಕಷ್ಟ ಪಟ್ಟು ಸಾಧಿಸಿದರೆ ಅಸಾಧ್ಯವೆನಿಸಲಾರದು" ಅರೇ!! ಇದು ನನ್ನ ಪುಟಾಣಿಯ ದನಿಯಲ್ಲವೇ? ಎಷ್ಟೊಂದು ಯೋಚಿಸುತ್ತಾಳೆ ನನ್ನ ಮಗಳು! ಇಷ್ಟೊಂದು ತಿಳಿದುಕೊಳ್ಳಬಲ್ಲ ಮನಸು ಅಷ್ಟೇ ಸರಳವಾಗಿ ಜೀವನವನ್ನು ಆದರ್ಶಗೊಳಿಸಬಲ್ಲದಾದರೆ ನನಗಿನ್ನೇನು ಬೇಕು ಅನ್ನಿಸಿತು ಕಾವ್ಯಾಳಿಗೆ. ಇದು ನನ್ನ ಆರೈಕೆಯ ಫಲ.... ನಾನು ಬೆಳೆಸಿದ ಭಾವನೆಗಳು...... ನನ್ನ ತಪಸ್ಸಿನ ವರ..... ಎಂದೆನಿಸಿ ಎದೆ ತುಂಬಿ ಬಂತು ಇನ್ನೂ ವಾದ ವಿವಾದಗಳು ಮುಂದುವರೆದಿದ್ದವು. ಕಿವಿಗಳು ರೇಡಿಯೋ ಕೇಳುತ್ತಿದ್ದರೂ ಕಾವ್ಯಾಳ ಯೋಚನೆಗಳು ಧಾವಿಸಿ ಹಿಂದಕ್ಕೋಡಿದವು. ತನ್ನ ಜೀವನದಲ್ಲಿ ಪ್ರೀತಿಯನ್ನೂ , ಮದುವೆಯೆಂಬ ವ್ಯವಸ್ಥೆಯನ್ನೂ ಉಳಿಸಲು ಹೆಣಗಿದ್ದು ನೆನೆದು ಕಣ್ತುಂಬಿ ಬಂತು.
ಬಯಸಿ ಮದುವೆಯಾದ ಗಂಡ, ಪ್ರೀತಿಸುವ ಅತ್ತೆ ಮಾವ, ಮಡಿಲು ತುಂಬಿದ್ದ ಮುದ್ದುಶ್ರಾವ್ಯಾ- ಈ ಪುಟ್ಟ ಸಂಸಾರದಲ್ಲಿ ಬಹಳ ಅದೃಷ್ಟವಂತೆ ತಾನೆಂದುಕೊಂಡು ಬಾಳುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಕಂಕುಳ ಕೆಳಗೆ ಕಾಣಿಸಿಕೊಂಡ ಅಸ್ವಾಭಾವಿಕವಾದ ನೋವು ಮತ್ತು ಒಂದ್ದು ಗಡ್ಡೆ - ತನ್ನೊಳಗೆ ಮೌನವಾಗಿ ಕುಳಿತು ತನ್ನನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಕ್ಯಾನ್ಸರ್ ಎಂದು ತಿಳಿದಾಗ ಭೂಮಿಗಿಳಿದು ಹೋಗಿದ್ದಳು. ಅಲ್ಲಿಂದ ಮೊದಲಾಗಿತ್ತು ಚಿಕಿತ್ಸೆ- ಕೆಲವೊಮ್ಮೆ ಒಳ್ಳೆಯ ಪ್ರತಿಫಲ , ಕೆಲವೊಮ್ಮೆ ಕಾಯಿಲೆಯ ಉಲ್ಬಣಿಸುವಿಕೆ, ಕೆಲವು ಅಡ್ಡ ಪರಿಣಾಮಗಳು------ ಇವೇ ಮುಂತಾದುವುಗಳ ಮಧ್ಯೆ ವರ್ಷಗಳೆರಡು ಕಳೆದುಹೋಗಿದ್ದವು. ಆಗ ಈ ಶ್ರಾವ್ಯಾ ನಾಲ್ಕು ವರ್ಷದ ಬಾಲೆ. ದಿನ ಕಳೆಯುತ್ತಿದ್ದಂತೆ ಬಾಹ್ಯವಾಗಿ ಸ್ಪಷ್ಟವಾಗಿ ಗೋಚರವಾಗುವ ವಿಷಯಗಳೊಂದಿಗೆ ಪತಿ ವಿನಯ್ ನ ಸ್ವಭಾವದಲ್ಲೂ ಸ್ವಲ್ಪ ವ್ಯತ್ಯಾಸ ಕಾಣತೊಡಗಿತ್ತು. ಆದರೂ ಅದು ಸ್ವಾಭಾವಿಕ, ತೀರಾ ಮೂವತ್ನಾಲ್ಕು ವರ್ಷಕ್ಕೇ ಅವನು ಹೆಂಡತಿಯಿದ್ದೂ ಇಲ್ಲದವನಂತೆ ಬಾಳಬೇಕಾದ ಅನಿವಾರ್ಯತೆಯಿಂದಾಗಿ ತನ್ನೆಡೆಗೆ ಸ್ವಲ್ಪ ಉದಾಸೀನ ಭಾವ ತಳೆದಿದ್ದಾನೆ ಅನ್ನಿಸುತ್ತಿತ್ತು. ಆ ಹೊಡೆತದ ಪರಿಣಾಮವೇ ತನ್ನ ನೋವುಗಳೆಡೆಗೆ ಸ್ವಲ್ಪ ಕಿವುಡು.... ತನ್ನ ಅಳುನಗೆಗಳೆಡೆಗೆ ಸ್ವಲ್ಪ ಕುರುಡು..... ತನ್ನ ಪ್ರೀತಿಗೆ ಸ್ವಲ್ಪ ಅನಾದರ...ಗಳೆಂದೂ, ಇವನ್ನೆಲ್ಲ ಸಹಜವೆಂದೇ ಭಾವಿಸುತ್ತಾ ದಿನಕಳೆಯುತ್ತಿದ್ದಳು. ಆದರೊಂದು ದಿನ ತನ್ನೆಡೆಗಿನ ಈ ಉದಾಸೀನ ಇನ್ನೊಂದೆಡೆ ಮನಸು ನೆಟ್ಟಿದ್ದರ ಪರಿಣಾಮವೆಂದರಿವಾದಾಗ ತನ್ನನ್ನು ಕಿತ್ತು ತಿನ್ನುತ್ತಿದ್ದ ಕಾಯಿಲೆಗಿಂತಲೂ ದೊಡ್ಡ ಪೆಟ್ಟು ಬಿದ್ದಂತಾಗಿ ಪೂರ್ತಿಯಾಗಿ ಬಸವಳಿದುಬಿಟ್ಟಿದ್ದಳು.
ಆದರೆ ಬಹುಶಃ ಒಳ್ಳೆಯತನಕ್ಕೆ ಸಿಕ್ಕುವ ಪ್ರತಿಫಲ ನಾವು ಮುಂದೆಯೂ ಒಳ್ಳೆಯವರಾಗಿಯೇ ಬಾಳಬಲ್ಲ ಆತ್ಮಸ್ಥೈರ್ಯ ಮತ್ತು ವ್ಯತಿರಿಕ್ತ ಸಂದರ್ಭವನ್ನೂ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಬೇಕಾದ ಸಮಯೋಚಿತ ವ್ಯವಧಾನಗಳೆಂದು
ತೀವ್ರವಾಗಿ ನಂಬಿದ್ದ ಕಾವ್ಯಾಳ ನಂಬಿಕೆ ಮುಂದಿನ ದಿನಗಳಲ್ಲಿ ಬಲವಾಯಿತು
. ಒಳಗಿನ ರೋಧನವನ್ನು ಆನಂತರ ಕಣ್ಣೀರಾಗಿ ಹೊರಹರಿಯಬಿಡಲಿಲ್ಲ. ಒಳಗೇ ಶೇಖರಿಸಿ ಮುಂದೊಮ್ಮೆ ಸ್ಫೋಟಿಸಬೇಕಾದ ಧೈರ್ಯದುಂಡೆಯನ್ನಾಗಿ ಘನೀಕರಿಸುತ್ತಾ ಬಾಳಿದಳು. ಬರುಬರುತ್ತಾ ತನ್ನದೆನುವ ಎಲ್ಲದರೆಡೆಗೆ, ಕೊನೆಗೆ ಮಗುವಿನೆಡೆಗೂ ತುಂಬಾ ಅನಾದರ ತೋರತೊಡಗಿದ ಪತಿಯ ಬುಧ್ಧಿ ಗೊಂದಲಗೊಂಡು ಮಂಕಾಗಿದೆ, ದುರ್ಬಲವಾಗಿದೆ ಎಂದರಿವಾದಾಗ ಇದೇ ಆತನನ್ನು ಆ ಕಡೆಯಿಂದ ಈ ಕಡೆಗೆ ಸೆಳೆಯಬೇಕಾದ ಸರಿಯಾದ ಸಮಯವೆಂದರಿತ ಕಾವ್ಯಾ ದೈವದೊಲುಮೆಯ ಸಹಾಯದಿಂದ ಆ ಕೆಲಸ ಮಾಡುವಲ್ಲಿ ಸಫಲಳಾದಳು. ಅವಳ ಕಾಯಿಲೆಯೂ ಸುಮಾರಾಗಿ ಗುಣವಾಗುತ್ತಾ ಬಂದಿತ್ತು. ಆ ಇನ್ನೊಂದು ಸಂಬಂಧವೂ ಹಳತಾಗುತ್ತಾ, ಹಳಸುತ್ತಾ ಬಂದಿತ್ತು. ಕೆಲವುಸಲ ಸಂದರ್ಭದ ಹಿಡಿತಕ್ಕೊಳಗಾಗಿ ತಪ್ಪೆಸಗುತ್ತಿರುವ ಸಜ್ಜನರ ಮನ ತಪ್ಪಿತಸ್ಥ ಭಾವನೆಯ ಭಾರದಿಂದ ದುರ್ಬಲವಾಗಿರುತ್ತದೆ. ಆ ಮನೋಸ್ಥಿತಿಯಲ್ಲಿ ಸ್ವಲ್ಪವೇ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಸಾಕು, ಅಲ್ಲಿಂದ ತಪ್ಪಿಸಿಕೊಂಡು ಬರಲನುವಾಗಿರುವ ಅವರು ಅಲ್ಲಿ ಸುಖವಿದ್ದರೂ ಅದನ್ನು ಮನಸಾರೆ ಅನುಭವಿಸಲಾರರು. ಆ ಕಡೆಗಿನ ಎಳೆ ದುರ್ಬಲವಾದದ್ದು ಅರಿವಾದಂತೆ ಕಾವ್ಯಾ ಅತಿಯಾದ ತಾಳ್ಮೆಯಿಂದ ಅವರನ್ನು ಬರೇ ಪ್ರೀತಿಸತೊದಗಿದಳು. ತನ್ನವರನ್ನು ಅವರು ತನ್ನವರೆನ್ನುವ ಕಾರಣಕ್ಕಾಗಿ ಮಾತ್ರ ಪ್ರೀತಿಸುವುದೇ ನಿಜವಾದ ಪ್ರೀತಿ ಎಂದೆಲ್ಲೋ ಓದಿದ್ದಾಗ ಅದು ಬೊಗಳೆ ಎಂದುಕೊಂಡಿದ್ದವಳು ಈಗ ತನ್ನ ಬಾಳನಾವೆ ಮುಳುಗಗೊಡಬಾರದೆಂಬ ಅಗತ್ಯದಲ್ಲಿ ತನಗರಿವಿಲ್ಲದಂತೆ ಅದನ್ನು ಅಕ್ಷರಶಃ ಪಾಲಿಸತೊಡಗಿದ್ದಳು. ಅವರನ್ನು ಪ್ರೀತಿಸುತ್ತೇನೆ ಎಂದು ನೂರಾರು ಬಾರಿ ತನಗೇ ಹೇಳಿಕೊಂಡು ಅದರಂತೆ ನಡೆಯುತ್ತಿದ್ದಳು. ಆಗೆಲ್ಲ ತನ್ನತನಕ್ಕೆ ಬೀಳುತ್ತಿದ್ದ ಪೆಟ್ಟು, ತಾನೇ ತನ್ನ ಭಾವನೆಗಳನ್ನು ಹಗುರಾಗಿಸಿ ತನಗೆಸಗಿಕೊಳ್ಳುತ್ತಿದ್ದ ಅವಮಾನಗಳನ್ನು ಲವಲೇಶವೂ ಲೆಕ್ಕಿಸದೇ, ಹೊರಗೆ ತೋರದೇ, ತನ್ನೊಳಗೆ ಹುದುಗಿಸಿಕೊಂಡ ತನ್ನೆದೆ ತುಂಬಾ ವಿಶಾಲವೆಂದು ಬೀಗುವುದಷ್ಟೇ ಅವಳ ಕೆಲಸವಾಗಿತ್ತು ಆ ದಿನಗಳಲ್ಲಿ. ಆದರೆ ಪ್ರತಿಫಲ ಸಿಕ್ಕಿತು. ಮೊದಮೊದಲು ಬಲವಂತವಾಗಿ ಅಳವಡಿಸಿಕೊಂಡ ಧನಾತ್ಮಕ ಪ್ರೀತಿ ಬರುಬರುತ್ತಾ ಸ್ವಾಭಾವಿಕವೆಂಬಂತೆ ಆಕೆಯ ಗುಣವಾಗಿಬಿಟ್ಟಿತು. ಅನಾಯಾಸವಾಗಿ ಪತಿಯ ತಪ್ಪನ್ನೆಲ್ಲ ಒಪ್ಪಿಕೊಂಡು ಅವರನ್ನು ತೀವ್ರವಾಗಿ ಅರಾಧಿಸತೊಡಗಿದ್ದಳು. ಆತನೂ ಒಲಿದರು, ವಿಧಿಯೂ ಮಣಿಯಿತು, ತನ್ನಷ್ಟಕ್ಕೆ ಪೂರ್ಣಪ್ರಮಾಣದ ಗಮನವನ್ನರಸುತ್ತಾ ಆ ಇನ್ನೊಬ್ಬಾಕೆಯೂ ಹೊರಟುಹೋದಳು. ಜೀವನ ಮತ್ತೆ ಮೊದಲಿನ ತನ್ನದೇ ಹಳಿಗಳ ಮೇಲೆ ಚಲಿಸತೊಡಗಿತು.
ತುಂಬಿದ ಕಣ್ಣುಗಳಲ್ಲಿ ಮುಗುಳ್ನಗು ಸೂಸುತ್ತಾ ಕುಳಿತಿದ್ದ ತಾಯಿಯ ಭಂಗಿ ಶ್ರಾವ್ಯಾಳಿಗೆ ತುಂಬಾ ಸುಂದರವೆನಿಸಿತು. "ಅಮ್ಮಾ" ಎಂದು ಕರೆದು ಮುತ್ತಿಕ್ಕಿದಾಗಲೇ ಕಾವ್ಯ ಇಂದಿಗಿಳಿದದ್ದು.
"
ಬೇಗ ಬಂದಿಯೇನೇ ಬಂಗಾರೀ?" ಎನ್ನುತ್ತಾ ಎದ್ದಳು.
"
ಹೌದಮ್ಮಾ ಕ್ಲಾಸ್ ಗಳಿರಲಿಲ್ಲ. ಎಲ್ಲರೂ ಕಾಲೇಜುಡೇ ತಯಾರಿಗಳಲ್ಲಿದ್ದಾರೆ, ನಾನು ಬಂದುಬಿಟ್ಟೆ"ಅಂದಳು ಶ್ರಾವ್ಯಾ.
"
ಸರಿ ಕೈಕಾಲು ತೊಳ್ಕೊಂಡು ಬಾ ಬಿಸಿಬಿಸಿ ಬೋಂಡಾ ಮಾಡ್ತೀನಿ" ಆನ್ನುತ್ತಾ ಅಡುಗೆಮನೆಗೆ ನಡೆದವಳ ಕೈ ಹಿಡಿದು ಮುದ್ದುಸುರಿಯುವ ದೃಷ್ಟಿಯಿಂದ ಅವಳೆದುರು ಮುಖ ತಂದು ನುಡಿದಳು ಶ್ರಾವ್ಯಾ: " ಈಗಲೆ ಬೇಡಾಮ್ಮಾ, ಬಾ ನಿನಗೊಂದು ಅಚ್ಚರಿ ಕಾದಿದೆ" ಕೈಹಿಡಿದು ಹಾಲ್ ಗೆ ಕರೆತಂದಳು. ಅಲ್ಲಿ ಸೋಫಾದ ಮೇಲೆ ಕುಳಿತಿದ್ದ ತರುಣನ್ನು ಪರಿಚಯಿಸಿದಳು "ಅಮ್ಮಾ ನನ್ನ ಫ್ರೆಂಡ್, ಜೀವನ್".
"
ನಮಸ್ಕಾರ" ಕೈ ಜೋಡಿಸಿದವಳಿಗೆ ಪ್ರತಿಯಾಗಿ "ನಮಸ್ಕಾರ ಆಂಟಿ" ಎಂದ. ಗೋಡೆಗೊರಗಿಸಿಟ್ಟಿದ್ದ ಎರಡು ಊರುಗೋಲುಗಳ ಮೇಲೆ ನೆಟ್ಟಿದ್ದ ತಾಯಿಯ ಪ್ರಶ್ನಾರ್ಥಕ ದೃಷ್ಟಿಗೆ ಉತ್ತರಿಸಿದಳು ಮಗಳು. " ಅಮ್ಮಾ, ಜೀವನ್ ಏಳು ವರ್ಷದವನಿದ್ದಾಗಲೇ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ.ಹಾಗಾಗಿ ಇದರ ಸಹಾಯ ಬೇಕೇ ಬೇಕು." ಪೆಚ್ಚಾದ ಕಾವ್ಯಾ ಮೆಲ್ಲಗೆ "ಸಾರಿ ಜೀವನ್" ಎಂದಳು. "ಅಯ್ಯೋ ಬಿಡಿ ಆಂಟಿ ಹೋದದ್ದ್ಯಾವುದೂ ನಮ್ಮದಲ್ಲ" ಅನ್ನುತ್ತಾ ನಕ್ಕ ಆತನ ದನಿ ಪರಿಚಿತವೆನಿಸಿತು. ಮೊದಲ ಭೇಟಿಯಲ್ಲೇ ತೀರಾ ಪರಿಚಿತವೆನಿಸುವ ಕೆಲವು ವ್ಯಕ್ತಿತ್ವಗಳನ್ನು ನೋಡಿದ್ದ ಕಾವ್ಯಾಳಿಗೆ ಆ ಗಳಿಗೆಗೆ ಈತನೂ ತುಂಬಾ ಪರಿಚಿತನೆನಿಸಿದ. "ಕಾಲಷ್ಟೇ ಅಲ್ಲ ಆಂಟಿ ನಮ್ಮಪ್ಪ ಅಮ್ಮನೂ ನನ್ನ ಒಂಟಿಯಾಗಿಸಿ ಬಿಟ್ಟು ಹೊಗಿಬಿಟ್ಟ್ರು, ಆದ್ರೆ ಸದ್ಯ ಬೇಕಾದಷ್ಟು ಆಸ್ತಿ ಬಿಟ್ಟು ಹೋಗಿದ್ದಾರೆ, ಅದನ್ನೂ ಕೊಂಡೊಯ್ದಿದ್ದರೆ ನನ್ನ ಗತಿ ಹೇಳಿ ಆಂಟಿ" ಮತ್ತೆ ಬಿಚ್ಚುನಗು. ತಟ್ಟನೇ ಹೊಳೆಯಿತು ಕಾವ್ಯಾಳಿಗೆ- "ಈತನೇ ಆ ಎಫ್ ಎಮ್ ನ ಚಾಲಾಕಿ ಹುಡುಗ ಜೀವನ್ ಅಲ್ಲ್ವೇನೆ ಮರೀ? " ಕೇಳಿದವಳ ಕಣ್ಣಲ್ಲಿ ಆತನೆಡೆ ಒಬ್ಬ ಅಭಿಮಾನಿಯ ಪ್ರೀತಿಯ ಹೊಳಪು. "ಹೌದು ಆಂಟಿ" ಎಂದು ಕೂತಲ್ಲಿಂದಲೇ ಬಗ್ಗಿ ತನ್ನ ಕಾಲುಮುಟ್ಟಿ ನಮಸ್ಕರಿಸಿದವನನ್ನು " ದೇವರು ಚೆನ್ನಗಿಟ್ಟಿರಲಿ ಕಂದಾ" ಎಂದು ಮನಸಾರೆ ಹಾರೈಸುವಾಗ ಕಣ್ತುಂಬಿ ಬಂದಿತ್ತು. ಇಂಥಹ ಅಸಹಾಯಕ ಪರಿಸ್ಥಿತಿಯಲ್ಲೂ ಇಷ್ಟು ಲವಲವಿಕೆ ತುಂಬಿಕೊಂಡು ಸುತ್ತಲೂ ಅದನ್ನು ಹರಡಬಲ್ಲ ಈ ಜೀವಿ ಶ್ರೇಷ್ಠತರದ್ದು ಅನ್ನಿಸಿತು. "ನಾನೂ ಇವಳಂತೆಯೇ ನಿನ್ನ ಅಭಿಮಾನಿನೇಪ್ಪಾ. ನೀನು ರೇಡಿಯೋದಲ್ಲಿ ಆಡುವ ಮಾತುಗಳು ನಿನ್ನನ್ನಾಗಲೇ ನನಗೆ ಪರಿಚಯಿಸಿಬಿಟ್ಟಿವೆ. ಹಾಗಾಗಿ ತೀರಾ ಹೊಸಬ ನೀನೆಂದೆನಿಸಲೇ ಇಲ್ಲ ನೋಡು. ಕೂತಿರು, ಕುಡೀಲಿಕ್ಕೇನಾದ್ರೂ ತರ್ತೀನಿ" ಎನ್ನುತ್ತ ಒಳನಡೆದವಳ ಮನದಲ್ಲಿ ಸಂತೋಷ ವಿಷಾದಗಳೆರಡೂ ಸೇರಿ ಏನೋ ಗೊಂದಲದ ಭಾವ.
ಕಾಫಿ ತಿಂಡಿ ತಿನ್ನುತ್ತಾ ಕ್ಷಣವೊಂದರ ಕಾಲವೂ ಮೌನವಾಗಿರದೇ ನಗುತ್ತಾ ನಗಿಸುತ್ತಾ ಇದ್ದ ಈ ಮಕ್ಕಳೊಡನೆ ಮುದವೆನಿಸಿತು ಕಾವ್ಯಾಳಿಗೆ. ನಾನಿನ್ನು ಹೊರಡಬೇಕು ಎನ್ನುತ್ತ ಎದ್ದ ಜೀವನ್ ತನ್ನ ಅಪಾಂಗರ ವಾಹನವನ್ನೇರಿ ಹೋದಾಗ "ಪಾಪ ಕಣೇ ಶ್ರಾವ್ಯಾ" ಅಂದಳು. "ಏ ಬಿಡಮ್ಮ ಪಾಪ ಅಂತೆ ಪಾಪ. ಪಾಪ ಅಲ್ಲ ಪಾಪಿ ಅವ್ನು" ಅಣಕಿಸುತ್ತಾ ಒಳಗೋಡಿದ ಮಗಳು ಚಿಗರೆಮರಿಯಂತೆ ಕಂಡಳು.
ಬಟ್ಟೆ ಬದಲಾಯಿಸಿ ಪಕ್ಕ ಬಂದು ಕೂತ ಮಗಳ ಮುಖದಲ್ಲಿ ಏನೋ ಹೇಳಬೇಕಾದ ಕಾತುರ. "ಎನು ಹೇಳಬೇಕೋ ಬೇಗ ಹೇಳಮ್ಮ್ಮಾಮಗಳೇ" ಅಂದಳು. "ಜೀವನ್ ದು ಎಷ್ಟೊಂದು ಮುದನೀಡುವ ವ್ಯಕ್ತಿತ್ವ ಅಲ್ಲ್ವಾಮ್ಮಾ? ಅವನ ಜೊತೆ ಇದ್ದಷ್ಟು ಹೊತ್ತೂ ನಗೂನೂ ಜೊತೆಲೇ ಇರುತ್ತೆ. ಅದಕ್ಕೆ ಅವನಂದ್ರೆ ನಂಗೆ ತುಂಬಾ ಇಷ್ಟ." ಅಂದಳು ಶ್ರಾವ್ಯಾ. "ನಂಗೂ ಅಷ್ಟೇ ಕಣೆ ಪುಟ್ಟಿ, ತುಂಬಾ ಇಷ್ಟ" ಅಂದಳು. "ಅದಕ್ಕೆ ನಾನು- ಜೀವನ್ ಮದುವೆಯಾಗ್ಬೇಕಂತ ಇದ್ದೇವೆ ಅಮ್ಮಾ......" ದಿಗ್ಗನೆದ್ದಳು ಕಾವ್ಯಾ. ಹದಿನೆಂಟರ ಮಗಳ ಬಾಯಲ್ಲಿ ಮದುವೆಯ ಮಾತೇ!!? "ಅಮ್ಮಾ....., ನನ್ನಮ್ಮಾ...., ಮದುವೆ ಅಂದ್ರೆ ಏನಂತ ಸರಿಯಾಗಿ ಗೊತ್ತೇನಮ್ಮಾ?" ಅಂದಳು. "ಹೌದಮ್ಮಾ ಮದುವೆ ಅಂದರೆ ಜೀವನದ ನೋವು-ನಲಿವುಗಳಲ್ಲೆಲ್ಲಾ ಅತ್ಯಂತ ಅವಶ್ಯಕವಾಗಿ ಬೇಕು ಅನ್ನಿಸುವ ಒಬ್ಬ ಪಾಲುದಾರನನ್ನು ಜೊತೆ ಮಾಡಿಕೊಳ್ಳುವುದು" ಅಷ್ಟೇ ಸರಳವಾಗಿ ಬಂತು ಉತ್ತರ. ಆದರದು ಅಷ್ಟು ಸರಳವೇ? " ಹೌದು ಮರೀ ಆದರೆ ಅಲ್ಲಿ ಇನ್ನೂ ಅನೇಕ ಕ್ಲಿಷ್ಟತೆಗಳಿವೆಯಮ್ಮಾ. ಅದರ ಬಗ್ಗೆ ಯೋಚಿಸಿ ನಿರ್ಧರಿಸುವ ವಯಸ್ಸು ನಿನ್ನದಲ್ಲವಮ್ಮಾ"- ಕಾವ್ಯಾಳ ದನಿ ಉಡುಗಿಯೇ ಹೋದಂತಿತ್ತು." ಒಪ್ತೇನಮ್ಮಾ. ನಾವೀಗಲೇ ಮದುವೆಯಾಗುವುದಿಲ್ಲ. ನನ್ನ ಓದು ಮುಗಿಯುವಷ್ಟರಲ್ಲಿ ಅವನ ವೃತ್ತಿಬದುಕೂ ದೃಢವಾಗಿರುತ್ತದೆ. ಆಗಲೇ ಮದುವೆ. ಆದರೆ ಈತನೇ ನನ್ನವನಾಗಬೇಕು ಎಂದು ನಿರ್ಧರಿಸುವ ಪ್ರೌಢತೆ ನನ್ನಲ್ಲಿಲ್ಲವೇನಮ್ಮಾ?" ಮಗಳ ಮಾತಿಗೆ "ಇಲ್ಲ" ಎಂದು ಘಂಟಾಘೋಷವಾಗಿ ಹೇಳಲು ತಾಯಿಯ ಕೈಲಾಗಲಿಲ್ಲ. ಆದರೆ ಕಾಲಿಲ್ಲದವನನ್ನು ಮೂರನೆಯವನನ್ನಾಗಿ ಮೆಚ್ಚುವುದೇ ಬೇರೆ, ತನ್ನವನನ್ನಾಗಿಸಿಕೊಳ್ಳುವುದೇ ಬೇರೆ. ಇದನ್ನು ಮಗಳಿಗೆ ಹೇಗೆ ತಿಳಿ ಹೇಳುವುದು? ಏನೋ ಹೇಳಹೊರಟವಳು ಇದು ಸರಿಯಾದ ಸಮಯವಲ್ಲ, ತಾನೇನು ಹೇಳಬೇಕೆಂದು ಸರಿಯಾಗಿ ನಿರ್ಧರಿಸಿ ಮಾತಾಡಬೇಕೆನಿಸಿತು.ಸುಮ್ಮನೆ ಒಳನಡೆದಳು. "ಅಮ್ಮಾ....." ಹಿಂಬಾಲಿಸಿ ಬಂದ ಮಗಳನ್ನು ಕೈಸನ್ನೆಯಿಂದ ಅಲ್ಲೇ ಇರು ಎಂದು ತಿಳಿಸಿ, ರೂಂ ಸೇರಿ ಬಾಗಿಲು ಹಾಕಿಕೊಂಡಳು. ಯೋಚಿಸುತ್ತಾ ಹೋದಂತೆ ಒಂದು ಗಳಿಗೆ.........
ತಟ್ಟನೆ ಹಿಂದಿನ ದಿನ ಟಿ.ವಿ. ಯಲ್ಲಿ ಕಂಡಿದ್ದ ಕಾರ್ಯಕ್ರಮವೊಂದರಲ್ಲಿ ಎರಡೂ ಕಣ್ಣು ಕಳೆದುಕೊಂಡ ಹುಡುಗನೊಬ್ಬನನ್ನು ಮದುವೆಯಾಗುತ್ತೇನೆಂದು ಮಾತನಾಡುತ್ತಿದ್ದ ಹುಡುಗಿಯ ಮುಖ ಕಣ್ಣೆದುರು ಬಂತು. ಆತ ಹಿಂದೆ ಪ್ರೀತಿಸಿದ್ದ ಹುಡುಗಿಯ ಎತ್ತರದ ಅಂತಸ್ತು ಒಡ್ಡಿದ್ದ ಎಲ್ಲಾ ತಡೆಗಳನ್ನೆದುರಿಸಿ ಮುನ್ನುಗ್ಗುತ್ತಿದ್ದ ಅವರ ಪ್ರೀತಿಯನ್ನು ತಡೆಯಲು ಕೊನೆಯ ಹೆಜ್ಜೆಯಾಗಿ ಅವನ ಎರಡೂ ಕಣ್ಣುಗಳನ್ನು ಕೀಳಿಸಿತ್ತು. ಆ ವಾರ್ತೆ ಬಿತ್ತರಿಸಿದ್ದ ಟಿ.ವಿ. ಚಾನೆಲ್ ಒಂದರ ಕಚೇರಿಗೆ ಓಡಿ ಬಂದಿತ್ತು ಈ ಹೆಣ್ಣು. ಇಷ್ಟಾದರೂ ತನ್ನ ಪ್ರೀತಿಯ ಹುಡುಗಿಗೆ ಒಳ್ಳೆಯದನ್ನೇ ಹಾರೈಸುತ್ತಿರುವ ಆತ ಹೃದಯವಂತಿಕೆಗೆ ಸೋತು ಅವನನ್ನು ಮೆಚ್ಚಿ ಮದುವೆಯಾಗಬಂದಿದ್ದೇನೆ ಎಂದು ಹೇಳುತ್ತಿದ್ದಳು ಆಹುಡುಗಿ. ಆ ಕಾರ್ಯಕ್ರಮದ ಸೂತ್ರಧಾರ, ಆ ಹೆಣ್ಣಿನ ತಾಯಿ ಮತ್ತು ತಮ್ಮ, ಸಾಲದೆಂಬಂತೆ ನೇರಪ್ರಸಾರದಲ್ಲಿ ಫೋನ್ ಮಾಡಿ ಮಾತಾಡುವ ಎಲ್ಲ ವೀಕ್ಷಕರು - ಆತನ ಮೇಲೆ ಆಕೆಗೆ ಆರಾಧನಾ ಭಾವ ಹುಟ್ಟಿದ್ದೇ ತೀರಾ ಅಸಂಭವವೆಂಬಂತೆ ರೂಪಿಸುವಲ್ಲಿ ಪಟ್ಟುಹಿಡಿದು ತೊಡಗಿದ್ದಂತಿತ್ತು.
ನೋಡಲು ಸುಮಾರಾಗಿ ಚೆನ್ನಾಗಿಯೇ ಇದ್ದ
, ಶಿಕ್ಷಕ ತರಬೇತಿ ಪಡೆದಿದ್ದ ಆ ಹುಡುಗಿ ಬೇರೆಲ್ಲೂ ಗಂಡು ಸಿಕ್ಕಿಲ್ಲವೆಂದು ಈ ಸಾಹಸಕ್ಕೆ ಧುಮುಕಿರಲಿಕ್ಕಿಲ್ಲ. ಆದರೆ ಹೆಣ್ಣೊಂದು ಕ್ಷಣಮಾತ್ರದಲ್ಲಿ ಈ ದಿಟ್ಟ ನಿರ್ಧಾರ ತೆಗೆದುಕೊಂಡು ತನ್ಮೂಲಕ ಶ್ರೇಷ್ಥಸ್ಥಾನಕ್ಕೇರುವುದು ಈ ಸಮಾಜಕ್ಕೆ ಅರ್ಥವಾಗದ್ದಾಗಿತ್ತು ಮತ್ತು ಬೇಡವಾದದ್ದೂ ಅಗಿತ್ತು. ಹಾಗಾಗಿ ಅವಳಿಗೆ ನಿರುತ್ಸಾಹವೆರಚಿ ಆ ಯತ್ನದಿಂದಾಚೆಗೆ ತರುವ ಪ್ರಯತ್ನವೇ ಒಂದು ಸ್ವಾರಸ್ಯಕರ ಕಾರ್ಯಕ್ರಮವೆಂಬಂತೆ ಮೂಡಿಬರುತ್ತಿತ್ತು. ಕೊನೆಯಲ್ಲಿ ಬಂದು ಕುಳಿತ ಆ ಕಣ್ಣು ಕಳೆದುಕೊಂಡ ಹುಡುಗನೂ ಈಕೆಯದು ಮೂರ್ಖನಿರ್ಧಾರವೆಂದು ಕಟುವಾಗಿ ಹೇಳತೊಡಗಿದಾಗ ಮೊದಲೇ ಕಸಿವಿಸಿಗೊಂಡಿದ್ದ ಮನ ರೊಚ್ಚಿಗೆದ್ದಿತ್ತು. ಸಾಮಾನ್ಯವಾಗಿ ಇಂಥಹದ್ದಕ್ಕೆ ಕೈಹಾಕದ ತಾನು ಅಂದ್ದು ಫೋನ್ ಕೈಗೆತ್ತಿಕೊಂಡಿದ್ದಳು. "ವೈಯುಕ್ತಿಕವಾಗಿ ನಿಮಗವಳ ನಿರ್ಧಾರ ತಪ್ಪೆನಿಸಿರಬಹುದು. ನೀವೆಲ್ಲ ಆಕೆಯ ಹಿತೈಷಿಗಳೆಂದುಕೊಳ್ಳುವಿರಾದರೆ, ಆ ನಿರ್ಧಾರದ ಹಿತಾಹಿತಗಳನ್ನು ಆಕೆಗೆ ತಿಳಿಹೇಳಬಹುದು. ಆದರೆ ಆ ದಿಟ್ಟ ಹೆಜ್ಜೆಯಿಡಲು ದೃಢವಾಗಿ ನಿರ್ಧರಿಸಿರುವ ಆಕೆಯನ್ನೊಂದು ಮೂರ್ಖ ಜೀವಿಯನ್ನಾಗಿ ಬಿಂಬಿಸಿ ಪ್ರೇಕ್ಷಕರ ಕಣ್ಣಲ್ಲಿ ನಿಮ್ಮನ್ನು ನೀವು ಏನೆಂದು ಬಿಂಬಿಸಹೊರಟಿರುವಿರಿ? ಏನಪ್ಪಾ, ಕಣ್ಣೆರಡೂ ಕಳಕೊಂಡಿರುವ ನಿನಗಾಗಿ ಹೆಣ್ಣುಮಕ್ಕಳು ಕೈಯ್ಯಲ್ಲಿ ಮಾಲೆ ಹಿಡಿದು ಕಾಯುತ್ತಿರುವರೆಂದುಕೊಂಡೆಯಾ? ಅಥವಾ ಒಂಟಿ ಜೀವನ ನಡೆಸುವ ನಿರ್ಧಾರ ನಿನ್ನದ್ದಾದರೆ ಅದನ್ನಾಕೆಗೆ ಸ್ಪಷ್ಟವಾಗಿ ಹೇಳು. ಹಿಂದಿನದನ್ನು ಮರೆಯಲು ಸಮಯ ಬೇಕು..........ಮುಂದಿನ ಬಾಳಿಗಾಗಿ ಜೀವನೋಪಾಯ ಕಂಡುಕೊಳ್ಳಲು ಸಮಯ ಬೇಕು.....ಇವೇ ಮುಂತಾದ ಕಳ್ಳನೆಪಗಳೇಕೆ? ಅಮ್ಮಾ, ಹೆತ್ತ ತಾಯಿ ನೀನು. ಮಗಳ ಮನದಾಳ ಮೊದಲೇ ತಿಳಿದುಕೊಳ್ಳದೇ ಈ ನಿರ್ಧಾರ ಇಷ್ಟು ಬಲಿತ ಮೇಲೆ ಅದನ್ನು ಬದಲಾಯಿಸುವ ಪ್ರಯತ್ನ ಈ ನೇರಪ್ರಸಾರದ ಕಾರ್ಯಕ್ರಮದಲ್ಲಾಗಬೇಕೆ? ಅಪ್ಪಾ ವರದಿಗಾರ, ವೈಯುಕ್ತಿಕ ವಿಷಯಗಳನ್ನು ಕೆದಕಿ ಇನ್ನಷ್ಟು ಹಸಿಮಾಡಿ, ಅಲ್ಲಿ ಇನ್ನೊಂದಿಷ್ಟು ನಿರುಪಯುಕ್ತ ಪ್ರಶ್ನೆಗಳನ್ನೆಸೆದು, ಮುಂದಿರುವಾಕೆಯ ಹೆಜ್ಜೆ ಸರಿಯಾದರೂ ಸರಿ, ತಪ್ಪಾದರೂ ಸರಿ- ಕಾರ್ಯಕ್ರಮವನ್ನು ಸ್ವಾರಸ್ಯಗೊಳಿಸಬೇಕೆಂಬ ಒಂದೇ ಕಾರಣಕ್ಕಾಗಿ ದೃಶ್ಯಮಾಧ್ಯಮದ ಮೂಲ ಉದ್ದೇಶವನ್ನೇ ಮೂಲೆಗಿಟ್ಟಿದ್ದೀಯಲ್ಲಾ......... ಇದು ಸರಿಯಾ....?..........
ಮಧ್ಯೆ ತಡೆಯಲೆತ್ನಿಸಿದಾಗಲೆಲ್ಲ , ಇನ್ನಷ್ಟು ಏರುದನಿಯಲ್ಲೇ ಮುಂದುವರಿಯುತ್ತಿದ್ದ ಅವಳ ಮಾತನ್ನು ತುಂಡರಿಸಲು ಆ ಮಾಧ್ಯಮದವರಿಗೆ ಇಷ್ಟು ಹೊತ್ತಾಗಿ ಬಿಟ್ಟಿತು. ಫೋನ್ ತನ್ನಷ್ಟಕ್ಕೇ ಕಟ್ ಆಗಿತ್ತು. ಆಗ ತುಂಡಾದ ಯೋಚನಾಸರಣಿ ಈಗ ಮುಂದುವರೆದಿತ್ತು.....
ಆ ಹುಡುಗಿಯ ನಿರ್ಧಾರ ಗೌರವಾತ್ಮಕವಾಗಿ ಕಂಡದ್ದಾದರೆ ತನ್ನ ಮಗಳದ್ದ್ಯಾಕೆ ಅಲ್ಲ? ಗಂಡ ಹೆಂಡಿರಲ್ಲಿ ಪರಸ್ಪರ ಒಳ್ಳೆಯತನ-ಕೆಟ್ಟತನ, ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದು, ಹೊಂದಿಕೊಳ್ಳುವುದು-ಇವ್ಯಾವುದನ್ನೂ ಮುಂಚಿತವಾಗಿ ಊಹೆ ಮಾಡಲಾಗದು. ಮದುವೆಯೆಂಬುದೊಂದು ಅದೃಷ್ಟದಾಟ. ವೈವಾಹಿಕ ಜೀವನ ಕ್ಷಣಕ್ಷಣಕ್ಕೂವಿವಿಧ ತಿರುವು ತೆಗೆದುಕೊಳ್ಳುವ ವಿಚಿತ್ರ ಬೆಳವಣಿಗೆಗಳ ಸರಮಾಲೆ. ಹಾಗಾಗಿ ಮಗಳ ಹಣೆಬರಹದಲ್ಲಿ ತಾನು ಕೈಯ್ಯಾಡಿಸಿ ಏನು ತಿದ್ದಬಲ್ಲೆ? ಈಗ ಅವಳ ನಿರ್ಧಾರವನ್ನು ತಾನು ಗೌರವಿಸಿದರೆ ಪತಿಯೂ ಆ ನಿಟ್ಟಿನಲ್ಲಿ ಯೋಚಿಸಿಯಾರು. ಜೀವನ್ ನ ಕೌಟುಂಬಿಕ ಹಿನ್ನೆಲೆ, ಜೀವನೋಪಾಯದ ಬಗೆ - ಇವೇ ಮುಂತಾದುವುಗಳ ಬಗ್ಗೆ ಮಗಳೊಂದಿಗೆ ಮಾತನಾಡಿ ಸ್ಪಷ್ಟಪಡಿಸಿಕೊಳ್ಳುವುದೇ ಈಗಿನ ಸರಿಯಾದ ಮುಂದಿನ ಹೆಜ್ಜೆ ಎನ್ನಿಸಿತು.
ಮುಖ ತೊಳೆದುಕೊಂಡ ಮೇಲೆ ಮನ ಹಗುರಾದಂತನ್ನಿಸಿತು. ಬಾಗಿಲು ತೆರೆದು ಹೊರಬಂದರೆ, ಬಾಗಿಲಲ್ಲೇ ಮೊಣಕಾಲ ನಡುವೆ ಮುಖ ಹುದುಗಿಸಿ ಕೂತಿದ್ದಳು ಶ್ರಾವ್ಯಾ. "ಏ ಚಿನ್ನಮ್ಮಾ" ಎಂದು ಬಾಗಿ ಮುಖ ಎತ್ತಿದವಳೇ "ನಿನ್ನ ಎಲ್ಲ ಹೆಜ್ಜೆಗಳಲ್ಲೂ ನಾನು ನಿನ್ನೊಂದಿಗಿದ್ದೇನಮ್ಮಾ" ಎಂದಳು. "ನನಗ್ಗೊತ್ತಿತ್ತಮ್ಮಾ .... ನೀನು ಹೀಗೆಯೇ ಹೇಳ್ತೀಯಾ ಅಂತ" ಅಂದವಳೇ ಶ್ರಾವ್ಯಾ ತಾಯಿಯನ್ನಪ್ಪಿಕೊಂಡಳು.

ಕೆಂಪಾದ ಕೇಸರಿ ಬಣ್ಣ

"ಅರ್ಧ ಲೀಟರ್ ಹಾಲು ಅಂಕಲ್
" ದನಿ ಕೇಳಿ ದೂಜಪ್ಪ ಯಾಂತ್ರಿಕವಾಗಿ ಹಾಲಿನ ಡಬ್ಬಿಯೊಳಗೆ ಕೈ ಹಾಕಿ ಹಾಲು ತೆಗೆದುಕೊಟ್ಟ. ಚಿಲ್ಲರೆ ಎಣಿಸಿಕೊಡುವಾಗ ಅದೇ ಮುದ್ದಾದ ಕೈ, ಕೆನೆ ಬಣ್ಣದ ಚರ್ಮದ ಮೇಲೆ ಗಾಢವಾಗಿ ಕಾಣುತ್ತಿದ್ದ ಹರಿ ಎಂಬ ಹಚ್ಚೆ ಕಣ್ಸೆಳೆಯಿತು. ಎಂದಿನಂತೆ ಕಾಯಿನ್ ಬೂತಿನೆಡೆಗೆ ನಡೆದವಳನ್ನು ಕಣ್ಣುಗಳು ಸಹಜವಾಗಿ ಹಿಂಬಾಲಿಸಿದವು. ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುಮಾರು ಹದಿನೆಂಟರ ಸುಂದರಬಾಲೆ, ಮಾತಾಡುತ್ತಾ ನಿಂತವಳ ಮುಖದಲ್ಲಿ ನಾಚಿಕೆಯೋ, ಧರಿಸಿದ ಬಟ್ಟೆಯ ಪ್ರತಿಫಲನವೋ -ಗುಲಾಬಿರಂಗು.ಸಂಕೋಚದಿಂದ ಮಾತು ಮುಗಿಸುವ ಹುನ್ನಾರದಲ್ಲಿದ್ದರೂ, ಆ ಕಡೆಯ ಸೆಳೆತವೂ ಹೆಚ್ಚಾಗಿದ್ದು ಮಾತು ಮುಂದುವರಿಸದಿರಲಾಗದೇ,ಚಡಪಡಿಸುತ್ತಿದ್ದ ಕಣ್ಣುಗಳು. ಒಟ್ಟಲ್ಲಿ ಆಕೆಯ ಹಾವಭಾವಗಳು, ಆ ಒನಪು-ಒಯ್ಯಾರಗಳು, ಅತ್ತಲಿದ್ದವ ಅವಳ ಗೆಳೆಯನೇ ಇರಬೇಕೆನ್ನಿಸುವಂತಿದ್ದವು. ಮಾತು ಮುಗಿಸಿ ಉದ್ದಜಡೆ ಹಾರಿಸುತ್ತಾ ಹೊರಟವಳ ಚಿಗರೆನಡಿಗೆ ಕಂಡ ದೂಜ್ಪ್ಪನಿಗನ್ನಿಸಿತು- ಸೌಂದರ್ಯ ಸಂತೋಷದೊಡನಿದ್ದಾಗ ಎಷ್ಟು ಆಹ್ಲಾದಕಾರಿ, ಎಷ್ಟೊಂದು ಪರಿಣಾಮಕಾರಿ!!!
ಹಾಲಿನಬೂತಿಗೆ ಮುಂದಿನ ಗಿರಾಕಿ ಬಂದದ್ದರಿಂದ ದೂಜಪ್ಪನ ಯೋಚನಾಲಹರಿ ತುಂಡಾಯಿತು. ರಾತ್ರಿ ಎಂಟಕ್ಕೆ ಸರಿಯಾಗಿ ಯಜಮಾನರಿಗೆ ಲೆಕ್ಕ ಒಪ್ಪಿಸಿ, ಬಾಗಿಲು ಹಾಕಿಕೊಂಡು ಹೊರಟ ದೂಜಪ್ಪ ಮನೆಸೇರಿದಾಗ ಅವನಿಗಾಗಿ ಕಾದಿದ್ದು ಮತ್ತದೇ ಒಂಟಿತನ. ಅದರೊಂದಿಗೇ ಬಾಳನ್ನೊಪ್ಪಿಕೊಂಡಿದ್ದರೂ ಅದನ್ನೆದುರಿಸಲು ಪ್ರತಿದಿನವೂ ಹೆದರುತ್ತಿದ್ದ ದೂಜಪ್ಪ. ಇನ್ನೂ ಹೆಚ್ಚಿನ ಹೊತ್ತು ಬೂತ್ ನಲ್ಲೇ ಕಳೆಯಲು ತಯಾರಿದ್ದ. ಆದರೆ ಯಜಮಾನನ ಇಚ್ಛೆಯಂತೆ ಎಂಟಕ್ಕೇ ಬೂತ್ ನ ಬಾಗಿಲು ಹಾಕಿ ಅವರನ್ನು ಅದರ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕಾಗಿತ್ತು
. ಏನೋ ಒಂದಷ್ಟು ಬೇಯಿಸಿಕೊಂಡು ತಿಂದವ ಮತ್ತೆ ಬೆಳಿಗ್ಗೆ ನಾಲ್ಕಕ್ಕೆದ್ದು , ಐದರವೇಳೆಗೆ ಪೇಟೆಯೊಳಗಿನ ಬೂತ್ ತಲುಪಿದ್ದ . ಮತ್ತದೇಕೆಲಸಗಳು ಸುರುವಾದವು. ದಿನನಿತ್ಯ ಆಕೆ ಬರುತ್ತಿದ್ದ ವೇಳೆಗೆ ಕಣ್ಣುಗಳು ಅಪ್ರಯತ್ನವಾಗಿ ಆ ಕಡೆ ವಾಲಿದವು. ಅದೇ ಹಾರುನಡಿಗೆಯಲ್ಲಿ ಬಂದೇ ಬಿಟ್ಟಳು. ಮನ ಮುದಗೊಂಡಿತ್ತು, ಆಶ್ಚರ್ಯವೂ ಆಗಿತ್ತು-ಯಾಕಿಷ್ಟು ಸಂತೋಷ?!!ಹಾಲು ಕೊಡುವಾಗ ಕೇಳಿಯೇಬಿಟ್ಟ-"ಯಾರ ಮನೆ ಮಗಾ?" "ಶೀನಪ್ಪಭಟ್ಟ್ರಮನೆ ಅಂಕಲ್, ಅವರ ಹೆಂಡತಿಯ ಅಣ್ಣನ ಮಗಳು ನಾನು- ತಾರಿಣಿ" ಉಲಿದಿತ್ತು ಗಿಣಿಕಂಠ. "ಒಳ್ಳೇದಮ್ಮಾ" ಅಂದಿದ್ದ ದೂಜಪ್ಪ. ಮತ್ತದೇ ಬೂತ್ ನೊಳಗಿನ ಮಾತುಕತೆ, ಕೊನೆಗೆ ಮನೆಯೆಡೆಗೆ ಓಟದನಡೆ.
ಮರುದಿನವೂ ಅದೇವೇಳೆಗೆ ಬಂದವಳು ಎಂದೂ ಇಲ್ಲದ್ದು ತಲೆಯೆತ್ತಿ ನಸುನಕ್ಕಳು. ಕೇಸರಿ ಬಣ್ಣದ ಚೂಡಿದಾರ್ ನಲ್ಲಿ ಇಮ್ಮಡಿಸಿದ್ದ ಸೌಂದರ್ಯದ್ದಲ್ಲದೇ ಇನ್ನೇನೋ ಸೆಳೆತವಿದೆ ಅನ್ನಿಸಿತು ದೂಜಪ್ಪನಿಗೆ. ಕಾಯಿನ್ ಬೂತ್ ನಡೆಗೆ ನಡೆದವಳನ್ನು ಕೇಳಿಯೇಬಿಟ್ತ-"ಅಮ್ಮಂಗೆ ಮಾತಡ್ಬೇಕಾ ಮಗಾ?" ಸಂಶಯದಿಂದಲೇ ಕೇಳಿದವನಿಗೆ ಹಿಂಜರಿಯದೇ ಉತ್ತರಿಸಿದ್ದಳು-"ಅಲ್ಲಾ, ಅತ್ತೆಯ ಮಗನಿಗೆ " ಆವಾಕ್ಕಾದವನನ್ನು ಕಂಡು "ಇನ್ನಾರು ತಿಂಗಳಲ್ಲಿ ಯಾರೊಂದಿಗೆ ನನ್ನ ಮದುವೆಯಾಗಲಿದೆಯೋ, ಅವನೊಂದಿಗೆ, ಮಾತಾಡಬಹುದಾ?" ತುಂಟತನದಿಂದಲೇ ಕೇಳಿದ್ದಳು. ಅರ‍ೇ, ಈಕೆಯ ಧೈರ್ಯವೇ!! "ಆ ಹಾ ಹಾ" ತಡವರಿಸಿದ್ದ. ನಗುತ್ತಾ ಮುನ್ನಡೆದಿದ್ದಳು ಆಕೆ.ದೂಜಪ್ಪನ ಮನದಲ್ಲಿ ತನ್ನವರದೇ ಏನೋ ಶುಭ ಸುದ್ಧಿ ಕೇಳಿದ ಸಂತಸದ ಅನುಭವ. ಮಾತು ಮುಗಿಸಿ ಹೊರಟವಳನ್ನು ತಡೆದು "ಹುಶಾರಮ್ಮಾ" ಅನ್ನಬೇಕೆನ್ನಿಸಿತು. ದನಿ ಮಾತ್ರ ಹೊರಡಲಿಲ್ಲ. "ಮತ್ತೆ ದಸರಾ ರಜೆಗೆ ಬರುತ್ತೀನಿ, ಇವತ್ತು ಊರಿಗೆ ಹೊರಟೆ
"ಅನ್ನುತ್ತಾ ಕೈಬೀಸುತ್ತಾ ಹೊರಟೇ ಬಿಟ್ಟಳು ಹುಡುಗಿ. ಭಟ್ಟ್ರಮಗ ಹರಿ ಕಳೆದವರ್ಷ ಓದುಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ವಿಷಯ ದೂಜಪ್ಪಕೇಳಿದ್ದ. ಮುದ್ದುಮುಖದ ಚೆಲುವನಿಗೆ ತಕ್ಕ ಚೆಲುವೆ ಅಂದಿತು ಮನ.
ಕೆಲಸ ಮುಗಿಸಿ ಮನೆಗೆ ಬಂದವನಿಗೆ ಮತ್ತದೇ ನಗುಮುಖದ ಗುಂಗು. ಅರೇ, ನಾಲ್ಕೈದು ದಿನಗಳ ಭೇಟಿಗಳಲ್ಲೇ ಇಷ್ಟೊಂದು ಛಾಪು ಒತ್ತಿದಳೇ ಅನ್ನಿಸಿತು. ಮರುಕ್ಷಣವೇ ಮನೆಯ ತುಂಬಾ ಗವ್ವೆನ್ನುತ್ತಿದ್ದ ಒಂಟಿತನ ಮಾರ್ನುಡಿಯಿತು.-"
ಇದೇ ಕೇಸರಿಬಣ್ಣಕ್ಕೊಂದೇ ಒಂದು ಹನಿ ಕಪ್ಪುಬಣ್ಣ ಬಿದ್ದು ಕಲಕಿದರೆ ಕೆಂಪಾಗುತ್ತದೆ". ಕೆಂಪು---, ಕೆಂಪುಬಣ್ಣ---, ಕೆಂಪುಬಣ್ಣದ ಚೂಡಿದಾರ--- ಅಯ್ಯೋ ಚೀರಿತು ಮನಸು.
ಸುಮಾರು ಐದುವರ್ಷಗಳ ಹಿಂದೆ ಇದೇಮನೆಯ ಮುಂದೊಂದುದಿನ ಕೆಂಪುಬಣ್ಣದ ಚೂಡಿದಾರ ಧರಿಸಿ ಬಾಲೆಯೊಬ್ಬಳು ಮಲಗಿದ್ದಳು. ಆಕೆಯೂ ಇದೇ ಹದಿನೆಂಟರ ಹರಯದವಳೇ. ಚಟ್ಟದ ಮೇಲೆ ಹೆಣವಾಗಿ ಮಲಗಿದ್ದವಳ ಮುಖ ಶಾಂತವಾದ ಮೆಲುನಗು ಸೂಸುತ್ತಿದ್ದರೂ ಹಿಂದೆ ಕಣ್ಣೀರಿನ ಅಶಾಂತಿಯ ಮಹಾಸಾಗರವೇ ಭೋರ್ಗರೆಯುತ್ತಿದ್ದುದು ಯಾರಿಗೂ ಕಾಣುವಂತಿರಲಿಲ್ಲ. ಆ ಬಾಲೆಯದೂ ಇದೇ ತರಹದ ವ್ಯಕ್ತಿತ್ವ. ತಾನಿದ್ದೆಡೆಯೆಲ್ಲ ಅಪ್ರಯತ್ನವಾಗಿ ಸಂತಸ ಹರಡುವ ನೇರ, ಮುಗ್ಧ , ಪಾರದರ್ಶಕ ನಡವಳಿಕೆ, ಮಚ್ಚುಮರೆಯಿಲ್ಲದ ಮುದ್ದು ಮಾತುಗಳು. ಈಗ ದೂಜಪ್ಪನಿಗರಿವಾಯಿತು- ತಾರಿಣಿಯೊಳಗೆ ತನ್ನನ್ನಷ್ಟು ಸೆಳೆದದ್ದು ತನ್ನಕರುಳಕುಡಿ ಶಶಿಯ ಬಿಂಬವೇ ಹೌದು. ಅಪ್ಪ ಅಮ್ಮನ ಒಬ್ಬಳೇ ವಿಧೇಯ ಮಗಳೇ ಆಗಿದ್ದವಳು, ಗೆಳೆಯನೊಬ್ಬನಿಗೆ ಮನಸೋತಳು, ವಿಷಗಳಿಗೆಯೊಂದರಲ್ಲಿ ತನುಮನವನ್ನವನಿಗೆ ಅರ್ಪಿಸಿಬಿಟ್ಟಿದ್ದಳು. ಎಚ್ಚೆತ್ತಾಗ ಕಳಕೊಂಡದ್ದು ಜೀವಕ್ಕಿಂತಲೂ ಅಮೂಲ್ಯವಾದದ್ದು ಎಂದರಿತಿದ್ದಳು. ಎಂದೂ ತಿರುಗಿಪಡೆಯಲಾರದ್ದನ್ನು ಕಳಕೊಂಡಮೇಲೆ ಜೀವನ ಬೇಡವೆಂದನಿಸಿ ಅದನ್ನು ಕಡೆಗಾಣಿಸಿದ್ದಳು. ಆ ಹೊಡೆತ ತಡೆಯಲಾರದೇ ಅವಳ ಹಿಂದೆ ಅವಳ ಅಮ್ಮನೂ ಹೊರಟು ಹೋಗಿ ಈಗ ತಾನು ಈ ಗಂಡುಜೀವದ ಭಂಡಧೈರ್ಯದ ಸುಳ್ಳುಸೋಗಿನೊಳಗೆ ಕ್ಷಣಕ್ಷಣವೂ ಸಾಯುತ್ತಾ ....... ಒಂಟಿಕೂಪದ ಪಾಪಿಬಾಳು ....... ಯೋಚಿಸಿ ಕಣ್ಣೀರಿಳಿಸಿ ಸುಸ್ತಾದ ಕಣ್ಣುಗಳು ತಾವೇ ತಾವಾಗಿ ಮುಚ್ಚಿದವು. ಮರುದಿನ ಎದ್ದು ಮತ್ತದೇ ದಿನಚರಿ.
ಹೀಗೆ ಹಾಲಿನ ಬೂತ್ ನ ಬಾಗಿಲು ತೆಗೆದು ಮುಚ್ಚಿ ತಿಂಗಳುಗಳೇ ಕಳೆದು ಹೋದವು.
ಒಂದುದಿನ ಬೆಳಿಗ್ಗೆ ಐದರ ವೇಳೆಗೇ ಭಟ್ಟ್ರ ಮನೆಯ ಆಳು ಕೆಂಚ ಅವರ ಮನೆಯೆಡೆಗೆ ಓಡುತ್ತಿದ್ದುದನ್ನು ಕಂಡ ದೂಜಪ್ಪ ಕೇಳಿದ್ದ- "ಇಷ್ಟು ಬೇಗ?" "
ಅಯ್ಯೋ ನಿಮಗಿನ್ನೂ ತಿಳಿದಿಲ್ಲ್ವಾ? ಭಟ್ಟ್ರ ಹೆಂಡತಿಯ ಅಣ್ಣನ ಮಗಳು ರಜೆಗೆಂದು ಬಂದಿತ್ತು, ನಿನ್ನೆ ರಾತ್ರಿ ನೇಣು ಹಾಕ್ಕೊಂಡು ಸತ್ತಿದೆ. ಇದಕ್ಕೇನು ಬಂದಿತ್ತೊ ಗ್ರಾಚಾರ ಇಲ್ಲಿ ಬಂದು ಸಾಯ್ಲಿಕ್ಕೆ?!, ದರಿದ್ರದ್ದು----------"ಮುಂದಿನದೇನೂ ಕೇಳಿಸಲಿಲ್ಲ ದೂಜಪ್ಪನಿಗೆ, ತಲೆ ಗಿರ್ರಂದಿತ್ತು. ಸಾವರಿಸಿಕೊಂಡು ಭಟ್ಟ್ರ ಮನೆಗೋಡಿದವನಿಗೆ ಕಂಡದ್ದು ಕೇಸರಿ ಬಣ್ಣದಲ್ಲಿ ಮಿಂಚುತಿರುವ ಮುದ್ದುಮುಖದೊಡತಿಯ ಜೀವ-ಅದೇ ತರಹ ಅಂಗಳದಲ್ಲಿ ಮಲಗಿಸಿದ್ದ ಭಂಗಿಯಲ್ಲಿ -ಚಟ್ಟದಮೇಲೆ, ಥೇಟ್ ಶಶಿಯ ಹಾಗೇ.
ಅರೆಬಿರಿದ ಕಂಗಳು "ಕಂಡ ಕನಸುಗಳು ನನಸಾಗದಿರುವುದನ್ನು ಸಹಿಸಲಾಗಲಿಲ್ಲ ಅಂಕಲ್" ಅಂದಂತಾಯಿತು. ಮುಚ್ಚಿದ ತಿಳಿಗುಲಾಬಿ ತುಟಿಗಳು "ಅತ್ತೆ ಮನೆಯಲ್ಲಿ ಬಾಳೋಕ್ಕಾಗಲ್ಲ ಅಂತ ಗೊತ್ತಾಯ್ತು, ಸಾಯೋಕ್ಕಾದ್ರೂ ಆಗುತ್ತಾ ಅಂತ ನೋಡಿದೆ ಅಂಕಲ್" ಅಂದಂತಾಯಿತು.
ಭರ್ರನೇ ಬಂದ ರಿಕ್ಷಾದಿಂದಿಳಿದ ಭಟ್ಟ್ರಮಗನೊಂದಿಗೆ ಅರೇ, ಅದುಯಾರು ಕೆಳಗಿಳಿದದ್ದು? ಕೈತುಂಬಾ ಬಳೆ, ಅರಿಶಿನದಾರದಲ್ಲಿ ಕಟ್ಟಿದ್ದ ಹೊಸಕೊಂಬು, ಮಿನುಗುತ್ತಿರುವ ಮುಖದ ಹುಡುಗಿ. ಹರಿಯ ತಪ್ಪಿತಸ್ಥಮುಖ ಎಲ್ಲ ಕತೆ ಹೇಳಿಬಿಟ್ಟಿತು.
ಕಣ್ಣೆರಿನಿಂದ ಮಂಜಾದ ದೂಜಪ್ಪನ ಕಣ್ಣುಗಳಿಗೆ ನಿಧಾನವಾಗಿ ಕೇಸರಿ ಬಣ್ಣ ಕೆಂಪಾದ ಹಾಗೆ, ಆ ಮುಖ ನಿಧಾನವಾಗಿ ಮರೆಯಾಗಿ ಅಲ್ಲಿ ಶಶಿಯ ಮುಖ ಬಂದಂತೆ ....................ಅಂದಿನ ದುಖಃದ ಅಲೆಗಳು ಬಂದು ಮತ್ತೆ ಇಂದೊಮ್ಮೆ ಆವರಿಸಿದಂತಾಗಿ, ಹೊಡೆತ ತಡೆಯಲಾರದೇ ಬಸವಳಿದು ದೊಪ್ಪೆಂದು ಕೆಳಗುರುಳಿತು ಆ ನೊಂದಜೀವ.    

ಹೀಗೆರಡು ಪತ್ರಗಳು

 

ಅಚೂ,
ಅನಿರೀಕ್ಷಿತವಾಗಿ ನಿನ್ನೆ ನೀನು ಮಾಡಿದ ಕರೆಯಿಂದಾಗಿ ಎಲ್ಲೋ ಮರೆಯಲ್ಲಿ ಒಂದುಕಡೆ ಒತ್ತ ಡದಿಂದ ಕಣ್ಮುಚ್ಚಿ ಮುದುರಿ ಕೂತಂತಿದ್ದ ಆ ಮೃದು ಮಧುರ ನೋವು-ನಲಿವುಗಳೆಲ್ಲ ನರ್ತಿಸತೊಡಗಿದ್ದಾವೆ. ಅಲ್ಲಲ್ಲ, ನರ್ತಿಸುವುದು ಎಂಬ ಸುಂದರ ಶಬ್ಧಕ್ಕಿಂತ ಕುಣಿಯುತ್ತಿದ್ದಾವೆ ಎಂಬ ಒರಟು ಶಬ್ಧ ಸರಿಯಾದೀತು. ಯಾಕೆಂದರೆ ಆ ಕ್ರಿಯೆ ನರ್ತನದಂತೆ ಒಪ್ಪವಾಗಿಲ್ಲ. ಎಲ್ಲಾ ತರದ ಸಮ್ಮಿಶ್ರ ಭಾವನೆಗಳ ಒಂದುಗೂಡುವಿಕೆಯ ಪರಿಣಾಮವೋ ಎಂಬಂತೆ ವಕ್ರ ವಕ್ರವಾಗಿದೆ.
ಮೊದಮೊದಲ ನಮ್ಮ ಒಡನಾಟದ ದಿನಗಳ ನೆನಪಾಗುತ್ತಿದೆ.ಆಚಲಾ ಎಂಬ ಹೆಸರಿಗೆ ತಕ್ಕಂತೆ ನಿಶ್ಚಿತ ಮತ್ತು ದೃಢವಾದ ನಡವಳಿಕೆಗಳನ್ನು ನಿನ್ನ ವ್ಯಕ್ತಿತ್ವದಲ್ಲಿ ಹದಿನಾಲ್ಕರ ವಯಸ್ಸಿನಲ್ಲೇ ರೂಢಿಸಿಕೊಂಡವಳು ನೀನು. ನಿನ್ನ ಕಟುಸತ್ಯವನ್ನು ಕಟುವಾಗಿಯೇ ನುಡಿಯುವ ಪರಿ, ಅನ್ಯಾಯಕ್ಕೆ ಎದುರಾಗಿ ನಿಲ್ಲುವ ದಿಟ್ಟ ನಿಲುವುಗಳು ನಿನ್ನ ಸುತ್ತಲೆಲ್ಲ ನಿನಗೆ ಶತ್ರುಗಳನ್ನೇ ಹುಟ್ಟು ಹಾಕಿದ್ದವು. ಮನೆಕಡೆಯೂ ಮತ್ತು ಹೊರಗಡೆಯೂ ಬರೀ ಕಷ್ಟಗಳ ರಾಶಿಯಲ್ಲೇ ಹೊರಳಾಡಿ ಮನಸ್ಸಿನ ಮೃದುತ್ವವನ್ನೇ ಹೆಚ್ಚುಕಮ್ಮಿ ಕಳಕೊಂಡಿದ್ದ ನಿನಗೆ ಆಗಾಗ ನಾನು ನೀಡುತಿದ್ದ ಸಾಂತ್ವನದ ಮಾತುಗಳು ನೆನಪಿದೆಯಾ ಅಚೂ? "ಜೀವನ ನಾಟಕದ ಅಂಕದಲ್ಲಿ ನಿನಗೆ ಸಿಕ್ಕಿರುವ ಪಾತ್ರದಲ್ಲಿ ನೀನು ಇಂದಿಗೆ ಇದಿಷ್ಟೇ ಅನುಭವಿಸಬೇಕಾದುದು. ನಾಟಕದಲ್ಲಿ ಪಾತ್ರವಹಿಸಲೆಂದೇ ಬಂದಿರುವ ನಾವು ಇಂಥಹುದೇ ಪಾತ್ರ ಬೇಕೆಂದು ಹಠ ಹಿಡಿದರೂ ಅಥವಾ ಇಂಥಹುದೇ ನಿರ್ದಿಷ್ಟ ಪಾತ್ರ ನೀಡುವೆನೆಂದು ಆಡಿಸುವವನು ಅಂದುಕೊಂಡರೂ, ಕಾಲದ ನಿರ್ಧಾರದ ಮುಂದೆ ನಡೆಯದು .ಇತರ ಪಾತ್ರಧಾರಿಗಳ ಒದಗುವಿಕೆ, ಆಡಬೇಕಾದ ಸಂಧರ್ಭ, ಸ್ಥಳಗಳಿಗನುಸಾರವಾಗಿ ಪಾತ್ರ ನೀಡುವವನೂ, ಪಾತ್ರ ವಹಿಸುವವನೂ ತಲೆ ಬಾಗಲೇ ಬೇಕು, ವೈವಿಧ್ಯತೆ ಬರಲೇಬೇಕು. ನಾಳೆ ಏನಾದರೂ ಬದಲಾವಣೆ ಬಂದೇ ಬರುವುದು , ಧೈರ್ಯವಾಗಿರು" ಅಂತ ನಾನು ಅನ್ನುತಿದ್ದರೆ, ಶೂನ್ಯಭಾವದಿಂದ ನನ್ನ ಬಾಯನ್ನೇ ನೋಡುತ್ತಾ ಕೂತಿರುತಿದ್ದ ನೀನು ನನ್ನ ಮಾತು ಮುಗಿಯುತ್ತಲೇ ನಿನ್ನ ಕೈಗಳೆರಡನ್ನೂ ನನ್ನದರೊಳಗೆ ತೂರಿಸಿ, ನನ್ನ ಹೆಗಲ ಮೇಲೆ ತಲೆಯಿಟ್ಟು ಅದರ ಭಾರವನ್ನೆಲ್ಲ ನನ್ನ ಮೂಲಕ ಸಹನಾಮಯಿ ಭೂಮಿತಾಯಿಗಿಳಿಸುತ್ತಿದ್ದೆಯೇನೋ ಎಂಬಂತೆ ಕಣ್ಮುಚ್ಚಿ ಕೂತುಬಿಡುತ್ತಿದ್ದೆ. ನಾನು ನುಡಿದಂತೇ ಆಗಿಲ್ಲವೇನೇ ಅಚೂ? ನಿಜವಾಗಿಯೂ ಹೇಳೇ-ನೀನಿಂದು ಸುಖವಾಗಿಲ್ಲವೇನೆ? ಸಾಮಾನ್ಯ ಹೆಣ್ಣೊಂದು ಬಯಸುವ ಗಂಡ , ಮಕ್ಕಳ ಸುಖ ಕಂಡಿರುವೆ, ದೇವರ ದಯೆಯಿಂದ ನಿನ್ನ ನಿನ್ನೆಯ ದನಿಯಲ್ಲಿನಿನಗೆ ತಕ್ಕದಾದುದ್ದೇ ಎಲ್ಲ ಸಿಕ್ಕಿದೆಯೆಂದೂ ಗ್ರಹಿಸಿಕೊಂಡೆ ನಾನು. ಹೆಣ್ಣು ಹೆಣ್ಣೆನಿಸಿಕೊಂಡದ್ದಕ್ಕೆ ದೊರಕಬೇಕಾದ ಹೆಣ್ಣಿನ ಪರಿಪೂರ್ಣತೆಯನ್ನು ಅನುಭವಿಸಿದ ಮೇಲೂ ಅದಕ್ಕಿಂತ ದೊಡ್ಡ ಸುಖ ಬೇರೆ ಇದೆಯೇನೇ? ಹಾಂ, ಇದ್ದಿರಲೂಬಹುದು. ಆದರೆ ಅದಿಲ್ಲವಾಗಿದ್ದಾಗ ಬೇರೆಯವೆಲ್ಲ ಇದ್ದರೂ ಬಹುಶಃ ಉಪಯೋಗವಿರಲಾರದು ಅಲ್ವಾ?
ಅದೇಕೆ ನಿನ್ನೆ ಇದ್ದಕ್ಕಿದ್ದಂತೆ ನನ್ನ ನೆನಪಾಯಿತೋ!? ಹೌದು ಅಚೂ, ನೆನಪಾಗುತ್ತಲೇ ಇತ್ತು -ನನಗೂ ಅಷ್ಟೆ. ಆದರೆ ಸಂಪರ್ಕಿಸುವ ವೇಳೆ ಬಂದಿರಲಿಲ್ಲ . ನಿನಗೂ ಕಾರಣಾಂತರಗಳಿಂದಾಗಿ ಅಡೆತಡೆಗಳು ಬಂದಿದ್ದಿರಬಹುದು ಅಲ್ಲವೇ? ನನಗಾ? ಬದುಕು ಸಾಗುತ್ತಿರುವ ಹಾದಿಯಿಂದಾಗಿ ನಾನು ನನ್ನ ಸುತ್ತ ಒಂದು ಪಾರದರ್ಶಕ ತಡೆಗೋಡೆ ನಿರ್ಮಿಸಿಕೊಂಡಿದ್ದೇನೆ ಅಚೂ. ಅದು ಹೇಗಿದೆಯೆಂದರೆ ನನಗೂ ನೀವೆಲ್ಲ-ಅವರೆಲ್ಲ ಅಲ್ಲೇ ಇದ್ದಾರೆ ಅನ್ನಿಸುತ್ತಿರಬೇಕು, ಅವರಿಗೆಲ್ಲರಿಗೂ ನಾನಲ್ಲೇ ಅವರಿಗೆಟಕುವಲ್ಲೆ ಇದ್ದೇನೆ ಅನ್ನಿಸುತ್ತಿರಬೇಕು, ಆದರೆ ಭಾವನಾತ್ಮಕವಾಗಿ ಎಟುಕದಷ್ಟು ದೂರ ಇರಬೇಕು. ಈ ತರಹದ ಜೀವನ ನನ್ನದು ಅಚೂ. ಇಲ್ಲ ಕಣೇ, ನಾನಾರಿಸಿಕೊಂಡಿಲ್ಲ, ಈ ಪ್ರದರ್ಶನದಲ್ಲಿ ಈಗಕ್ಕೆ ನನಗೊದಗಿದ ಪಾತ್ರದ ಪರಿಮಿತಿ ಇಷ್ಟೇ. ಈಗ ಸ್ವಲ್ಪ ಹೊತ್ತಿನವರೆಗೆ ಆ ಕೋಶದಿಂದ ಹೊರಬಂದು ನಿನ್ನೆದುರು ವಾಸ್ತವತೆಯನ್ನು ಬಿಚ್ಚಿಡಲಾರಂಭಿಸಿದ್ದೇನೆ. ಯಾವಗಳಿಗೆಯಲ್ಲಿ ಮತ್ತೆ ಆ ಪಾತ್ರಕ್ಕೆ ಜೀವ ತುಂಬಲು ಹೋಗುತ್ತೆನೋ ಗೊತ್ತಿಲ್ಲ, ಅಲ್ಲಿಯವರೆಗೆ ಆದಷ್ಟು ನಿನ್ನನ್ನು ಸಮೀಪಿಸಲು ಓಡಿ ಬರುತ್ತಿದ್ದೇನೆ ಅಚೂ.
"
ಹೇಗಿದ್ದೀ ಮಧೂ" ಎಂದು ಪದೇಪದೇ ಒತ್ತಿ ಕೇಳುತ್ತಿದ್ದೆಯಲ್ಲ? ನನ್ನೊಳಗೆ ಕುದಿಯುತ್ತಿರುವ ಲಾವಾರಸ ಒಮ್ಮಿಂದಿಮ್ಮೆಗೆ ಸಿಡಿಯಲಾರದಿದ್ದರೂ, ತನ್ನ ಬಿಸಿಯನ್ನು ಸ್ವಲ್ಪ ಸ್ವಲ್ಪ ಸುತ್ತ ಹರಡಿ ತಾನು ಅಷ್ಟರಮಟ್ಟಿಗೆ ತಣ್ಣಗಾದೆ ಎಂಬ ಭ್ರಮೆಯಲ್ಲಿ ನಗುವಿನ ಮುಖವಾಡದೊಂದು ಹೊದಿಕೆ ಹೊದ್ದು ಕೂತಿದೆ. ಅದರ ಬಿಸಿ ಎಷ್ಟೆಂದರೂ ನನ್ನ ಪಾಲಿಗೆ ಬಂದದ್ದು. ಭರಿಸಲಾರೆನೆಂಬಂತೆ ಇತರ ಕಡೆಗಳಿಗೆ ಹರಿಸಿ ನನ್ನ ಅಸಾಮರ್ಥ್ಯತೆಯನ್ನೇಕೆ ತೋರಿಸಿಕೊದಲಿ? ಅಥವಾ ಈ ಪಾತ್ರ ನೀಡಿರುವವನದು ತಪ್ಪುಗ್ರಹಿಕೆಯೆಂದೇಕೆ ಸೂಚಿಸಲಿ? ಇದು ನನ್ನ ಪಾತ್ರದ ಒಂದು ಘಟ್ಟದ ನಿರೀಕ್ಷೆ. ಅದನ್ನು ಪೂರ್ತಿಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಸಮಯದಲ್ಲೇ ಬಂದದ್ದು ನಿನ್ನ ಫೋನ್. "ಗೆಳೆತನದ ಸುವಿಶಾಲ--------"ಹಾಡು ನೆನಪಿದೆಯಾ ಅಚೂ? ಸಾಮರ್ಥ್ಯವೆಂಬುದು ಎಷ್ಟು ವಿಶೇಷವಾಗಿರಲು ಸಾಧ್ಯವೋ ಅಷ್ಟೂ ವೈಶಿಷ್ಠ್ಯತೆಯನ್ನು ಗೆಳೆತನದ ಸಾಮರ್ಥ್ಯಕ್ಕೊದಗಿಸಿದ್ದು ಈ ಹಾಡು. ಆ ದಿನಗಳ ಅಂಥಹ ಸಂಬಂಧದ ಯಾವುದೋ ಒಂದು ಶಕ್ತಿ ನನ್ನನ್ನು ನನ್ನ ಚಿಪ್ಪಿನಿಂದ ಇಂಚಿಂಚಾಗಿ ಹೊರಗೆಳೆಯುತ್ತಿದೆ ಅಚೂ. ಆದರೆ ಭೂತ ಭವಿಷ್ಯಗಳೆರಡಕ್ಕಿಂತಲೂ ಪ್ರಬಲವಾದದ್ದು ವರ್ತಮಾನ. ಅದು ಮತ್ತೆ ಒಳಗೆಳೆಯುತ್ತಿದೆ, ನೀ ಹೊರಗೆಳೆಯುತ್ತಿದ್ದೀಯ. ಇರಲಿ. ಬಹುಶಃ ನನ್ನ ಒಳಗುದಿಯ ಮುಚ್ಚಿಟ್ಟ ಬಿಸಿ ಎಲ್ಲಿಂದಲೋ ನಿನ್ನ ತಲುಪಿ ನಿನ್ನೊಳಗೇನೋ ಕಲಕಿರಬೇಕು. ಅದಕ್ಕೆ ನನ್ನ ಜೀವನದಲ್ಲೇನೋ ಸರಿಯಾಗಿಲ್ಲ ಅಂತ ನಿನಗನಿಸಿರಬೇಕು, ಅದಕ್ಕೆ ಹಾಗೆ ಪದೇ ಪದೇ ಕೇಳಿರಬೇಕು ಅಲ್ಲವೆ ಅಚೂ.
ಇಲ್ಲ ಅಚೂ, ನನ್ನತನ ಈ ಮೂವತ್ತು ವರ್ಷಗಳಲ್ಲಿ ಮೂರ್ತರೂಪ ಪಡೆಯುವ ದಿಸೆಯಲ್ಲಿ ಮುಂದುವರಿದದ್ದಕ್ಕಿಂತ ಚಲ್ಲಾಪಿಲ್ಲಿಯಾಗಿ ನುಚ್ಚುನೂರಾಗುವ ದಿಕ್ಕಿನಲ್ಲೇ ಹೊಡಕೊಂಡು ಹೊರಟುಹೋದದ್ದೇ ಹೆಚ್ಚು. ಈ ನಿರ್ಜೀವ ಮಿಶನರಿಯ ಮುಂದೆ ಏಕತಾನತೆಯ ಎ ಸಿ ಗಳ ಸದ್ದು ಕೇಳುತ್ತಾ ಬೆಟ್ಟದಲ್ಲಿ ಒಂದು ಕಾಡಿನ ನಡುವಿರುವ ಈ ಟೆಲಿಫೋನ ಆಫೀಸಿನಲ್ಲಿ ಏಕಾಂಗಿಯಾಗಿ ಕಾಲ ಕಳೆಯುವಾಗ ಎಷ್ಟೊಂದು ವೈಭವೀಕರಿಸಿಕೊಳ್ಳಬಹುದಾದ ಬದುಕಿನ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿರುವ ನನ್ನ ಬಗ್ಗೆ ನನಗೇ ತೃಪ್ತಿ ಇಲ್ಲ ಅಚೂ. ಪರಿಸ್ಥಿತಿಗಳು ಬಂದಾಗ ಬಂದಂತೆ ಸ್ವೀಕರಿಸಿದರೆ ಬಾಳು ಸುಂದರ ಎಂಬುದೊಂದು ಪ್ರಸಿಧ್ಧ ಮಾತು. ಆದರೆ ನನ್ನದೀಗ ಒಂದು ಸಣ್ಣ ತಿದ್ದುಪಡಿ-ಪರಿಸ್ಥಿತಿಗಳು ಬಯಸಿದಂತೆ ಬಂದರೆ ಮಾತ್ರ ಬಾಳು ಸುಂದರ ಅಂತ, ಏನಂತೀಯಾ? ಈ ಸೌಂದರ್ಯವೆಂಬುವುದು ನೋಡುವವರ ಕಣ್ಣಲ್ಲಿದೆ ಅಂತ ನಾನ್ಯಾವಾಗಲೂ ಹೇಳ್ತಾ ಇದ್ದೆ ಅಲ್ಲ್ವಾ? ಈಗ ಹೀಗೆ ಹೇಳ್ತೇನೆ-ಈ ಲೋಕದ ಸುಂದರ, ಒಳ್ಳೆಯ, ಸಂತೋಷದ,ತೃಪ್ತಿಯ, ನೆಮ್ಮದಿಯ ಪ್ರತಿಯೊಂದು ಸಂದರ್ಭವೂ ಅದನ್ನು ಎದುರಿಸುವವನ ಮನೋಸ್ಥಿತಿಯ ಮೇಲೆ ಅವಲಂಬಿತವಾಗಿ ಸ್ವಂತ ಅರ್ಥದ ಅನುಭೂತಿಯನ್ನೋ ಅಥವಾ ವ್ಯತಿರಿಕ್ತವಾದ ಅನುಭವವನ್ನೋ ನೀಡುತ್ತವೆ. ಇದಕ್ಕೆ ನಾನು ಮೇಲೆ ಹೇಳಿದ ನನ್ನ ಕಾರ್ಯಸ್ಥಳದ ವಿವರಣೆಯೇ ಉದಾಹರಣೆ. ಈ ಜಾಗದಲ್ಲಿ ನಿನ್ನೊಂದಿಗೆ ಅಂದು ಇರುತ್ತಿದ್ದ ಮಧು ದಿನಕಳೆಯಬೇಕಾಗಿದ್ದರೆ ನಾನಿದನ್ನೇ ಸ್ವರ್ಗ ಎನ್ನುತ್ತಿದ್ದೆ. ಕಿರುಚುತ್ತಾ ಹಾರುತ್ತಿದ್ದ ಕಾಗೆಯೂ ಸುಂದರವೆನಿಸುತ್ತಿದ್ದ ದಿನಗಳವು. ಈ ಬೆಟ್ಟ, ಅದರ ತುದಿಯಲ್ಲಿ ದೇವಿಯ ಸನ್ನಿಧಿ, ಹಾತೊರೆದು ಎಂದೋ ಒಮ್ಮೆ ಜನ ಸಂಭ್ರಮದಿಂದ ಜನ ಸಂದರ್ಶಿಸುವ ಜಾಗ, ಸದಾ ಬಗೆಬಗೆಯ ಜನರಿಂದ ತುಂಬಿ ತುಳುಕುವ ಲವಲವಿಕೆಯಿಂದಿರುವ ಊರು, ಅಲ್ಲಿ ಹೆಚ್ಚಿನ ಕೆಲಸದ ಭಾರವಿಲ್ಲದ ಕಾರ್ಯಸ್ಥಾನ, ಹಸಿರಿನ ಮಧ್ಯ ಒಂಟಿಯಾಗಿ ನಿಂತ ಈ ಕಟ್ಟಡ, ಒಳಗೋ ದೇಶದ ಮೂಲೆಮೂಲೆಗಳನ್ನು ಹತ್ತಿರವಾಗಿಸಲು ಪ್ರತಿಕ್ಷಣವೂ ದುಡಿಯುತ್ತಿರುವ ಸಿಸ್ಟಂಗಳು, ಅವುಗಳ ಲಯಬಧ್ಧ ಶಬ್ಧ ಇದೆಲ್ಲದರ ಮೇಲ್ವಿಚಾರಣೆಯ ಜವಾಬ್ದಾರಿಯ ಹೆಮ್ಮೆ, ಸುತ್ತಲೂ ಬಂದು ಬಂದು ಹೋಗುವ ಮಂಜು--ಹೀಗೆ ಎಷ್ಟೋ ವಿಷಯಗಳ ಶ್ರೇಷ್ಠತೆಗಳನ್ನು ಕಂಡುಕೊಳ್ಳಬಹುದಾಗಿತ್ತು. ಆದರೆ ಇಂದು ನೋಡುವ ಕಣ್ಣು, ಕೇಳುವ ಕಿವಿ, ಆಡುವ ಬಾಯಿಗಳೆಲ್ಲ ಬೇರೊಂದು ನಿಟ್ಟಿನಲ್ಲಿ ಯೋಚಿಸುತ್ತಿರುವುದರಿಂದ ಎಲ್ಲೆಲ್ಲೂ ದೂರುಗಳೇ
ಮೇಲೆದ್ದು ಬಂದಂತೆ ಅನ್ನಿಸುತ್ತಿದೆ
. ನನ್ನದೇ ಪುರಾಣ ಸ್ವಲ್ಪ ಉದ್ದ ಆಯ್ತೇನೋ ಅಲ್ಲ್ವಾ?
ಅಚೂ, ನಿನ್ನೆ ನಿನ್ನ ಮಗನ ಹುಟ್ಟುಹಬ್ಬ ಅಂದೆಯಲ್ಲ, ಅವನು ಈ ಲೋಕಕ್ಕೆ ಬಂದ ಆ ಗಳಿಗೆ ನಿನ್ನ ಸ್ಥಿತಿ ಹೇಗಿತ್ತೇ? ಆ ಸಂತೋಷದಿಂದ ಅತ್ತುಬಿಟ್ಟಿದ್ದೆಯಾ? ಸುಖದ ಒಂದು ನಿಟ್ಟುಸಿರು ಬಂದಿತ್ತಾ? ಅಥವಾ....... ನಾನು ಇನ್ನು ಎನೂ ಊಹಿಸಲಾರೆ. ಕುರುಡನೊಬ್ಬ ಆನೆಯನ್ನು ವಿವರಿಸಿದ್ದ ಕತೆಯಂತಾದೀತು.
ನಿನ್ನ ಬಗ್ಗೆ ಹೇಳು ಅಂದೆಯಲ್ಲಾ, ಇಂದು ನನಗೆ ನಾನು ಅಂದು ಆಡುತ್ತಿದ್ದ ಮಾತುಗಳನ್ನೆಲ್ಲ ನೆನಪಿಸಿಕೊಟ್ಟು ಅದೇ ನಿಜವೆಂದು ನಿರೂಪಿಸುವ , ಆ ಆಶಾಭಾವನೆಯ ನಿಲುವೇ ಸರಿಯೆಂದು ತಿಳಿಸಿಹೇಳುವ ಅನುಭವದ ಹೆಗಲೊಂದು ಬೇಕು. ಒರಗಿ ನನ್ನ ಮಣಭಾರದ ನೋವನ್ನೆಲ್ಲ ಅಲ್ಲಿ ಇಳಿಸಿ ನಾನು ನಿಶ್ಚಿಂತಳಾಗುವ ಸಂದರ್ಭ ಬೇಕು." ನಾನು ಯಾರೂ ಮಾಡದ ತಪ್ಪೇನು ಮಾಡಿದೆ"- ಮನದ ತುಂಬೆಲ್ಲ ಹರಡಿರುವ ಈ ಪ್ರಶ್ನೆಗೆ ಉತ್ತರ ಬೇಕು. ಈ ಜನ್ಮದ್ದಲ್ಲ ಎಂಬ ಪಲಾಯನವಾದದ ಉತ್ತರ ಬೇಡ, ಸಮಂಜಸವಾದ ನನಗೊಪ್ಪಿಗೆಯಾಗುವ ಉತ್ತರ ಬೇಕು. ನನ್ನೊಳಗೆಷ್ಟೋ ಇಣುಕಿ ನೋಡಿ, ಇನ್ನೆಷ್ಟನ್ನೋ ಕಂಡುಕೊಳ್ಳಲಾಗದ ಜನ ನನ್ನನ್ನ ಹೇಡಿ, ಸಿನಿಕ, ಕೆಟ್ಟದ್ದನ್ನೇ ಆಲೋಚಿಸಿ ವ್ಯತಿರಿಕ್ತವಾದದ್ದನ್ನೇ ಎದುರುನೋಡುವ ವ್ಯಕ್ತಿತ್ವ ಎಂದು ನಿರೂಪಿಸಹೊರಟಿರುವಾಗ ನನ್ನೊಳಗು ಏನೆಂದು ಅವರಿಗೆ ತೋರಲಾಗುತ್ತಿಲ್ಲ, ಆ ಸಾಮರ್ಥ್ಯ ಬೇಕು. ಇಷ್ಟೆಲ್ಲ ಬೇಕುಗಳಿಂದ ಸದಾ ಸುತ್ತುವರಿಯಲ್ಪಟ್ಟಿರುವ ನಾನು ಇನ್ನು ಹೇಗಿರಲು ಸಾಧ್ಯ ಹೇಳು ಅಚೂ.
ಯಜಮಾನರೇನು ಮಾಡ್ತಿದ್ದಾರೆ ಎಂದೆಯಲ್ಲಾ? ಟಿ ವಿ ಯಲ್ಲಿ ಬರುತ್ತಿರುವ ಯಾವುದೋ ಧಾರಾವಾಹಿ ನೋಡ್ತಾ ನಗುತ್ತಿದ್ದಾರೆ. ನಾನೂ ಅಳಲಾಗದ ಕರ್ಮಕ್ಕೆ ನಗುತ್ತಿದ್ದೆ. ನನ್ನ ಪೆಚ್ಚುನಗೆ ಕಂಡವರೇ "ಮುಕ್ತವಾಗಿ ನಗಬಾರದಾ" ಅನ್ನುತ್ತಿದ್ದಾರೆ. ಅವರಿಗೆ ತಿಂಗಳ ರಜೆಯ ಅನಾರೋಗ್ಯದ ಸಬೂಬು ಹೇಳುತ್ತಿದ್ದೆ. ಮದುವೆಯಾಗಿ ಎಪ್ಪತ್ತೆರಡು ತಿಂಗಳಾದರೂ ಪ್ರತಿ ಬಾರಿಯೂ ತಪ್ಪದೆ ತಿಂಗಳ ರಜೆ ಕೊಡುತ್ತಿರುವ ನನ್ನ ವಿಧಿ ಸಾಹೇಬನ ಕಾರ್ಯತತ್ಪರತೆಯ ಬಲಿಪಶು ನಾನು, ಇನ್ನ್ನೆಷ್ಟು ಮುಕ್ತವಾಗಿ ನಗಲು ಸಾಧ್ಯ ಹೇಳು ಅಚೂ.
ದೊಡ್ಡವಳಾದ ಮೇಲೇನಾಗುತ್ತೀ ಎಂಬ ಪ್ರಶ್ನೆಗೆ ಎಲ್ಲರೂ ದಾಕ್ಟ್ರೋ, ಇಂಜಿನಿಯರೋ ಎಂದುತ್ತರಿಸಿದರೆ, ನಾನು ಅಮ್ಮ ಆಗ್ತೇನೆ ಅಂತ ದೃಢವಾಗಿ ಉತ್ತರಿಸುತ್ತಿದ್ದೆ. ಭವಿಷ್ಯ ಸುಂದರವೇ ಆಗಿರುತ್ತದೆ ಎಂಬ ಭ್ರಮೆಯಿಂದ ಮುಗ್ಧವಾಗಿ ಅದರೆ ಅಷ್ಟೇ ಖಚಿತವಾಗಿ ಉತ್ತರಿಸುತ್ತಿದ್ದೆ. ಅಚೂ, ಆ ಮೊದಲ ಪಾತ್ರವೇನು ನಾನು ಮಾನಸಿಕವಾಗಿ ನಿಭಾಯಿಸಿದೆ ನೋಡು, ಅದರ ಪ್ರಭಾವದಿಂದ ಹೊರಬರಲಾಗುತ್ತಲೇ ಇಲ್ಲ ಕಣೇ. ಆ ಪಾತ್ರದ ಮೂಲಭೂತ ಗುಣಗಳೆಲ್ಲ ನನ್ನೊಳಗೆ ಮೇಳೈಸಿಬಿಟ್ಟಿವೆ. ಆದರೆ ಅವನ್ನು ಅಭಿವ್ಯಕ್ತಿಸುವ ಸಂದರ್ಭಗಳು ಮಾತ್ರ ಇಲ್ಲವಾಗಿವೆ. ಆ ಸಂದರ್ಭಕ್ಕಾಗಿನ ಹಂಬಲದೊಂದಿಗೆ, ಆ ಗುಣಗಳನ್ನೆಲ್ಲವನ್ನೂ ಅಂಟಿಸಿಕೊಂಡೇ ಹೊಸತೊಂದು ಕೋಶದೊಳಕ್ಕೆ ಪ್ರವೇಶ. ಇದೆ-ಇಲ್ಲಗಳ ಗೌಜು ಗದ್ದಲ, ಸಾಧ್ಯತೆ-ಅಸಾಧ್ಯತೆಗಳ ಕಸಕಲ್ಮಶಗಳ ನಡುವೆಯೇ ಸಫಲತೆಯ ಹುಡುಕಾಟ. ಈ ಪ್ರದರ್ಶನದ ನಂತರ ಇನ್ನ್ಯಾವುದೋ ಒಂದು ಪಾತ್ರದೊಳಗೆ ಪ್ರವೇಶಿಸುವ ಅಂಕದಾಟ. ಇದು ಸದ್ಯದ ನನ್ನ ಸ್ಥಿತಿಯಾಗಿದೆ ಅಚೂ.
ಅನ್ನಬೇಕೆನಿಸಿದ್ದನ್ನೆಲ್ಲ ಬರೆದು ಕಳಿಸು ಮಧೂ ಅಂದೆಯಲ್ಲಾ, ಈ ಕ್ಷಣದವರೆಗೆ ಹಾಗೇ ಮಾಡಿದ್ದೇನೆ. ಒಮ್ಮಿಂದೊಮ್ಮೆಗೆ ಮಾತುಗಳೆಲ್ಲ ಮುಗಿದವು ಅನ್ನಿಸುತ್ತಿದೆ. ಈಗ್ಯಾಕೋ ಮತ್ತೆ ನನ್ನ ಈ ನಾಟಕದ ಹಿಂದಿನಪಾತ್ರದ ಒಳಗೆ ಹೋಗುವ ಮನಸ್ಸಾಗುತ್ತಿದೆ ಕಣೆ. ಮುಂದಿನ ಕ್ಷಣಗಳೆಲ್ಲಾ ಆ ನಟನೆಗೆ ಮೀಸಲು. ಒಳಹೋಗುತ್ತಿದ್ದೇನೆ, ಬರಲಾ ಅಚೂ?
ನಿನ್ನ ,
ಮಧು.
ಪ್ರೀತಿಯ ಮಧೂ,
ನಿನ್ನ ಪತ್ರ ಸಿಕ್ಕಿತು. ಇನ್ನೂ ಅದೇ ಮಾನಸಿಕ ಸ್ತರದಲ್ಲೇ ಇದ್ದೀಯಲ್ಲೇ ನೀನು?! ಅದೇ ತೀವ್ರವಾದ ಚಿಂತನೆ, ಅದೇ ತುಂಬ ಆಳಕಿಳಿವ ಬರವಣಿಗೆ, ಎಲ್ಲಾ ಹಾಗೇ ಇವೆಯಲ್ಲೇ! ಸ್ವಲ್ಪ ಸಂತೋಷವಾಗ್ತಾ ಇದೆ, ಮತ್ತೆ ಆಶ್ಚರ್ಯನೂ ಆಗ್ತಾ ಇದೆ- ಇಷ್ಟೊಂದು ವರ್ಷಗಳು ನಿನ್ನ ಅನುಭವಗಳ ಮುಖಾಂತರ ನಿನ್ನನ್ನು ಬದಲಾಯಿಸಲೇ ಇಲ್ಲವೇ ಅಂತ! ಏನಂದೆ ನೀನು, ನೆನಪಾ? ದಿನಕ್ಕೆ ಹಲವಾರು ಬಾರಿ ನಿನ್ನ ಮುಖ ನೆನಪಾಗುತ್ತಿರುತ್ತದೆ. ನನ್ನ ಮಕ್ಕಳು ನನ್ನನ್ನು ಕೆರಳಿಸಿಯಾದರೂ ನನ್ನ ಬಯ್ಗುಳ ಪಡೆಯುವಲ್ಲಿ, ತನ್ಮೂಲಕ ನನ್ನ ಗಮನ ಸೆಳೆಯುವಲ್ಲಿ ಗೆಲ್ಲುವುದೇ ತಮ್ಮ ಗುರಿಯೆಂಬಂತೆ ವರ್ತಿಸಿದಾಗಲೆಲ್ಲ ನೀನೂ ಅದನ್ನೇ ಮಾಡಿ ನನ್ನ ಪೂರ್ತಿ ಗಮನ ನಿನ್ನ ಮೇಲಿರುವಂತೆ ಮಾಡುತ್ತಿದ್ದುದು ನೆನಪಾಗುತ್ತದೆ, ನನ್ನೊಂದಿಗೆ ಮುನಿಸಿಕೊಂಡು ನನ್ನ ಆರರ ಮಗಳು ಒಂದು ಬದಿ ಸೇರಿದಾಗ , ನೀನೂ ನಾನು ಮಾತಾಡಿಸಿದಾಗಲೂ, ಮಾತಾಡದೆ ನನ್ನ ಮೇಲೆ ಮುನಿಸಿಕೊಳ್ಳುತ್ತಿದ್ದುದ್ದು, ನಿನ್ನನ್ನು ನಾನು ನಗಿಸಲು ಹರಸಾಹಸ ಮಾಡುತ್ತಿದ್ದುದು ನೆನಪಾಗುತ್ತದೆ, ಹೀಗೇ ನಿನ್ನ ಮುಗ್ಧತೆ ನನ್ನ ಮಕ್ಕಳ ಮುಗ್ಧತೆಯಲ್ಲಿ ಪ್ರತಿಫಲನಗೊಂಡು, ಅದನ್ನು ನಾನವರಿಗೆ ಸದಾ ಹೇಳುತ್ತಿದ್ದುದರಿಂದ ಮಧುಆಂಟಿ ಅಂದರೆ ಅವರಿಗೆ ಚಿರಪರಿಚಿತೆ ಗೊತ್ತಾ?
ಹೌದು ಮಧೂ, ಸರಿಸುಮಾರು ಕಳೆದೆರಡುವರ್ಷಗಳ ಹಿಂದಿನವರೆಗೆ ನೀನು ಹೇಳಿ ಸಮಾಧಾನಿಸುತ್ತಿದ್ದ ಹಾಗೆಯೇ ಎಲ್ಲ ನಡೆದಿತ್ತು. ಆಡಿಸುವವನು ನನ್ನ ನಿರಾಶಾದಾಯಕವಾಗಿದ್ದ ಬಾಳಿನ ಪಾತ್ರವನ್ನು ಪೂರ್ತಿ ಬದಲಿಸಿ ತುಂಬುಬಾಳಿನ ಪಾತ್ರವೊಂದನ್ನು ನನಗಾಗಿ ಇತ್ತಿದ್ದ. ನಾನೂ ಸಮರ್ಪಕವಾಗಿಯೇ ಅದನ್ನು ನಿರ್ವಹಿಸುತ್ತಾ ಸಂತೋಷದಿಂದಿದ್ದೆ. ಆಗೆಲ್ಲ ತಿಂಗಳಿಗೊಮ್ಮೆ ಟೂರ್ ಎಂದು ಹೊರಗೆ ಹೋಗುತ್ತಿದ್ದ ನನ್ನ ಯಜಮಾನರು ಒಂದು ಬಾರಿಗೆ ಹತ್ತಾರು ಸೀರೆಗಳು, ಒಡವೆಗಳನ್ನು ತರುತ್ತಿದ್ದರು. ಹಠಾತ್ತನೆ ಬಂದ ಈ ಸಮೃಧ್ಧತೆಯಿಂದ ಆಶರ್ಯವೂ ಅಗುತ್ತಿತ್ತು, ಭಯವೂ, ಸಂಶಯವೂ ಆಗುತ್ತಿತ್ತು ಆದರೆ "ಇಲ್ಲ ಇಲ್ಲ" ಗಳ ನಡುವೆಯೇ ಬದುಕಿದ್ದ ನಾನು ಈ ಸಿಕ್ಕಿದ ಸೌಭಾಗ್ಯಗಳ ನಡುವೆ ಆ ಸಂಶಯವನ್ನು ಕಡೆಗಣಿಸಿದೆ. ಬಿಸಿನೆಸ್ ಎಂದರೆ ಹಾಗೇ ತಾನೇ, ಚೆನ್ನಾಗಿದ್ದಾಗ ದುಡ್ಡು ತುಂಬಾ ಬರುತ್ತದೆ, ಅಂದುಕೊಂಡು ಸುಮ್ಮನಾಗುತ್ತಿದ್ದೆ. ದೊಡ್ಡದೊಂದು ಮನೆ ಆಯ್ತು, ಮಕ್ಕಳೂ ತುಂಬಾ ವೈಭೋಗಗಳ ನಡುವೆಯೇ ಬದುಕುತ್ತಿದ್ದರು. ಹೀಗಿದ್ದಾಗಲೇ ಬರಸಿಡಿಲಿನಂತೆ ಒಂದು ದಿನ ಸುಧ್ಧಿಯೊಂದು ನಮ್ಮ ಮನೆಬಾಗಿಲಿಗೆ ಬಂತು. ಈ ಮನೆ, ಅದರೊಂದಿಗೆ ನಮ್ಮ ಯಜಮಾನರ ಹೆಸರಿನಲ್ಲಿದ್ದ ವಿಮಾಪಾಲಿಸಿಗಳು ಎಲ್ಲವನ್ನೂ ಅಡವಿಡಲಾಗಿದೆ, ಇನ್ನಾರು ತಿಂಗಳೊಳಗೆ ಸಾಲದ ಮೊದಲೆರಡು ಕಂತುಗಳನ್ನು ಕಟ್ಟದಿದ್ದರೆ ಮನೆಯ ವಿಷಯ ಗಂಭೀರವಾಗುತ್ತದೆ ಎಂಬುವುದೇ ಆ ಸುಧ್ಧಿಯಾಗಿತ್ತು . ನಮ್ಮ ಯಜಮಾನರ ಬಳಿ ಇದರ ಬಗೆಗಿನ ಯಾವುದೇ ಪ್ರಶ್ನೆಗಳಿಗೆ ಉತ್ತರವಿಲ್ಲ. ಅವರು ಮುದುರಿಕೊಂಡು ಗುಬ್ಬಚ್ಚಿಯಂತೆ ಮನೆಯೊಳಗೆ ಕೂತುಬಿಟ್ಟಿದ್ದಾರೆ, ಯಾವುದೇ ವಿಚಾರಣೆಗೂ, ಬಯ್ಗುಳಗಳಿಗೂ, ಪ್ರತಿಕ್ರಿಯಿಸುವುದಿಲ್ಲ. ಇವರೇನಾ ಆ ಕಾರುಬಾರಿನ ಮನುಷ್ಯ?! ಅನಿಸುತ್ತದೆ. ಆದರೆ ನಾನು ಅವರಂತೆ ಕೈಕಟ್ಟಿ ಕೂಡುವಂತಿಲ್ಲವಲ್ಲ? ನನ್ನ ಹಿಂಜರಿಕೆ ಮಕ್ಕಳ ದಕ್ಕದ ಆಸೆಯ ಬೊಕ್ಕಸದ ಮುಂದೆ ತಲೆತಗ್ಗಿಸಿ ಕುಳಿತಿದೆ. ಅನಿವಾರ್ಯವಾಗಿ ಹಣ ಸಂಪಾದನೆಯ ದಾರಿ ಹುಡುಕತೊಡಗಿದೆ, ಒಂದೆರಡು ಮೂಲಗಳಿಂದ ಸ್ವಲ್ಪ ಸಂಪಾದಿಸುತ್ತಿದ್ದೇನೆ. ಹೊಟ್ಟೆ ಬಟ್ಟೆಗೆ ಸಾಕಾದೀತು, ಆದರೆ ಎ ಸಿ , ಕಂಪ್ಯೂಟರ್ ಮುಂತಾದ ಐಷಾರಾಮಗಳಿಗೆ ಒಗ್ಗಿಕೊಂಡ ನನ್ನ ಮಕ್ಕಳು ನನ್ನ ಅಸಹಾಯಕತೆಯನ್ನು ಸ್ವಲ್ಪವೂ ಅರ್ಥ ಮಾಡಿಕೊಳ್ಳಲಾರರು. ಈಗ ಒಂದೆರಡು ತಿಂಗಳ ಹಿಂದೆ ಮನೆಯೆದುರು ಸೊಂಪಾಗಿ ಬೆಳೆಸಿದ್ದ ನನ್ನ ತೋಟವಿದ್ದ ಜಾಗವನ್ನೂ ಮಾರಿಬಿಟ್ಟೆವು. ಮಧೂ, ಪ್ರತಿ ದಿನ ಒಂದು ಮಾರು ಮಲ್ಲಿಗೆ, ಕನಕಾಂಬರ ಹೂವಿನ ಮಾಲೆ ಕಟ್ಟಿ ದೇವರಿಗಿಡುತ್ತಿದ್ದೆ ಗೊತ್ತಾ? ಆ ಜಾಗದೊಳಗೆ ಬರುತ್ತಿದ್ದದರಿಂದ ನಮ್ಮ ಮನೆಯೆದುರಿನ ಪೋರ್ಟಿಕೋ ವನ್ನೂ ಒಡೆಸಬೇಕಾಯಿತು, ಅಲ್ಲೊಂದು ಆಸೆಯಿಂದ ಕೊಂಡು ತಂದಿದ್ದ ತೂಗುಯ್ಯಾಲೆಯಿತ್ತು ಮಧೂ. ಅದರಲ್ಲಿ ಬಿಡುವಿನ ವೇಳೆ ಕೂತು ನನ್ನ ಬಾಲ್ಯಕ್ಕಿಳಿದು ಸಂಭ್ರಮಿಸುತ್ತಿದ್ದೆ. ಹೀಗೆ ವೈಭವಗಳೆಲ್ಲ ಹೋಗಿ, ಬಣಬಣಜೀವನವೆಂಬಂತಾಗಿದೆ, ತಿಂಗಳ ಕೊನೇ ವಾರ ನನ್ನನ್ನ್ನು ನಾನು ಅವಮಾನಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಇರಲಿ ಬಿಡು, ಕಾಲಚಕ್ರದ ಗತಿಯಲ್ಲಿ ಹಿಂದೊಮ್ಮೆ ನನ್ನ ಪಾಲಿಗೆ ಬಂದಿದ್ದ ಸವಿಭಾಗ ಮುಂದೆ ಮತ್ತೊಮ್ಮೆ ಬಂದೀತು ಎಂಬ ಮಿಣಮಿಣ ಆಸೆಯೊಂದಿಗೆ ಬದುಕುತ್ತಿದ್ದೇನೆ.
ಹೌದಮ್ಮ. ಕೆಲದಿನಗಳಿಂದ ನೀನು ಸುಖವಾಗಿದ್ದೀಯಾ ಅಂತ ಎಂದು ತಿಳಿದುಕೊಳ್ಳಬೇಕೆಂದು ತುಂಬಾ ಅನ್ನಿಸುತ್ತಿತ್ತು. ನಿನ್ನ ಬಗ್ಗೆ ಯಾಕೋ ಏನೋ ಸರಿಯಿಲ್ಲವೆನಿಸುತ್ತಿತ್ತು. ಮಧೂ, ನನ್ನ ನೆರೆಕೆರೆಗೆ ಒಂದು ಜೋಡಿ ಬಂದಿದೆ. ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ತುಂಬಾ ಮೃದು ಸ್ವಭಾವದಾಕೆ ಆಕೆ. ತುಂಬಾ ಜಾಣೆಯೂ ಹೌದು. ಬಾಡಿಗೆಯ ಮನೆಯಾದರೂ ತುಂಬ ಒಪ್ಪಓರಣಗಳಿಂದ ಅಲಂಕರಿಸಿದ್ದಾಳೆ. ಬೆಳಗ್ಗೆ ಬೇಗನೆದ್ದು ಮನೆಮುಂದೆ ತುಂಬಾ ದೊಡ್ದದಾಗಿರುವ ಅಂಗಳವನ್ನು ಪ್ರತೀದಿನ ತೊಳೆದು, ರಂಗೋಲಿಯಿಟ್ಟು, ಮನೆಯೆಲ್ಲ ಗುಡಿಸಿ, ಒರೆಸಿ ಒಂಭತ್ತರೊಳಗೇ ಎಲ್ಲ ಕೆಲಸ ಮುಗಿಸಿ ಸುಂದರವಾಗಿ ಅಲಂಕರಿಸಿಕೊಂಡು ಗಂಡನೊಂದಿಗೆ ಹೊರಡುತ್ತಾಳೆ. ಸಂಜೆ ಮತ್ತೆ ಆತ ಆರಕ್ಕೆಲ್ಲ ಆಕೆಯನ್ನು ಕರಕೊಂಡು ಮನೆಗೆ ಬರುತ್ತಾರೆ, ಮತ್ತೆ ಸಿಂಗರಿಸಿಕೊಂಡು ಹೊರಗೆ ತಿರುಗಾಡಲು ಹೋಗುತ್ತಾರೆ. ಏನೇನೋ ಕೊಂಡು ತರುತ್ತಾರೆ, ರಾತ್ರಿ ಊಟದ ನಂತರ ಅಂಗಳದಲ್ಲಿ ಎರಡು ಕುರ್ಚಿಗಳನ್ನಿಟ್ಟು ಕೂತು ಮಾತಾಡುತ್ತಾರೆ, ಹೀಗೇ ತುಂಬಾ ನಿರಾಳವಾದ ಸುಖೀ ಜೀವನ ನಡೆಸುತ್ತಾರೆ- ಇದು ನನ್ನ ನಿಲುವಾಗಿತ್ತು. ಅಲ್ಲದೇ ಸುತ್ತಲಿನವರೆಲ್ಲಾ "ಅವರಂತೆ ನಾವಿರಲೇ ಇಲ್ಲವಲ್ಲಾ, ಮದುವೆಯಾದ ಕೂಡಲೇ ಮಕ್ಕಳು, ಅವರ ಜವಾಬ್ದಾರಿಗಳ ನಡುವೆ, ಹೀಗೆ ಕಳೆಯಬಹುದಾಗಿದ್ದ ಗಳಿಗೆಗಳಿಂದ ವಂಚಿತರಾದೆವು" ಎಂದು ಅಲವತ್ತುಕೊಳ್ಳುತ್ತಿದ್ದದ್ದು ನಾನು ಕೇಳಿದ್ದೆ. ಅಷ್ಟಾಗಿ ಯಾರೊಂದಿಗೂ ಬೆರೆಯದ ಆಕೆ ಈಗ ಕಳೆದತಿಂಗಳು ಒಂದುದಿನ ನಮ್ಮ ಮನೆಗೆ ಬಂದಿದ್ದಳು. ಎರಡುವರ್ಷದ ನನ್ನ ಮಗನಿಗಾಗಿ ಹಾಲುಪಾಯಸ ಮಾಡಿ ತಂದಿದ್ದಳು. "ಅಯ್ಯೋ ಕೆಲಸಕ್ಕೆ ಹೋಗುವವರು ನೀವು, ಇವನಿಗಾಗಿ ಕಷ್ಟ ಯಾಕೆ ತಗೊಂಡಿರಿ?" ಅಂದದ್ದಕ್ಕೆ "ಇಲಪ್ಪ " ಅಂದು ಸುಮ್ಮನಾಗಿದ್ದಳು. ಮತ್ತೆ ಕಳೆದವಾರ ಅದೇ ಪಾಯಸ ಮಾಡಿ ತಂದುಕೊಟ್ಟಳು. ಮಧ್ಯೆ ಒಂದುಬಾರಿಯೂದರೂ ಬರದೆ ಒಂದು ತಿಂಗಳ ನಂತರ ಅದೂ ಅದೇ ಪಾಯಸದೊಂದಿಗೆ?! ನನಗೆ ಆಶ್ಚರ್ಯವಾದದ್ದು ಬಹುಶಃ ಗೊತ್ತಾಗಿರಬೇಕು. ಮೆತ್ತಗೆ ಮಾತು ಸುರುಮಾಡಿದಳು. ಮದುವೆಯಾಗಿ ವರ್ಷ ಐದಾದರೂ ಮಕ್ಕಳಾಗದಿದ್ದದ್ದಕ್ಕೆ ಅವರಿವರು ಹೇಳಿದ ವ್ರತವನ್ನೆಲ್ಲ ಮಾಡುತ್ತಾಳಂತೆ. ಇದೂ ಅದರಲ್ಲೊಂದಂತೆ, ಪ್ರತೀ ತಿಂಗಳ ಶ್ರವಣ ನಕ್ಷತ್ರದಂದು ಬೆಳಿಗ್ಗಿನಿಂದ ಸಂಜೆಯವರೆಗೂ ಉಪವಾಸವಿದ್ದು ಎರಡುವರ್ಷದೊಳಗಿನ ಮಗುವೊಂದಕ್ಕೆ ಹಾಲುಪಾಯಸ ತಿನ್ನಿಸಿ ತಾನುಣ್ಣಬೇಕಂತೆ. ಇದನ್ನು ಹೇಳುವಾಗ ಆಕೆ ಸಂಕೋಚ, ಕೀಳರಿಮೆಗಳಿಂದ ಹಿಡಿಯಾಗಿದ್ದಳು. ಎಷ್ಟು ತಡೆದರೂ ಅವಳ ಕಣ್ಣಲ್ಲಿ ನಿಲ್ಲದೇ ಹರಿದ ಕಣ್ಣೀರಿನ ಕಣಕಣದಲ್ಲೂ ನಾನು ನಿನ್ನ ಕಣ್ಣೀರನ್ನು ಕಂಡೆ ಮಧೂ. ಅದಕ್ಕೇ ಮತ್ತೆ ಮತ್ತೆ ಕೇಳಿದ್ದು ಹೇಗಿದ್ದೀಯಾ ಅಂತ.
ನಿನಗೆ ಗೊತ್ತಾ ಮಧೂ, ನಮ್ಮ ಜೀವನ ಅಪ್ಪ-ಅಮ್ಮನ ವಶದಿಂದೀಚೆಗೆ ನಮ್ಮದೇ ಕಾಲಿನ ಮೇಲೆ ಬಂದಾದ ಕೂಡಲೇ ಮುಖವಾಡಗಳ ಹಿಂದೆ ಬಾಳಬೇಕಾದ ಅನಿವಾರ್ಯತೆ ಬಂದಿರುತ್ತದೆ. ಅದರಲ್ಲಿ ಕೆಲವು ಮುಖವಾಡಗಳು ಹೆಚ್ಚಿನಂಶ ನಮ್ಮ ಮುಖವನ್ನು ಹೋಲುತ್ತಿರುವಂಥಹವೂ ಇರುತ್ತವೆ. ಹಾಗಾಗಿ ನೀನೊಬ್ಬಳೇ ಅಲ್ಲ, ಎಲ್ಲರೂ ನಟಿಸಲೇಬೇಕು. ಈಗ ನೋಡು, ನನ್ನ ಇಷ್ಟೊಂದು ಯಾತನೆಗಳ ಮಧ್ಯೆ ನಿಷ್ಕ್ರಿಯರೆಂಬಂತೆ , ತನಗೆ ಹಾಗೂ ಈ ಜವಾಬ್ದಾರಿಗಳಿಗೆ ಸಂಬಂಧವೇ ಇಲ್ಲವೆಂಬಂತೆ ಕೂತಿರುವ ನನ್ನ ಯಜಮಾನರನ್ನು ನೋಡು. "ಒಂದು ಕಪ್ ಚಾ" ಅಂತ ಆಗಿನಿಂದ ಕೂಗುತ್ತಿದ್ದಾರೆ. ನಾನೀಗ ಅದನ್ನ ಮಾಡಿ ನಗುತ್ತಲೇ ಕೊಂಡೊಯ್ಯಬೇಕು. ಯಾಕೆಂದರೆ, ಅವರ ಮಟ್ಟಿಗೆ ಅವರು ಈಗ ಅತ್ಯಂತ ದಯನೀಯ ಪರಿಸ್ಥಿಯಲ್ಲಿದ್ದಾರೆ, ಹಾಗೂ ನನ್ನೆಲ್ಲ ಸಹಾನುಭೂತಿಗೆ ಪಾತ್ರರಾಗಿದ್ದಾರೆ. ನಾನು ಅವರ ಕಷ್ಟದಲ್ಲಿ ಅವರಿಗೆ ಆಸರೆಯಾಗುವ ಮಹತ್ತರ ಪಾತ್ರವನ್ನು ನನ್ನೊಳಗಿನ ಅಹಂಗಾಗಿಯೋ, ಅಥವಾ ಮಕ್ಕಳೆಂಬ ನಿವಾರ್ಯತೆಗಾಗಿಯೋ ವಹಿಸಿಕೊಂಡಾಗಿದೆ. ಈಗ ಅದಕ್ಕೆ ತಕ್ಕಂತೆ ವೇಷ ಕಟ್ಟಿ ಕುಣಿಯಲೇಬೇಕು. .
ಹೋಗಲಿ ಬಿಡಮ್ಮ. ಇಲ್ಲ ಅನ್ನುವ ದುಖಃ ಕ್ಕಿಂತ ಇದ್ದವರ ಹೊಟ್ಟೆ ಹೊರೆಯಲಾಗದ ಅಸಹಾಯಕತೆ ಕೆಟ್ಟದ್ದೆಂಬುದು ನನ್ನ ಭಾವನೆ. ಅವರವರಿಗೆ ಅವರವರ ಗೋಳೇ ದೊಡ್ಡದು ಅಲ್ಲವೇ? ನಾನು ನಿನ್ನದೇ ಮಾತುಗಳಲ್ಲಿ ಹೇಳುತ್ತೇನೆ ಕೇಳು- ನಾವು ನಮಗರಿವಿರುವಂತೆ ಯಾವ ತಪ್ಪನ್ನೂ ಮಾಡಿಲ್ಲವಾದರೆ ದೊರಕಿದ್ದನ್ನು ಶಿಕ್ಷೆಯೆಂದೇಕೆ ಅಂದುಕೊಳ್ಳಬೇಕು ಹೇಳು? ಈ ಅನಿವಾರ್ಯತೆಗಳು ನನ್ನನ್ನೇ ನುಂಗುವಷ್ಟು ತೀವ್ರವಾದಾಗ ಎಷ್ಟೋ ಬಾರಿ "ಈ ಮಕ್ಕಳಿರದಿದ್ದರೆ!!!!!" ಅನ್ನಿಸಿದ್ದಿದೆ. ಯಾವುದು ನಿನಗೆ ಬೆಟ್ಟದಷ್ಟು ದೊಡ್ಡ ಕೊರತೆಯಾಗಿ ಕಾಡುತ್ತಿದೆಯೋ ನಾನು ಅದಕ್ಕಾಗಿ ಹಂಬಲಿಸುವಂಥಹ ಪರಿಸ್ಥಿತಿ. ನೋಡಿದೆಯಾ, ಯಾವ ದುಖಃವೂ ಎಲ್ಲಕ್ಕಿಂತ ದೊಡ್ಡದೆನಿಸಿಕೊಳ್ಳಲಾರದು. ಮೇಲಿರುವ ಆತನ ಇಂದಿನ ಈ ನಡೆ ಮುಂದಿನ ಯಾವುದೋ ಒಂದು ಸವಿಕೊಡುಗೆಯ ತಯಾರಿಯಿರಬಹುದು. ಹಾಗಂದುಕೊಂಡು ಬಾಳೋಣ. ಆ ಗಳಿಗೆಯ ನಿರೀಕ್ಷೆಯಲ್ಲಿ ಆಶಾವಾದಿಗಳಾಗಿರೋಣ , ಬೇರೆ ದಾರಿಯಿಲ್ಲವಲ್ಲಾ?
ನಿನ್ನ ಎಲ್ಲಾ ನೋವುಗಳೂ ಸಹಜವೇ, ನೀನು ಅನುಭವಿಸಿದ ತೀವ್ರತೆ ನಿನಗೊಬ್ಬಳಿಗೇ ಗೊತ್ತು- ಒಪ್ಪುತ್ತೇನೆ. ಆದರೆ ದಯವಿಟ್ಟು ನಿನ್ನ ಮೇಲೇ ನೀನು "ಅಯ್ಯೋ ಪಾಪ" ಅನ್ನುವುದನ್ನು ಬಿಟ್ಟು ಮುಂದೆ ನಡೆದರೆ ಮಾತ್ರ ಬೇರೆಯವರೂ ಹಾಗೆ ಹೇಳದ ಹಾಗೆ ನಿನ್ನ ಜೀವನವನ್ನು ರೂಪಿಸಿಕೊಳ್ಳಬಲ್ಲೆ. ಆತ್ಮವಿಶಾಸವಿಲ್ಲದ ನೊಂದವನಿಗೆ ಬೇರೊಂದು ಜೀವಿಯಿಂದ ಯಾವತ್ತೂ ಅಸರೆ ಸಿಗದು, ಸಿಕ್ಕುವುದೆಂದರೆ ಅದು ಪೊಳ್ಳು ಸಹಾನುಭೂತಿ ಮಾತ್ರ.
ಯಾವಾಗಲೂ ನನಗೇ ಬುಧ್ಧಿಮಾತು ಹೇಳಿ ಸಮಾಧಾನಿಸುತ್ತಿದ್ದ ನನ್ನ ಮಧೂಗೆ ನಾನು ಇವೆಲ್ಲ ಹೇಳುವಂತಾಯಿತಲ್ಲಾ? ಇರಲಿ ಬಿಡು, ಆಗೆಲ್ಲ ನಿನ್ನ ಕೊರೆತವನ್ನು ನಾನು ಕೇಳುತ್ತಿದ್ದೆ, ಈಗ ನೀನೂ ಕೇಳು, ಅದರ ಕಷ್ಟ ಏನೆಂಬುದು ನಿನಗೂ ತಿಳಿಯಲಿ.ಅರ‍ೇ, ನಿನ್ನ ಮುದ್ದು ಮುಖದಲ್ಲಿ ಅರಳಿದ ಹೂನಗೆ ನಾನು ಕಾಣುತ್ತಿದ್ದೇನೆ, "ಹೊಡೀತೀನಿ ನೋಡು" ಅಂದದ್ದೂ ಕೇಳಿತು. ಸಿಕ್ಕಿದಾಗ ಬೇಕಾದಷ್ಟು ಹೊಡಿ ಆಯ್ತಾ?
ಈಗ ಮುಗಿಸುತ್ತೇನೆ, ಆದಾಗಲೆಲ್ಲ ಬರೆಯುತ್ತಿರು,
ನಿನ್ನ
ಅಚೂ