Saturday, February 6, 2016

"..ಹಿಂದಿನ ಆಟ ಮುಗಿಸೋಣು ಬಾ
ಮುಂದಿನ ಆಟ ನಡೆಸೋಣು ಬಾ.."
                               ಬೇಂದ್ರೆ.

ತನ್ನೊಳಗೆ ಮಾತು ಮಾತು ಮಥಿಸಿ ಬಂದ ನಾದದ ನವನೀತವನ್ನು ಅತ್ಯಂತ ಪ್ರಾಮಾಣಿಕ ಪ್ರೀತಿಯಿಂದ ತನ್ನ ಕನ್ನಡಮ್ಮನ ಕಂದಗಳಿಗುಣಿಸಿದ ಕನ್ನಡ ಕಾವ್ಯಲೋಕದ ಗಾರುಡಿಗನ ಮಹಾಪ್ರಸ್ಥಾನವಾಗಿ ಮೂವತ್ತೈದು ವರ್ಷಗಳಾದರೂ ಇಂದಿಗೂ ತಮ್ಮ ಕವನಗಳ ಮತ್ತು ಅವುಗಳಲ್ಲಿನ ಜೀವಂತಿಕೆಯ ಮೂಲಕ ಓದುಗರ ಮನಸುಗಳೊಳಗೆ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಜೀವಂತ! 

          ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ತವರು ಸೇರಿದ ಬಾಲಕ ದತ್ತು ಬಡತನದಲ್ಲೇ ಬೆಳೆದದ್ದು. ಹದಿನೇಳು ಹೆಡೆದು ಹೆಣ್ಣು ಒಂದಷ್ಟೇ ಉಳಿದ ಗೋಳಿನ ಜೊತೆಗೇ ಬದುಕಿ " ..ಜಗ್ಗದ ಕುಗ್ಗದ ಎದೆಯವಳು, ಹುಲಿ ಹಾಲ ಕುಡಿಸಿದಳು, ತಂತಿಯಲಿ ನಡೆಸಿದಳು, ಸೂಜಿಯ ಮೊನೆಯಲ್ಲಿ ನಿಲಿಸಿದಳು.." ಎಂದೆಲ್ಲ ವರ್ಣಿಸಿಕೊಂಡ ಅಜ್ಜಿ ಗೋದೂಬಾಯಿ ಮೊಮ್ಮಗನ ಜೀವನಕ್ಕೆ ತುಂಬುಸ್ಫೂರ್ತಿಯಾಗಿದ್ದವರು ಹಾಗೂ ನೆರಳಿನಂತೆ ಜೊತೆಯಾಗಿದ್ದ ಅಕ್ಕರೆಯ ತಮ್ಮ ರಘು ಇವರಿಬ್ಬರ ಸಾವು ಬಾಲ್ಯದಲ್ಲೇ ಕಂಗೆಡಿಸಿದರೆ ಮುಂದೆ ತಮಗೆ ಜನಿಸಿದ ಒಂಬತ್ತು ಮಕ್ಕಳಲ್ಲಿ ಒಂದರ ಹಿಂದೊಂದರಂತೆ ಆರು ಮಕ್ಕಳ ಸಾವು ಇನ್ನಷ್ಟು ನೋವಲ್ಲಿ ಬೇಯಿಸಿತು. ಎಲ್ಲ ಅನುಭವಿಸುತ್ತಲೇ ಬರೆಯುತ್ತಾ ಸಾಗಿದ ಬೇಂದ್ರೆಯವರು ಒಂದು ಕಡೆ "ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ" ಅನ್ನುತ್ತ ಬವಣೆಗಳನ್ನು ಮರೆಯಲಿಡುವ ಇಂಗಿತ ತೋರಿದರೂ "ಬಡತನ ಸಿರಿತನ ಕಡೆತನಕ ಉಳಿದಾವೇನ?" ಎಂದು ಬಯಲಾಗುತ್ತಾ ತನ್ನನ್ನು ಸಂತೈಸಿಕೊಳುತ್ತಾ ಓದುಗನನ್ನೂ ಸಂತೈಸುತ್ತಾ ಬಂದವರು. 
 
            ಶಾಲೆಯ ನಾಕು ಗೋಡೆಗಳೊಳಗಿನ ಪಾಠಕ್ಕಿಂತಲೂ ಶಾಲೆಯ ಹಾದಿಯಲ್ಲಿ ಸಿಕ್ಕುತ್ತಿದ್ದ ಹಾವಾಡಿಗರಾಟ, ಜಾದುಗಾರರ ಆಟ, ಗುಡಿಯಲ್ಲಿನ ಕೀರ್ತನೆ-ಪುರಾಣಪ್ರವಚನ, ಶಿರಹಟ್ಟಿಯ ಕಂಪನಿ ನಾಟಕಗಳು, ಮರಾಠಿ ನಾಟಕಗಳು ಇವೆಲ್ಲವುಗಳಲ್ಲಿನ ಮೋಜು ಮತ್ತಲ್ಲಿ ಸಿಗುತ್ತಿದ್ದ ಬದುಕಿನ ಪಾಠಗಳು ಹಾಗೂ ತಮ್ಮ ವಾಸಸ್ಥಳ ಕಾಮನಕಟ್ಟೆಯ ಪಕ್ಕದಲ್ಲೇ ಇದ್ದ ಭಾರತ ಪುಸ್ತಕಾಲಯದಿಂದ ಕೈಗಡ ತಂದ ಪುಸ್ತಕಗಳ ಓದು ಇವುಗಳನ್ನೇ ತದೇಕಚಿತ್ತದಿಂದ ಒಳಗಿಳಿಸಿಕೊಂಡ ಬಾಲ್ಯ ಬೇಂದ್ರೆಯವರದು. ಕಾಳಿದಾಸನ ಶಾಕುಂತಲ, ಭಟ್ಟನಾರಾಯಣನ ವೇಣಿಸಂಹಾರಗಳ ಆಧಾರಿತ ವಾರ್ಷಿಕೋತ್ಸವದ ನಾಟಕಗಳು, ಹುಯಿಲಗೋಳ ನಾರಾಯಣರು "ಟೇಲ್ಸ್ ಫ್ರಮ್ ಶೇಕ್ಸ್ಪಿಯರ್" ಕಲಿಸಿ ಆಡಿಸಿದ "ಮರ್ಚಂಟ್ ಆಫ್ ವೆನಿಸ್" ನಾಟಕ, ಮುಂತಾದವುಗಳು ಕನ್ನಡವಲ್ಲದೆ ಸಂಸ್ಕೃತ ಹಾಗೂ ಇಂಗ್ಲಿಷ್ ಸಾಹಿತ್ಯಾಸಕ್ತಿಯ, ಆಕರ್ಷಣೆಯ ಬೀಜವನ್ನು ಬಿತ್ತಿರಬೇಕು. ಮುಂದೆ ಕಾಳಿದಾಸನ ಮೇಘದೂತ ಕನ್ನಡಾವತಾರ ತಾಳಲು, ಶಾಕುಂತಲದಲ್ಲಿನ ಮಿಸ್ಸಿಂಗ್ ಲಿಂಕ್ಸ್ ಬಗ್ಗೆ ಅಧ್ಯಯನ ಮಾಡಲು ಈ ಆಸಕ್ತಿಯ ಅಡಿಪಾಯವೇ ಕಾರಣವಿದ್ದಿರಬಹುದುಮುಂದೆ ಪುಣೆಯಲ್ಲಿ ಬಿ ಎ ಓದುವಾಗ ಪುಸ್ತಕಾಧ್ಯಯನ ಒಂದು ವ್ಯಸನವಾಗಿ ಬೆಳೆದದ್ದು. ಧಾರವಾಡದಲ್ಲಿ (೧೯೧೮) ನಡೆದ ನಾಲ್ಕನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ "ಕೋಗಿಲೆ" ಎಂಬ ಕವನವಾಚನ ಮಾಡಿ ಅಲೂರ ವೆಂಕಟರಾಯರಂಥ ಹಿರಿಯರಿಂದ ಮೆಚ್ಚುಗೆ ಪಡಕೊಂಡಾಗ ಬೇಂದ್ರೆಯವರಿಗೆ ಹತ್ತೊಂಬತ್ತು ವರ್ಷ. ಇಪ್ಪತ್ತರ ವಯಸ್ಸಿನಲ್ಲಿ ಮರಾಠಿ ಪತ್ರಿಕೆಯೊಂದರಲ್ಲಿ ಮೊದಲಬಾರಿಗೆ ಪ್ರಕಟವಾದ ಅವರ ಕವನ "ವೀಸವಯಾ ಝಾಲೀ" ಬದುಕಿನ ಮುಂದಿನ ದಿಕ್ಕು-ದಾರಿಗಳ ಬಗ್ಗೆ ತಾನು ಕಂಡುಕೊಂಡ ಉತ್ತರದಂತಿತ್ತು.
          ತಾನು ಓದಿದ ಹೈಸ್ಕೂಲ್ ನಲ್ಲೇ ಮಾಸ್ತರರಾದಾಗ ಬಂದ ಬೇಂದ್ರೆ ಮಾಸ್ತರ ಎಂಬ ಪ್ರೀತಿಯ ಹೆಸರು ಮುಂದೆ ಪ್ರೊಫೆಸರ್ ಅಗಿ, ಎರಡೆರಡು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದುಕೊಂಡು, ಆಕಾಶವಾಣಿ ಸಾಹಿತ್ಯ ಸಲಹಾಗಾರರಾದಾಗಲೂ, ಜ್ಞಾನಪೀಠ ಪ್ರಶಸ್ತಿ ಪಡೆದಾಗಲೂ ಅದೇ ಅಕ್ಕರೆಯಲ್ಲಿ ಅವರ ಜೊತೆ ಉಳಿದುಬಂತು. ವಿದ್ಯಾರ್ಥಿಗಳ ಜೊತೆ ಸ್ನೇಹಿತರಂತಿರುತ್ತಾ "ಸಹನಾವವತು ಸಹ ನೌ ಭುನಕ್ತು ಸಹವೀರ್ಯಂ ಕರವಾವಹೇ.." ಎಂಬ ವೇದಮಂತ್ರವನ್ನು ನಿತ್ಯವೂ ಪಠಿಸುತ್ತಾ ಅದರಂತೆಯೇ ಬದುಕುವ ಭೋಧನೆಯಿತ್ತ ಸ್ನೇಹಜೀವಿ ಬೇಂದ್ರೆ ಮಾಸ್ತರರು ಬೇರೆಲ್ಲವುದಕ್ಕಿಂತ ಮನುಷ್ಯಸಂಬಂಧಗಳಿಗೆ ಹೆಚ್ಚು ಮಹತ್ವವಿತ್ತವರು. ಶ್ರೀಧರ ಖಾನೋಳಕರ,
ವಿ. ಕೃ. ಗೋಕಾಕ, ಶಂಬಾ ಜೋಷಿ, ಬೆಟಗೇರಿ ಕೃಷ್ಣ ಶರ್ಮ, ಮಧುರಚೆನ್ನ ಮುಂತಾದ ಗೆಳೆಯರ ಜೊತೆ ತಮ್ಮ ಕಲ್ಪನೆಯ ಕೂಸು "ಗೆಳೆಯರ ಗುಂಪು" ಅನ್ನುವ ಅನೌಪಚಾರಿಕ ಸಂಸ್ಥೆಯೊಂದನ್ನು ತುಂಬು ಅಭಿಮಾನದಿಂದ ಕಟ್ಟಿಕೊಂಡವರು ಮುಂದೊಮ್ಮೆ ಅದು ಚದುರತೊಡಗಿದಾಗ ತಮ್ಮ ಹಂಸಗೀತೆಯಲ್ಲಿ "ಗುಡಿಹೋಯ್ತು, ಹುಡಿಗೂಡಿ ಗಾಳಿಗೋಪುರ ಗಾಳಿಗೂಡಿತು, ಮಾಟದೋಲು... " ಅನ್ನುತ್ತಾ ಸಂಕಟವನ್ನು ತೋಡಿಕೊಂಡವರು.
         
          "ಬೆಂದರೆ ಬೇಂದ್ರೆಯಾದಾನು" ಅನ್ನುವ ಪ್ರಸಿದ್ಧ ಮಾತಿದೆ. ನವಕರ್ಣಾಟಕ ಸಾಹಿತ್ಯ ಸಂಪದ ಮಾಲೆಯಲ್ಲಿ ಶ್ರೀ ಎನ್ಕೆ ಕುಲಕರ್ಣಿಯವರು ಬರೆದ "ದ. ರಾ. ಬೇಂದ್ರೆ" ಅನ್ನುವ ಪುಸ್ತಕದಲ್ಲಿ ಹೀಗನ್ನುತ್ತಾರೆ, "ಅಂಬಿಕಾತನಯರ ಕಾವ್ಯಯಜ್ಞದಲ್ಲಿ ನೋವು ನೋಂಪಿಯಾಗುತ್ತದೆ, ತಾಪ ತಪವಾಗುತ್ತದೆ..". ಬದುಕುವ ಪ್ರಕ್ರಿಯೆಯಲ್ಲಿ ಅದೂ ಬದುಕಿನ ಒಂದು ಅಂಗ ಅನ್ನುವಷ್ಟರಮಟ್ಟಿಗೆ ಸಹಜವಾಗಿ ಹಾಸುಹೊಕ್ಕಾಗಿ ಬಂದ ಅವರ ಬರಹಗಳಲ್ಲಿ ನೋವು-ನಲಿವು, ಅಸಮಾಧಾನ-ಅಸಹಾಯಕತೆ, ಮೆಚ್ಚುಗೆ-ಅಚ್ಚರಿ ಮುಂತಾದೆಲ್ಲ ಅನುಭವಗಳೂ ಸರಳವಾಗಿ ಆದರೆ ತಮ್ಮೆಲ್ಲ ತೀವ್ರತೆಯೊಂದಿಗೆ ಸಶಕ್ತ ನಮ್ಮೆದುರು ಬರುತ್ತವೆ.

ಬೇಂದ್ರೆಯವರನ್ನು ಕಣ್ಣಾರೆ ಕಂಡ ಪುಣ್ಯಾತ್ಮರ ಜೊತೆಗೆ ಅವರ ಬರಹದ ಮೂಲಕ ಅವರನ್ನು ಕಂಡುಕೊಳ್ಳಲು ಯತ್ನಿಸಿರುವ ಮಹನೀಯರು ಕೆಲವರ ಮಾತುಗಳನ್ನು ನೆನೆಯುವುದರ ಮೂಲಕ ನಾವೂ ಸ್ವಲ್ಪ ಮಟ್ಟಿಗೆ ಅವರ ಹತ್ತಿರಕ್ಕೆ ಸಾಗೋಣವೇ?

          ಬೇಂದ್ರೆಯವರ ಪುತ್ರ ಶ್ರೀ ವಾಮನ ಬೇಂದ್ರೆಯವರು ಒಂದೆಡೆ ಹೇಳುವ ಹಾಗೆ, ಬಾಲ್ಯದಲ್ಲಿ ಕೇಳಿದ್ದ ಜಾನಪದ, ಲಾವಣಿ, ಗೊಂದಲಿಗರ ಹಾಡು, ಡೊಳ್ಳಿನ ಹಾಡುಗಳ ಧಾಟಿಯಲ್ಲಿ ರಚಿಸುತ್ತಿದ್ದ "ರವದಿ" ಯಂಥ ಕವನಗಳು ಅವರ ಅಪ್ಪಟ ಆನಂದದ ಅಭಿವ್ಯಕ್ತಿಗಳಾಗಿರುತ್ತಿದ್ದವು.
"ಕಸದಂತೆ ಬಿದ್ದಂಥ ರವದಿ ಕಂಡೆನು ನಾನು
ಕಸವೆಂದು ಬಗೆದಂಥ ರವದಿ ಕಸವಾಗಿತ್ತು
ಕಸವಲ್ಲವೆಂದು ನಾನೆತ್ತಿದೆನು; ಅಂತೆಯೇ ಕಸವಾಗಲಿಲ್ಲ ರವದಿ..."
ಆದರೆ ಆಗಿನ ಕಾಲದಲ್ಲಿ ಆ ಧಾಟಿಗೆ ಪಂಡಿತರ ಮನ್ನಣೆ ಸಿಗಲಿಲ್ಲವಾಗಿ ಬೇಂದ್ರೆಯವರು ತಮ್ಮ ಅಭಿವ್ಯಕ್ತಿಗೆ ಷಟ್ಪದಿಯ ಮಾಧ್ಯಮ ಆಯ್ದುಕೊಳ್ಳುತ್ತಾರೆ. ಆದರೂ ತನ್ನ ಉತ್ತಮ ಕವನವೆಂದರೆ ಬೇಂದ್ರೆಯವರಿಗೆ, " ಭೋಗಿಸಿದೆನೋ ನಿದ್ರೆಯಲ್ಲಿ ಮರೆತಿದ್ದ ಜನ್ಮಾಂತರ ಸುಖಗಳನ್ನು.." ಅನ್ನುವಂತಿರುತ್ತಿದ್ದವಂತೆ.

          ಶ್ರೀ ಶ್ಯಾಮಸುಂದರ ಬಿದರಕುಂದಿಯವರ ಅಭಿಪ್ರಾಯದಂತೆ ಬೇಂದ್ರೆಯವರ ಬದುಕು ನಿಂತುದೇ ಒಲವಿನ ಅರಿವು, ಪ್ರೀತಿಯ ಇರುವಿನ ಮೇಲೆ. 
"ಪ್ರೇಮ ಬೀಜ ಮೂಲ ನನಗೆ
ಪ್ರೇಮ ಬೀಜ ಫಲದ ಕೊನೆಗೆ"
ಈ ಭಾವದ ವಿಸ್ತಾರವನ್ನೇ ಹೆತ್ತ ತಾಯಿಗೆ, ಪಡೆದ ತಾಯ್ನಾಡಿಗೆಕೈಹಿಡಿದ ಬಾಳಸಖಿಗೆ ಗೆಳೆಯ ಗೆಳತಿಯರಿಗೆ, ಹಿರಿಯರಿಗೆ, ಗುರುಗಳಿಗೆ, ನಿಸರ್ಗಶಕ್ತಿಗೆ, ಕಾವ್ಯದ ಉಕ್ತಿಗೆ ಹೀಗೆ ಅವರು  ಬದುಕಿನ ಬೇರೆಬೇರೆ ಹಂತಗಳಲ್ಲಿ ತೋರಿದ ಪ್ರೀತಿಯ ಮತ್ತು ಪಡೆದ ಪ್ರೀತಿಯ ಧನ್ಯತಾಭಾವವನ್ನು ಅಭಿವ್ಯಕ್ತಿಸಿದ ಅವರ ಬರಹಗಳಲ್ಲಿ ಕಾಣಬಹುದು.

          ಬೇಂದ್ರೆ ಮಹಾಕಾವ್ಯ ಬರೆಯದಿದ್ದರೂ ಹಕ್ಕಿ ಹಾರುತಿದೆ ನೋಡಿದಿರಾ, ನಗೀ ನವಿಲು, ಶ್ರಾವಣಾ, ತುತ್ತಿನ್ ಚೀಲ, ನರಬಲಿ, ಯುಗಾದಿ, ಸಖೀಗೀತ, ನೀ ಹೀಂಗ ನೋಡಬ್ಯಾಡ ನನ್ನ, ಕುರುಡುಕಾಂಚಾಣ, ಅನ್ನಾವತಾರ ತುತ್ತಿನ ಚೀಲ, ಹೆಣದ ಹಿಂದೆ- ಇವೇ ಈ ಕವನಗಳೆಲ್ಲ ತಮ್ಮ ಚಿರನೂತನವೂ ಸಾರ್ವಕಾಲಿಕವೂ ಆಗಿರಬಲ್ಲ ಶಕ್ತಿಯ ಮೂಲಕ ಕವಿಯ ತ್ರಿಕಾಲ ಜ್ಞಾನ ಸಂಪನ್ನತೆ ಹಾಗೂ ಕಾವ್ಯಪ್ರತಿಭೆಗೆ ಸಾಕ್ಷಿಯಾಗುತ್ತವೆ. ಈ ಒಂದೊಂದೂ ಕವನ, ಮಹಾಕಾವ್ಯದ ಆಲ ಅಗಲಕ್ಕೆ ಹಬ್ಬಬಲ್ಲುವು- ಇದು ಶ್ರೀ ಸೋಮಶೇಖರ ಇಮ್ರಾಪೂರ ರವರ ಅಭಿಪ್ರಾಯ.  

           ಶ್ರೀ ಬಸವರಾಜ ಸಾದರ ಅವರು ಬೇಂದ್ರೆಯವರ ದಾಂಪತ್ಯದ ಪರಿಕಲ್ಪನೆಯನ್ನು ಹೀಗೆ ಹೇಳುತ್ತಾರೆ.
"ನಾನು ಬಡವಿ ಆತ ಬಡವ ಒಲವೆ ನಮ್ಮ ಜೀವನ... "
ಪತಿ-ಪತ್ನಿಯ ನಡುವಿನ ಬಂಧದ ಚಂದ ಹೀಗೆ ವರ್ಣಿಸುತ್ತಾ ಪತ್ನಿಯನ್ನು "ಅಂತಃಪಟದಾಚೆ ವಿಧಿ ತಂದ ವಧು ನೀನು" ಅನ್ನುತ್ತಾರೆ.
ಸಪ್ಪೆ ಬಾಳುವೆಗಿಂತ ಉಪ್ಪುನೀರೂ ಲೇಸು
ಬಿಚ್ಚುಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ
ಮುತ್ತಿನ ತವರ್ಮನೆ ಮುಟ್ಟನು ಮುಳುಗೋಣು ಬಾ..
ಬೇಂದ್ರೆ ಅನಿವರ್ಚನೀಯವಾದ ಆತ್ಮಸ್ಥೈರ್ಯವುಳ್ಳವರು. ಹತ್ತುಹಲವು ಆತಂಕಗಳ ನಡುವೆಯೂ  ಬದುಕನ್ನು ಸಪ್ಪೆ ಮಾಡಿಕೊಳ್ಳದೆಯೇ ಪ್ರಯತ್ನಶೀಲರಾಗಿ ಅರ್ಥಪೂರ್ಣವಾಗಿಯೇ ಬದುಕಿದವರು.

          ಅವರ ಭಾವಗೀತೆಗಳಲಿ ಅರಳಿದ ಪ್ರೇಮ ತತ್ವದ ಕುರಿತಾಗಿ ಸ್ವತಃ ಕವಿಯ ಜೊತೆಗೆ ಆ ಕವಿತೆಗಳ ಬಗ್ಗೆ ಸಂವಾದ ನಡೆಸಿದ ಡಾ. ರುಕ್ಮಿಣಿ ಪಾರ್ವತಿ ಅವರು ಹೀಗೆ ಬರೆಯುತ್ತಾರೆ.
" ಯಾಂತ್ರಿಕ ಯುಗದ ಯಾಂತ್ರಿಕ ಜೀವನದ ಚಿತ್ರಣದಲ್ಲೇ ಅಂಬಿಕಾತನಯರು ತೃಪ್ತರಾಗಿಲ್ಲ. ಅದರ ಆಳ ಅಗಲಗಳನ್ನು ಅವರು ಅರಿಯುವುದಕ್ಕೆ ಪ್ರಯತ್ನಿಸಿದ್ದಾರೆ. ಈ ಪ್ರಯತ್ನದ ನಾನಾ ಹಂತಗಳೇ ಕಾವ್ಯಗಳಾಗಿ ಹೊಮ್ಮಿವೆ. ಇಂಥ ಅನಂತದ ಆಳವನ್ನು ಅರಿಯಲು ಹಾತೊರೆಯುವ ಕವಿಗೆ ಪ್ರಕೃತಿ ಸೌಂದರ್ಯ ಶಾಲಿನಿಯಾಗಿ ಮಾತ್ರ ಕಾಣದೆ ಅನಂತ ಸತ್ಯದೆಡೆಗೆ ಕರೆದೊಯ್ಯುವ ಮಾರ್ಗದರ್ಶಿನಿಯಾಗಿದೆ. ಅಂತೇ ಅಂಬಿಕಾತನಯರು ಪ್ರಕೃತಿಯನ್ನು ಕಂಡ ರೀತಿ ಹೊಸದು.
ಅಂಬಿಕಾತನಯರು ಬಾಳನ್ನು ಸ್ಸಾಕ್ಷಿಯಾಗಿ ನಿಂತು ನೋಡಿದ್ದಾರೆ. ಅಲ್ಲಿಯ ಅಜ್ಞಾನ ದುಃಖವನ್ನು ಕಂಡು ನೊಂದಿದ್ದಾರೆ. ಉದ್ವೇಗಿತರಾಗಿದ್ದಾರೆ. ಆದರೆ ಬಾಳಿನಲ್ಲಿ ಕವಿಗೆ ಅಶ್ರದ್ಧೆ ಉಂಟಾಗಲಿಲ್ಲ.
ಅಂಬಿಕಾತನಯರ ಆಂತರಿಕ ವಿಕಾಸವಾದ ಹಾಗೆ ಅವರ ಪ್ರತಿಭೆ, ಹೊಸಹೊಸ ರೂಪಕಗಳನ್ನು ಸೃಷ್ಟಿಸಿ ಅವರ ತಾತ್ವಿಕ ವಿಚಾರಕ್ಕೆ ಅನನ್ಯ ಅಸಾಧಾರಣವಾದ ಸೌಂದರ್ಯವನ್ನು ತಂದುಕೊಟ್ಟಿದೆ. "

             ಶ್ರೀಯುತ ಎನ್ಕೆಯವರು ಕವಿಯ ಬಗ್ಗೆ ಬರೆಯುತ್ತಾ ಹೀಗನ್ನುತ್ತಾರೆ.  "ಬೇಂದ್ರೆಯವರ ಗದ್ಯವೆಂದರೆ ಕವಿ ಬರೆಯುವ ಗದ್ಯ, ಅದರಲ್ಲಿ ಪದ್ಯದ ಛಂದ, ಲಯ, ಬೆಡಗು ಬಿನ್ನಾಣಗಳೂ ಇರುತ್ತವೆ.

          ಕವನಗಳಷ್ಟೇ ಅಲ್ಲದೆ ಬೇಂದ್ರೆಯವರು ಸಾಯೋ ಆಟ, ತಿರುಕರ ಪಿಡುಗು, ದೆವ್ವದ ಮನೆ ಮುಂತಾದ ವ್ಯಂಗ್ಯ ನಾಟಕಗಳು, ಉದ್ಧಾರ, ನಗೆಯ ಹೊಗೆ ಮುಂತಾದ ತೀಕ್ಷ್ಣ ವಿಶ್ಲೇಷಣೆಯುಳ್ಳ ನಾಟಕಗಳೂ ಸೇರಿದಂತೆ ಹದಿನಾರು ಅತ್ಯುತ್ತಮ ನಾಟಕಗಳನ್ನು ಬರೆದಿದ್ದಾರೆ.  ಹುಚ್ಚಾಟಗಳು ಅನ್ನುವ ಸಂಕಲನದಲ್ಲಿ ಹಲವು ನಾಟಕಗಳು ಅಳವಡಿಸಲ್ಪಟ್ಟಿವೆ.
          ಅರವಿಂದರ ಇಂಡಿಯನ್ ರೆನೆಸ್ಯೆನ್ಸ್ ಅನ್ನುವ ಕೃತಿಯನ್ನು ಭಾರತೀಯ ನವಜನ್ಮ ಎನ್ನುವ ಹೆಸರಿನಲ್ಲಿ ಕನ್ನಡಿಸಿದ್ದುಅರವಿಂದರ ಕಬೀರರ ವಚನಗಳನ್ನು ಅನುವಾದಿಸಿದ್ದು, ಕನ್ನಡದ ಮೇಘದೂತ- ಇನ್ನೂ ಅನೇಕ ವಿಮರ್ಶೆ, ಪ್ರಬಂಧಸಂಶೋಧನೆ, ಸಣ್ಣಕತೆ ಮುಂತಾದವೆಲ್ಲ ಬೇಂದ್ರೆಯವರು ರಚಿಸಿದ ಗದ್ಯ ಪ್ರಕಾರಗಳು.

-ಸಾಹಿತ್ಯ ಅಧ್ಯಾತ್ಮ ದೀಕ್ಷಿತವಾಗಬೇಕು
-ಸಾಹಿತ್ಯವು ಹಠಯೋಗವಲ್ಲ, ರಸಯೋಗ. ರಸ ಮತ್ತು ಜನ್ಮ ಬೇರೆಬೇರೆಯಲ್ಲ
-ಸಾಹಿತ್ಯ ಶೈಲಿಯ ಸೊಗಸಲ್ಲ, ರಂಜನೆಯ ರಸವಲ್ಲ, ಸಿಂಗರದ ಸಡಗರವಲ್ಲ. ಸತ್ಯವು ಅಮೃತವಾಗುವುದು ಇಲ್ಲಿ. ಇಲ್ಲಿ ಸತ್ಯೋಪಾಸನೆಯೂ ಬೇಕು, ನಿತ್ಯೋಪಾಸನೆಯೂ
ಬೇಕು.
-ಬುದ್ಧಿಯೋಗ ಭಾವಯೋಗ ಇವೆರಡು ಸಾಹಿತ್ಯದ ಎರಡು ಪಕ್ಷಗಳು..
-ಶಬ್ದಾರ್ಥ ದಾಂಪತ್ಯದ ಬೀಜರಹಸ್ಯವನ್ನು ಅರಿತುಕೊಂಡದ್ದಾದರೆ ಶಬ್ದವು ಮಂತ್ರವಾದೀತು, ಅರ್ಥವು ಕೇವಲ ಮಾನಸಿಕ ಆಕೃತಿಯಾಗುಳಿಯದೆ ಸಜೀವವಾಗಿ ಪರಿಣಮಿಸೀತು.


          ಇವೇ ಇಂತಹ ಸಾಹಿತ್ಯ ರಚನೆಯ ಮಾರ್ಗದಲ್ಲಿ ದಾರಿದೀಪವಾಗಬಲ್ಲ ಮಾತುಗಳ ಮೂಲಕ ಮತ್ತು ತನ್ನ ಅಪ್ಪಟ ಪ್ರೀತಿ ತುಂಬಿದ ಬರವಣಿಗೆಯ ಮಾಂತ್ರಿಕ ಶಕ್ತಿಯ ಮೂಲಕ ಕನ್ನಡ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸಿದ ಈ ಮಹಾನ್ ಚೇತನಕ್ಕೆ ಈ ಜನವರಿ ಮೂವತ್ತೊಂದಕ್ಕೆ ನೂರಿಪ್ಪತ್ತು ತುಂಬುತ್ತದೆ. ಅಂದಿಗೂ, ಇಂದಿಗೂ, ಬಹುಶಃ ಮುಂದಿಗೂ ಪ್ರತಿಭೆ, ಅಭಿವ್ಯಕ್ತಿ ಹಾಗೂ ಮನುಷ್ಯ ಪ್ರೀತಿ ಇವೆಲ್ಲ ವಿಷಯಗಳಲ್ಲೂ ಅನುಪಮರೆನಿಸುವ ಬೇಂದ್ರೆ ಮಾಸ್ತರರ ಅಂತಃಶಕ್ತಿಗೆ ಇದೊಂದು ಅಕ್ಷರನಮನ. 

Wednesday, July 22, 2015

ತಪ್ಪು ಗ್ರಹಿಕೆಗಳ ಬೆನ್ನು ಹತ್ತಿ: ಶ್ರೀಯುತ ಎಸ್ ಎಲ್ ಭೈರಪ್ಪನವರ ಕವಲು ಕಾದಂಬರಿಯ ಮಂಗಳಾ ಪಾತ್ರದ ವಿಶ್ಲೇಷಣೆ


---------------------------------------------------------------------------------------------------------------------------------------

ವೇದಿಕೆಯ ಮೇಲಿರುವ ಮತ್ತು ಸಭೆಯಲ್ಲಿರುವ ಹಿರಿಯರಿಗೆ ನಮನಗಳು, ಕಿರಿಯರಿಗೆ ಸಪ್ರೇಮ ವಂದನೆಗಳು.

ನಾನು ಬಾಲ್ಯ ಕಳೆದ ಹಳ್ಳಿಯಲ್ಲೆಲ್ಲ ಹುಲ್ಲಿನ ಮಾಡಿನ ಗುಡಿಸಲುಗಳಿರುತ್ತಿದ್ದವು. ವರ್ಷ ವರ್ಷವೂ ಮಾಡಿಗೆ ಹೊಸ ಹುಲ್ಲು ಹೊಚ್ಚಿಸುತ್ತಿದ್ದರು. ಕಳೆದ ವರ್ಷ ಬಿಸಿಲಿಗೆ ಒಣಗಿ ಪುಡಿಪುಡಿಯಾಗಿ, ಮಳೆಯಲ್ಲಿ ನೆಂದು ಮುದ್ದೆಯಾದ ಹುಲ್ಲನ್ನು ಬಿಚ್ಚಿ ಹೊಸ ಹುಲ್ಲಿಂದ ಮಾಡನ್ನು ಕಟ್ಟುವ ಈ ಕೆಲಸ ರಾತ್ರಿಗಿಂತ ಮುಂಚೆ ಮುಗಿಸಿಬಿಡುತ್ತಿದ್ದರು. ಒಂದು ಕಡೆಯಲ್ಲಿ ಹೀಗೆ ಹುಲ್ಲು ಹೊಚ್ಚಿಸುವ ಕಾರ್ಯಕ್ರ,ಮ ರಾತ್ರಿಯಾಗುವವರೆಗೂ ಮುಂದುವರೆಯಿತಂತೆ. ಬುಡ್ಡಿ ದೀಪದ ಬೆಳಕಲ್ಲಿ ಅವಸರವಸರವಾಗಿ ಕೆಲಸ ಮುಗಿಸುತ್ತಿದ್ದವರಲ್ಲೊಬ್ಬರಿಗೆ ಇನ್ನೊಂದೇ ಒಂದು ಕಡೆ ಹುಲ್ಲು ಬಿಗಿದು ಗಂಟು ಕಟ್ಟುವಷ್ಟು ಹಗ್ಗದ ಅಗತ್ಯವಿತ್ತಂತೆ. ಪಕ್ಕದಲ್ಲಿಟ್ಟುಕೊಂಡಿದ್ದ ಹಗ್ಗದ ಉಂಡೆ ಖಾಲಿಯಾಗಿತ್ತು, ಅಲ್ಲೇ ಸ್ವಲ್ಪ ಆಚೆ ನೇತಾಡುತ್ತಿದ್ದ ಒಂದು ತುಂಡು ಹಗ್ಗವನ್ನು ತೆಗೆದು ಹುಲ್ಲನ್ನು ಬಿಗಿದು ಕಟ್ಟಿ ಕೆಲಸ ಮುಗಿಸಿದರಂತೆ. ಕಣ್ತುಂಬ ನಿದ್ದೆ ಮಾಡಿ ಎದ್ದ ಆತ ಮಾರನೆಯ ಬೆಳಿಗ್ಗೆ ನೋಡುವಾಗ ಆ ಹಗ್ಗವೆಂದು ತಾವು ಅಂದುಕೊಂಡು ಬಿಗಿದದ್ದು ಒಂದು ಹಾವನ್ನ ಅಂತ ಗೊತ್ತಾದ ತಕ್ಷಣ ಭಯಕ್ಕೆ ಹೃದಯಾಘಾತವಾಗಿ ಬಿದ್ದವರು ಮತ್ತೇಳಲಿಲ್ಲವಂತೆ. ಈ ತಪ್ಪುಗ್ರಹಿಕೆಯೆಂಬುವದ್ದು ಎಷ್ಟು ಪ್ರಬಲವಾಗಿ ಪ್ರಭಾವ ಬೀರುತ್ತದೆ ಅನ್ನುವ ಮಾತು ಹೇಳಲಿಕ್ಕಾಗಿ ಈ ಸಂದರ್ಭ ಹೇಳಿದೆ. ಮುಂಚಿನ ದಿನ ಹಾವನ್ನು ಹಗ್ಗವೆಂದು ತಪ್ಪಾಗಿ ಗ್ರಹಿಸಿ ಕೆಲಸ ಮುಗಿಸಿ, ನಿರಾಳ ನಿದ್ರಿಸಿ ಎದ್ದಿದ್ದರು ಆತ. ಹಾವು ಕಚ್ಚಿರಲಿಲ್ಲ, ಕಚ್ಚಿದ್ದರೆ ಬೆಳಿಗ್ಗೆಯ ತನಕ ಆತ ಬದುಕಿರುತ್ತಿರಲಿಲ್ಲ. ಅದರೆ ಮಾರನೆಯ ದಿನ ಅಷ್ಟೊಂದು ಬಿಗಿದಾಗ ಹಾವು ಕಚ್ಚದೆ ಬಿಟ್ಟಿರುತ್ತದೆಯೇ, ಆಗಲೇ ರಾತ್ರಿ ಕೈಗೇನೋ ಚುಚ್ಚಿದಂತನಿಸಿತಲ್ಲವೇ? ಅಂತ ಸುಮ್ಮಸುಮ್ಮನೆ ಯೋಚಿಸಿದವರು ಕಚ್ಚಿಯೇಬಿಟ್ಟಿದೆಯೆಂಬ ನಿರ್ಧಾರಕ್ಕೆ ಬಂದೂ ಬಿಟ್ಟರು ಮತ್ತು  ಆ ತಪ್ಪುಗ್ರಹಿಕೆಗಾಗಿ ಪ್ರಾಣವನ್ನೂ ತೆತ್ತರು.

ಆತ್ಮೀಯರೇ, ನಾವಿಂದು ಇಲ್ಲಿ ಸಂಸ್ಕಾರಭಾರತಿಯ ಸಾಹಿತ್ಯ ವಿಧಾದ ಉದ್ಘಾಟನೆಯ ಸಲುವಾಗಿ ಸೇರಿದ್ದೇವೆ. ಈ ವಿಚಾರ ಸಂಕಿರಣದ ಸ್ತ್ರೀ ಚಿಂತನೆಯ ವಿವಿಧ ಆಯಾಮಗಳು ಎಂಬ ಎರಡನೆಯ ಗೋಷ್ಠಿಯಲ್ಲಿ ನಾನು "ತಪ್ಪುಗ್ರಹಿಕೆಯ ಬೆನ್ನು ಹತ್ತಿ" ಅನ್ನುವ ಶೀರ್ಷಿಕೆಯಡಿಯಲ್ಲಿ ಶ್ರೀಯುತ ಭೈರಪ್ಪರವರ ಕವಲು ಕಾದಂಬರಿಯ ಮುಖ್ಯವಾಗಿ ಮಂಗಳಾ ಎಂಬ ಪಾತ್ರದ ಬಗ್ಗೆ , ಅವಳ ಬದುಕಿನಲ್ಲಿ ತಪ್ಪುಗ್ರಹಿಕೆಗಳು ವಹಿಸಿದ ಪಾತ್ರದ ಬಗ್ಗೆ ಮಾತಾಡಲಿದ್ದೇನೆ. ಜೊತೆಗೆ ಒಂದು ಬರಹದ ಸಾರ್ಥಕತೆಯ ಹಾದಿಯಲ್ಲಿ ಓದುಗನ ಪಾತ್ರ ಮತ್ತು ಅವನು ಆ ಬರಹವನ್ನು ಗ್ರಹಿಸುವ ರೀತಿಯ ಪಾತ್ರವೇನು ಅನ್ನುವ ಬಗೆಗೂ ನನ್ನ ಅನಿಸಿಕೆಗಳನ್ನ ಹಂಚಿಕೊಳ್ಳಲಿದ್ದೇನೆ.


ಬಾಲ್ಯದಿಂದಲೇ ಭವಿಷ್ಯದಲ್ಲಿನ ಭೌತಿಕ ಅವಶ್ಯಕತೆಗಳನ್ನ ಪೂರೈಸಿಕೊಳ್ಳಲು ಬೇಕಾಗಿ ವಿದ್ಯಾಭ್ಯಾಸ, ಉದ್ಯೋಗವೇ ಮುಂತಾದುವುಗಳ ಮೂಲಕ ಹೇಗೆ ಪೂರ್ವತಯಾರಿ ಮಾಡಿಕೊಳ್ಳುತ್ತೇವೋ ಹಾಗೆಯೇ ಮಾನಸಿಕ ಅವಶ್ಯಕತೆಗಳಿಗೂ ಬೇಕಾಗಿ ಕೆಲವು ನಿಲುವುಗಳು ನಮ್ಮೊಳಗೆ ಕೆಲವೊಮ್ಮೆ  ಸಪ್ರಯತ್ನ, ಮತ್ತೆ ಕೆಲವೊಮ್ಮೆ ಅಪ್ರಯತ್ನ ರೂಪುಗೊಳ್ಳುತ್ತಾಹೋಗಿರುತ್ತವೆ. ಈ ಜೀವನದ ಬಗೆಗಿನ ನಿಲುವುಗಳು ಪ್ರತಿಯೊಬ್ಬನಿಗೂ ಎದುರಾಗುವ ಅನುಭವಗಳಿಗೆ ಅನುಸಾರವಾಗಿ ಹುಟ್ಟಿಕೊಳ್ಳುತ್ತವೆ. ನಮಗೆ ಸಂಬಂಧಿಸಿದಂತೆ ಎಲ್ಲ ಅನುಭವಗಳನ್ನೂ ಆಗುಹೋಗುಗಳನ್ನೂ ನೋಡಲು ಎರಡು ದೃಷ್ಟಿಕೋನಗಳು ನಮ್ಮೆದುರಿರುತ್ತವೆ, ಒಂದು ಅದು ನಮಗೆ ಎದುರಿನವರ ದೆಸೆಯಿಂದ ಪ್ರತಿಕೂಲವಾಗಿಯೋ, ಅನುಕೂಲವಾಗಿಯೋ ಸಂಭವಿಸಿಬಿಟ್ಟಿತು ಅನ್ನುತ್ತಾ, ಅವರನ್ನು ಬಾಧ್ಯರನ್ನಾಗಿ ಮಾಡುವದ್ದಾದರೆ, ಎರಡನೆಯದ್ದು ಎದುರಿನವರು ಹಾಗೆ ನಡೆದುಕೊಳ್ಳುವ ಹಾಗೆ ಮಾಡಿದ ಅವರ ಆ ಪರಿಸ್ಥಿತಿ ಯಾವುದು ಮತ್ತು ಅದರಲ್ಲಿ ನಮ್ಮ ಪಾತ್ರವೇನು ಅನ್ನುವದ್ದಾಗಿರುತ್ತದೆ. ಎರಡನೆಯ ದೃಷ್ಟಿಕೋನ ತನ್ನಂತೆ ಪರರ ಬಗೆದೊಡೆ.. ಅಂತ ಬಸವಣ್ಣನವರು ಹೇಳಿದ ಒಂದು ಉದಾತ್ತ ಚಿಂತನ ಶೈಲಿಯ ಕವಲೇ ಹೌದು, ಆದರೆ ನಮ್ಮಂಥ ಸಾಮಾನ್ಯ ಜನರಿಗೆ ಬಹಳ ಆದರ್ಶವಾದ ಅನ್ನಿಸುವಂತದ್ದೂ ಹೌದು. ಈ ನಿಟ್ಟಿನಲ್ಲಿ ವಿಷಯವನ್ನ ಗ್ರಹಿಸುವುದು ಬಹುಶಃ ಪರಿಸ್ಥಿತಿಯ ಬಗ್ಗೆ ನಮಗೆ ಸ್ವಲ್ಪ ಹೆಚ್ಚು ಸ್ಪಷ್ಟ ಮತ್ತು ಪೂರ್ವಗ್ರಹಪೀಡಿತವಲ್ಲದ ಚಿತ್ರಣ ಕೊಡಬಲ್ಲುದು ಅನಿಸುತ್ತದೆ. ಆದರೆ ಮಗುವಿದ್ದಾಗಿನಿಂದಲೇ ಪ್ರಕೃತಿ ಮನುಷ್ಯನಿಗೆ ಸ್ವಾನುಕಂಪವನ್ನು ಮತ್ತು ಅದರ ಮಾರ್ಗದರ್ಶನದಲ್ಲಿ ನಡೇದು ಪರರ ಅನುಕಂಪವನ್ನೂ ಗಳಿಸುವುದನ್ನು ಅತಿಪ್ರಿಯ ವಿಷಯವನ್ನಾಗಿ ಮಾಡಿಕೊಟ್ಟುಬಿಟ್ಟಿದೆ. ಹಾಗಾಗಿ ಸ್ವಾನುಕಂಪದ ಹಿನ್ನೆಲೆಯಲ್ಲಿಯೇ ಸಾಧಾರಣ ಮಟ್ಟಿಗೆ ನಾವು ಎಲ್ಲವನ್ನೂ ಎಲ್ಲರನ್ನೂ ಎದುರುಗೊಳ್ಳುತ್ತೇವಾದದ್ದರಿಂದ ಮೊದಲನೆಯ ದೃಷ್ಟಿಕೋನವನ್ನು ಅಪ್ಪಿಕೊಳ್ಳುವುದೇ ಹೆಚ್ಚು.  ನಮ್ಮ ವ್ಯಕ್ತಿತ್ವಕ್ಕೊಂದು ರೂಪುರೇಷೆ ಸಿಕ್ಕುವ ಯೌವ್ವನದ ಆರಂಭದ ದಿನಗಳಲ್ಲಿ ನಮಗೆ ವ್ಯತಿರಿಕ್ತವಾಗಿ ನಡೆಯುವ ಅಥವಾ ವ್ಯತಿರಿಕ್ತವಾದವುಗಳು ಅನ್ನಿಸುವ ಎಲ್ಲ ಘಟನೆಗಳೂ ಮನಸ್ಸಿನಲ್ಲಿ ರೋಷ, ದ್ವೇಷ, ಸೇಡು ಹೀಗೆ ಅಂತೂ ಒಂದು ನೇತ್ಯಾತ್ಮಕ ಮನೋಭಾವನೆಯನ್ನು ತಟ್ಟಂತ ಹುಟ್ಟುಹಾಕಿಬಿಡುತ್ತವೆ. ಮತ್ತು ಲೋಕವನ್ನು ಅರ್ಥೈಸುವ, ವಿವೇಚನೆಯಿಂದ ಪುನಃ ಯೋಚಿಸುವ ಗೋಜಿಗೆ ಹೋಗದೆ ಇಲ್ಲಿ ಯಾವುದೂ ಸರಿಯಿಲ್ಲ, ಎಷ್ಟಿದ್ದರೂ ಇದು ಹೀಗೇ ಬಿಡು ಎಂದು ನಿರ್ಧರಿಸಿಬಿಟ್ಟು ದೂರುವ ಪ್ರವೃತ್ತಿಯನ್ನ ಬೆಳೆಸಿಕೊಳ್ಳುತ್ತೇವೆ. ಇನ್ನು ಮನುಷ್ಯ ಸ್ವಲ್ಪಮಟ್ಟಿಗೆ ಬುದ್ಧಿವಂತ,  ಏನಾದರೂ ಸಾಧಿಸುವ ಹುಮ್ಮಸ್ಸು, ಸಾಧ್ಯತೆಗಳಿರುವವ, ಹಠವಾದಿ ಅಂತಾದರೆ ಮತ್ತೆ ಅವನಿಗೆ ಇತರರು ಕೆಲವರಿಗಿಂತಲಾದರೂ ತಾನು ಹೆಚ್ಚು ಬಲ್ಲವ ಅನ್ನುವದ್ದು ಗೊತ್ತಾಗಿಯೂಬಿಟ್ಟಿದ್ದರೆ ಮುಗಿಯಿತು ಕತೆ. ತನ್ನ ಮನಸು ಎದುರಿನ ಘಟನೆಯ ಬಗ್ಗೆ ಮೊದಲ ಪೆಟ್ಟಿಗೆ ಏನು ಹೇಳುತ್ತದೋ ಅದನ್ನು ಆತ ಪ್ರಶ್ನಿಸುವ, ಪುನರ್ವಿಮರ್ಶಿಸುವ ಗೋಜಿಗೇ ಹೋಗುವುದಿಲ್ಲ. ತಪ್ಪಾದದ್ದನ್ನ ತಿದ್ದಿಕೊಳ್ಳದಷ್ಟು ಮೂಢನಾಗಿರದಿದ್ದರೂ, ತಾನು ತಪ್ಪಾಗಿ ಗ್ರಹಿಸಿರಬಹುದು ಅನ್ನುವ ಯೋಚನೆಯೂ ಅವನಿಗೆ ಬರುವುದಿಲ್ಲ.  ಆ ಮೊದಲ ಕ್ಷಣದ ಯೋಚನೆಗೆ ಕಟ್ಟುಬಿದ್ದು ತೀರ್ಪು ಕೊಟ್ಟೇಬಿಡುತ್ತಾನೆ, ನಿರ್ಧಾರ ತೆಗೆದುಕೊಳ್ಳುತ್ತಾನೆ, ಅದರಂತೆ ನಡೆದುಕೊಂಡೂ ಬಿಡುತ್ತಾನೆ ಕೂಡ. ಎಷ್ಟೋಬಾರಿ ನಮ್ಮ ನಡವಳಿಕೆಯಲ್ಲಿ ಇಷ್ಟೊಂದು ತೀವ್ರತೆಯ ಅಗತ್ಯವಿತ್ತೇ ಅಂತ ನಮಗೆಲ್ಲ ಆಮೇಲಿನ ಕ್ಷಣಗಳಲ್ಲಿ ಅನ್ನಿಸಿದರೂ ಮಾತು ತಲುಪಿಯೇಬಿಟ್ಟಿರುತ್ತದೆ, ಘಟನೆ ನಡೆದೇಹೋಗಿರುತ್ತದೆ, ಬಿಲ್ಲಿನಿಂದ ಹೊರಟ ಬಾಣದ ಹಾಗೆ. ಅದರ ಪರಿಣಾಮವನ್ನು ತಪ್ಪಿಸಲಾಗಿರುವುದಿಲ್ಲ. ಇದು ಎಲ್ಲ ಬಾರಿಯೂ ಒಂದು ನಿರ್ದಿಷ್ಟ ವ್ಯಕ್ತಿತ್ವದ ಜೊತೆ ಹೀಗೇ ನಡೆದುಹೋಗುತ್ತದೆ ಅಂತಲೂ ಹೇಳಲಾಗುವುದಿಲ್ಲ. ಒಮ್ಮೊಮ್ಮೆ ತಟ್ಟನೆ ಪ್ರತಿಕ್ರಿಯಿಸುವವರೂ ನಿಧಾನಿಸಿ ಯೋಚಿಸಿಯಾರು, ಅಥವಾ ಯಾವಾಗಲೂ ಸಮಾಧಾನದಿಂದ ಇರುವವರು ಒಮ್ಮೊಮ್ಮೆ ತಟ್ಟನೆ ಪ್ರತಿಕ್ರಿಸಿಯಾರು. ಮತ್ತೆ ಮನಸೆಂಬ ಮರ್ಕಟನೇ ಸೂತ್ರಧಾರ ಅನ್ನುತ್ತೇನೆ ನಾನು.
ಮಂಗಳಾ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವಳು.  ಹೆಣ್ಣಿನ ಬಾಳಿನ ಸಾರ್ಥಕತೆ ಮದುವೆಯಲ್ಲಿ, ಗಂಡಿನ ಬಾಳು ರೂಪುಗೊಳ್ಳಬೇಕಾಗಿರುವುದೇ ದುಡಿಮೆಗಾಗಿ ಮತ್ತು ಯಾವುದೇ ಕಾರಣಕ್ಕೂ ದುಡಿಮೆಗಾಗದಿದ್ದರೆ ಆ ಹಾದಿ ಬೇಕಿಲ್ಲ ಅನ್ನುವ ಇವೇ ಈ ಎಲ್ಲ ಮಧ್ಯಮವರ್ಗದ ಮೂಲಭೂತವಾದಕ್ಕೆ ಅವಳ ಕುಟುಂಬವೂ ಹೊರತಾಗಿದ್ದಾಗಿರಲಿಲ್ಲ. ಬುದ್ಧಿ ಬಂದಾಗಿನಿಂದ ಅಮ್ಮನ ಕೈಯ್ಯಲ್ಲಿ ಅಜ್ಜಿಯ ಕೈಯ್ಯಲ್ಲಿ ಗಂಡುಮಕ್ಕಳ ಹಾಗೆ ಹೊರಗೆ ಕತ್ತಲಾಗುವವರೆಗೆ ಆಡಬಾರದು, ಗಂಡುಮಕ್ಕಳ ಜೊತೆ ಬೆರೆಯಬಾರದು ಅಂತ ವಿಧಿಸಲ್ಪಡುವ ಕಟ್ಟುಪಾಡುಗಳಲ್ಲಿ, ಪಕ್ಕದ ಮನೆ ನಾಗರಾಜ ನನ್ನಲ್ಲಿರುವುದು ನಿನ್ನಲ್ಲಿದೆಯೇನೇ ಅನ್ನುತ್ತಾ ಚಡ್ಡಿ ಕಳಚಿ ತೋರಿದಾಗ ತಾನು ಹಾಗೆ ತನ್ನತನವನ್ನು ಬಿಡುಬೀಸಾಗಿ ವ್ಯಕ್ತಪಡಿಸಲಾಗದ ಅಸಹಾಯಕತೆಯಲ್ಲಿ, ಮತ್ತೆ ಅವನ ಆ ಕೊಳಕು ಕೆಲಸವನ್ನ ಅವನ ತಾಯಿಯೆದುರು ಹೇಳಲಿಕ್ಕೂ ತನ್ನ ಸ್ತ್ರೀಸಹಜ ಲಜ್ಜೆ ಅಡ್ಡಿ ಬರುವ ಪರಿಸ್ಥಿತಿಯಲ್ಲಿ ಎಲ್ಲ ಕಡೆಗಳಲ್ಲಿ ಗಂಡಿಗೆ ಗಂಡು ಅನ್ನುವ ಒಂದೇ ಕಾರಣಕ್ಕಾಗಿ ಸಿಗುವ ಸ್ವಾತಂತ್ರ್ಯ-ಸೌಲಭ್ಯಗಳು ತನಗೆ ಹೆಣ್ಣು ಅನ್ನುವ ಒಂದೇ ಕಾರಣಕ್ಕಾಗಿ ಸಿಗುತ್ತಿಲ್ಲ ಅನ್ನುವ ಕೊರಗು ಕಾಣುತ್ತದೆ.  ಅವಳು ಬೆಳೆಯುತ್ತಾ ಸಮಾಜದ ಒಂದೊಂದು ನಡೆಗಳಲ್ಲೂ ತನಗೆಲ್ಲವೂ ಇಲ್ಲಿ ವಿರುದ್ಧವಾಗಿಯೇ ನಡೆಯುತ್ತಿದೆ ಅನ್ನುವ ಸಂಶಯದ ದೃಷ್ಟಿ ಮತ್ತೆ ಗಂಡಿನ ಕಡೆಗೆ ಒಂದು ಸಣ್ಣ ಅಸಹನೆ, ಸಿಟ್ಟು ಬೆಳೆಯುತ್ತಾ ಹೋಗುವುದಕ್ಕೂ ಕಾರಣ ಈ ಕೊರಗೇ.

ಶಾಲೆಯಲ್ಲಿ ಹುಡುಗಿಯಾಗಿದ್ದೂ ಮಂಗಳಾ ಸಾಧಿಸಿ ತೋರಿಸುವದ್ದು ಗಂಡುಮಕ್ಕಳ ಕೈಲಾಗುತ್ತಿಲ್ಲ ಅಂತ ಅಧ್ಯಾಪಕರು ಮತ್ತು ಒಬ್ಬರು ಅಧ್ಯಾಪಕಿಯೂ ಹೇಳುವಾಗ ಅವಳಿಗೆ ಸಾಮಾನ್ಯ ಎಲ್ಲ ಹೆಣ್ಣುಮಕ್ಕಳಿಗಾಗುವಂತೆ ಹೆಮ್ಮೆಯ ಮಾತೆನಿಸದೇ ಸಾಧನೆಯೆಂಬುದು ಗಂಡಿನ ಹಕ್ಕು ಆಗಿದ್ದಾಗ್ಯೂ ಹೆಣ್ಣು ಸಾಧನೆ ಮಾಡುವುದು ಒಂದು ವಿಶೇಷ ಅಂತಲೂ ಮತ್ತು ಆ ಮೂಲಕ ವಾಸ್ತವದಲ್ಲಿ ಹೆಣ್ಣೇನಿದ್ದರೂ ಗಂಡಿಗಿಂತ ಕೆಳಗಿರುವುದೇ ಸಹಜ ಎಂತಲೂ ಸಾರುವ ಪುರುಷಪ್ರಧಾನ ಸಮಾಜದ ಆತ್ಮರತಿಯಂತೆಯೂ, ಹೆಣ್ಣನ್ನ ಕಿರಿದಾಗಿಸಿ ತೋರುವ ಹುನ್ನಾರವೆಂಬಂತೆಯೂ ಕಾಣಿಸುವುದು ಮತ್ತು ನಾಗರಾಜ ಒಳ್ಳೆಯವನೇ, ಹೆಂಡತಿಯನ್ನೂ ಅವಳ ಕಡೆಯವರನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾನೆ ಅಂತ ಬಾಲ್ಯದ ಗೆಳತಿಯೊಬ್ಬಳು ಹೇಳಿದಾಗ ಅದೆಷ್ಟೋ ವರ್ಷಗಳ ನಂತರವೂ ಆತ ಮರೆತೇಬಿಟ್ಟಿರುವ ಆ ಘಟನೆಯ ಮೂಲಕ ಮಂಗಳಾ ಹಸಿಯಾಗಿರಿಸಿಕೊಂಡ ಆತನೆಡೆಗಿನ ಅಸಹನೆ ಅವನಿಗೆ ಮಾನಸಿಕ ಅಸ್ವಸ್ಥತೆಯನ್ನು ಆರೋಪಿಸಿಯೇಬಿಡುವಂತೆ ಮಾಡುವುದು, ಮತ್ತು ಹೆಂಡತಿಯ ತಂದೆಯ ಅಂತ್ಯಸಂಸ್ಕಾರವನ್ನು ತಾನೇ ಖರ್ಚು ಹಾಕಿ ಮಾಡಿದ್ದು ತನ್ನ ಬಿಟ್ಟರಿಲ್ಲವೆಂಬ ಅವನ ಮೇಲ್ ಇಗೋವನ್ನ ತಣಿಸಲಿಕ್ಕಾಗಿ ಅನ್ನುವ ನಿರ್ಧಾರ ತಳೆದುಬಿಡುವುದು- ಇವೆಲ್ಲವೂ ಅವಳ ಮನಸ್ಸಿನಲ್ಲಿ ಗಂಡಿನ ಮೇಲೆ ರಾಶಿಗುಡ್ಡೆಯಾಗುತ್ತಾ ಹೋಗುತ್ತಿರುವ ಅಪನಂಬಿಕೆಯನ್ನೂ, ಸಿಟ್ಟನ್ನೂ ತೋರಿಸುತ್ತವೆ.
ಮುಂದುವರೆದು ಮಗನ ಇಚ್ಛೆಯಂತೆ ಅವನನ್ನ ಇಂಜಿನಿಯರಿಂಗ್ ಓದಿಸಲು ಸಹಜವಾಗಿ ಒಪ್ಪುವ ಅಪ್ಪ ತನ್ನ ಇಷ್ಟದಂತೆ ಎಮ್ ಎ ಗೆ ಹಣ ಹೊಂದಿಸುವಲ್ಲಿ ಅಡಚಣೆಯ ಬಗ್ಗೆ ಮಾತಾಡುವಾಗ ದುಡಿದು ಸಂಪಾದಿಸಿಕೊಡಲಿರುವ ಗಂಡುಮಗನಿಗೆ ವಿದ್ಯಾಭ್ಯಾಸ ಉದ್ಯೋಗಗಳೆಲ್ಲವುದರಲ್ಲೂ ಆಯ್ಕೆಯ ಸ್ವಾತಂತ್ರ್ಯ ಕೊಡುವ ಸಮಾಜ ಹೆಣ್ಣಾಗಿರುವ ತನ್ನ ಆಕಾಂಕ್ಷೆಯನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರುವಲ್ಲಿ ಅವಳ ಮನಸಿನಲ್ಲಿ ತನಗೆ ಅನ್ಯಾಯವಾಗುತ್ತಿದೆಯೆನ್ನುವ ಭಾವ ಅಸಹನೆಯಾಗುತ್ತಾ ಹೋಗುತ್ತದೆ. ಹೆಣ್ಣಿಗೆ ಪ್ರಕೃತಿ ವಿಧಿಸಿರುವ ಹೆಣ್ತನದ ಬದ್ಧತೆಗಳೆನಿಸಿರುವ ಹೆರಿಗೆ, ಮೊಲೆಯೂಡುವಿಕೆಗಳು ಸಾಮಾನ್ಯ ಹೆಣ್ಣಿಗನಿಸುವ ಹಾಗೆ ಅವಳ ಪಾಲಿನ ವರಗಳೆನಿಸದೆ, ಹಿರಿಮೆ ಗರಿಮೆಗಳೆನಿಸದೆ ಮಂಗಳಾಗೆ ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟು, ದೇವತೆಯ ಪಟ್ಟ ಕೊಟ್ಟುಬಿಟ್ಟು ಹೇರಿದ ಕಠಿಣ ದುಡಿಮೆಗಳೆನಿಸಿಬಿಡುತ್ತವೆ. ತಂದೆತಾಯಿ ವಾಸ್ತವದಲ್ಲಿ ಬಿ ಇ ಹಣಗಳಿಕೆಗೆ ಒದಗುತ್ತದೆ, ಎಮ್ ಎ ಯಲ್ಲ ಅನ್ನುವ ತೀರಾ ಸಾಮಾನ್ಯ ಸತ್ಯದ ಅಧಾರದ ಮೇಲೆ ಅವಳಿಗೆ ಅವಳ ಇಚ್ಛೆಯ ವಿದ್ಯಾಭ್ಯಾಸವನ್ನು ನಿರಾಕರಿಸುತ್ತಾರಾದರೂ ಅವಳು ತಾನು ಹೆಣ್ಣು, ಮದುವೆಯಾಗಿ ಹೋಗಲಿರುವವಳು ಅನ್ನುವ ಕಾರಣಕ್ಕಾಗಿ ನಿರಾಕರಿಸುತ್ತಾರೆ ಅನ್ನುವ ತಪ್ಪುಗ್ರಹಿಕೆಗೆ ಕಟ್ಟುಬಿದ್ದು ಮದುವೆ, ತಾಯ್ತನವೇ ಮುಂತಾದುವುಗಳ ಕಡೆಗೆ ಒಂದು ಶಿಕ್ಷೆ ಎನ್ನುವ ನಿಲುವನ್ನ ಬೆಳೆಸಿಕೊಳ್ಳುತ್ತಾಳೆ.
ಮಂಗಳಾ ಬುದ್ಧಿವಂತೆಯೂ ಹೌದು. ತನ್ನನ್ನು ತನ್ನ ಹಕ್ಕುಗಳಿಂದ ಗಂಡಿನೆದುರು ವಂಚಿತಳನ್ನಾಗಿ ಮಾಡುತ್ತಿರುವ ಸಮಾಜದೆದುರು ತನ್ನ ಬುದ್ಧಿವಂತಿಕೆಯನ್ನು ಬಿಂಬಿಸಿಕೊಳ್ಳುವ ಸಲುವಾಗಿ ಮಾತುಮಾತಿಗೆ ಸಿಗ್ಮಂಡ್ ಫ್ರಾಯ್ಡ್ ನನ್ನು ತನ್ನೆದುರಿಗೇ ಎಳೆದು ತಂದುಕೊಳ್ಳುತ್ತಾಳೆ. ಪಾಶ್ಚಾತ್ಯ ಸಂಸ್ಕೃತಿ, ಸಾಹಿತ್ಯ, ಭಾಷೆ, ಪಾಶ್ಚಾತ್ಯ ತಜ್ಞರು ಮಂಡಿಸಿರುವ ಸಿದ್ಧಾಂತಗಳನ್ನು ಓದಿಕೊಂಡವರೇ ಮೇಲ್ಮಟ್ಟದ ಜ್ಞಾನ ಹೊಂದಿರುವವರು ಅನ್ನುವ ತಪ್ಪು ತಿಳುವಳಿಕೆಯ ಹಿನ್ನೆಲೆಯಲ್ಲಿ ಗಂಡಿನ ಮನಸನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಅಂದುಕೊಳ್ಳುತ್ತಾ ತನ್ನ ನಿಲುವಿಗೆ ಸರಿಯಾಗಿ ಅವನನ್ನು ಅರ್ಥೈಸಲು ಬೇಕಾಗಿ ಫ್ರಾಯ್ಡ್ ನ ಸಿದ್ಧಾಂತಗಳನ್ನು ಉಪಯೋಗಿಸಿಕೊಳ್ಳುತ್ತಾಳೆ, ಉಲ್ಲೇಖಿಸುತ್ತಾಳೆ. ಹಾಗೆ ಅರ್ಧದಷ್ಟು ಹಾಲಿರುವ  ಗ್ಲಾಸಿಗೆ ಅರ್ಧ ತುಂಬಿದೆ ಎನ್ನುವ ಹಾಗೂ ಅರ್ಧ ಖಾಲಿಯಿದೆ ಅನ್ನುವ ಎರಡು ಆಯಾಮಗಳಿರುವ ಹಾಗೆ ಗಂಡಿನ ಸ್ವಭಾವಕ್ಕೂ ಇರಬಹುದಾದ ಇನ್ನೊಂದು ಆಯಾಮವನ್ನು ಯೋಚಿಸದೆಯೇ ಎಲ್ಲ ಕಡೆಗಳಲ್ಲೂ ತನ್ನ ಔನ್ನತ್ಯಕ್ಕೆ ಕಂಟಕಪ್ರಾಯನಾಗಿಯೇ ಅವನ ಅಸ್ತಿತ್ವವಿರುವುದು ಅನ್ನುವ ಮನೋಭಾವ ಬೆಳೆಸಿಕೊಂಡುಬಿಡುತ್ತಾಳೆ.
ಸ್ನಾತಕೋತ್ತರ ವಿದ್ಯಾಭ್ಯಾಸದ ಹೊತ್ತಿನಲ್ಲಿ ಬಂಡಾಯವಾದ, ದಲಿತವಾದ, ಮಹಿಳಾವಾದಗಳೇ ಮುಂತಾದುವುಗಳು ಮತ್ತು ಅವನ್ನ ಪ್ರಚೋದನಕಾರಿ ರೀತಿಯಲ್ಲಿ ಬೋಧಿಸುವ ಅಧ್ಯಾಪಕವರ್ಗ ಮೊದಲೇ ಸ್ವಾನುಕಂಪದ ಮಸುಕು ದೃಷ್ಟಿಯುಳ್ಳ ಅವಳು ಈ ವಾದಗಳನ್ನು ತಪ್ಪಾಗಿ ಗ್ರಹಿಸುವ ಹಾಗೆ ಮಾಡುತ್ತವೆ. ಇದು ಅವಳೊಳಗೆ ಶೋಷಣೆಯ ಸಾಧ್ಯತೆಗಳನ್ನು ಊಹಿಸಿಕೊಳ್ಳುತ್ತಾ ಸದಾ ಎಚ್ಚರಗಣ್ಣಲ್ಲಿ ಬದುಕುವುದು ಮತ್ತು ಎಲ್ಲ ಸಂಭಾವ್ಯ ಎಡೆಗಳಲ್ಲೂ ತನ್ನ ಮೇಲೆ ಶೋಷಣೆಯೊಂದು ನಡೆಯುವ ಹುನ್ನಾರವಿದೆಯೇ ಎಂಬ ಸಂಶಯ ಮೊಳೆಯಿಸಿಕೊಳ್ಳುವುದನ್ನ ಹುಟ್ಟುಹಾಕುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸರಿಯೆನಿಸುವ ಆದರೆ ನಮ್ಮ ನೆಲದಲ್ಲಿ ಒಂದಿಷ್ಟೂ ಒಪ್ಪಿಗೆಯಾಗದ ಕೆಲವು ವಿಚಾರಗಳನ್ನು ಶಾರನ್ ಅನ್ನುವ ಮಿಡ್ ಲ್ಯಾಂಡ್ ನ ಹೆಣ್ಣುಮಗಳೊಬ್ಬಳ ಕತೆಯ ಮೂಲಕ ವೈಭವೀಕರಿಸುವ ಮತ್ತು ಆ ಮೂಲಕ ನಮ್ಮ ನೆಲದ ಮೌಲ್ಯಗಳನ್ನು ಹಳಿಯುವ ಇಳಾ ಮ್ಯಾಡಮ್ ನಮ್ಮ ಸಂಸ್ಕೃತಿ ಅನಿಸಿಕೊಳ್ಳುವ ಎಲ್ಲದರ ಕಡೆಗೂ ತಿರಸ್ಕಾರ ಬೆಳೆಸಿಕೊಳ್ಳುವಂತೆ ಮಾಡುತ್ತಾರೆ. ಈ ತಪ್ಪುಗ್ರಹಿಕೆಯ ಅಡಿಯಲ್ಲಿ ಮಿಡ್ ಲ್ಯಾಂಡ್ ನಲ್ಲಿ ತೀರಾ ಸಾಮಾನ್ಯವೆಂಬಂತೆ ಪರಿಗಣಿಸಲ್ಪಡುವ ಎಷ್ಟೋ ವಿಷಯಗಳು ನಮ್ಮ ನೆಲದಲ್ಲಿ ಅಪರಾಧವೆಂಬಂತೆ ನೋಡಲ್ಪಡುತ್ತವೆ ಮತ್ತು ಅದರ ಪರಿಣಾಮ ಇಲ್ಲಿ ತನಗೆ ತೀರಾ ಹಾನಿಕಾರಕವಾಗಿರುತ್ತದೆ ಅನ್ನುವ ಮಾತು ಮಂಗಳಾಳಿಗೆ ಹೊಳೆಯದೆಯೇ ಹೋಗುತ್ತದೆ. ಈ ಹಂತದಲ್ಲಿ ಮಂಗಳಾ ಲೈಂಗಿಕ ಸ್ವಾತಂತ್ರ್ಯದ ವಿಷಯದಲ್ಲಿ ಎಲ್ಲಿಯೂ ಯಾವುದೂ ಕೂಡ ಅಂಥ ಸರಿಪಡಿಸಲಾಗದಂಥ ತಪ್ಪು ಎಂಬುದಿಲ್ಲ ಅನ್ನುವ ನಿಲುವನ್ನು ತಳೆದುಬಿಡುತ್ತಾಳೆ. ಪ್ರಭಾಕರನ ಮರುಳಾಗಿಸುವ ಮಾತುಗಳ ಜೊತೆ ತನ್ನ ವಯೋಸಹಜ ಆತುರತೆಯೂ ಸೇರಿಕೊಂಡು ತನ್ನ ಆ ನಿಲುವಿನ ಬೆಂಬಲದಿಂದ ದೈಹಿಕ ಸಂಫರ್ಕಕ್ಕೆ ಒಪ್ಪುತ್ತಾಳೆ. ಗರ್ಭಿಣಿಯಾಗಿ, ಅದನ್ನು ತೆಗೆಸಬೇಕಾಗಿ ಬಂದಾಗ ಮತ್ತೆ ತಾನು ತನ್ನ ಬಸಿರಿನ ಮೇಲಿನ ಪ್ರೀತಿ ಹಾಗೂ ವಾಸ್ತವಿಕತೆಯೆರಡರ ನಡುವಿನ ದ್ವಂದ್ವ ಅನುಭವಿಸಬೇಕಾದಲ್ಲಿ ಮತ್ತು ಕ್ಲೀನ್ ಮಾಡಿಸಿಬಿಡು ಅಂತ ಸಹಜವಾಗಿಯೇ ಪ್ರಭಾಕರ ಉಪಯೋಗಿಸುವ ಪದಗಳಲ್ಲಿ "ಗಂಡಸು ತನ್ನ  ಯಜಮಾನಿಕೆ ದಬ್ಬಾಳಿಕೆಗಳನ್ನ ಮೆರೆಯುತ್ತಾ ಹೆಣ್ಣಿನ ಶಕ್ತಿಕೇಂದ್ರವೆನಿಸಿದ ತಾಯ್ತನವನ್ನು ಡರ್ಟಿ ಎಂದು ಭಾವಿಸಿ ಅದನ್ನ ಕ್ಲೀನ್ ಮಾಡಿಸುವಾ ಅಂತನ್ನುವಾಗ ಅವಳದೊಂದು ಅಭಿಪ್ರಾಯವನ್ನೂ ಕೇಳುವಷ್ಟೂ ಸೌಜನ್ಯವಿಲ್ಲದೆ ಹೋಗುತ್ತಾನೆ" ಅನ್ನುವ ಏಕಮುಖ ಅಭಿಪ್ರಾಯವನ್ನೇ ಆಶ್ರಯಿಸುತ್ತಾಳೆ. ಇನ್ನಷ್ಟು ಗಂಡು ಜಾತಿಯ ಕಡೆಗೆ ಅಸಹ್ಯ ಭಾವವನ್ನು ಮತ್ತು ಸಿಟ್ಟನ್ನು ಬೆಳೆಸಿಕೊಳ್ಳುತ್ತಾಳೆ. ಪ್ರಭಾಕರ ಹೇಳದೆ ಇದ್ದಿದ್ದರೂ ತನಗೆ ಅದಲ್ಲದೆ ಬೇರೆ ದಾರಿಯಿಲ್ಲ ಅಂತಲೂ, ತನ್ನ ಈ ಪರಿಸ್ಥಿತಿಯಲ್ಲಿ ತನ್ನದೇನಿತ್ತು ಪಾತ್ರ ಅನ್ನುವ ಬಗ್ಗೆ ಮತ್ತು ಬಸಿರನ್ನು ಉಳಿಸಿಕೊಂಡರೆ ಮುಂದೆ ಈ ನೆಲದಲ್ಲಿ ತನಗೆದುರಾಗುವ ಸಮಸ್ಯೆಗಳ ಬಗೆಗೂ ಯೋಚಿಸಿದ್ದರೆ ಪ್ರಭಾಕರ ಇದಲ್ಲದೆ ಇನ್ನೇನು ಹೇಳಲು ಸಾಧ್ಯವಿತ್ತು ಅನ್ನುವ ಮಾತು ಅವಳಿಗೆ ಹೊಳೆದಿರುತ್ತಿತ್ತು. ಇನ್ನೊಂದೇನಂದರೆ ತಾಯ್ತನವನ್ನು ಹೆಣ್ಣು ಜನ್ಮಕ್ಕೊಂದು ಶಿಕ್ಷೆಯೆಂದು ಕರೆಯುತ್ತಿದ್ದ ಇದೇ ಮನಸು ತನಗೇ ಅದರ ಅನುಭವವಾದಾಗ ತನ್ನ ಬಸಿರು ತನ್ನ ಶಕ್ತಿಕೇಂದ್ರ ಅಂತ ತಿರುಗುವುದನ್ನು ಗಮನಿಸಿದಾಗ ಮಂಗಳಾ ಹೆಣ್ಣಿನ ಸಹಜ ಕೋಮಲತೆ ಮತ್ತು ಬಲವಂತವಾಗಿ ರೂಢಿಸಿಕೊಳ್ಳಲು ಯತ್ನಿಸುತ್ತಿರುವ ಗಡಸುತನ ಈ ಎರಡರಲ್ಲಿ ಒಂದನ್ನೂ ಪೂರ್ತಿಯಾಗಿ ಅಪ್ಪಲಾರದೆ ಒದ್ದಾಡುತ್ತಿದ್ದಾಳೆ ಅನ್ನಿಸದೆ ಇರುವುದಿಲ್ಲ. ಸ್ನಾತಕೋತ್ತರ ಪದವಿ ಪಡೆದುಕೊಂಡ ಆನಂತರ ಇಳಾ ಮೇಡಮ್ ತನ್ನ ಹಾಗೂ ಪ್ರಭಾಕರನ ವಿಷಯ ತಿಳಿದಾಗ ಅವನನ್ನೇ ಮದುವೆಯಾಗಬೇಕಿತ್ತು ಅನ್ನುತ್ತಾರೆ. ಒತ್ತಾಯಿಸಿ ಮದುವೆಯಾದರೆ ಪ್ರೀತಿ ಇರುವುದೇ ಎಂದು ಕೇಳುತ್ತಾಳೆ ಮಂಗಳಾ. "ಬೇರೆ ಹೆಂಗಸಿನ ಸಂಪರ್ಕವಾಗದ ಹಾಗೆ ದಿಗ್ಬಂಧನ ವಿಧಿಸಿ ದಾಂಪತ್ಯದ ಬಂಧನದೊಳಗೆ ಕೂಡಿಹಾಕಿದರೆ ಪ್ರೀತಿಸದೆ ಬೇರೆ ದಾರಿಯೇ ಇಲ್ಲ ವೈವಾಹಿಕ ಪ್ರೀತಿಯ ಒಳನಾಡಿ ಇದೇ" ಅಂತ ಅಧ್ಯಾಪಿಕೆಯಾದ ಅವರು ಹೇಳಿದಾಗ ಒಪ್ಪಲೊಲ್ಲದ ಮನಸಲ್ಲೂ ಆ ಮಾತು ಅಚ್ಚೊತ್ತುತ್ತದೆ ಮತ್ತು ವೈವಾಹಿಕ ಬದುಕೆಂದರೆ ಹೀಗೇ ಅನ್ನುವ ಇನ್ನೊಂದು ತಪ್ಪುಗ್ರಹಿಕೆ ಬೇರೂರಿಬಿಡುತ್ತದೆ. "ಹೆಂಗಸನ್ನ ಮುಟ್ಟುವ ಮೊದಲು ಗಂಡಸು ಅದರ ಪರಿಣಾಮದ ಬಗ್ಗೆ ಯೋಚಿಸಿ ಬದ್ಧನಾಗಬೇಕು, ಗಂಡಸಿಗೆ ಬುದ್ಧಿ ಕಲಿಸುವ ಸಾಕಷ್ಟು ಕಾನೂನಿದೆ"  ಅವಳ ಮನಸಲ್ಲಿ ಬೇರೂರುವ ಇಳಾ ಮೇಡಮ್ ರವರ ಈ ಇನ್ನೊಂದು ಮಾತು  ವಿವಾಹಿತ ಗಂಡು-ಹೆಣ್ಣಿನ ಪ್ರೀತಿಯಲ್ಲಿರಬೇಕಾದ ಮಾರ್ದವತೆಯ ಅಂಶವನ್ನು ಅಲ್ಲಿ ಪೂರ್ತಿ ಮರೆಮಾಡಿ ತನ್ನನ್ನು ತಾನು ಸಂರಕ್ಷಿಸಿಕೊಬೇಕಾದ ಅಗತ್ಯ ಮತ್ತು ಉಪಾಯಗಳ ಬಗೆಗಿನ ಚಿಂತನೆಯನ್ನಷ್ಟೇ ದೃಢ ಮಾಡಿಕೊಡುತ್ತದೆ. ಈ ಎಲ್ಲ ವಿಚಾರಗಳು ಗಂಡು ಎಂದರೆ ಒಂದು ಅಪಾಯ ಮತ್ತು ಆ ಅಪಾಯವನ್ನು ತುಂಬ ಹುಶಾರಾಗಿ ನಿಭಾಯಿಸಬೇಕು ಮತ್ತು ಬದುಕಿನಲ್ಲಿ ಯಾವಾಗಲೂ ಅವನನ್ನು ಸೋಲಿಸಿ ತಾನು ಗೆಲ್ಲುವುದೇ ಮುಖ್ಯವಾಗಬೇಕು, ಅನ್ನುವ ತೀರ್ಪನ್ನು ಕೊಟ್ಟುಬಿಡುತ್ತದೆ. ಇದು ಬದುಕಿನ ಕಡೆಗೆ ಅವಳು ಕಂಡುಕೊಂಡ ಅತಿದೊಡ್ಡ ತಪ್ಪುಗ್ರಹಿಕೆ. ಈ ತಪ್ಪುಗ್ರಹಿಕೆ ಮುಂದೆ ಜಯಕುಮಾರನ ಜೊತೆಗಿನ ಅವಳ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸುಳ್ಳು ಹೇಳಿ ಅವನನ್ನು ತಪ್ಪಿಗೆ ಸಿಲುಕಿಸುವಲ್ಲಿ, ಅವನ ಮೇಲೆ ಪೋಲೀಸ್ ಕೇಸ್ ಹಾಕಿ ಅವಮಾನಿಸುವಲ್ಲಿ, ಅವನ ಮೊದಲ ಹೆಂಡತಿ ಮತ್ತು ಮಗಳ ಕಡೆಗೆ ಸದಾ ವಿಷ ಕಾರುತ್ತಾ ಅವನನ್ನು ಸಂಕಟಕ್ಕೀಡುಮಾಡುವಲ್ಲಿ ಗಂಡನ್ನು ಸೋಲಿಸಿದೆ ಅನ್ನುವ ತೃಪ್ತಿಯನ್ನೂ, ಕಡೆಗೆ ಅವನ ಆಸ್ತಿಯನ್ನು ಹೊಡೆದುಕೊಳ್ಳುತ್ತಾ ತನಗೆ, ತನ್ನ ಮಗನಿಗೆ ಅವನು ಮಾಡಹೊರಟಿದ್ದ ಮೋಸದ ಅಪಾಯದಿಂದ ತಪ್ಪಿಸಿಕೊಂಡ ಗೆಲುವನ್ನೂ ಕಂಡುಕೊಳ್ಳುತ್ತಾಳೆ. ಆದರೆ ಅಲ್ಲಿ ಅವನ ಮಗುವಿಗೆ ತಾಯಿಯಾಗಿದ್ದೇನೆ ಅನ್ನುವ ಕಾರಣಕ್ಕಾಗಿ ಎಲ್ಲ ವಿರಸದ ನಡುವೆಯೂ ತನ್ನ ಮೇಲೆ ನಿಧಾನ ಚಿಗುರುತ್ತಿದ್ದ ಅವನ ಪ್ರೀತಿ ಚಿವುಟಲ್ಪಡುತ್ತಿದೆ ಮತ್ತು ಅದು ತನ್ನ ಭವಿಷ್ಯಕ್ಕೆ ಮಾರಕವಾಗಲಿದೆ, ತನ್ನನ್ನು ಮತ್ತೆ ಒಂಟಿಯಾಗಿ ಉಳಿಸಲಿದೆ ಅನ್ನುವ ವಿಚಾರ ಹೊಳೆಯುವುದೇ ಇಲ್ಲ. ಜೀವನಸಂಗಾತಿ ಅನಿಸಿಕೊಂಡವನನ್ನ ಕೆಳಗಿಳಿಸಿದಾಗಲಷ್ಟೇ ನಾನು ಮೇಲೇರುವ ಅನುಭವ ಹೊಂದುತ್ತೇನೆ ಅನ್ನುವ ತಪ್ಪುಗ್ರಹಿಕೆಯ ಬದಲು ಗಂಡನ ಜೊತೆ ಸರಸ-ವಿರಸವೆಂಬ ಎರಡನ್ನೂ ಹದ ಬೆರೆಸಿದ ಸಮರಸದಲ್ಲಿ ಬದುಕಬಹುದು ಅಂದುಕೊಂಡಿದ್ದಿದ್ದರೆ ಮತ್ತೆ ಅದನ್ನ ಸಾಧ್ಯವಾಗಿಸುವಲ್ಲಿ ಮುರಿಯಲು ಉಪಯೋಗಿಸಿದ ಬುದ್ಧಿವಂತಿಕೆಯನ್ನು ಬಳಸಿದ್ದರೆ ಬಹುಶಃ ಮತ್ತೆ ಅವಳು ಖಾಲಿಯಾಗುಳಿಯುವುದು ತಪ್ಪುತ್ತಿತ್ತೇನೋ....

ಮುಂದೆ ಖ್ಯಾತ ಉದ್ಯಮಿಯೂ ಸುಪ್ರಸಿದ್ಧ ವ್ಯಕ್ತಿಯೂ ಆದ ಸರಾಫ್ ಮೇಡಮ್ ಕೈಯ್ಯಲ್ಲಿ ಒಲ್ಲದ ಸಲಿಂಗ ಕಾಮಕ್ಕೆ ತುತ್ತಾಗಿ ತಾನು ಮತ್ತೆ ಬಳಸಲ್ಪಟ್ಟೆ ಅನ್ನಿಸುವಾಗ ಪ್ರತಿಭಟಿಸಲಾಗದ ತನ್ನ ಅಸಹಾಯಕತೆಗೆ ಸರಾಫ್ ರವರ ಸಾಮಾಜಿಕ  ಅರ್ಥಿಕ ಸಬಲತೆ ಮತ್ತು ಆ ಮೂಲಕ ಅವರು ಗಳಿಸಿಕೊಂಡಿರುವ ಅಧಿಕಾರಯುತ ಧ್ವನಿಯೇ ಕಾರಣ ಅನಿಸುತ್ತದೆ ಮತ್ತು ಅಲ್ಲಿ ಅವಳಿಗೆ ಇಲ್ಲೀಗ ಕ್ಯಾಪಿಟಲಿಸ್ಟ್ ಮನೋಭಾವನೆಯ ಅಡಿ ತಾನು ಶೋಷಿತಳಾದೆ ಅನಿಸುತ್ತದೆ. ಇದು ಮುಂದೆ ಜಯಂತಿ ಹೈ ಪ್ರೆಸಿಶನ್ಸ್ ನ ಮಾಲಕಿ ವೈಜಯಂತಿಯ ಎಲ್ಲ ಸಾತ್ವಿಕ ನಡೆಗಳಲ್ಲೂ ಮಂಗಳಾಳಿಗೆ ಕ್ಯಾಪಿಟಲಿಸ್ಟ್ ಮನೋಭಾವನೆಯನ್ನೇ ತೋರಿಸಿಕೊಡುತ್ತದೆ ಮತ್ತು ಅವಳು ಅನುಸರಿಸುತ್ತಿದ್ದ ಎಲ್ಲ ಸಂಸ್ಕಾರಯುತ ನಡವಳಿಕೆಗಳನ್ನು ನಿರಾಕರಿಸುವಂತೆ ಮಾಡುತ್ತದೆ. ಉದಾಹರಣೆಗೆ ಲಕ್ಷಣವಾಗಿ ಭಾರತೀಯ ಸಂಸೃತಿಯಂತೆ ಅಲಂಕರಿಸಿಕೊಂಡು ಬರುತ್ತಿದ್ದ ವೈಜಯಂತಿ ದೇವರ ಫೋಟೊಗೆ ನಮಸ್ಕರಿಸುವುದು ಎಲ್ಲವೂ ಪೊಳ್ಳು ಅನಿಸಿ ತಾನು ಅದಕ್ಕೆ ವಿರುದ್ಧವಾಗಿ ಬೋಳು ಹಣೆ, ಬೋಳು ಕುತ್ತಿಗೆ, ಬೋಳು ಕೈಗಳಲ್ಲಿರುವುದೇ ತನ್ನ  ಹಕ್ಕು ಅನ್ನುವಂತೆ ಭಾವಿಸುವುದು. ಮುಂದೆ ಪ್ರತಿಬಾರಿ ಅವಳ ಬೋಳು ಹಣೆ ಕಂಡಾಗ ಜಯಕುಮಾರನಿಗೆ ಅವಳಲ್ಲೊಂದು ಸೂತಕದ ಕಳೆ ಕಾಣಿಸುತ್ತಾ ಹೋಗುತ್ತದೆ. ಇದು ಅವನ ಒಂದು ತಪ್ಪು ದೃಷ್ಟಿಯೇ ಆಗಿರಬಹುದು. ಆದರೆ ಸರಾಫಳ ವ್ಯಕ್ತಿತ್ವವನ್ನು ಎಲ್ಲ ಮಹಿಳಾ ಉದ್ಯಮಿಗಳಿಗೂ ಅಥವಾ ಎಲ್ಲ ಶ್ರೀಮಂತ ಕೈಗಾರಿಕೋದ್ಯಮಿಗಳಿಗೂ ಆರೋಪಿಸುವಂತೆ ಮಾಡುವ ಅವಳಿಗೆ ಯಾವುದೇ ಕಾರಣಕ್ಕೂ ಯಾವುದೇ ವಿಷಯದಲ್ಲೂ ವೈಜಯಂತಿಯ ಹಾಗಿರಬಾರದು ಅಂತ ಅನಿಸುತ್ತದೆ. ಅದರಿಂದ ಅವಳೇ ತನ್ನ ಸ್ತ್ರೀಸಹಜ ಚೆಲುವಿಗೆ, ಅದರ ಅಭಿವ್ಯಕ್ತಿಗೆ ವಿರೋಧವಾಗಿಬಿಡುತ್ತಾಳೆ. ಅಲ್ಲದೆ ತಾನು ಹೆಣ್ಣಾಗಿರುವುದೇ ತನ್ನೆಲ್ಲ ನೋವಿಗೆ ಕಾರಣ ಅನ್ನುತ್ತಾ ಸಪ್ರಯತ್ನ ತನ್ನಲ್ಲಿ  ಹೆಣ್ತನದ ಇನ್ನುಳಿದ ಎಲ್ಲ ಮಾರ್ದವತೆಯನ್ನೂ ಕಾಣೆಯಾಗಿಸಿಕೊಳ್ಳುವುದು ಗಂಡನಿಗೆ ಅವಳ ಕಡೆ ಅಸಹನೆ ಹುಟ್ಟುವಂತೆ ಮಾಡುವುದಲ್ಲದೆ ಅವಳಲ್ಲಿ ಆಸಕ್ತಿ ಕಡಿಮೆಯಾಗುವ ಹಾಗೆ ಮಾಡುತ್ತದೆ. ಅವಳ ಜೊತೆ ತೊಡಗಿಕೊಳ್ಳಲಾಗದೆ ತನ್ನ ಪುರುಷತ್ವ ನಿರೂಪಿಸಿಕೊಳ್ಳಲು ಬೇರೆ ಹೆಂಗಸರ ಸಹವಾಸ ಮಾಡುವಂತಾಗುತ್ತದೆ, ಸಂಬಂಧವೊಂದು ಪೂರ್ತಿ ಮುರಿಯಲು ಇದೂ ಕಾರಣವಾಗುತ್ತದೆ.

ಕೊನೆಗೆ ಜಯಕುಮಾರನಿಂದ ಸಂಬಂಧ ಮುರಿದುಕೊಂಡು ಹಳೆಯ ಮೋಸಗಾರ ಪ್ರೇಮಿ ಪ್ರಭಾಕರನಿಂದಲೂ ಮತ್ತೆ ಮತ್ತೆ ಬಳಸಲ್ಪಟ್ಟು ಮತ್ತೆ ಮೋಸಹೋಗಿಯಾದ ಹಂತದಲ್ಲಿ ಒಂದು ಸಮಾವೇಶದಲ್ಲಿ ಭೇಟಿಯಾಗೆ ತನ್ನನ್ನು ಡ್ರಾಪ್ ಮಾಡುವೆನೆಂದ ಸರಾಫಳಿಗೆ ತನಗಾಗಿ ತನನ್ನು ತುಂಬ ಪ್ರೀತಿಸುವ ಪತಿ ಹೊರಗೆ ಕಾಯುತ್ತಿದ್ದಾನೆ ಅಂತ ಸುಳ್ಳು ಹೇಳಿ ಯಾರೂ ಕಾಯುತ್ತಿಲ್ಲದೆಡೆಗೆ ನಡೆದುಕೊಂಡುಬರುವಾಗ ಅವಳ ಜೊತೆ ಅಂಥ ಒಂದು ಪತಿಯ ಅಮೂರ್ತ ವ್ಯಕ್ತಿತ್ವ ನಡೆದುಬರುತ್ತಿರುತ್ತದೆ ಅನ್ನುತ್ತಾರೆ ಲೇಖಕರು. ಅಂಥ ಒಂದು ಸಾಂಗತ್ಯ ಎಲ್ಲ ಹೆಣ್ಣುಮಕ್ಕಳಂತೆ ಅವಳದೂ ಆಸೆಯಾಗಿತ್ತು. ಆದರೆ ಗಂಡು ಅನ್ನುವ ವಿಷಯವನ್ನು ಬಾಲ್ಯದಿಂದಲೂ ತಪ್ಪಾಗಿಯೇ ಗ್ರಹಿಸುತ್ತಾ ಬಂದ ಅವಳಿಗೆ ಗಂಡು ಅಥವಾ ಹೆಣ್ಣು ಇಬ್ಬರೂ ಸಂತೃಪ್ತವಾಗಿ ಬದುಕುವುದಕ್ಕೆ ಅಗತ್ಯ ಬೇಕಾದ ಪರಸ್ಪರರ ಸಖ್ಯವೇನಿದೆ ಅದನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವುದೇ ಸಾಧ್ಯವಾಗುವುದಿಲ್ಲ. ಬದಲಿಗೆ ಕ್ಷಣಕ್ಷಣಕ್ಕೂ ಅವ ತನಗೆ ಪ್ರತಿಸ್ಪರ್ಧಿ ಎನ್ನುವ ದೃಷ್ಟಿಯೇ ಅವಳಲ್ಲಿ ಮೂಡುತ್ತಿರುತ್ತದೆ.

ಮಂಗಳಾಳ ಮನಸ್ಸಿನಲ್ಲಿ ಇಷ್ಟೆಲ್ಲ ಋಣಾತ್ಮಕ ನಿಲುವುಗಳನ್ನ ಪೋಷಿಸಿದ್ದ ಇಳಾ ಮೇಡಮ್ ರವರ ಬದುಕಿನಲ್ಲೂ ಸ್ತ್ರೀ ಸ್ವಾತಂತ್ರ್ಯ ಅನ್ನುವದ್ದನ್ನ ಸ್ತ್ರೀ ಹೊಂದಬಹುದಾದ ಸ್ವೇಚ್ಛೆ ಮತ್ತು ಗಂಡಿನೆಡೆಗೆ ತೋರಬಹುದಾದ ಅನಾದರ ಮತ್ತು ತಿರಸ್ಕಾರ ಅಂತನ್ನುವ ತಪ್ಪುಗ್ರಹಿಕೆ ಅವರಿಗೆ ಪತಿ ಮತ್ತು ಮಗಳು ಇದ್ದೂ ಅವರಿಲ್ಲದೆ ಬಾಳುವಂತೆ ಮಾಡುತ್ತದೆ. ಮತ್ತೆ ಓರ್ವ ವ್ಯಕ್ತಿಯ ಸಹವಾಸ ದೊರೆತರೂ ಅಲ್ಲೂ ಆಕೆಯ ಅತಿಯಾದ ಅಧಿಕಾರಯುಕ್ತ ನಡವಳಿಕೆ ಕೊನೆಗೊಮ್ಮೆ ಅವರು ಒಂಟಿಯಾಗುಳಿಯುವಂತೆ ಮಾಡುತ್ತದೆ.

  ಈ ಕತೆಯಲ್ಲಿ ಕಂಡುಬಂದಂತೆ ಒಂದು ಹೆಣ್ಣಿನ ಪಾತ್ರವನ್ನಷ್ಟೇ ನಾವು ಇಂದು ಮಾತುಕತೆಗೆ ವಿಷಯವಾಗಿ  ಆಯ್ದುಕೊಂಡಿರುವುದರಿಂದ ಮಂಗಳಾ ಗಂಡಿನ ಕಡೆಗೆ ಮೂಡಿಸಿಕೊಂಡ ತಪ್ಪುಗ್ರಹಿಕೆಯ ಪರಿಣಾಮದ ಬಗೆಗಷ್ಟೇ ಮಾತಾಡಿದ್ದಾಯಿತು. ಅದರ ಅರ್ಥ ಅವಳ ಸಂಸಾರದಲ್ಲಿ ಆದ ಅನಾಹುತಕ್ಕೆ ಅವಳ ತಪ್ಪುಗ್ರಹಿಕೆಯಷ್ಟೇ ಕಾರಣವಾಯಿತು ಅಂತ ಖಂಡಿತಾ ಅರ್ಥವಲ್ಲ. ಮಂಗಳಾ ಮತ್ತು ಇಳಾ ಇವರಿಬ್ಬರ ಬದುಕಿನಲ್ಲೂ ಜಯಕುಮಾರ್ ಮತ್ತು ವಿನಯಚಂದ್ರ ಇಬ್ಬರ ಮನಸ್ಸಿನಲ್ಲೂ ಬದಲಾದ ಕಾಲಕ್ಕೆ ತಕ್ಕಹಾಗೆ ಸಹಜವಾಗಿಯೇ ಆಧುನಿಕತೆಯನ್ನು ಮೈಗೂಡಿಸಿಕೊಂಡ, ಕಲಿತ ಹೆಣ್ಣುಮಕ್ಕಳ ಬಗೆಗಿನ ತಪ್ಪು ಅಭಿಪ್ರಾಯಗಳೂ, ಅನುಚಿತ ನಿರೀಕ್ಷೆಗಳೂ ಇದ್ದವು . ಉದಾಹರಣೆಗೆ ಜಯಕುಮಾರನಿಗೆ ಕಲಿತ ಹೆಣ್ಣುಗಳೆಲ್ಲವೂ ಗಂಡಸರಾದಂತೆ ಕಲಿತ ಗಂಡಸರೆಲ್ಲರೂ ಹೆಣ್ಣುಗಳಾದಂತೆ ಅನಿಸುವುದು. ಕಲಿತ ಮೇಲೂ ಹೆಣ್ಣು ಹೆಣ್ಣಾಗಿದ್ದರಿಂದ ದೊರೆತ ತನ್ನ ಪ್ರಾಕೃತಿಕ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲಳು ಅನ್ನುವದ್ದನ್ನ ಅವನಿಗೆ ಒಪ್ಪಲಾಗುವುದಿಲ್ಲ. ಇದು ಹೆಣ್ಣಿಗೆ ಬಹುಕಾಲದ ನಂತರ ದೊರೆತ ಸಮಾನ ಶಿಕ್ಷಣದ ಅವಕಾಶವನ್ನು ಇನ್ನೂ ಅರಗಿಸಿಕೊಳ್ಳಲಾಗದ ಪುರುಷಪ್ರಧಾನ ಸಮಾಜದ ಒಂದು ಮುಖವನ್ನ ಮನಸ್ಥಿತಿಯನ್ನು ತೋರಿಸುತ್ತದೆ.  ವಿನಯಚಂದ್ರನಿಗೋ ಕಲಿತ ಹೆಣ್ಣು, ಸಂಸಾರವನ್ನು ಮನೆಯ ಒಳಹೊರಗೆ ಅವನ ಅನುಪಸ್ಥಿತಿಯಲ್ಲೂ ತನ್ನಷ್ಟಕ್ಕೆ ನಿಭಾಯಿಸಿಕೊಂಡುಹೋಗುವ ಸಾಮರ್ಥ್ಯವಿರುವ ಹೆಣ್ಣು ಅವನ ಹೆಂಡತಿಯೆಂಬ ಹೆಮ್ಮೆ ಬೇಕು. ಆದರೆ ಅವನ ಸಫಲತೆ ಮತ್ತು ಅವಳ ಉದ್ಯೋಗ ಎರಡರ ನಡುವೆ ಆಯ್ಕೆಯ ಮಾತು ಬಂದಾಗ ಅವಳು ತಟ್ಟಂತ ತನ್ನ ಔದ್ಯೋಗಿಕ ಆಸೆ ಆಕಾಂಕ್ಷೆ, ಎದುರಿರುವ ಉನ್ನತಿಯ ಅವಕಾಶಗಳನ್ನೆಲ್ಲ ಗಾಳಿಗೆ ತೂರಿ ತನ್ನ ಬಳಿಗೆ ಓಡಿಬಂದುಬಿಡಬೇಕು, ತಾನು ಆಯೋಜಿಸುವ ಪಾರ್ಟಿಗಳಲ್ಲಿ ಬರೀ ಪರಿಚಾರಿಕೆಯಾಗಿರುವುದೂ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವಷ್ಟೇ ಮಹತ್ಕಾರ್ಯವೆಂಬಂತೆ ಬದುಕಿಬಿಡಬೇಕು ಅಂದುಕೊಳ್ಳುವುದು ಅನುಚಿತ ನಿರೀಕ್ಷೆಯಲ್ಲದೆ ಇನ್ನೇನು? ಈ ತಪ್ಪು ತಿಳುವಳಿಕೆಗಳೂ ಹುಸಿಗರ್ವಗಳೂ ಆ ಸಂಸಾರಗಳು ಒಡೆಯಲು ಅಷ್ಟೇ ಕೈಜೋಡಿಸಿದ್ದವು ಅನ್ನುವದ್ದನ್ನ ಖಂಡಿತಾ ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ಆಯ್ದುಕೊಂಡ ವಿಷಯ ಸ್ತ್ರೀ ಚಿಂತನೆಯ ಬದಲಾದ ಆಯಾಮಗಳು ಅನ್ನುವದ್ದಾಗಿದ್ದರಿಂದ ಆ ಬಗೆಗೆ ವಿಸ್ತರಿಸುವುದು ವ್ಯಾಪ್ತಿಯ ಹೊರಗಿನದಾಗುತ್ತದೆಯೆಂದು ಆ ಬಗ್ಗೆ ಹೆಚ್ಚು ಮಾತಾಡುತ್ತಿಲ್ಲ ಅಷ್ಟೇ.

  ಕಾದಂಬರಿಯನ್ನು ಓದುತ್ತಾ ನಾನು ಅದರ ಪಾತ್ರಗಳನ್ನು ಪರಿಚಯಿಸಿಕೊಂಡು, ಒಳಗೊಂಡು ಅನುಭವಿಸುತ್ತಾ ಹೋಗುವಲ್ಲಿ ಬೇರೆಬೇರೆಯವರು ಅಳವಡಿಸಿಕೊಳ್ಳಬಹುದಾದ ಬೇರೆಬೇರೆ ಆಯಾಮಗಳ ಬಗೆಗೂ ಆಲೋಚನೆ ಬಂತು. ಅದನ್ನೂ ತಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ.

ಬರವಣಿಗೆ ಅನ್ನುವದ್ದು ಬದುಕನ್ನು ಪ್ರತಿಬಿಂಬಿಸುವ ಕನ್ನಡಿ. ಬದುಕಲ್ಲಿ ಇಲ್ಲದೆ ಇದ್ದದ್ದು ಅಲ್ಲಿ ಬರಲಾರದು, ಇದ್ದದ್ದು ಅಲ್ಲಿ ಬಾರದೆ ಉಳಿಯಲಾರದು. ಹಾಗಾಗಿ ಬದುಕು ಬದುಕುತ್ತಾ ನಮಗೆ ಎದುರಾಗುವ ತಪ್ಪುಗ್ರಹಿಕೆಗಳು ಬರವಣಿಗೆಯೊಂದರ ಓದಿನಲ್ಲೂ ಎದುರಾಗುವುದು ಸಹಜ. ಗಿರೀಶ್ ರಾವ್ ಹತ್ವಾರ್ ಅವರು ಒಂದು ಕಡೆ ಬರೆಯುತ್ತಾರೆ, ಬರವಣಿಗೆ ಬರಹಗಾರನಿಗೆ ಹೇಗಿರಬೇಕೆಂದರೆ ಹೆತ್ತು, ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಗಂಗೆಯಲ್ಲಿ ಗಂಗೆಯ ಮೇಲೊಂದು ನಂಬಿಕೆಯಿಟ್ಟು ತೇಲಿಬಿಡುತ್ತಾಳಲ್ಲಾ ಕುಂತಿ, ಅವಳಿಗೆ ಆ ಕಂದ ಕರ್ಣನಿದ್ದ ಹಾಗಿರಬೇಕಂತೆ. ಬರೆದು ಮುಗಿಸಿದ ಬರಹಗಾರ ಬರಹವನ್ನ ಓದುಗನ ವಶಕ್ಕೊಪ್ಪಿಸಿಬಿಡುತ್ತಾನೆ. ಆಮೇಲೆ ಅದು ಓದುಗನ ಸೊತ್ತು. ಸೊತ್ತು ನಮ್ಮದಾಗಿಸಿಕೊಳ್ಳುತ್ತಾ ಅದನ್ನು ಅನುಭವಿಸುವ ಸೌಲಭ್ಯದ ಜೊತೆಗೆ ಅದರ ಹಿತಾಸಕ್ತಿಯ ಜವಾಬ್ದಾರಿಯೂ ನಮ್ಮದಾಗುತ್ತದೆ ಎಂಬುವುದು ನಿಜವೇ ತಾನೇ? ಹಾಗಾಗಿ ನಮ್ಮ ಕಾವ್ಯವಿಮರ್ಶೆಯ ಹಾದಿಯಲ್ಲಿ ಹಿರಿಯರು ಕವಿ ಎನ್ನುವವನ ಅರ್ಹತೆಯ ಬಗ್ಗೆ ಹೇಳಿದಂತೆಯೇ ಸಹೃದಯ ಓದುಗನಿಗಿರಬೇಕಾದ ಅರ್ಹತೆಗಳನ್ನೂ ನಿಯಮಿಸಿದ್ದಾರೆ. ಸಹೃದಯ ಓದುಗನೊಬ್ಬ ತಾನು ಸಾಕಷ್ಟು ಅಧ್ಯಯನಶೀಲನಾಗಿರಬೇಕು, ಕವಿಯ ಮನಸಿನ ಜೊತೆಗೆ ಒಂದು ಅಮೂರ್ತ ಸಂವಾದವನ್ನು ಸಾಧ್ಯವಾಗಿಸಿಕೊಳ್ಳಬಲ್ಲವನಾಗಿರಬೇಕು, ತನ್ನ ಇಷ್ಟಾನಿಷ್ಟಗಳನ್ನು ಬಿಟ್ಟು ಸಮಷ್ಟಿಯ ದೃಷ್ಟಿಯಿಂದ ಕೃತಿಯನ್ನು ಪರಿಗಣಿಸಬಲ್ಲವನಾಗಿರಬೇಕು, ಕಾಲದೇಶಗಳ ಹಂಗಿಲ್ಲದೆಯೇ,  ಕವಿಯ ಇನ್ನುಳಿದ ಪೂರ್ವಾಪರಗಳ ಬಗ್ಗೆ ಪೂರ್ವಗ್ರಹಗಳಿಲ್ಲದೆಯೇ ಅವನ ಕೃತಿಯನ್ನು ನಿಷ್ಪಕ್ಷಪಾತವಾಗಿ ಕಾಣುವ ಶಕ್ತಿಯಿರಬೇಕು- ಇವೆಲ್ಲವೂ ಸಹೃದಯ ಓದುಗನೆನಿಸಿಕೊಳ್ಳಲು ವಿಧಿಸಲ್ಪಟ್ಟ ಅರ್ಹತೆಗಳು.

ಸಹೃದಯ ಓದುಗನೊಬ್ಬನು ಬರಹವನ್ನು ತನ್ನದಾಗಿಸಿಕೊಳ್ಳುತ್ತಾ ಸಾಗುವಾಗ ಬರಹದ ವಸ್ತು, ಆಶಯ ಅಥವಾ ಉದ್ದೇಶ ಮತ್ತು ಅದು ಸಾರಹೊರಟಿರುವ ಸಂದೇಶಗಳನ್ನ ಬರಹಗಾರನ ಮನಸಲ್ಲೇನಿತ್ತೋ ಅದೇ ನಿಟ್ಟಿನಲ್ಲಿಯೂ ಗ್ರಹಿಸಬಹುದು ಅಥವಾ ಇನ್ನೊಂದು ನಿಟ್ಟಿನಲ್ಲೂ ಗ್ರಹಿಸಬಹುದು. ಅದು ಅವರವರ ಪರಿಕಲ್ಪನೆಯ ವ್ಯಾಪ್ತಿಗೆ ಬಿಟ್ಟ ವಿಷಯ.  ಆದರೆ ಒಮ್ಮೊಮ್ಮೆ ಬರಹಗಾರ ಬರೆಯುತ್ತಾ ಅಲ್ಲಿ ಅಡಕವಾಗಿ ಉಳಿದುಬಿಡುವ ಅವನ ಉದ್ದೇಶ ಓದುಗನಿಗೆ ಒಂದಿಷ್ಟೂ ಸ್ಪಷ್ಟವಾಗದೆಯೇ ಹೋದಾಗ ಮೇಲುಮೇಲಿನ ನೋಟ ಗ್ರಹಿಸುವ ಸಂದೇಶವನ್ನೇ ಆ ಒಟ್ಟೂ ಬರಹದ ಉತ್ಪತ್ತಿಯಾಗಿ ಕಂಡುಕೊಳ್ಳುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಇದು ಬರಹದ ತಪ್ಪು ಗ್ರಹಿಕೆ ಅನಿಸಿಕೊಳ್ಳುತ್ತದೆ. ಅಧುನಿಕ ಪಾಶ್ಚಾತ್ಯ ಮೀಮಾಂಸೆಯ ಹರಿಕಾರರಲ್ಲೊಬ್ಬರಾದ ಐ ಅ ರಿಚರ್ಡ್ಸ್ ರವರು ಸಂವಹನ ಮತ್ತು ಮೌಲ್ಯಮಾಪನದ ಸಿದ್ಧಾಂತವನ್ನು ವಿಮರ್ಶೆಯ ಬಗೆಗೆ ಮಂಡಿಸಿದ್ದಾರೆ.  ಅದರಲ್ಲಿ ಮೌಲ್ಯಮಾಪನ ಸಿದ್ಧಾಂತ ನನಗೆ ತುಂಬ ಮನಸೊಪ್ಪಿದ ಮತ್ತು ನೆನಪಿನಲ್ಲುಳಿದುಕೊಂಡಿರುವ ಸಿದ್ಧಾಂತ. ಅದರಲ್ಲಿ ಅವರು ಹೇಳುವುದನ್ನ ಸಣ್ಣದಾಗಿ ಹೇಳುವುದಾದರೆ ಒಂದು ಕೃತಿಯಲ್ಲಿ ಕಂಡುಬರುವ ಬರಹಗಾರನ ಅಧ್ಯಯನಶೀಲತೆ, ಪಾಂಡಿತ್ಯ, ಭಾಷೆಯ ಮೇಲಿನ ಹಿಡಿತ, ಪ್ರತಿಭೆಗಳೆಲ್ಲವುಗಳಿಗಿಂತಲೂ ಆ ಕೃತಿ ಸಮಾಜಕ್ಕೆ ಏನನ್ನು ಹೇಳಹೊರಟಿದೆ ಅನ್ನುವದನ್ನ ವಿಮರ್ಶಕ ಮುಖ್ಯವಾಗಿ ಪರಿಗಣಿಸಬೇಕು ಅಂತ ಹೇಳಿದ್ದಾರೆ. ವಿಮರ್ಶೆಯನ್ನು ಸರಳೀಕರಿಸಿ ಹೇಳಿದ ಅಷ್ಟೂ ನಮ್ಮಲ್ಲಿನ ಮತ್ತು ಪಾಶ್ಚಾತ್ಯ  ಹಿರಿಯ ಮೀಮಾಂಸಕರು ಸಹೃದಯ ಓದುಗ ಮತ್ತು ವಿಮರ್ಶಕ ಈ ಎರಡು ವ್ಯಕ್ತಿತ್ವಗಳು ಒಂದು ಹಂತದಲ್ಲಿ ಬೇರೆಬೇರೆಯಲ್ಲ ಅಂತ ಹೇಳಿದ್ದಾರೆ. ಓದುಗನೂ ಓದುತ್ತಾ ಅವನಿಗೆ ಗೊತ್ತಿಲ್ಲದ ಹಾಗೆ ಕೃತಿಯನ್ನು ವಿಮರ್ಶಿಸುತ್ತಲೇ ಸಾಗಿರುತ್ತಾನೆ ವಿಮರ್ಶಕನೂ ಒಬ್ಬ ಸಹೃದಯ ಓದುಗನಾಗಿದ್ದರೆಯಷ್ಟೇ ವಿಮರ್ಶೆಯ ಉದ್ದೇಶ ಸಾರ್ಥಕವಾದೀತು ಅಂತ ಎಲ್ಲರೂ ಹೇಳಿದ್ದಾರೆ. ಹಾಗಾಗಿ ಓದುಗನಿಗೂ ಕೃತಿಯೊಂದು ಎತ್ತಿಹಿಡಿಯಹೊರಟಿರುವ ಅಥವಾ ಕೀಳ್ಮಟ್ಟದ ವಿಷಯವೊಂದನ್ನು ಚಿತ್ರಿಸಿ ಉಚಿತವಲ್ಲದ್ದನ್ನು ಕೂಡದು ಅಂತ ಸಾರಹೊರಟಿರುವ ಮೌಲ್ಯವೇನಿದೆಯೋ ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅನ್ನುವದ್ದೇ ಈ ಸಿದ್ಧಾಂತದ ತಿರುಳು. ಮೌಲ್ಯಗಳು, ಸರಿತಪ್ಪುಗಳು ಅವರವರ ಭಾವಕ್ಕೆ ತಕ್ಕಂತೆ ಅನ್ನುವ ಮಾತಿದೆಯಾದರೂ ಬದುಕಿನ ಕೆಲವು ಮೂಲಭೂತ ಮೌಲ್ಯಗಳು ಯಾವತ್ತೂ ಎಲ್ಲರ ಮನಸ್ಸಿನಲ್ಲೂ ಒಂದೇ ಸ್ಥಾನವನ್ನು ಹೊಂದಿರುತ್ತದೆ. ಒಂದು ಬರಹದಲ್ಲಿ ಒಂದು ಋಣಾತ್ಮಕ ವ್ಯಕ್ತಿತ್ವವನ್ನು ಬರಹಗಾರ ವೈಭವೀಕರಿಸಿ ಬರೆದಿರುತ್ತಾನೆ ಅಂದುಕೊಳ್ಳೋಣ. ಕಡೆಗೊಮ್ಮೆ ಆ ಋಣಾತ್ಮಕ ಗುಣಗಳು ತಂದು ಆ ವ್ಯಕ್ತಿತ್ವದ ಎದುರು ಇಡುವ ವಿನಾಶವನ್ನೂ ಅಷ್ಟೇ ವೈಭವೀಕರಿಸಿ ಬರೆದಿದ್ದಲ್ಲಿ ಆ ಕೃತಿಯ ಉದ್ದೇಶ ಆ ಋಣಾತ್ಮಕ ಗುಣ ಸಲ್ಲದು ಅಂತ ಹೇಳುವುದೇ ಆಗಿರುತ್ತದೆ. ಓದುಗಳು ಒಬ್ಬಳು ಹೆಣ್ಣಾಗಿದ್ದು ಆ ಋಣಾತ್ಮಕ ವಕ್ತಿತ್ವವೂ ಒಂದು ಹೆಣ್ಣಾಗಿದ್ದಲ್ಲಿ  ಲೇಖಕ ಆ ಸಲ್ಲದ ಗುಣಗಳನ್ನ ವೈಭವೀಕರಿಸಿದ್ದನ್ನಷ್ಟೇ ಓದುವ ಹಂತದಲ್ಲಿ ಓದುಗ ಮನಸ್ಸು ಅದು ಹೆಣ್ಣು ಜಾತಿಗೆ ಮಾಡುವ ಅವಮಾನ, ಹೆಣ್ಣು ಜಾತಿಯನ್ನು ಕೀಳಾಗಿ ಚಿತ್ರಿಸುವುದು ಅಂತೆಲ್ಲ ನಿರ್ಧಾರ ತಳೆದುಬಿಡುವುದು ಆ ಕೃತಿಯನ್ನು ತಪ್ಪಾಗಿ ಗ್ರಹಿಸುವುದೇ ಆಗುತ್ತದೆ. ಮುಂದೆ ಆ ಮನಸ್ಸು ಕತೆಯ ಯಾವುದೇ ಬೆಳವಣಿಗೆಯನ್ನು ಒಂದು ತಟಸ್ಥ ಮನೋಭಾವದಿಂದ ನೋಡಲಾಗುವುದಿಲ್ಲ. ಹಾಗಾಗಿ ಲೇಖಕನ ಉದ್ದೇಶ ಅಲ್ಲಿ ಓದುಗನನ್ನು ತಲುಪದೆಯೇ ಉಳಿದುಬಿಡುತ್ತದೆ. ಓದುಗನಿಗೆ ಕವಿಯ ಜೊತೆ ಸಂವಾದವೂ ಸಾಧ್ಯವಾಗುವುದಿಲ್ಲ, ಪೂರ್ವಾಗ್ರಹವಿಲ್ಲದೆ ಆ ಕೃತಿಯನ್ನು ಕವಿಯನ್ನು ಪರಿಗಣಿಸುವುದೂ ಸಾಧ್ಯವಾಗುವುದಿಲ್ಲ, ಆ ಕೃತಿ ಎತ್ತಿಹಿಡಿಯಹೊರಟಿರುವ ಒಳ್ಳೆಯ ಮೌಲ್ಯದ ಅರಿವೂ ಆಗುವುದಿಲ್ಲ. ಹಾಗಾಗಿ ಓದುಗ ಸಹೃದಯನಾಗುವುದಾಗುವುದಿಲ್ಲ. ಬರಹಕ್ಕೂ ಓದುವಿಕೆಗೂ ನ್ಯಾಯ ಒದಗಿಸಿದಂತಾಗುವುದಿಲ್ಲ.
  ತಪ್ಪುಗ್ರಹಿಕೆಯ ಬೆನ್ನು ಹತ್ತಿ... ಅಂತ ನಾನು ಹೀಗೆ ತಮಗೆ ಒಂದಷ್ಟು ಮಾತು ತಲುಪಿಸುವ ಪ್ರಯತ್ನ ಮಾಡಿದ್ದು ನನ್ನನ್ನೂ ಸೇರಿದಂತೆ ಎಲ್ಲರನ್ನೂ ಮುಂದೊಮ್ಮೆ ಈ ತಪ್ಪುಗ್ರಹಿಕೆ ಸಂಭವಿಸುವ ಸಾಧ್ಯತೆ ಎದುರಾದಲ್ಲಿ ಒಂದಿಷ್ಟಾದರೂ ಎಚ್ಚರಿಸಲಿ ಮತ್ತು ಆ ಮೂಲಕ ಅಂತಿಮವಾಗಿ ಒಂದು ಘಟನೆ, ಒಂದು ಅನುಭವ, ಒಂದು ಬರಹ ನಮ್ಮ ಬದುಕಿಗೆ ಹೇಗೆ  ಧನಾತ್ಮಕವಾಗಿ ಪ್ರಭಾವ ಬೀರಬೇಕೋ ಹಾಗೆಯೇ ಪ್ರಭಾವಿಸುವುದು ಸಾಧ್ಯವಾಗಲಿ ಅಂತ ಹಾರೈಸುತ್ತೇನೆ, ಧನ್ಯವಾದಗಳು.

Monday, September 30, 2013

ನಾನು..

ನಾನು ಅಂದರೆ ಇದು ಅಂತ ಸ್ಪಷ್ಟಪಡಿಸುವ ನಿಟ್ಟಿನಲ್ಲಿ ತನ್ನ ಮನಸು, ಆತ್ಮ ಸೇರಿದಂತೆ ದೈಹಿಕ ಅಂಗಗಳು, ಅಥವಾ ಲೌಕಿಕ ಅಂಗಗಳಾದ ಸಂಬಂಧಗಳು, ಗಳಿಕೆಗಳು ಹೀಗೆ ಯಾವುವೂ ನೀ ನಾನು ಅನ್ನುವುದು ನಮ್ಮನ್ನೇ ಅಂತ ಘಂಟಾಘೋಷವಾಗಿ ಸಾರುವುದು ಬಿಡಿ, ಪಿಸುಗುಟ್ಟುತ್ತಲೂ ಇಲ್ಲ ಅನ್ನುವ ಗೆಳೆಯರೊಬ್ಬರ ಮಾತಿಗೆ ನನ್ನೊಳಗಿಂದ ಈ ವಿಚಾರಗಳು ಹೊರಬಂದವು.
ನಾನು ಅನ್ನುವ ಸಂಬೋಧನೆ ನಮ್ಮ ದೇಹದ ಮಾತು ಬಂದಾಗ ಪ್ರಾಯಶಃ ಆಯಾಯಾ ಸಂದರ್ಭಕ್ಕೆ ತಕ್ಕಂತೆ ಆ ಸಂದರ್ಭ ಯಾವ ಕ್ರಿಯೆಯನ್ನು ನಿರೀಕ್ಷಿಸುತ್ತದೋ ಆ ಕ್ರಿಯೆಯ ಕರ್ತೃವಾದ ಒಂದು ಅಂಗವನ್ನು ಉದ್ದೇಶಿಸಿದ್ದಾಗಿರಬೇಕಾದರೂ ಅಲ್ಲಿ ಮೂಲಕರ್ತೃವಾಗಿ ದರ್ಶಿಸಲ್ಪಡುವುದು ಆ ಅಂಗವೂ ಸೇರಿದಂತೆ ನಮ್ಮ ಇಡೀ ವ್ಯಕ್ತಿತ್ವದ ಒಂದು ಸಮಗ್ರ ಆಯಾಮ. ಉದಾಹರಣೆಗೆ ನಾನು ನೋಡಿದೆ ಅನ್ನುವಾಗ ನೋಡಿದ್ದು ಕಣ್ಣಾದರೂ ನನ್ನ ಕಣ್ಣು ನೋಡಿತು ಅನ್ನುವುದಿಲ್ಲ, ಇನ್ನೂ ಸ್ವಲ್ಪ ಮುಂದುವರೆದು ನಾನು ಕಣ್ಣಾರೆ ನೋಡಿದೆ ಅನ್ನುವಲ್ಲಿಯೂ ನೋಟಕ್ಕೊದಗಿದ್ದು ಕಣ್ಣು ಅನ್ನುವ ಅರ್ಥ ಬಂದರೂ ನೋಡಿದ್ದು ನಾನೇ ಅಂದ ಹಾಗಿರುತ್ತದೆ ನಾವು ಆ ಕ್ರಿಯೆಯನ್ನು, ಅದರ ಕರ್ತೃವನ್ನು ಪರಿಗಣಿಸುವ ರೀತಿ. ಇನ್ನೊಂದೆಡೆ ಹಾಲಿನ ಲೋಟ ತರುತ್ತಿರುವಾಗ ಅಕಾಸ್ಮತ್ತಾಗಿ ಲೋಟ ಕೆಳಗೆ ಬಿದ್ದು ಹಾಲು ಚೆಲ್ಲಿಹೋದ ಸಂದರ್ಭ. ಕಾಲು ಎಡವಿರುತ್ತದೆ, ದೇಹ ಮುಗ್ಗರಿಸಿರುತ್ತದೆ, ಕೈ ಆಯ ತಪ್ಪಿ ಆ ಲೋಟವನ್ನು ಕೆಳಹಾಕಿರುತ್ತದೆ. ಇಷ್ಟೆಲ್ಲ ವಿವರಣೆಗೆ ಹೋಗುವುದೇ ಇಲ್ಲ, ನಾನು ಹಾಲು ಚೆಲ್ಲಿದೆ ಅನ್ನುತ್ತೇವೆ. ಅಂದರೆ ಅದು ನನ್ನ ಕಾಲು, ನನ್ನ ಕೈ, ನನ್ನ ದೇಹಗಳ ಒಟ್ಟಾರೆ ಸಮತೋಲನ ಕಳಕೊಂಡ ಸಂದರ್ಭ, ಅದರ ಹೊಣೆಗಾರಿಕೆಯನ್ನು ಹೊರಬೇಕಾದದ್ದು ಬರೀ ಕಾಲಲ್ಲ, ಕೈಯಲ್ಲ, ಬದಲಿಗೆ ಅವೆಲ್ಲವೂ ನನ್ನವು ಎಂದು ಹೇಳಿಕೊಳ್ಳುವ ನಾನು. ಇಲ್ಲಿ ನಾವು ಎಷ್ಟರಮಟ್ಟಿಗೆ ನಮ್ಮ ದೈಹಿಕ ಅಂಗಾಂಗಗಳನ್ನು ಸಹಜವಾಗಿ ಸ್ವಂತದ್ದನ್ನಾಗಿ ಪರಿಗಣಿಸಿರುತ್ತೇವೆ ಅಂದರೆ ಅಲ್ಲಿ ಅದನ್ನೆಲ್ಲ ನಾನು ಎನ್ನುವ ಸಮಗ್ರ ದೃಷ್ಟಿಯೊಳಗಿಟ್ಟು ನೋಡುವುದು ಒಂದು ಕ್ಷಣದ ಮಟ್ಟಿಗೂ ಯಾವುದೇ ಪ್ರಯತ್ನವನ್ನು ನಮ್ಮಿಂದ ನಿರೀಕ್ಷಿಸುವದ್ದಾಗಿರುವುದಿಲ್ಲ. ಸಾಧನೆಯ ಮಾತೇ ಆಗಿರಬಹುದು, ಅಥವಾ ತಪ್ಪು ಘಟಿಸಿದ ಮಾತೇ ಆಗಿರಬಹುದು, ಸಣ್ಣದಿರಲಿ ಅಥವಾ ಬಹಳ ದೊಡ್ದ ಮಟ್ಟಿಗೆ ಜೀವನಕ್ಕೆ ಪ್ರಭಾವ ಬೀರುವದ್ದಾಗಿರಲಿ, ಅಲ್ಲೆಲ್ಲ ಅದು ನನ್ನಿಂದಾದದ್ದು ಅನ್ನುವಾಗ ಅದು ನಮಗೆ ಪ್ರಯತ್ನಪೂರ್ವಕವಾಗಿ ಸಂಭವಿಸುವ ಯೋಚನೆಯಲ್ಲ. ಅತಿ ಸಹಜವಾಗಿ ನಾನು ಸಾಧಿಸಿಬಿಟ್ಟೆ ಅಂತಲೋ ನಾನು ತಪ್ಪು ಮಾಡಿಬಿಟ್ಟೆ ಅಂತಲೋ ಅಂದುಬಿಡುತ್ತೇವೆ ಮಾತ್ರವಲ್ಲ ನೂರಕ್ಕೆ ನೂರು ನಾನು ಅನ್ನುವದ್ದೇ ಅಲ್ಲಿ ಆ ಘಟನೆಗೆ, ಅದರ ಹಿಂದುಮುಂದಿಗೆ, ಆಗುಹೋಗುಗಳಿಗೆ ಬದ್ಧವಾಗಿರುತ್ತದೆಯೇ ಹೊರತು ನನ್ನ ಮನಸು ತಪ್ಪು ಮಾಡಿತು, ನನ್ನ ಮೆದುಳು ಸಾಧಿಸಿಬಿಟ್ಟಿತು ಅಂದುಕೊಳ್ಳುವುದಾಗಲಿ, ಹೇಳಿಕೊಳ್ಳುವುದಾಗಲಿ ತುಂಬ ಅಸಹಜ ಅನಿಸುವುದಿಲ್ಲವೇ? ಒಂದುವೇಳೆ "ಅಯ್ಯೋ ಆ ಗಳಿಗೆ ನನ್ನ ಮನಸು ಹಿಡಿತ ತಪ್ಪಿಬಿಟ್ಟಿತು" ಅಂತಲೋ ಅಥವಾ "ಸದ್ಯ ಆ ಹೊತ್ತಿಗೆ ನನ್ನ ತಲೆ ಸರಿಯಾಗಿ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಯಿತು" ಅಂತಲೋ ಅನ್ನಬಹುದಾದರೂ ಆಗ ಪುನಃ ಅಲ್ಲಿ ಮೊದಲನೆಯ ಸ್ಥಾನದಲ್ಲಿ ಕರ್ತೃವಾಗಿ ನಾನು ಅನ್ನುವ ಪದವೇ ನಿಂತಿರುತ್ತದೆ. ಹೀಗೆ ನಾನು ಅನ್ನುವದ್ದು ಸಮಯೋಚಿತವಾಗಿ ಒಂದೊಂದು ನಮ್ಮದು ಅನಿಸಿಕೊಳ್ಳುವ ಅಂಗಾಂಗಗಳಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ನಮ್ಮ ಒಟ್ಟಾರೆ ಸ್ವರೂಪ ಅನ್ನಬಹುದು. ನಾನು ಅನ್ನುವುದನ್ನು ಪ್ರತ್ಯೇಕವಾಗಿ ಮನಸು ಅನ್ನಲೂ ಆಗುವುದಿಲ್ಲ, ಆತ್ಮ ಅನ್ನಲೂ ಆಗುವುದಿಲ್ಲ ಅಥವಾ ಈ ದೇಹವೆಂದು ಅಂತೂ ಅನ್ನಲು ಸಾಧ್ಯವೇ ಇಲ್ಲ, ಆದಾಗ್ಯೂ ಅವೆಲ್ಲವೂ ಸಂದರ್ಭಾನುಸಾರ ಬಿಡಿಬಿಡಿಯಾಗಿ ಕೆಲವೊಮ್ಮೆ ಮತ್ತು ಸಮಗ್ರವಾಗಿ ಕೆಲವೊಮ್ಮೆ ನಾನು ಅಂತ ಅನ್ನಿಸಬಹುದು. ಒಂದು ಕಾರ್ಯಕ್ಕೆ ಪ್ರೇರೇಪಿಸುವಾಗ ಮನಸು ನಾನಾಗಿರುತ್ತದೆ, ಅದನ್ನು ಕಾರ್ಯರೂಪಕ್ಕೆ ತರುವ ಯೋಜನೆಯಾಗುವಾಗ ಜೊತೆಗೆ ಬುದ್ಧಿಯೂ ನಾನು ಅನ್ನುವ ಅವಕಾಶದೊಳಗೆ ಸೇರಿಕೊಳ್ಳುತ್ತದೆ, ಮುಂದುವರೆದು ಕಾರ್ಯಗತಗೊಳಿಸುವಾಗ ಭೌತಿಕ ಅಂಗಾಂಗಗಳೂ ಒಳಸೇರಿಕೊಳ್ಳುತ್ತವೆ. ಮುಂದುವರೆದು ಆ ಹೆಜ್ಜೆಯ ನಿತ್ಯಾನಿತ್ಯತೆಯನ್ನು, ಸರಿತಪ್ಪುಗಳನ್ನು ವಿವೇಚಿಸುವಾಗ ಮನಸಾಕ್ಷಿ ಅಲ್ಲಿ ಸೇರಿಕೊಳ್ಳುತ್ತದೆ. ಆತ್ಮ ಅನ್ನುವದ್ದು ಇವೆಲ್ಲದರೊಳಗೂ ಹಾಸುಹೊಕ್ಕಾಗಿರುತ್ತದೆ. ಹಾಗಾಗಿ ನಾನು ಅನ್ನುವದ್ದು ಯಾವುದೇ ಸಂದರ್ಭದಲ್ಲೂ ಆತ್ಮಕ್ಕೆ ಹೊರತಾದುದಲ್ಲ, ಮತ್ತು ಇದೇ ಅಂತ ಪ್ರಮಾಣೀಕರಿಸಲ್ಪಡಬಲ್ಲದ್ದೂ ಅಲ್ಲ, ಗುಣಲಕ್ಷಣಗಳಿಗೆ ಮತ್ತದಕ್ಕನುಸಾರವಾಗಿ ಒಂದು ನಿರ್ದಿಷ್ಟ ಸ್ವರೂಪಕ್ಕೊಳಪಡಬಲ್ಲದ್ದೂ ಅಲ್ಲ.
ಈಗ ನಮ್ಮ ಸಂಬಂಧಗಳ ಬಗ್ಗೆ ಮಾತಾಡುವುದಾದರೆ, ಅಲ್ಲಿ ನಾವು ಅತಿಹೆಚ್ಚಿನ ಮಟ್ಟಿಗಿನ ವಿಲೀನತೆ ಸಾಧಿಸುವ ಕನಸು ಕಾಣುತ್ತಿರುತ್ತೇವೆ. ಆದರದನ್ನು ನನಸಾಗಿಸುವ ನಿಟ್ಟಿನಲ್ಲಿ ಸ್ವಲ್ಪಮಟ್ಟಿನ ಚಿಂತನೆ ಅಗತ್ಯ.ಯಾಕೆಂದರೆ ನಮ್ಮದೇ ದೇಹದ ಅಂಗಗಳ ಮಾತು ಬಂದಾಗ ಒಂದೇ ಮನಸಿನ ಕಾರ್ಯಕ್ಷೇತ್ರದ ಮಿತಿಯೊಳಗೆ ಭಾವನೆಗಳೂ ಇರುತ್ತವೆ ಮತ್ತು ಆ ಅಂಗಾಂಗಗಳೂ. ಆದರೆ ಇನ್ನೊಂದು ವ್ಯಕ್ತಿತ್ವದ ಒಡನಾಟದ ಮಾತು ಬಂದಾಗ ಅಲ್ಲೆರಡು ಮನಸುಗಳಿರುತ್ತವೆ, ಎರಡು ನಾನುಗಳೊಳಗೆ. ಅವು ಒಂದೇ ಅನಿಸುವ ಹಾಗೆ, ತಾದಾತ್ಮ್ಯ ಸಾಧಿಸುವ ನಿಟ್ಟಿನಲ್ಲಿ ನಡೆಯಬೇಕಾದರೆ ಸ್ವಲ್ಪ ಮಟ್ಟಿನ ವಿಶಾಲ ಚಿಂತನೆ ಅಗತ್ಯ. ಚಿಂತನೆ ವಿಶಾಲವಾಗುವವರೆಗೆ ಭಾವನೆಗಳು ಮುಂದುವರೆಯುವುದಿಲ್ಲ. ಏಕಪಕ್ಷೀಯ ತಿಳುವಳಿಕೆಯ ಗೋಜಲುಗಳಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುತ್ತವೆ. ಅಂದರೆ ನಾನು ಅನುಭವಿಸುವುದನ್ನೆಲ್ಲ ನನಗೆ ಸಂಬಂಧಪಟ್ಟವರು ನನ್ನಷ್ಟೇ ತೀವ್ರವಾಗಿ ಅನುಭವಿಸಬೇಕು, ನನ್ನದೇ ದೃಷ್ಟಿಕೋನದಲ್ಲಿ ಅದನ್ನು ನೋಡಿ, ನನ್ನಂಥದ್ದೇ ಪ್ರತಿಕ್ರಿಯೆ ನೀಡಬೇಕು ಅನ್ನುವುದು ಸಾಮಾನ್ಯ ಮನುಷ್ಯನಲ್ಲಿ ತನ್ನವರು ಅನಿಸಿಕೊಂಡವರ ಬಗೆಗಿನ ನಿರೀಕ್ಷೆಯ ಭಾವವಾಗಿರುತ್ತದೆ. ಒಂದು ಹಂತದವರೆಗೆ ನಮ್ಮವರೆನಿಸಿಕೊಂಡವರಲ್ಲಿನ ಸಲುಗೆಯಿಂದಾಗಿ ಆ ನಿರೀಕ್ಷೆ ಸಹಜ ಅನಿಸಬಹುದು. ಆದರೆ ಅವರನ್ನೆಷ್ಟರ ಮಟ್ಟಿಗೆ ನಮ್ಮವರನ್ನಾಗಿಸಿಕೊಂಡಿದ್ದೇವೆ ಅನ್ನುವುದು ಅಲ್ಲಿಂದ ನಮಗೆ ನಿರೀಕ್ಷಿಸದಿದ್ದ ಪ್ರತಿಕ್ರಿಯೆ ಎದುರಾದಾಗ ನಮ್ಮ ಮನದಲ್ಲೇಳುವ ಭಾವಗಳಿಂದ ಸ್ಪಷ್ಟವಾಗುತ್ತದೆ. ಇಲ್ಲಿ ನಮ್ಮ ಅಂಗಾಂಗಗಳನ್ನೊಪ್ಪಿಕೊಂಡಂತೆ ಇತರ ವ್ಯಕ್ತಿತ್ವಗಳನ್ನೊಪ್ಪಿಕೊಳ್ಳುವುದಾಗದು. ಒಂದೊಮ್ಮೆ ಒಂದೈದಾರು ಕಿಲೋಮೀಟರ್ ವರೆಗೆ ನಡೆಯಬೇಕೆಂದುಕೊಂಡಿರುತ್ತೇವೆ, ಎರಡು ಕಿಲೋಮೀಟರ್ ನಡೆಯುವಾಗ ಇದ್ದಕ್ಕಿದ್ದಂತೆ ಕಾಲು ಇನ್ನೊಂದು ಹೆಜ್ಜೆಯೂ ಮುಂದಿಡುವುದು ಅಸಾಧ್ಯ ಅನಿಸುವಂತೆ ಮುಷ್ಕರ ಹೂಡಿತು ಅಂತಿಟ್ಟುಕೊಳ್ಳುವಾ.. ಆಗ ನಮ್ಮ ಮನಸಿನಲ್ಲಿ ಯಾಕಿರಬಹುದು? ಮುಂಚೆ ಹೀಗಾಗುತ್ತಿರಲಿಲ್ಲವಲ್ಲಾ.. ವಯಸ್ಸಾಗುತ್ತ ಬಂತು ನನಗೆ, ಅದಕ್ಕೆ ಹೀಗಾಗಿರಬಹುದು ಅಂತಲೋ, ಇವತ್ತು ಮಧ್ಯಾಹ್ನ ಊಟ ಸರಿಯಾಗಿ ಮಾಡಿಲ್ಲ, ಅದಕ್ಕೆ ಸುಸ್ತು ಅನಿಸುತ್ತಿದೆ ಅಂತಲೋ, ಬೆಳಿಗ್ಗೆಯಿಂದ ಮನೆ ಕ್ಲೀನ್ ಮಾಡಿದ್ದಕ್ಕೆ ಇವತ್ತು ದೇಹಕ್ಕೆ ಹೆಚ್ಚಿನ ಶ್ರಮವಾಗಿದೆ ಹಾಗಾಗಿ ನಡೆಯಲಾಗುತ್ತಿಲ್ಲ ಅಂತಲೋ, ಕಾಲಿನ ಅಸಾಮರ್ಥ್ಯಕ್ಕೆ ಅನುಕಂಪ ಹುಟ್ಟುವ ನಿಟ್ಟಿಗೆ ಪೂರಕವಾಗಿ ಯೋಚನೆ ಮಾಡುತ್ತೇವೆಯೇ ಹೊರತು, ಕಾಲಿನ ಬಗ್ಗೆ ಅಸಹನೆ, ಸಿಟ್ಟು, ಅಸಮಾಧಾನಗಳನ್ನು ತಳೆಯುವುದಿಲ್ಲ ಅಲ್ಲವೇ? ಅದೇ ಅತ್ಯಂತ ಪ್ರೀತಿಪಾತ್ರ ವ್ಯಕ್ತಿತ್ವವೊಂದು ಹಲಕಾಲದ ಬಳಿಕ ನಮ್ಮನ್ನು ಭೇಟಿಯಾಗುವ ಅವಕಾಶ, ಕಾಣುವ ಮಾತಾಡುವ ತುಡಿತದಲ್ಲಿರುತ್ತೇವೆ, ನಾಳೆ ಖಂಡಿತಾ ನಿನ್ನ ಕಾಣಲು ಬರುತ್ತೇನೆ ಅಂದಿದ್ದವರು, ಬರಲೂ ಇಲ್ಲ, ಬರಲಾಗದ್ದನ್ನು ಮುಂಚಿತವಾಗಿ ತಿಳಿಸಲೂ ಇಲ್ಲ ಅಂತಿಟ್ಟುಕೊಳ್ಳಿ, ಕಾದುಕೂತು ನಾವು ನಿರಾಶರಾದ ಸಂದರ್ಭ, ಮೊದಲ ಕೆಲ ಕ್ಷಣಗಳಲ್ಲಿ ಅವರ ಮೇಲೇ ದೂರುಗಳು, ಅವರ ಅನಿರೀಕ್ಷಿತ ನಡವಳಿಕೆಯ ಬಗ್ಗೆ ಅಸಮಾಧಾನ, ವಿನಾಕಾರಣ ನೇತ್ಯಾತ್ಮಕ ಕಲ್ಪನೆ ಮತ್ತು ಅದರ ಮುಂದುವರಿಕೆಯಾಗಿ ತಪ್ಪುಗ್ರಹಿಕೆಗಳು..ಹೀಗೇ ಅಪ್ರಿಯವಾದದ್ದೊಂದು ನಡೆದುದರ ಹೊಣೆಗಾರಿಕೆಯನ್ನು ಎದುರಿದ್ದವರ ಮೇಲೆ ಹೊರಿಸುವ, ತನ್ನನ್ನು ಸ್ವಾನುಕಂಪದ ತೆರೆಯಲ್ಲಿ ಮುಳುಗೇಳಿಸುವ ತರಾತುರಿಯಲ್ಲಿ ಇರುವುದೇ ಹೆಚ್ಚು ಮನಸು. ಆ ಕ್ಷಣಗಳಲ್ಲಿ ಮನಸಿನ ಮೇಲೆ ಹಿಡಿತ ಸಾಧಿಸಿ ಅಲ್ಲಿಂದಾಚೆ ಬಂದು ಸ್ವಲ್ಪ ಬೇರೆ ದಿಕ್ಕಿನಲ್ಲಿ ಯೋಚಿಸಿದರೇನೋ ಬಚಾವಾಗಬಹುದು ಸ್ವಲ್ಪಮಟ್ಟಿಗೆ. ಅಂದರೂ ಅತೃಪ್ತಿ ಕೆಲಗಳಿಗೆಗಳ ಕಾಲ ಅಧಿಪತ್ಯ ಸಾಧಿಸಿ ಸಂಬಂಧದೊಳಗೆ ಅಶಾಂತಿ ಸಾಧಿಸುವ ತನ್ನ ಕೆಲಸ ಮಾಡಿಬಿಟ್ಟಿರುತ್ತದೆ. ಆದರೆ ಆ ಯೋಚನೆಯ ಎಳೆಯನ್ನು ಹಾಗೇ ಬೆಳೆಯಗೊಟ್ಟರೆ, ಪ್ರೀತಿಪಾತ್ರವಾಗಿದ್ದ ಆ ವ್ಯಕ್ತಿತ್ವ ತುಂಬಾ ಕಾಡುವ ಒಂದು ಅಸಹನೀಯ ವಿಷಯವಾಗಿ ಪರಿವರ್ತಿತವಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆ ಹೀಗಾಗುತ್ತದೆ? ಕಾಲು ನನದು, ಹಾಗಾಗಿ ಅದರ ಮೇಲೆ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಅನ್ನಬಹುದಾ? ಹಾಗಾದರೆ ಸಣ್ಣಸಣ್ಣ ವಿಷಯಕ್ಕೂ ನಮ್ಮ ದೂರುಗಳಿಗೀಡಾಗುವ, ತುಂಬಾ ನೋವಿಗೀಡಾಗಿಸಿದರು ಅನ್ನುವ ಆಪಾದನೆಗೀಡಾಗುವ ಪ್ರೀತಿಪಾತ್ರರನ್ನು ಇವರು ನಮ್ಮವರು ಅಂತ ನಾವು ಕರೆಯುವುದಷ್ಟೇ ಹೊರತು ವಾಸ್ತವದಲ್ಲಿ ಅವರು ನಮ್ಮವರಲ್ಲ ಅಂತಾಯಿತಲ್ಲಾ.. ಹೀಗೆ ನಮ್ಮವರು ಅಂತ ನಾವಂದುಕೊಂದವರು ನಮ್ಮ ಮನವರಿತು ನಡೆಯುವಷ್ಟರ ಮಟ್ಟಿಗೆ ನಮ್ಮ ಭಾವಗಳೊಂದಿಗೆ, ಇಷ್ಟಾನಿಷ್ಟಗಳೊಂದಿಗೆ ಪರಿಚಿತರಾಗಿರುವುದಷ್ಟೇ ಅಲ್ಲ, ಅವನ್ನೊಪ್ಪಿಕೊಂಡು ತಮ್ಮವಾಗಿಸಿಕೊಂಡಿರಬೇಕು, ಆ ಪ್ರಕಾರ ಸದಾ ನಾನು ಅನ್ನುವ ಅಸ್ತಿತ್ವದೊಡನೆ ತಾದಾತ್ಮ್ಯ ಸಾಧಿಸುವ ದಾರಿಯಲ್ಲಿರಬೇಕು ಅನ್ನುವುದು ಎಷ್ಟರಮಟ್ಟಿಗೆ ನಾವು ಅವರನ್ನು ನಮ್ಮದಾಗಿಸಿಕೊಂಡಿದ್ದೇವೆ ಅನ್ನುವದರ ಮೇಲೇ ನೂರಕ್ಕೆ ನೂರರಷ್ಟು ಅವಲಂಬಿತ. ಇದು ಹೆಚ್ಚು ಪೂರ್ಣತೆಯೆಡೆಗೆ ಸಾಗಿದಷ್ಟೂ ಅದೂ ಹೆಚ್ಚು ಪರಿಪೂರ್ಣ ಅನುಭೂತಿಯೆಡೆಗೆ ಸಾಗಬಲ್ಲುದು. ಈ ಸಾಪೇಕ್ಷ ಜಗತ್ತಿನಲ್ಲಿ ಪೂರ್ಣತೆ, ಪರಿಪೂರ್ಣತೆ ಅನ್ನುವದ್ದು ಅಥವಾ ಸರ್ವಕಾಲಿಕ ಸತ್ಯ, ಸರ್ವಕಾಲಿಕ ಸರಿ ಅನ್ನುವ ವಿಷಯಗಳು ಆಯಾ ಕ್ಷಣದಲ್ಲಿ ಘಟಿಸುವ ಒಂದು ಘಟನೆಯೆಂಬ ನಾಣ್ಯದ ಒಂದು ಮುಖದ ರೂಪರೇಷೆಗಳು. ಅದೇ ನಾಣ್ಯಕ್ಕೆ ಅಪೂರ್ಣತೆ, ಸುಳ್ಳು ಮತ್ತು ತಪ್ಪು ಅನ್ನುವ ಇನ್ನೊಂದು ಮುಖದ ಆಯಾಮಗಳಿರುತ್ತವೆ. ಹಾಗಾಗಿ ಒಂದು ವ್ಯಕ್ತಿತ್ವ ಇನ್ನೊಂದರೊಳಗೆ ಪೂರ್ಣ ವಿಲೀನವಾಗುವುದು ಅನ್ನುವುದು ಅದೇ ಸಾಪೇಕ್ಷತೆಯೊಳಗೆ ತನ್ನ ಮಿತಿಗಳನ್ನಿಟ್ಟುಕೊಂಡಿರುವ ವಿಷಯ. ಅಲ್ಲಿ ಸಾಧ್ಯವೆನಿಸಬಹುದಾದ ವಿಷಯ ಅಂದರೆ ಆ ವಿಲೀನವಾಗುವ ಪ್ರಕ್ರಿಯೆಯಲ್ಲಿ ಅತಿಹೆಚ್ಚಿನ ತೊಡಗಿಕೊಳ್ಳುವಿಕೆಯಲ್ಲಿರುವುದು. ಹೀಗೆ ನಾನು ಅನ್ನುವದ್ದನ್ನು ನಾವು ನಮ್ಮ ಅನುಬಂಧಗಳಲ್ಲಿ ಹುಡುಕಿದರೆ ತಪ್ಪಾದೀತು. ಅಲ್ಲಿ ಅದು ನನ್ನದು ಅನ್ನುವ ಆಪ್ತತೆ, ಆತ್ಮೀಯತೆ, ಪ್ರೀತಿ, ಪ್ರೇಮಗಳನ್ನು ಅತಿ ಸಹಜವಾಗಿ ಹಾಗೂ ಅತ್ಯಂತ ಪ್ರಾಮಾಣಿಕವಾಗಿ ಮೈಗೂಡಿಸಿಕೊಳ್ಳುವ ಮೂಲಕ ನನ್ನೊಳಗೆ ಅದು, ಅದರೊಳಗೆ ನಾನು ವಿಲೀನತೆ ಸಾಧಿಸುವ ಪ್ರಯತ್ನವಿರಬಹುದೇ ಹೊರತು ನಾನು ಅದೇ ಅನ್ನಿಸುವುದು, ಅಥವಾ ಅದು ನಾನೇ ಅನಿಸುವುದು ಸಾಧ್ಯವಿಲ್ಲದ ಮಾತು. ಯಾಕೆಂದರೆ ಪ್ರಪಂಚದಲ್ಲಿ ಎಷ್ಟು ಬೆರಳುಗಳೋ ಅಷ್ಟು ಬೆರಳಚ್ಚುಗಳು ಅನ್ನುವಷ್ಟೇ ಸತ್ಯ ಎಷ್ಟು ಅಸ್ತಿತ್ವಗಳೋ ಅಷ್ಟು ಆತ್ಮಗಳು ಮತ್ತು ಎಷ್ಟು ಆತ್ಮಗಳೋ ಅಷ್ಟು ಪ್ರತ್ಯೇಕ ವ್ಯಕ್ತಿತ್ವಗಳು ಅಂದರೆ ನಾನುಗಳು ಅನ್ನುವದ್ದು. ಇದನ್ನು ಮನಸಲ್ಲಿಟ್ಟುಕೊಂಡು ಇನ್ನೊಂದು ವ್ಯಕ್ತಿತ್ವ ಅದೆಷ್ಟೇ ಹತ್ತಿರದ್ದಾದರೂ "ನೀನೇ ನಾನು ನಾನೇ ನೀನು" ಅನ್ನುವ ಮಾತು ಒಂದು ಸುಂದರ ಕನಸಾಗಿಯೇ ಉಳಿಯುವದ್ದು, ಆದರೆ ಅದನ್ನು ನನಸಾಗಿಸುವ ನಿರಂತರ ಪ್ರಯತ್ನವಿದೆಯಲ್ಲಾ, ಅದು ಕಣ್ಮುಂದಿರುವ ಬಾಳನ್ನು ಆ ಕನಸಿನಷ್ಟೇ ಸುಂದರವಾಗಿಸುತ್ತಾ ಸಾಗುತ್ತದೆ ಅನ್ನುವ ಮಾತು ಸ್ಪಷ್ಟವಾಗುವಲ್ಲಿಗೆ ಆ ಆತ್ಮೀಯರಿಂದ ಚಾಲನೆ ಪಡೆದುಕೊಂಡ ನನ್ನ ಆಲೋಚನೆಯ ಸರಣಿ ಒಂದು ಘಟ್ಟಕ್ಕೆ ಬಂದು ನಿಂತಿತು. .

Tuesday, September 24, 2013

**

ಸೆಪ್ಟೆಂಬರ್ ೧೯ ರ ಪ್ರಜಾವಾಣಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಹಾಗೂ ಭಾರತದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆ -ಇವುಗಳ ನಡುವಿನ ಸಂಬಂಧದ ಬಗ್ಗೆ ಶ್ರೀಯುತ ಸಿ. ಎನ್. ರಾಮಚಂದ್ರ ಅವರು ಬರೆದಿದ್ದರು. ಉಪಯುಕ್ತ ಮಾಹಿತಿಗಳು ಮತ್ತೆ ಉದಾಹರಣೆಗಳ ಜೊತೆಗೆ. ಅಲ್ಲಿ ಅವರಿಗೆ ಕಾನೂನು ಕಲಾವಿದರ ಸ್ವಾತಂತ್ರ್ಯಕ್ಕೆ ತೊಡಕು ತಂದಿಟ್ಟಿದೆ ಅನ್ನುವ ಭಾವವಿದ್ದಂತನಿಸಿತು. ಹೌದು ಅಲ್ಲಗಳ ಲೆಕ್ಕಾಚಾರದ ಮಟ್ಟಿಗೆ ಮತ್ತು ಲಾಜಿಕ್ ನ ಮೂಲಕ ಯೋಚಿಸುವುದಾದರೆ ಅದು ನಿಜವೆನಿಸುತ್ತದೆ. ಆದರೆ ಎಲ್ಲೋ ಒಂದು ಕಡೆ ಎಲ್ಲ ಸಂವಿಧಾನ, ಕಾನೂನು, ರೂಲ್ಸ್-ರೆಗುಲೇಶನ್ಸ್ ಗಳಿಗೆ ಮೀರಿದ ಒಂದು ನೀತಿಸಂಹಿತೆ ನಮ್ಮೊಳಗೇ ತುಂಬ ಸ್ಪಷ್ಟವಾಗಿಯೇ ಮೂಡಿಸಲ್ಪಟ್ಟಿದೆ, ಮನಸ್ಸಾಕ್ಷಿಯ ಮಾತು ಮೀರದಂತೆ ಮಾಡುವ ಯಾವುದೇ ಕೆಲಸವೂ ಸಾಮಾನ್ಯ ಇತರರನ್ನು ನೋಯಿಸುವ, ಗೊಂದಲಕ್ಕೆ ಹಾಕುವ ಹಾದಿಯಲ್ಲಿರಲಾರದು ಅನ್ನಿಸುತ್ತದೆ. ಯಾಕೆಂದರೆ ಉದ್ದೇಶ ಸ್ಪಷ್ಟ ಮತ್ತು ನಮ್ಮ ಸಮಾಜದ ಹಿತವನ್ನು ಕಾಪಾಡುವದ್ದು ಅಲ್ಲವಾಗಿರುವ ಪಕ್ಷದಲ್ಲಿ ಅಂಥ ಒಂದು ಪ್ರಯತ್ನಕ್ಕೆ ನಮ್ಮೊಳಗಿನಿಂದ ಪೂರ್ಣಪ್ರಮಾಣದ ಬೆಂಬಲ ದೊರೆಯಲಾರದು. ಆಗ ನಾವು ಅಭಿವ್ಯಕ್ತಿಯಲ್ಲಿ ಸ್ವಾತಂತ್ರ್ಯ ವಹಿಸದೇ ಇರುವುದು ಸಾಧ್ಯವಾದರೆ ಅದು ಯಾವುದೇ ಕಲಾವಿದರಾಗಿರಬಹುದು, ನಮ್ಮ ಜವಾಬ್ದಾರಿ ಅನ್ನುವುದು ಒಂದಿರುತ್ತಲ್ಲಾ ಅದಕ್ಕೆ ಮರ್ಯಾದೆ ಕೊಟ್ಟಂತಾಗುತ್ತದೆ. ಮತ್ತೆ ಬರಹಗಾರರೇ ಆಗಿರಲಿ, ಇನ್ಯಾವುದೇ ಕಲಾಕಾರರಾಗಿರಲಿ, ಒಟ್ಟಿನಲ್ಲಿ ಮನುಷ್ಯರೆಲ್ಲರ ಅತ್ಯಂತ ಮೂಲ ಜೀವನಧರ್ಮ ಅಂದರೆ ಇನ್ನೊಂದು ಜೀವಿಯನ್ನು ನೋಯಿಸದೆ ಬಾಳುವುದು. ಅದುಬಿಟ್ಟು ಒಳಗಿನ ದನಿಯನ್ನು ಕಡೆಗಾಣಿಸಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಭಿವ್ಯಕ್ತಿಯಲ್ಲಿ ಸ್ವಚ್ಛಂದತೆ ತೋರಿದರೆ, ಅದು ಒಂದು ವರ್ಗದ, ಒಂದು ಸಮುದಾಯದ, ಒಂದು ಮನಸ್ಥಿತಿಯ ಮತ್ತು ಆ ಮೂಲಕ ಸಮಾಜದ ಶಾಂತಿಯನ್ನು ಕದಡುವುದು ಖಂಡಿತ. ಅದೂ ಸಮಾಜದ ಸರಾಗ ನಡೆಗೆ ತೊಡಕಾಗಿರುವ ಯಾವುದಾದರೊಂದು ಅಡೆತಡೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಡೆಯುವ ಯತ್ನವಾದರೆ, ಮತ್ತದು ಪುರಾವೆ, ಆಧಾರಗಳ ಮೂಲಕ ನಿರೂಪಿತ ಕಹಿಸತ್ಯವನ್ನೇ ಸಮಾಜದ ಮುಂದಿಟ್ಟರೆ ಅಲ್ಲಿ ಉದ್ದೇಶ ಒಳ್ಳೆಯದೇ ಅಂದುಕೊಂಡು ಸುಮ್ಮನಿರಬಹುದು. ಆದರೆ ನಂಬಿಕೆ ಶ್ರದ್ಧೆಗಳನ್ನೇ ಆಧಾರಸ್ತಂಭವಾಗಿಟ್ಟುಕೊಂಡು ಮುನ್ನಡೆಯುತ್ತಿರುವ ನಮ್ಮ ಸಮಾಜದಲ್ಲಿ, ಸಾಧನೆ ಎಂದು ನಾವು ಕರೆದುಕೊಳ್ಳುವ ನಮ್ಮ ಪ್ರಯತ್ನಗಳ ಮೂಲಕ ಬರೀ ನಮ್ಮೊಳಗಿನ ಅಹಂ ನ್ನು ತಣಿಸಲಿಕ್ಕಾಗಿ ಇಂಥ ಸಂಶೋಧನೆಗಳ ಮೊರೆಹೋಗುವುದು ಮತ್ತು ಅದನ್ನು ಸಮಾಜದ ಮುಂದಿಟ್ಟು ಅಲ್ಲಿ ಪರವಿರೋಧಗಳ ಒಂದು ಅಲೆಯನ್ನು ಹುಟ್ಟುಹಾಕಿ ವೃಥಾ ಅಶಾಂತಿ ಸೃಷ್ಟಿಸುವುದು ಸರಿಯೇ? ಇದಕ್ಕೆ ಕಾನೂನು, ಸಂವಿಧಾನಗಳ ಆಧಾರ ತೋರಿಸಿದರೆ ಸಮಂಜಸವಾಗಲಾರದು ನನ್ನ ಪ್ರಕಾರ. ಎಲ್ಲ ಕಲೆಗಳು ಮನುಷ್ಯತ್ವಕ್ಕೆ ಒತ್ತು ಕೊಡುವಂತಿರಬೇಕೇ ಹೊರತು ಬರೀ ಪಾಂಡಿತ್ಯ, ಪರಿಶ್ರಮಗಳ ಮತ್ತು ಆ ಮೂಲಕ ನಾವು ತಲುಪಿದೆವು ಅನಿಸುವ ಒಂದು ಸತ್ಯದ ಪ್ರದರ್ಶನವಾಗುಳಿದರೆ, ಕಲೆಯ ಮೂಲ ಉದ್ದೇಶವಾದ ಮನೋರಂಜನೆ ಸಾಧ್ಯವಾಗದು. ಮತ್ತೆ ಅಂಥ ಪ್ರಯತ್ನ ಅದು ಸಂಶೋಧನೆಯೇ ಇರಬಹುದು, ಅಥವಾ ಕಾಲ್ಪನಿಕ ಕತೆಯೇ ಇರಬಹುದು, ಒಂದು ಸರಾಗ ನಡೆದುಕೊಂಡು ಹೋಗುತ್ತಿರುವ ವ್ಯವಸ್ಥೆಯ ಸುಸ್ಥಿತಿಯನ್ನು ಕದಡುವ ಅಪಾಯವಿರುವಂಥದ್ದಾದರೆ ಅದು ಖಂಡಿತಾ ಅನಗತ್ಯ ಅನಿಸುತ್ತದೆ. ಸತ್ಯ ಬದುಕಿಗೆ ಪೂರಕವಾಗುವಂತಿದ್ದರೆ ಕಂಡುಕೊಳ್ಳುವಾ ಹರಸಾಹಸ ಪಟ್ಟು. ಅದಿಲ್ಲದೆಯೂ ಬದುಕು ಸುಲಲಿತವಾಗಿ ನಡೆದುಕೊಂಡು ಹೋಗುತ್ತಿರಬೇಕಾದರೆ ಸಂಶೋಧನೆಯ ಅಥವಾ ಕಲ್ಪನೆಯ ಮೂಲಕ ಹೊಸದಾರಿ ಕಂಡುಕೊಳ್ಳುವ ಅಗತ್ಯವಿರುವ ಜ್ವಲಂತ ಸಮಸ್ಯೆಗಳೆಷ್ಟೋ ಇರುವಾಗ ಎಲ್ಲ ಬಿಟ್ಟು ಚಂದದ ಪರಿಕಲ್ಪನೆಯೊಂದು,ಮನಸಿಗೆ ಮುದ ಕೊಡುವಂಥದ್ದನ್ನು ವಿರೂಪಗೊಳಿಸುವ ಮಾತು ಅದೆಷ್ಟು ಪುರಾವೆ, ಆಧಾರಗಳ ಮೂಲಕ ಪ್ರಸ್ತುತವಾದರೂ ಅನಗತ್ಯವೇ ಹೌದು ಅಂತ ಅನಿಸುವುದು ನನಗೆ. ಯಾವುದೇ ಒಂದು ವಿಷಯವನ್ನು ಇದಮಿತ್ಥಂ ಅಂತ ಯಾರೂ ಹೇಳಲಾಗದ ಸಾಪೇಕ್ಷ ಜಗತ್ತು ಇದು . ಹಾಗಿರುವಾಗ ಕಣ್ಮುಂದಿರುವುದು ಸತ್ಯವೆಷ್ಟೋ ಅಷ್ಟೇ ಸುಳ್ಳೂ ಹೌದು. ಹಾಗಂತ ಸತ್ಯವೆಂಬುದು ಸಾಧಿಸಲ್ಪಡದೆ ಇದ್ದಲ್ಲಿರುವುದು ಬರೀ ಸುಳ್ಳು ಎಂದೂ ಹೇಳಲಾಗದು ಅಲ್ಲವೇ? ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು ಅಂದ ಮಾತ್ರಕ್ಕೆ ಚಂದದಲ್ಲಿ ನಡೆದುಕೊಂಡು ಹೋಗುತ್ತಿರುವ ಒಂದು ವ್ಯವಸ್ಥೆ ಅದು ಸತ್ಯಸಾಧನೆಯ ಕೋರಿಕೆಯಿಡದೆಯೇ ತನ್ನಷ್ಟಕ್ಕೆ ತಾನು ಇರುವಾಗ , ನಾವು ನಮ್ಮ ಹಕ್ಕನ್ನು ಸಾಧಿಸಿ ಅಲ್ಲಿನ ಶಾಂತಿ ಕದಡುವ ಪ್ರಯತ್ನ ಮಾನವೀಯ ನೆಲೆಯಲ್ಲಿ ಸರಿಯಲ್ಲ. ಕಾನೂನು ಎಷ್ಟೇ ಸಮರ್ಥಿಸಲಿ, ಅಥವಾ ಸಮರ್ಥಿಸದಿರಲಿ, ಅದು ಕಲಾವಿದನ ಜವಾಬ್ದಾರಿಗೆ ಅವನು ತೋರುವ ಸಣ್ಣ ಉಪೇಕ್ಷೆ ಅನಿಸುತ್ತದೆ ನನಗೆ.

Friday, September 6, 2013

ಅವಳಂತೆ ಇವಳಲ್ಲವೇ

ಹೆಲ್ಲೊ
, ಹಾಯ್, ನಮಸ್ಕಾರ, ಗುಡ್ ಡೇ, ನೀವು ಕೇಳುತಿದ್ದೀರಿ ನೈನ್ಟಿ ಟು ಪಾಯಿಂಟ್ ಸೆವೆನ್ ಎಫ್ ಎಮ್ ನಲ್ಲಿ ಕೇಳಿರಿ ಹೇಳಿರಿ ಇದು ನಮ್ಮ ನಿಮ್ಮನಿಲುವು ಕಾರ್ಯಕ್ರಮ-------- "
ಹೀಗೆ ಅರಳು ಹುರಿದಂತೆ ಮುಂದೆ ಸಾಗುತ್ತಿದ್ದ ಆ ರೇಡಿಯೊ ಜಾಕಿಯ ಧ್ವನಿ ಕರ್ಣಾಕರ್ಷಕವಾಗಿತ್ತು. ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರವನಾಗಿರಬಹುದಾದ ಆ ತರುಣನ ವಿಷಯಜ್ಞಾನ, ಹಾಸ್ಯಮಯ ಹಿನ್ನೆಲೆಯಲ್ಲಿ ಲಘುವಾದ ನಿಲುವುಗಳನ್ನೂ ಸ್ವಾರಸ್ಯಕರವಾಗಿ ಸಾದರಪಡಿಸುತ್ತಿದ್ದ ರೀತಿ, ಆತನೊಳಗಿನ ಜೀವನಾಸಕ್ತಿಯ ಸಹಾಯದಿಂದ ಪರ ಹಾಗೂ ವಿರುಧ್ಧ ನಿಲುವುಗಳೆರಡರ ಮಾತುಕತೆಗಳಲ್ಲೂ ಸಮವಾದ ಭಾಗವಹಿಸುವಿಕೆ, ಅಲ್ಲೂ ಸಲ್ಲುವ, ಇಲ್ಲೂ ಗೆಲ್ಲುವ ಚಾಕಚಕ್ಯತೆ, ಮಧ್ಯೆ ಮಧ್ಯೆ ಬಿಚ್ಚುದನಿಯ ನಗು, ಸ್ವಲ್ಪ ನೇರದಾರಿಯಿಂದ ಆಚೆ ಈಚೆ ಸಾಗುವ ಶ್ರೋತೃಗಳ ಮಾತಿನ ಸರಣಿಯನ್ನು ಮತ್ತೆ ತನ್ನ ದಾರಿಗೆ ಎಳೆದು ತರುವ ಚುರುಕುತನ----------
ಈ ಎಫ್. ಎಮ್. ಎಂದರೆ ಲಘುವಾದ ಕಾರ್ಯಕ್ರಮಗಳು, ತೂಕವಿಲ್ಲದ ಕಾರ್ಯಕ್ರಮ ನಿರ್ವಹಣೆಗಳು ಎಂದೇ ಭಾವಿಸಿದ್ದ ಕಾವ್ಯಾಳನ್ನು ಈ ಮಾತುಗಾರನ ವರಸೆ ಆಕರ್ಷಿಸಿ ಈ ವೇಳೆಗೆ ಸರಿಯಾಗಿ ರೇಡಿಯೋದ ಮುಂದೆ ಕೂರುವಂತೆ ಮಾಡಿತ್ತು. ಇದರ ರುಚಿ ಹತ್ತಿಸಿದ್ದು ಮಗಳು ಶ್ರಾವ್ಯಾ. ಸಂಜೆ ನಾಲ್ಕಕ್ಕೆ "ಅಮ್ಮಾ ಬಂದೇ" ಎಂದು ಒಂದೇ ಉಸಿರಿಗೆ ಓಡಿ ಬಂದವಳು ಬ್ಯಾಗ್ ಎಸೆದು ಧಡ ಧಡನೇ ಮಹಡಿ ಏರಿ ರೂಮ್ ಸೇರಿಕೊಂಡರೆ ಆರೂವರೆಯವರೆಗೂ ಅವಳು ಎಫ್ ಎಮ್ -ನ ಜೊತೆ ,ಎಫ್ ಎಮ್ ಅವಳ ಜೊತೆ. ಎಷ್ಟೋ ಬಾರಿ ನಾಲ್ಕಕ್ಕೇ ಬಂದರೂ ಆರೂವರೆಯವರೆಗೂ ಇವಳ ಮುಖ ಕಾಣುವಂತಿಲ್ಲವಲ್ಲಾ ಎಂದು ಕಾವ್ಯ ಚಡಪಡಿಸಿದ್ದುಂಟು. ಎಷ್ಟೋ ಬಾರಿ ಆ ಹಿಂದಿನ ದಿನಗಳನ್ನು ನೆನೆಸಿಕೊಂಡು ಅವಕ್ಕಾಗಿ ಕಾತರಿಸಿದ್ದೂ ಉಂಟು.
ಒಂದು ಹೊತ್ತು ಶಾಲೆಗೆ ಹೋಗುವ ಬಾಲೆ ಶ್ರಾವ್ಯಾ ಆಗ. ಒಂದುಘಂಟೆಗೆ ಬಿಡುವ ಶಾಲೆಯ ಬಳಿ ಹನ್ನೆರಡೂಮುಕ್ಕಾಲಕ್ಕೇ ಹೋಗಿ ಕಾಯ್ತಾ ಕೂತಿರುತ್ತಿದ್ದಳು ಕಾವ್ಯಾ. ಒಂದಾಗುತ್ತಲೇ ಅವಳೂ ಅಷ್ಟೆ- ಎಲ್ಲರಿಗಿಂತ ಮೊದಲು ಬ್ಯಾಗನ್ನೆತ್ತಿಕೊಂಡು ಓಡಿ ಬಂದು ಅಮ್ಮಾ ಎಂದು ತಬ್ಬಿಕೊಳ್ಳದಿದ್ದರೆ ಅವಳಿಗೆ ಸಮಾಧಾನವೇ ಇರುತ್ತಿರಲಿಲ್ಲ. "ಮುಂದಿನ ವರ್ಷ ಸಂಜೆಯ ತನಕ ಸ್ಕೂಲ್ ಇದೆ ಮರೀ" ಎಂದು ಅವಳಿಗೆ ಪ್ರಿಯವಾದ ಮಧ್ಯಾಹ್ನದ ತುತ್ತಿನೂಟ ತಿನ್ನಿಸುತ್ತಾ ವಿವರಿಸುತ್ತಿದ್ದಳು ಕಾವ್ಯಾ. "ಆಗ ನೀನೇ ಊಟ ಮಾಡಬೇಕು. ನಾನು ತಿನ್ನಿಸಲು ಬರಲಾಗದು. ಈಗ್ಲೇ ಶುರುಮಾಡಮ್ಮ" ಎಂದರೆ "ಆಗ ಹೇಗೂ ನಾನೇ ತಿನ್ನ್ಬೇಕು ಅಲ್ಲಿಯವರೆಗಾದ್ರೂ ತಿನ್ನಿಸಮ್ಮಾ" ಎನ್ನುತಿದ್ದ ಪುಟಾಣಿ ಎಷ್ಟೋ ಬಾರಿ "ಮುಂದಿನ ವರ್ಷ ನಿನ್ನನ್ನು ಸಂಜೆಯವರೆಗೂ ಬಿಟ್ಟಿರಬೇಕಲ್ಲಮ್ಮಾ" ಎಂದು ಕಣ್ಣೀರಿಟ್ಟದ್ದಿತ್ತು. ಅದೇ ಪುಟ್ಟಮರಿ ಈಗ ಐದಡಿ ಎರಡು ಇಂಚಿನ ಷೋಡಶಿ. ಹಿಂದಿನವರ್ಷವಷ್ಟೇ ಕಾಲೇಜು ಸೇರಿರುವ ತನ್ನ ಮಗಳು ನೋಡನೋಡುತ್ತಿದ್ದಂತೆ ಜಗತ್ತಿನಲ್ಲಿ ಎಲ್ಲರೂ ಮಾಡುವಂತೆ ಅಪ್ರಯತ್ನವಾಗಿ ಮೃದುತನ ಕಳೆದುಕೊಂಡು ಕಾಠಿಣ್ಯತೆ ಮೈಗೂಡಿಸಿಕೊಳ್ಳುತ್ತಿರುವಳಲ್ಲಾ ಅನ್ನಿಸಿತು.ಅವಳು ರೂಮ್ ಸೇರಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದಾಗ ಕುತೂಹಲದಿಂದ ತಾನು ಒಳಗೆ ಇಣುಕಹೋದರೆ ಅವಳಿಗದು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚಾಗಿ ಕಾವ್ಯಾ ಅವಳನ್ನು ಹಿಂಬಾಲಿಸುತ್ತಿರಲಿಲ್ಲ. ಹೀಗೆ ಮೊದಲೊಂದು ಬಾರಿ ಅವಳ ಹಿಂದೆ ಹೋಗಿದ್ದಾಗ ಅವಳು ಕೇಳುತ್ತಿದ್ದ ಎಫ್. ಎಮ್. ನ ಚರ್ಚೆಯ ವಿಷಯ, ಆ ವಾದಸರಣಿಯ ಧಾಟಿಯನ್ನು ಗಮನಿಸಿ "ಏನಮ್ಮಾ ಚಿನ್ನೀ ನೀನೂ ಹೀಗೇ ಯೋಚಿಸ್ತೀಯಾ?" ಅಂದಿದ್ದಳು. "ಇಲ್ಲಮ್ಮಾ, ಇದರ ವಿಶಿಷ್ಠತೆನೇ ಇದು. ಒಂದೇ ವಿಷಯದ ಬಗ್ಗೆ ಪರ ಹಾಗೂ ವಿರುಧ್ಧ ಎರಡೂ ತರದ ವಾದಗಳು ನಡೆಯುತ್ತವೆ. ಹೆಚ್ಚಿನವರು ಕಾಲೇಜಿನ ಮಕ್ಕಳೇ ಭಾಗವಹಿಸುತ್ತಾರೆ. ಹಾಗಾಗಿ ನಮ್ಮ ನಿಲುವುಗಳೇನೇ ಇದ್ದರೂ ಅದರ ಒಳಿತು ಕೆಡುಕುಗಳನ್ನು ಚರ್ಚಾರೂಪದಲ್ಲಿ ಕೇಳಿ ಒಂದೋ ನಮ್ಮ ನಿಲುವು ಭದ್ರವಾಗುತ್ತದೆ ಇಲ್ಲಾ ಬದಲಾಗುತ್ತದೆ. ಸಾಕಷ್ಟು ಪುಷ್ಠಿ ಪಡೆದ ನಿಲುವು ನಮ್ಮದಾಗುವುದು ಒಳ್ಲೆಯದಲ್ಲ್ವಾ ಅಮ್ಮ? ಕೆಲವೊಮ್ಮೆ ಅಮ್ಮಂದಿರೂ ಈ ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತುಕತೆಗೆ ತಮ್ಮ ಅನುಭವದ ಮೆರುಗು ನೀಡುತ್ತಾರೆ. ಆಗ ನಿಲುವುಗಳು ಇನ್ನಷ್ಟು ಸುಂದರವಾಗುತ್ತವೆ- ಮತ್ತು ಹೆಚ್ಚಿನ ಆಧಾರ ಪಡೆಯುತ್ತವೆ. ನಮ್ಮ ಯೋಚನೆಗೆ ಸಾಕಷ್ಟು ಗ್ರಾಸ ಸಿಕ್ಕುವುದಂತೂ ಖಂಡಿತಾ. ಈ ಜೀವನ್ ನಡೆಸುವ ನಮ್ಮ ನಿಮ್ಮ ನಿಲುವು ಕಾರ್ಯಕ್ರಮ ಮತ್ತೆ ನಿವೇದಿತಾ ನಡೆಸುವ ಇದೇ ನನ್ನ ಉತ್ತರ ಕಾರ್ಯಕ್ರಮಗಳು ಎರಡು ಘಂಟೆಗಳ ಕಾಲ ನನ್ನ ಕಟ್ಟಿಹಾಕುವಷ್ಟು ಮೋಡಿ ಮಾಡಿ ಬಿಟ್ಟಿವೆಯಮ್ಮಾ" ಅಂದಿದ್ದಳು." ಒಂದೈದೇ ನಿಮಿಷ ಕೇಳಿ ಗಾಭರಿಯಾಗ್ಬೇಡಮ್ಮಾ, ಕೂತ್ಕೋ ಪೂರ್ತಿ ವಿಷಯ ಕೇಳು" ಎಂದು ಕೈ ಹಿಡಿದು ಕೂರಿಸಿಕೊಂಡಿದ್ದಳು. ಕೇಳುತ್ತಾ ಕೇಳುತ್ತಾ ಕಾವ್ಯಾಳ ಮನ ಹಗುರಾಗಿತ್ತು, ತಿಳಿಯಾಗಿತ್ತು, ಸ್ವಲ್ಪ ಗೆಲುವಾಗಿದ್ದೂ ನಿಜವೇ. ಕಾವ್ಯಾ ಗಾಭರಿಯಾಗಲು ಕಾರಣವೇನೆಂದರೆ ಅಂದು ಜೀವನ್ ಕೊಟ್ಟಿದ್ದ ವಿಷಯ "ಲೈಂಗಿಕ ಶಿಕ್ಷಣ ಶಾಲೆಗಳಲ್ಲಿ ಬೇಕೇ ಬೇಡವೇ" ಎಂದಾಗಿತ್ತು. ಮೊದಲಿಗೆ ಕಾವ್ಯಾ ಕೇಳಿಸಿಕೊಂಡ ಮಾತುಕತೆ "ಬೇಕು" ಎಂಬುದಕ್ಕೆ ಪೂರಕವಾಗಿದ್ದು, ತಲೆಯಾಡಿಸುತ್ತಾ ಕೇಳುತ್ತಿದ್ದ ಮಗಳ ಮುಖಚರ್ಯೆ ಆ ಮತುಕತೆಗೇ ಬೆಂಬಲವಾಗಿದ್ದಂತೆ ಅನ್ನಿಸಿ ತಾಯಿ ಮನ ಕಸಿವಿಸಿಗೊಂಡಿತ್ತು. ಆಮೇಲೆ "ಬೇಡ" ಎಂಬುವುದಕ್ಕೆ ಪೂರಕವಾಗಿಯೂ ನಡೆದ ಚರ್ಚೆ ಕೇಳಿ ಮನ ತಿಳಿಯಾಗಿತ್ತು. ಅಂದಿನಿಂದ ಪ್ರತೀದಿನ ಬೆಳಿಗ್ಗೆ ಮುಂಚಿನ ದಿನದ ಕಾರ್ಯಕ್ರಮ ಮರುಪ್ರಸಾರವಾಗುವ ವೇಳೆ ತನ್ನೆಲ್ಲ ಕೆಲಸ ಮುಗಿಸಿ ಚಹಾದ ಕಪ್ ನೊಂದಿಗೆ ರೇಡಿಯೋದೆದುರು ಹಾಜರಾಗುತ್ತಿದ್ದಳು ಕಾವ್ಯಾ.
ಇಂದು ಆತನಿತ್ತ ವಿಷಯ "ಮದುವೆ ಜೀವನಾನಂದಕ್ಕೆ ಪೂರಕವೇ ಮಾರಕವೇ" ಎಂದಾಗಿತ್ತು. ಈಗ ಹದಿನೈದು ವರ್ಷಗಳ ಹಿಂದೆ- ವಯಸ್ಸು ಮೂವತ್ತಾದರೂ ಇನ್ನೂ ಮದುವೆ ಒಲ್ಲೆ ಎನ್ನುತ್ತಿದ್ದ ದೊಡ್ಡಪ್ಪನ ಮಗನನ್ನು " ಯಾವಗಲೋ ಮುರಳಿ ಮದುವೆ?" ಎಂದು ಕೇಳಿದ್ದ ಸಂದರ್ಭ ನೆನಪಾಯಿತು. "ಬಿಡಿ ಅಕ್ಕಾ ಇನ್ನೂ ಒಂದೆರಡು ವರ್ಷ ಆರಾಮಾಗಿರ್ತೇನೆ, ಆಮೇಲೆ ಮದುವೆ" ಎಂದಾತ ಅಂದಾಗ " ಯಾಕೋ ತಮ್ಮಾ ಮದುವೆ ಅಂದರೆ ಅರಾಮ ಎಲ್ಲ ಮುಗಿದುಹೋದಂತೆ ಎಂದು ಯಾಕಂದುಕೊಳ್ಳಬೇಕು? ಅದು ಹಾಗಲ್ಲಾಪ್ಪಾ-----" ಎಂದೆಲ್ಲಾ ಒಂದೈದು ನಿಮಿಷ ಬಡಬಡಿಸಿ ಆತನ ಯೋಚನೆಯೇ ತಪ್ಪೆಂಬಂತೆ ಬಾಯಿ ಮುಚ್ಚಿಸಿದ್ದಳು. ಆದರೆ ಈಗ? ಬಾಳಿನಲ್ಲಿ ಮಧುರವೆಂದೋ, ಬೇಕೇ ಬೇಕು ಎಂದೋ, ಅನಿವಾರ್ಯವೆಂದೋ ಸುತ್ತಿಕೊಳ್ಳುವ ಬಂಧನಗಳೆಲ್ಲ ಮನಸ್ಸಿನ ಗೋಜಲನ್ನು ಇನ್ನಷ್ಟು ಕ್ಲಿಷ್ಟವಾಗಿಸುತ್ತವೆ ಎಂಬ ಸತ್ಯ ಗೋಚರವಾಗಿರುವ ಕಾವ್ಯಾಳಿಗೆ ಸಂಬಂಧಗಳ ಬಗ್ಗೆ ಯಾವುದೇ ನಿಲುವನ್ನೂ ಮುಂಚಿನಷ್ಟು ನಿಖರವಾಗಿ ಪ್ರಸ್ತುತ ಪಡಿಸುವುದು ಸಾಧ್ಯವಾಗದು, ಯಾಕೆಂದರೆ ನಿಖರನಿಲುವೊಂದನ್ನು ಹೊಂದುವುದೂ ಈಗ ಆಕೆಗೆ ಸಾಧ್ಯವಾಗದು. ಆದರೆ ಹಿಡಿದ ಮಾತಿನ ಎಳೆಯನ್ನು ಅತ್ತ ಇತ್ತ ಗೋಜಲಾಗಗೊಡದೆ ಭದ್ರವಾಗಿರಿಸಿಕೊಂಡು, ತಮ್ಮ ಮೂಗಿನ ನೇರಕ್ಕೇ ಪ್ರತಿಪಾದಿಸುವ ಮಕ್ಕಳ ವಾದ ಹಿತವಾಗಿತ್ತು. ಒಪ್ಪುವಂತಿಲ್ಲದಿದ್ದರೂ, ಸಾರಾಸಗಟಾಗಿ ನಿರಾಕರಿಸುವಂತೆಯೂ ಇರಲಿಲ್ಲ. ತೀರಾ ಪರಿಚಿತವೆನಿಸುವ ಒಂದು ದನಿ ಮಾತಾಡತೊಡಗಿತು. " ಮದುವೆ ಎಂಬುದನ್ನು ಸುಖದ ಸುಪ್ಪತ್ತಿಗೆಯ ಅನುಭವವೇ ಎಂದು ನಮ್ಮದಾಗಿಸಿಕೊಳ್ಳ ಹೊರಟರೆ ಭ್ರಮನಿರಸನವಾಗುವುದಂತೂ ಖಂಡಿತಾ. ಈಗ ನೋಡಿ ನಮ್ಮ ಅಪ್ಪ ಅಮ್ಮನ ಜೊತೆಗಿನ ಬಾಳು ನಾವಾಗಲಿ, ಅವರಾಗಲಿ ಬಯಸಿ ಪಡೆದದ್ದಲ್ಲ. ಆದರೆ ವಿಧಿಯ ಆಣತಿಯಂತೆ ನಾವೆಲ್ಲ ಒಂದು ಪರಿವಾರವೆನಿಸಿಕೊಂಡಿದ್ದೇವೆ. ಇಲ್ಲಿ ನಾವು ಹೆಚ್ಚಿನ ವಿಷಯಗಳನ್ನು ತೀರಾ ಸ್ವಾಭಾವಿಕವೆಂಬಂತೆ ಒಪ್ಪಿಕೊಂಡಿರುತ್ತೇವೆ. ಮುನಿಸುಗಳ ಆಯುಷ್ಯ ಹೆಚ್ಚಿರುವುದಿಲ್ಲ, ಪ್ರೀತಿ ಎಲ್ಲ ಸಂಭಾವ್ಯ ಎಡೆಗಳಲ್ಲೂ ಇಣುಕಿ ಇಣುಕಿ ಹೊರಸೂಸುತ್ತಿರುತ್ತದೆ, ಕ್ಷಮೆ ಸುತ್ತಲೆಲ್ಲ ಆವರಿಸಿರುತ್ತದೆ. ಅತೃಪ್ತಿಯನ್ನು ಶಮನ ಮಾಡಲು ಈ ಎರಡೂ ತುಂಬಾ ಶ್ರಮಿಸಿ ಕೊನೆಗೆ ತಾಳ್ಮೆಯ ಸಹಾಯದಿಂದ ಸದಾ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವಂತೆ ನಮ್ಮ ಬಾಳನ್ನು ರೂಪಿಸುತ್ತವೆ.ನಾವು ಯಾವತ್ತೂ ಅಪ್ಪ ಅಮ್ಮನಿಂದ ಭಾವನಾತ್ಮಕವಾಗಿ ಬೇರ್ಪಡುವ ಬಗ್ಗೆ ಯೋಚಿಸುವುದೇ ಇಲ್ಲ. ಇಂಥಹುದೇ ಒಂದು ಸುಂದರ ಬೆಸುಗೆ ಮದುವೆಯ ಪರಿಣಾಮವಾದರೆ ಅದು ಜೀವನಾನಂದಕ್ಕೆ ಪೂರಕವೇ ಹೌದು. ನಿಜ, .ಅಪ್ಪ ಅಮ್ಮ ಮಕ್ಕಳ ಹೊಂದಾಣಿಕೆ ಕರುಳಬಳ್ಳಿಯ ಮೂಲಕ ಅದರಷ್ಟಕ್ಕೆ ಬಂದದ್ದಾಗಿರುತ್ತದೆ. ಆದರೆ ಮದುವೆಯ ಬಂಧನವೇರ್ಪಡುವಾಗ ಅಲ್ಲಿ ಈ ತರಹದ ಬೆಸುಗೆಯ ಸಾಕ್ಷಾತ್ಕಾರಕ್ಕಾಗಿ ನಾವು ತುಂಬಾ ಯತ್ನಿಸಬೇಕಾಗುತ್ತದೆ. ನಾನು ಎಂಬುದು ಕಳೆದುಹೋಗಬೇಕಾಗಿಲ್ಲ- ಆದರೆ ಸಂಗಾತಿಯೊಳಗೆ ಮಿಳಿತವಾಗಬೇಕು. ಆದಾಗ್ಗ್ಯೂಅಲ್ಲಿ ನನ್ನತನ ಆ ವ್ಯಕ್ತಿತ್ವದೊಳಗೆ ವಿಶಿಷ್ಠವಾಗಿರಬೇಕು. ಆ ಎರಡು ವ್ಯಕ್ತಿತ್ವಗಳು ಪರಸ್ಪರ ಗುದ್ದಾಡದೇ ಮುದ್ದಾಡುವಂತಿರಬೇಕು. ಆದರ್ಶದ, ಅಸಂಭವ ಮಾತೆನಿಸಿದರೂ ಕಷ್ಟ ಪಟ್ಟು ಸಾಧಿಸಿದರೆ ಅಸಾಧ್ಯವೆನಿಸಲಾರದು" ಅರೇ!! ಇದು ನನ್ನ ಪುಟಾಣಿಯ ದನಿಯಲ್ಲವೇ? ಎಷ್ಟೊಂದು ಯೋಚಿಸುತ್ತಾಳೆ ನನ್ನ ಮಗಳು! ಇಷ್ಟೊಂದು ತಿಳಿದುಕೊಳ್ಳಬಲ್ಲ ಮನಸು ಅಷ್ಟೇ ಸರಳವಾಗಿ ಜೀವನವನ್ನು ಆದರ್ಶಗೊಳಿಸಬಲ್ಲದಾದರೆ ನನಗಿನ್ನೇನು ಬೇಕು ಅನ್ನಿಸಿತು ಕಾವ್ಯಾಳಿಗೆ. ಇದು ನನ್ನ ಆರೈಕೆಯ ಫಲ.... ನಾನು ಬೆಳೆಸಿದ ಭಾವನೆಗಳು...... ನನ್ನ ತಪಸ್ಸಿನ ವರ..... ಎಂದೆನಿಸಿ ಎದೆ ತುಂಬಿ ಬಂತು ಇನ್ನೂ ವಾದ ವಿವಾದಗಳು ಮುಂದುವರೆದಿದ್ದವು. ಕಿವಿಗಳು ರೇಡಿಯೋ ಕೇಳುತ್ತಿದ್ದರೂ ಕಾವ್ಯಾಳ ಯೋಚನೆಗಳು ಧಾವಿಸಿ ಹಿಂದಕ್ಕೋಡಿದವು. ತನ್ನ ಜೀವನದಲ್ಲಿ ಪ್ರೀತಿಯನ್ನೂ , ಮದುವೆಯೆಂಬ ವ್ಯವಸ್ಥೆಯನ್ನೂ ಉಳಿಸಲು ಹೆಣಗಿದ್ದು ನೆನೆದು ಕಣ್ತುಂಬಿ ಬಂತು.
ಬಯಸಿ ಮದುವೆಯಾದ ಗಂಡ, ಪ್ರೀತಿಸುವ ಅತ್ತೆ ಮಾವ, ಮಡಿಲು ತುಂಬಿದ್ದ ಮುದ್ದುಶ್ರಾವ್ಯಾ- ಈ ಪುಟ್ಟ ಸಂಸಾರದಲ್ಲಿ ಬಹಳ ಅದೃಷ್ಟವಂತೆ ತಾನೆಂದುಕೊಂಡು ಬಾಳುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಕಂಕುಳ ಕೆಳಗೆ ಕಾಣಿಸಿಕೊಂಡ ಅಸ್ವಾಭಾವಿಕವಾದ ನೋವು ಮತ್ತು ಒಂದ್ದು ಗಡ್ಡೆ - ತನ್ನೊಳಗೆ ಮೌನವಾಗಿ ಕುಳಿತು ತನ್ನನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಕ್ಯಾನ್ಸರ್ ಎಂದು ತಿಳಿದಾಗ ಭೂಮಿಗಿಳಿದು ಹೋಗಿದ್ದಳು. ಅಲ್ಲಿಂದ ಮೊದಲಾಗಿತ್ತು ಚಿಕಿತ್ಸೆ- ಕೆಲವೊಮ್ಮೆ ಒಳ್ಳೆಯ ಪ್ರತಿಫಲ , ಕೆಲವೊಮ್ಮೆ ಕಾಯಿಲೆಯ ಉಲ್ಬಣಿಸುವಿಕೆ, ಕೆಲವು ಅಡ್ಡ ಪರಿಣಾಮಗಳು------ ಇವೇ ಮುಂತಾದುವುಗಳ ಮಧ್ಯೆ ವರ್ಷಗಳೆರಡು ಕಳೆದುಹೋಗಿದ್ದವು. ಆಗ ಈ ಶ್ರಾವ್ಯಾ ನಾಲ್ಕು ವರ್ಷದ ಬಾಲೆ. ದಿನ ಕಳೆಯುತ್ತಿದ್ದಂತೆ ಬಾಹ್ಯವಾಗಿ ಸ್ಪಷ್ಟವಾಗಿ ಗೋಚರವಾಗುವ ವಿಷಯಗಳೊಂದಿಗೆ ಪತಿ ವಿನಯ್ ನ ಸ್ವಭಾವದಲ್ಲೂ ಸ್ವಲ್ಪ ವ್ಯತ್ಯಾಸ ಕಾಣತೊಡಗಿತ್ತು. ಆದರೂ ಅದು ಸ್ವಾಭಾವಿಕ, ತೀರಾ ಮೂವತ್ನಾಲ್ಕು ವರ್ಷಕ್ಕೇ ಅವನು ಹೆಂಡತಿಯಿದ್ದೂ ಇಲ್ಲದವನಂತೆ ಬಾಳಬೇಕಾದ ಅನಿವಾರ್ಯತೆಯಿಂದಾಗಿ ತನ್ನೆಡೆಗೆ ಸ್ವಲ್ಪ ಉದಾಸೀನ ಭಾವ ತಳೆದಿದ್ದಾನೆ ಅನ್ನಿಸುತ್ತಿತ್ತು. ಆ ಹೊಡೆತದ ಪರಿಣಾಮವೇ ತನ್ನ ನೋವುಗಳೆಡೆಗೆ ಸ್ವಲ್ಪ ಕಿವುಡು.... ತನ್ನ ಅಳುನಗೆಗಳೆಡೆಗೆ ಸ್ವಲ್ಪ ಕುರುಡು..... ತನ್ನ ಪ್ರೀತಿಗೆ ಸ್ವಲ್ಪ ಅನಾದರ...ಗಳೆಂದೂ, ಇವನ್ನೆಲ್ಲ ಸಹಜವೆಂದೇ ಭಾವಿಸುತ್ತಾ ದಿನಕಳೆಯುತ್ತಿದ್ದಳು. ಆದರೊಂದು ದಿನ ತನ್ನೆಡೆಗಿನ ಈ ಉದಾಸೀನ ಇನ್ನೊಂದೆಡೆ ಮನಸು ನೆಟ್ಟಿದ್ದರ ಪರಿಣಾಮವೆಂದರಿವಾದಾಗ ತನ್ನನ್ನು ಕಿತ್ತು ತಿನ್ನುತ್ತಿದ್ದ ಕಾಯಿಲೆಗಿಂತಲೂ ದೊಡ್ಡ ಪೆಟ್ಟು ಬಿದ್ದಂತಾಗಿ ಪೂರ್ತಿಯಾಗಿ ಬಸವಳಿದುಬಿಟ್ಟಿದ್ದಳು.
ಆದರೆ ಬಹುಶಃ ಒಳ್ಳೆಯತನಕ್ಕೆ ಸಿಕ್ಕುವ ಪ್ರತಿಫಲ ನಾವು ಮುಂದೆಯೂ ಒಳ್ಳೆಯವರಾಗಿಯೇ ಬಾಳಬಲ್ಲ ಆತ್ಮಸ್ಥೈರ್ಯ ಮತ್ತು ವ್ಯತಿರಿಕ್ತ ಸಂದರ್ಭವನ್ನೂ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಬೇಕಾದ ಸಮಯೋಚಿತ ವ್ಯವಧಾನಗಳೆಂದು
ತೀವ್ರವಾಗಿ ನಂಬಿದ್ದ ಕಾವ್ಯಾಳ ನಂಬಿಕೆ ಮುಂದಿನ ದಿನಗಳಲ್ಲಿ ಬಲವಾಯಿತು
. ಒಳಗಿನ ರೋಧನವನ್ನು ಆನಂತರ ಕಣ್ಣೀರಾಗಿ ಹೊರಹರಿಯಬಿಡಲಿಲ್ಲ. ಒಳಗೇ ಶೇಖರಿಸಿ ಮುಂದೊಮ್ಮೆ ಸ್ಫೋಟಿಸಬೇಕಾದ ಧೈರ್ಯದುಂಡೆಯನ್ನಾಗಿ ಘನೀಕರಿಸುತ್ತಾ ಬಾಳಿದಳು. ಬರುಬರುತ್ತಾ ತನ್ನದೆನುವ ಎಲ್ಲದರೆಡೆಗೆ, ಕೊನೆಗೆ ಮಗುವಿನೆಡೆಗೂ ತುಂಬಾ ಅನಾದರ ತೋರತೊಡಗಿದ ಪತಿಯ ಬುಧ್ಧಿ ಗೊಂದಲಗೊಂಡು ಮಂಕಾಗಿದೆ, ದುರ್ಬಲವಾಗಿದೆ ಎಂದರಿವಾದಾಗ ಇದೇ ಆತನನ್ನು ಆ ಕಡೆಯಿಂದ ಈ ಕಡೆಗೆ ಸೆಳೆಯಬೇಕಾದ ಸರಿಯಾದ ಸಮಯವೆಂದರಿತ ಕಾವ್ಯಾ ದೈವದೊಲುಮೆಯ ಸಹಾಯದಿಂದ ಆ ಕೆಲಸ ಮಾಡುವಲ್ಲಿ ಸಫಲಳಾದಳು. ಅವಳ ಕಾಯಿಲೆಯೂ ಸುಮಾರಾಗಿ ಗುಣವಾಗುತ್ತಾ ಬಂದಿತ್ತು. ಆ ಇನ್ನೊಂದು ಸಂಬಂಧವೂ ಹಳತಾಗುತ್ತಾ, ಹಳಸುತ್ತಾ ಬಂದಿತ್ತು. ಕೆಲವುಸಲ ಸಂದರ್ಭದ ಹಿಡಿತಕ್ಕೊಳಗಾಗಿ ತಪ್ಪೆಸಗುತ್ತಿರುವ ಸಜ್ಜನರ ಮನ ತಪ್ಪಿತಸ್ಥ ಭಾವನೆಯ ಭಾರದಿಂದ ದುರ್ಬಲವಾಗಿರುತ್ತದೆ. ಆ ಮನೋಸ್ಥಿತಿಯಲ್ಲಿ ಸ್ವಲ್ಪವೇ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಸಾಕು, ಅಲ್ಲಿಂದ ತಪ್ಪಿಸಿಕೊಂಡು ಬರಲನುವಾಗಿರುವ ಅವರು ಅಲ್ಲಿ ಸುಖವಿದ್ದರೂ ಅದನ್ನು ಮನಸಾರೆ ಅನುಭವಿಸಲಾರರು. ಆ ಕಡೆಗಿನ ಎಳೆ ದುರ್ಬಲವಾದದ್ದು ಅರಿವಾದಂತೆ ಕಾವ್ಯಾ ಅತಿಯಾದ ತಾಳ್ಮೆಯಿಂದ ಅವರನ್ನು ಬರೇ ಪ್ರೀತಿಸತೊದಗಿದಳು. ತನ್ನವರನ್ನು ಅವರು ತನ್ನವರೆನ್ನುವ ಕಾರಣಕ್ಕಾಗಿ ಮಾತ್ರ ಪ್ರೀತಿಸುವುದೇ ನಿಜವಾದ ಪ್ರೀತಿ ಎಂದೆಲ್ಲೋ ಓದಿದ್ದಾಗ ಅದು ಬೊಗಳೆ ಎಂದುಕೊಂಡಿದ್ದವಳು ಈಗ ತನ್ನ ಬಾಳನಾವೆ ಮುಳುಗಗೊಡಬಾರದೆಂಬ ಅಗತ್ಯದಲ್ಲಿ ತನಗರಿವಿಲ್ಲದಂತೆ ಅದನ್ನು ಅಕ್ಷರಶಃ ಪಾಲಿಸತೊಡಗಿದ್ದಳು. ಅವರನ್ನು ಪ್ರೀತಿಸುತ್ತೇನೆ ಎಂದು ನೂರಾರು ಬಾರಿ ತನಗೇ ಹೇಳಿಕೊಂಡು ಅದರಂತೆ ನಡೆಯುತ್ತಿದ್ದಳು. ಆಗೆಲ್ಲ ತನ್ನತನಕ್ಕೆ ಬೀಳುತ್ತಿದ್ದ ಪೆಟ್ಟು, ತಾನೇ ತನ್ನ ಭಾವನೆಗಳನ್ನು ಹಗುರಾಗಿಸಿ ತನಗೆಸಗಿಕೊಳ್ಳುತ್ತಿದ್ದ ಅವಮಾನಗಳನ್ನು ಲವಲೇಶವೂ ಲೆಕ್ಕಿಸದೇ, ಹೊರಗೆ ತೋರದೇ, ತನ್ನೊಳಗೆ ಹುದುಗಿಸಿಕೊಂಡ ತನ್ನೆದೆ ತುಂಬಾ ವಿಶಾಲವೆಂದು ಬೀಗುವುದಷ್ಟೇ ಅವಳ ಕೆಲಸವಾಗಿತ್ತು ಆ ದಿನಗಳಲ್ಲಿ. ಆದರೆ ಪ್ರತಿಫಲ ಸಿಕ್ಕಿತು. ಮೊದಮೊದಲು ಬಲವಂತವಾಗಿ ಅಳವಡಿಸಿಕೊಂಡ ಧನಾತ್ಮಕ ಪ್ರೀತಿ ಬರುಬರುತ್ತಾ ಸ್ವಾಭಾವಿಕವೆಂಬಂತೆ ಆಕೆಯ ಗುಣವಾಗಿಬಿಟ್ಟಿತು. ಅನಾಯಾಸವಾಗಿ ಪತಿಯ ತಪ್ಪನ್ನೆಲ್ಲ ಒಪ್ಪಿಕೊಂಡು ಅವರನ್ನು ತೀವ್ರವಾಗಿ ಅರಾಧಿಸತೊಡಗಿದ್ದಳು. ಆತನೂ ಒಲಿದರು, ವಿಧಿಯೂ ಮಣಿಯಿತು, ತನ್ನಷ್ಟಕ್ಕೆ ಪೂರ್ಣಪ್ರಮಾಣದ ಗಮನವನ್ನರಸುತ್ತಾ ಆ ಇನ್ನೊಬ್ಬಾಕೆಯೂ ಹೊರಟುಹೋದಳು. ಜೀವನ ಮತ್ತೆ ಮೊದಲಿನ ತನ್ನದೇ ಹಳಿಗಳ ಮೇಲೆ ಚಲಿಸತೊಡಗಿತು.
ತುಂಬಿದ ಕಣ್ಣುಗಳಲ್ಲಿ ಮುಗುಳ್ನಗು ಸೂಸುತ್ತಾ ಕುಳಿತಿದ್ದ ತಾಯಿಯ ಭಂಗಿ ಶ್ರಾವ್ಯಾಳಿಗೆ ತುಂಬಾ ಸುಂದರವೆನಿಸಿತು. "ಅಮ್ಮಾ" ಎಂದು ಕರೆದು ಮುತ್ತಿಕ್ಕಿದಾಗಲೇ ಕಾವ್ಯ ಇಂದಿಗಿಳಿದದ್ದು.
"
ಬೇಗ ಬಂದಿಯೇನೇ ಬಂಗಾರೀ?" ಎನ್ನುತ್ತಾ ಎದ್ದಳು.
"
ಹೌದಮ್ಮಾ ಕ್ಲಾಸ್ ಗಳಿರಲಿಲ್ಲ. ಎಲ್ಲರೂ ಕಾಲೇಜುಡೇ ತಯಾರಿಗಳಲ್ಲಿದ್ದಾರೆ, ನಾನು ಬಂದುಬಿಟ್ಟೆ"ಅಂದಳು ಶ್ರಾವ್ಯಾ.
"
ಸರಿ ಕೈಕಾಲು ತೊಳ್ಕೊಂಡು ಬಾ ಬಿಸಿಬಿಸಿ ಬೋಂಡಾ ಮಾಡ್ತೀನಿ" ಆನ್ನುತ್ತಾ ಅಡುಗೆಮನೆಗೆ ನಡೆದವಳ ಕೈ ಹಿಡಿದು ಮುದ್ದುಸುರಿಯುವ ದೃಷ್ಟಿಯಿಂದ ಅವಳೆದುರು ಮುಖ ತಂದು ನುಡಿದಳು ಶ್ರಾವ್ಯಾ: " ಈಗಲೆ ಬೇಡಾಮ್ಮಾ, ಬಾ ನಿನಗೊಂದು ಅಚ್ಚರಿ ಕಾದಿದೆ" ಕೈಹಿಡಿದು ಹಾಲ್ ಗೆ ಕರೆತಂದಳು. ಅಲ್ಲಿ ಸೋಫಾದ ಮೇಲೆ ಕುಳಿತಿದ್ದ ತರುಣನ್ನು ಪರಿಚಯಿಸಿದಳು "ಅಮ್ಮಾ ನನ್ನ ಫ್ರೆಂಡ್, ಜೀವನ್".
"
ನಮಸ್ಕಾರ" ಕೈ ಜೋಡಿಸಿದವಳಿಗೆ ಪ್ರತಿಯಾಗಿ "ನಮಸ್ಕಾರ ಆಂಟಿ" ಎಂದ. ಗೋಡೆಗೊರಗಿಸಿಟ್ಟಿದ್ದ ಎರಡು ಊರುಗೋಲುಗಳ ಮೇಲೆ ನೆಟ್ಟಿದ್ದ ತಾಯಿಯ ಪ್ರಶ್ನಾರ್ಥಕ ದೃಷ್ಟಿಗೆ ಉತ್ತರಿಸಿದಳು ಮಗಳು. " ಅಮ್ಮಾ, ಜೀವನ್ ಏಳು ವರ್ಷದವನಿದ್ದಾಗಲೇ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ.ಹಾಗಾಗಿ ಇದರ ಸಹಾಯ ಬೇಕೇ ಬೇಕು." ಪೆಚ್ಚಾದ ಕಾವ್ಯಾ ಮೆಲ್ಲಗೆ "ಸಾರಿ ಜೀವನ್" ಎಂದಳು. "ಅಯ್ಯೋ ಬಿಡಿ ಆಂಟಿ ಹೋದದ್ದ್ಯಾವುದೂ ನಮ್ಮದಲ್ಲ" ಅನ್ನುತ್ತಾ ನಕ್ಕ ಆತನ ದನಿ ಪರಿಚಿತವೆನಿಸಿತು. ಮೊದಲ ಭೇಟಿಯಲ್ಲೇ ತೀರಾ ಪರಿಚಿತವೆನಿಸುವ ಕೆಲವು ವ್ಯಕ್ತಿತ್ವಗಳನ್ನು ನೋಡಿದ್ದ ಕಾವ್ಯಾಳಿಗೆ ಆ ಗಳಿಗೆಗೆ ಈತನೂ ತುಂಬಾ ಪರಿಚಿತನೆನಿಸಿದ. "ಕಾಲಷ್ಟೇ ಅಲ್ಲ ಆಂಟಿ ನಮ್ಮಪ್ಪ ಅಮ್ಮನೂ ನನ್ನ ಒಂಟಿಯಾಗಿಸಿ ಬಿಟ್ಟು ಹೊಗಿಬಿಟ್ಟ್ರು, ಆದ್ರೆ ಸದ್ಯ ಬೇಕಾದಷ್ಟು ಆಸ್ತಿ ಬಿಟ್ಟು ಹೋಗಿದ್ದಾರೆ, ಅದನ್ನೂ ಕೊಂಡೊಯ್ದಿದ್ದರೆ ನನ್ನ ಗತಿ ಹೇಳಿ ಆಂಟಿ" ಮತ್ತೆ ಬಿಚ್ಚುನಗು. ತಟ್ಟನೇ ಹೊಳೆಯಿತು ಕಾವ್ಯಾಳಿಗೆ- "ಈತನೇ ಆ ಎಫ್ ಎಮ್ ನ ಚಾಲಾಕಿ ಹುಡುಗ ಜೀವನ್ ಅಲ್ಲ್ವೇನೆ ಮರೀ? " ಕೇಳಿದವಳ ಕಣ್ಣಲ್ಲಿ ಆತನೆಡೆ ಒಬ್ಬ ಅಭಿಮಾನಿಯ ಪ್ರೀತಿಯ ಹೊಳಪು. "ಹೌದು ಆಂಟಿ" ಎಂದು ಕೂತಲ್ಲಿಂದಲೇ ಬಗ್ಗಿ ತನ್ನ ಕಾಲುಮುಟ್ಟಿ ನಮಸ್ಕರಿಸಿದವನನ್ನು " ದೇವರು ಚೆನ್ನಗಿಟ್ಟಿರಲಿ ಕಂದಾ" ಎಂದು ಮನಸಾರೆ ಹಾರೈಸುವಾಗ ಕಣ್ತುಂಬಿ ಬಂದಿತ್ತು. ಇಂಥಹ ಅಸಹಾಯಕ ಪರಿಸ್ಥಿತಿಯಲ್ಲೂ ಇಷ್ಟು ಲವಲವಿಕೆ ತುಂಬಿಕೊಂಡು ಸುತ್ತಲೂ ಅದನ್ನು ಹರಡಬಲ್ಲ ಈ ಜೀವಿ ಶ್ರೇಷ್ಠತರದ್ದು ಅನ್ನಿಸಿತು. "ನಾನೂ ಇವಳಂತೆಯೇ ನಿನ್ನ ಅಭಿಮಾನಿನೇಪ್ಪಾ. ನೀನು ರೇಡಿಯೋದಲ್ಲಿ ಆಡುವ ಮಾತುಗಳು ನಿನ್ನನ್ನಾಗಲೇ ನನಗೆ ಪರಿಚಯಿಸಿಬಿಟ್ಟಿವೆ. ಹಾಗಾಗಿ ತೀರಾ ಹೊಸಬ ನೀನೆಂದೆನಿಸಲೇ ಇಲ್ಲ ನೋಡು. ಕೂತಿರು, ಕುಡೀಲಿಕ್ಕೇನಾದ್ರೂ ತರ್ತೀನಿ" ಎನ್ನುತ್ತ ಒಳನಡೆದವಳ ಮನದಲ್ಲಿ ಸಂತೋಷ ವಿಷಾದಗಳೆರಡೂ ಸೇರಿ ಏನೋ ಗೊಂದಲದ ಭಾವ.
ಕಾಫಿ ತಿಂಡಿ ತಿನ್ನುತ್ತಾ ಕ್ಷಣವೊಂದರ ಕಾಲವೂ ಮೌನವಾಗಿರದೇ ನಗುತ್ತಾ ನಗಿಸುತ್ತಾ ಇದ್ದ ಈ ಮಕ್ಕಳೊಡನೆ ಮುದವೆನಿಸಿತು ಕಾವ್ಯಾಳಿಗೆ. ನಾನಿನ್ನು ಹೊರಡಬೇಕು ಎನ್ನುತ್ತ ಎದ್ದ ಜೀವನ್ ತನ್ನ ಅಪಾಂಗರ ವಾಹನವನ್ನೇರಿ ಹೋದಾಗ "ಪಾಪ ಕಣೇ ಶ್ರಾವ್ಯಾ" ಅಂದಳು. "ಏ ಬಿಡಮ್ಮ ಪಾಪ ಅಂತೆ ಪಾಪ. ಪಾಪ ಅಲ್ಲ ಪಾಪಿ ಅವ್ನು" ಅಣಕಿಸುತ್ತಾ ಒಳಗೋಡಿದ ಮಗಳು ಚಿಗರೆಮರಿಯಂತೆ ಕಂಡಳು.
ಬಟ್ಟೆ ಬದಲಾಯಿಸಿ ಪಕ್ಕ ಬಂದು ಕೂತ ಮಗಳ ಮುಖದಲ್ಲಿ ಏನೋ ಹೇಳಬೇಕಾದ ಕಾತುರ. "ಎನು ಹೇಳಬೇಕೋ ಬೇಗ ಹೇಳಮ್ಮ್ಮಾಮಗಳೇ" ಅಂದಳು. "ಜೀವನ್ ದು ಎಷ್ಟೊಂದು ಮುದನೀಡುವ ವ್ಯಕ್ತಿತ್ವ ಅಲ್ಲ್ವಾಮ್ಮಾ? ಅವನ ಜೊತೆ ಇದ್ದಷ್ಟು ಹೊತ್ತೂ ನಗೂನೂ ಜೊತೆಲೇ ಇರುತ್ತೆ. ಅದಕ್ಕೆ ಅವನಂದ್ರೆ ನಂಗೆ ತುಂಬಾ ಇಷ್ಟ." ಅಂದಳು ಶ್ರಾವ್ಯಾ. "ನಂಗೂ ಅಷ್ಟೇ ಕಣೆ ಪುಟ್ಟಿ, ತುಂಬಾ ಇಷ್ಟ" ಅಂದಳು. "ಅದಕ್ಕೆ ನಾನು- ಜೀವನ್ ಮದುವೆಯಾಗ್ಬೇಕಂತ ಇದ್ದೇವೆ ಅಮ್ಮಾ......" ದಿಗ್ಗನೆದ್ದಳು ಕಾವ್ಯಾ. ಹದಿನೆಂಟರ ಮಗಳ ಬಾಯಲ್ಲಿ ಮದುವೆಯ ಮಾತೇ!!? "ಅಮ್ಮಾ....., ನನ್ನಮ್ಮಾ...., ಮದುವೆ ಅಂದ್ರೆ ಏನಂತ ಸರಿಯಾಗಿ ಗೊತ್ತೇನಮ್ಮಾ?" ಅಂದಳು. "ಹೌದಮ್ಮಾ ಮದುವೆ ಅಂದರೆ ಜೀವನದ ನೋವು-ನಲಿವುಗಳಲ್ಲೆಲ್ಲಾ ಅತ್ಯಂತ ಅವಶ್ಯಕವಾಗಿ ಬೇಕು ಅನ್ನಿಸುವ ಒಬ್ಬ ಪಾಲುದಾರನನ್ನು ಜೊತೆ ಮಾಡಿಕೊಳ್ಳುವುದು" ಅಷ್ಟೇ ಸರಳವಾಗಿ ಬಂತು ಉತ್ತರ. ಆದರದು ಅಷ್ಟು ಸರಳವೇ? " ಹೌದು ಮರೀ ಆದರೆ ಅಲ್ಲಿ ಇನ್ನೂ ಅನೇಕ ಕ್ಲಿಷ್ಟತೆಗಳಿವೆಯಮ್ಮಾ. ಅದರ ಬಗ್ಗೆ ಯೋಚಿಸಿ ನಿರ್ಧರಿಸುವ ವಯಸ್ಸು ನಿನ್ನದಲ್ಲವಮ್ಮಾ"- ಕಾವ್ಯಾಳ ದನಿ ಉಡುಗಿಯೇ ಹೋದಂತಿತ್ತು." ಒಪ್ತೇನಮ್ಮಾ. ನಾವೀಗಲೇ ಮದುವೆಯಾಗುವುದಿಲ್ಲ. ನನ್ನ ಓದು ಮುಗಿಯುವಷ್ಟರಲ್ಲಿ ಅವನ ವೃತ್ತಿಬದುಕೂ ದೃಢವಾಗಿರುತ್ತದೆ. ಆಗಲೇ ಮದುವೆ. ಆದರೆ ಈತನೇ ನನ್ನವನಾಗಬೇಕು ಎಂದು ನಿರ್ಧರಿಸುವ ಪ್ರೌಢತೆ ನನ್ನಲ್ಲಿಲ್ಲವೇನಮ್ಮಾ?" ಮಗಳ ಮಾತಿಗೆ "ಇಲ್ಲ" ಎಂದು ಘಂಟಾಘೋಷವಾಗಿ ಹೇಳಲು ತಾಯಿಯ ಕೈಲಾಗಲಿಲ್ಲ. ಆದರೆ ಕಾಲಿಲ್ಲದವನನ್ನು ಮೂರನೆಯವನನ್ನಾಗಿ ಮೆಚ್ಚುವುದೇ ಬೇರೆ, ತನ್ನವನನ್ನಾಗಿಸಿಕೊಳ್ಳುವುದೇ ಬೇರೆ. ಇದನ್ನು ಮಗಳಿಗೆ ಹೇಗೆ ತಿಳಿ ಹೇಳುವುದು? ಏನೋ ಹೇಳಹೊರಟವಳು ಇದು ಸರಿಯಾದ ಸಮಯವಲ್ಲ, ತಾನೇನು ಹೇಳಬೇಕೆಂದು ಸರಿಯಾಗಿ ನಿರ್ಧರಿಸಿ ಮಾತಾಡಬೇಕೆನಿಸಿತು.ಸುಮ್ಮನೆ ಒಳನಡೆದಳು. "ಅಮ್ಮಾ....." ಹಿಂಬಾಲಿಸಿ ಬಂದ ಮಗಳನ್ನು ಕೈಸನ್ನೆಯಿಂದ ಅಲ್ಲೇ ಇರು ಎಂದು ತಿಳಿಸಿ, ರೂಂ ಸೇರಿ ಬಾಗಿಲು ಹಾಕಿಕೊಂಡಳು. ಯೋಚಿಸುತ್ತಾ ಹೋದಂತೆ ಒಂದು ಗಳಿಗೆ.........
ತಟ್ಟನೆ ಹಿಂದಿನ ದಿನ ಟಿ.ವಿ. ಯಲ್ಲಿ ಕಂಡಿದ್ದ ಕಾರ್ಯಕ್ರಮವೊಂದರಲ್ಲಿ ಎರಡೂ ಕಣ್ಣು ಕಳೆದುಕೊಂಡ ಹುಡುಗನೊಬ್ಬನನ್ನು ಮದುವೆಯಾಗುತ್ತೇನೆಂದು ಮಾತನಾಡುತ್ತಿದ್ದ ಹುಡುಗಿಯ ಮುಖ ಕಣ್ಣೆದುರು ಬಂತು. ಆತ ಹಿಂದೆ ಪ್ರೀತಿಸಿದ್ದ ಹುಡುಗಿಯ ಎತ್ತರದ ಅಂತಸ್ತು ಒಡ್ಡಿದ್ದ ಎಲ್ಲಾ ತಡೆಗಳನ್ನೆದುರಿಸಿ ಮುನ್ನುಗ್ಗುತ್ತಿದ್ದ ಅವರ ಪ್ರೀತಿಯನ್ನು ತಡೆಯಲು ಕೊನೆಯ ಹೆಜ್ಜೆಯಾಗಿ ಅವನ ಎರಡೂ ಕಣ್ಣುಗಳನ್ನು ಕೀಳಿಸಿತ್ತು. ಆ ವಾರ್ತೆ ಬಿತ್ತರಿಸಿದ್ದ ಟಿ.ವಿ. ಚಾನೆಲ್ ಒಂದರ ಕಚೇರಿಗೆ ಓಡಿ ಬಂದಿತ್ತು ಈ ಹೆಣ್ಣು. ಇಷ್ಟಾದರೂ ತನ್ನ ಪ್ರೀತಿಯ ಹುಡುಗಿಗೆ ಒಳ್ಳೆಯದನ್ನೇ ಹಾರೈಸುತ್ತಿರುವ ಆತ ಹೃದಯವಂತಿಕೆಗೆ ಸೋತು ಅವನನ್ನು ಮೆಚ್ಚಿ ಮದುವೆಯಾಗಬಂದಿದ್ದೇನೆ ಎಂದು ಹೇಳುತ್ತಿದ್ದಳು ಆಹುಡುಗಿ. ಆ ಕಾರ್ಯಕ್ರಮದ ಸೂತ್ರಧಾರ, ಆ ಹೆಣ್ಣಿನ ತಾಯಿ ಮತ್ತು ತಮ್ಮ, ಸಾಲದೆಂಬಂತೆ ನೇರಪ್ರಸಾರದಲ್ಲಿ ಫೋನ್ ಮಾಡಿ ಮಾತಾಡುವ ಎಲ್ಲ ವೀಕ್ಷಕರು - ಆತನ ಮೇಲೆ ಆಕೆಗೆ ಆರಾಧನಾ ಭಾವ ಹುಟ್ಟಿದ್ದೇ ತೀರಾ ಅಸಂಭವವೆಂಬಂತೆ ರೂಪಿಸುವಲ್ಲಿ ಪಟ್ಟುಹಿಡಿದು ತೊಡಗಿದ್ದಂತಿತ್ತು.
ನೋಡಲು ಸುಮಾರಾಗಿ ಚೆನ್ನಾಗಿಯೇ ಇದ್ದ
, ಶಿಕ್ಷಕ ತರಬೇತಿ ಪಡೆದಿದ್ದ ಆ ಹುಡುಗಿ ಬೇರೆಲ್ಲೂ ಗಂಡು ಸಿಕ್ಕಿಲ್ಲವೆಂದು ಈ ಸಾಹಸಕ್ಕೆ ಧುಮುಕಿರಲಿಕ್ಕಿಲ್ಲ. ಆದರೆ ಹೆಣ್ಣೊಂದು ಕ್ಷಣಮಾತ್ರದಲ್ಲಿ ಈ ದಿಟ್ಟ ನಿರ್ಧಾರ ತೆಗೆದುಕೊಂಡು ತನ್ಮೂಲಕ ಶ್ರೇಷ್ಥಸ್ಥಾನಕ್ಕೇರುವುದು ಈ ಸಮಾಜಕ್ಕೆ ಅರ್ಥವಾಗದ್ದಾಗಿತ್ತು ಮತ್ತು ಬೇಡವಾದದ್ದೂ ಅಗಿತ್ತು. ಹಾಗಾಗಿ ಅವಳಿಗೆ ನಿರುತ್ಸಾಹವೆರಚಿ ಆ ಯತ್ನದಿಂದಾಚೆಗೆ ತರುವ ಪ್ರಯತ್ನವೇ ಒಂದು ಸ್ವಾರಸ್ಯಕರ ಕಾರ್ಯಕ್ರಮವೆಂಬಂತೆ ಮೂಡಿಬರುತ್ತಿತ್ತು. ಕೊನೆಯಲ್ಲಿ ಬಂದು ಕುಳಿತ ಆ ಕಣ್ಣು ಕಳೆದುಕೊಂಡ ಹುಡುಗನೂ ಈಕೆಯದು ಮೂರ್ಖನಿರ್ಧಾರವೆಂದು ಕಟುವಾಗಿ ಹೇಳತೊಡಗಿದಾಗ ಮೊದಲೇ ಕಸಿವಿಸಿಗೊಂಡಿದ್ದ ಮನ ರೊಚ್ಚಿಗೆದ್ದಿತ್ತು. ಸಾಮಾನ್ಯವಾಗಿ ಇಂಥಹದ್ದಕ್ಕೆ ಕೈಹಾಕದ ತಾನು ಅಂದ್ದು ಫೋನ್ ಕೈಗೆತ್ತಿಕೊಂಡಿದ್ದಳು. "ವೈಯುಕ್ತಿಕವಾಗಿ ನಿಮಗವಳ ನಿರ್ಧಾರ ತಪ್ಪೆನಿಸಿರಬಹುದು. ನೀವೆಲ್ಲ ಆಕೆಯ ಹಿತೈಷಿಗಳೆಂದುಕೊಳ್ಳುವಿರಾದರೆ, ಆ ನಿರ್ಧಾರದ ಹಿತಾಹಿತಗಳನ್ನು ಆಕೆಗೆ ತಿಳಿಹೇಳಬಹುದು. ಆದರೆ ಆ ದಿಟ್ಟ ಹೆಜ್ಜೆಯಿಡಲು ದೃಢವಾಗಿ ನಿರ್ಧರಿಸಿರುವ ಆಕೆಯನ್ನೊಂದು ಮೂರ್ಖ ಜೀವಿಯನ್ನಾಗಿ ಬಿಂಬಿಸಿ ಪ್ರೇಕ್ಷಕರ ಕಣ್ಣಲ್ಲಿ ನಿಮ್ಮನ್ನು ನೀವು ಏನೆಂದು ಬಿಂಬಿಸಹೊರಟಿರುವಿರಿ? ಏನಪ್ಪಾ, ಕಣ್ಣೆರಡೂ ಕಳಕೊಂಡಿರುವ ನಿನಗಾಗಿ ಹೆಣ್ಣುಮಕ್ಕಳು ಕೈಯ್ಯಲ್ಲಿ ಮಾಲೆ ಹಿಡಿದು ಕಾಯುತ್ತಿರುವರೆಂದುಕೊಂಡೆಯಾ? ಅಥವಾ ಒಂಟಿ ಜೀವನ ನಡೆಸುವ ನಿರ್ಧಾರ ನಿನ್ನದ್ದಾದರೆ ಅದನ್ನಾಕೆಗೆ ಸ್ಪಷ್ಟವಾಗಿ ಹೇಳು. ಹಿಂದಿನದನ್ನು ಮರೆಯಲು ಸಮಯ ಬೇಕು..........ಮುಂದಿನ ಬಾಳಿಗಾಗಿ ಜೀವನೋಪಾಯ ಕಂಡುಕೊಳ್ಳಲು ಸಮಯ ಬೇಕು.....ಇವೇ ಮುಂತಾದ ಕಳ್ಳನೆಪಗಳೇಕೆ? ಅಮ್ಮಾ, ಹೆತ್ತ ತಾಯಿ ನೀನು. ಮಗಳ ಮನದಾಳ ಮೊದಲೇ ತಿಳಿದುಕೊಳ್ಳದೇ ಈ ನಿರ್ಧಾರ ಇಷ್ಟು ಬಲಿತ ಮೇಲೆ ಅದನ್ನು ಬದಲಾಯಿಸುವ ಪ್ರಯತ್ನ ಈ ನೇರಪ್ರಸಾರದ ಕಾರ್ಯಕ್ರಮದಲ್ಲಾಗಬೇಕೆ? ಅಪ್ಪಾ ವರದಿಗಾರ, ವೈಯುಕ್ತಿಕ ವಿಷಯಗಳನ್ನು ಕೆದಕಿ ಇನ್ನಷ್ಟು ಹಸಿಮಾಡಿ, ಅಲ್ಲಿ ಇನ್ನೊಂದಿಷ್ಟು ನಿರುಪಯುಕ್ತ ಪ್ರಶ್ನೆಗಳನ್ನೆಸೆದು, ಮುಂದಿರುವಾಕೆಯ ಹೆಜ್ಜೆ ಸರಿಯಾದರೂ ಸರಿ, ತಪ್ಪಾದರೂ ಸರಿ- ಕಾರ್ಯಕ್ರಮವನ್ನು ಸ್ವಾರಸ್ಯಗೊಳಿಸಬೇಕೆಂಬ ಒಂದೇ ಕಾರಣಕ್ಕಾಗಿ ದೃಶ್ಯಮಾಧ್ಯಮದ ಮೂಲ ಉದ್ದೇಶವನ್ನೇ ಮೂಲೆಗಿಟ್ಟಿದ್ದೀಯಲ್ಲಾ......... ಇದು ಸರಿಯಾ....?..........
ಮಧ್ಯೆ ತಡೆಯಲೆತ್ನಿಸಿದಾಗಲೆಲ್ಲ , ಇನ್ನಷ್ಟು ಏರುದನಿಯಲ್ಲೇ ಮುಂದುವರಿಯುತ್ತಿದ್ದ ಅವಳ ಮಾತನ್ನು ತುಂಡರಿಸಲು ಆ ಮಾಧ್ಯಮದವರಿಗೆ ಇಷ್ಟು ಹೊತ್ತಾಗಿ ಬಿಟ್ಟಿತು. ಫೋನ್ ತನ್ನಷ್ಟಕ್ಕೇ ಕಟ್ ಆಗಿತ್ತು. ಆಗ ತುಂಡಾದ ಯೋಚನಾಸರಣಿ ಈಗ ಮುಂದುವರೆದಿತ್ತು.....
ಆ ಹುಡುಗಿಯ ನಿರ್ಧಾರ ಗೌರವಾತ್ಮಕವಾಗಿ ಕಂಡದ್ದಾದರೆ ತನ್ನ ಮಗಳದ್ದ್ಯಾಕೆ ಅಲ್ಲ? ಗಂಡ ಹೆಂಡಿರಲ್ಲಿ ಪರಸ್ಪರ ಒಳ್ಳೆಯತನ-ಕೆಟ್ಟತನ, ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದು, ಹೊಂದಿಕೊಳ್ಳುವುದು-ಇವ್ಯಾವುದನ್ನೂ ಮುಂಚಿತವಾಗಿ ಊಹೆ ಮಾಡಲಾಗದು. ಮದುವೆಯೆಂಬುದೊಂದು ಅದೃಷ್ಟದಾಟ. ವೈವಾಹಿಕ ಜೀವನ ಕ್ಷಣಕ್ಷಣಕ್ಕೂವಿವಿಧ ತಿರುವು ತೆಗೆದುಕೊಳ್ಳುವ ವಿಚಿತ್ರ ಬೆಳವಣಿಗೆಗಳ ಸರಮಾಲೆ. ಹಾಗಾಗಿ ಮಗಳ ಹಣೆಬರಹದಲ್ಲಿ ತಾನು ಕೈಯ್ಯಾಡಿಸಿ ಏನು ತಿದ್ದಬಲ್ಲೆ? ಈಗ ಅವಳ ನಿರ್ಧಾರವನ್ನು ತಾನು ಗೌರವಿಸಿದರೆ ಪತಿಯೂ ಆ ನಿಟ್ಟಿನಲ್ಲಿ ಯೋಚಿಸಿಯಾರು. ಜೀವನ್ ನ ಕೌಟುಂಬಿಕ ಹಿನ್ನೆಲೆ, ಜೀವನೋಪಾಯದ ಬಗೆ - ಇವೇ ಮುಂತಾದುವುಗಳ ಬಗ್ಗೆ ಮಗಳೊಂದಿಗೆ ಮಾತನಾಡಿ ಸ್ಪಷ್ಟಪಡಿಸಿಕೊಳ್ಳುವುದೇ ಈಗಿನ ಸರಿಯಾದ ಮುಂದಿನ ಹೆಜ್ಜೆ ಎನ್ನಿಸಿತು.
ಮುಖ ತೊಳೆದುಕೊಂಡ ಮೇಲೆ ಮನ ಹಗುರಾದಂತನ್ನಿಸಿತು. ಬಾಗಿಲು ತೆರೆದು ಹೊರಬಂದರೆ, ಬಾಗಿಲಲ್ಲೇ ಮೊಣಕಾಲ ನಡುವೆ ಮುಖ ಹುದುಗಿಸಿ ಕೂತಿದ್ದಳು ಶ್ರಾವ್ಯಾ. "ಏ ಚಿನ್ನಮ್ಮಾ" ಎಂದು ಬಾಗಿ ಮುಖ ಎತ್ತಿದವಳೇ "ನಿನ್ನ ಎಲ್ಲ ಹೆಜ್ಜೆಗಳಲ್ಲೂ ನಾನು ನಿನ್ನೊಂದಿಗಿದ್ದೇನಮ್ಮಾ" ಎಂದಳು. "ನನಗ್ಗೊತ್ತಿತ್ತಮ್ಮಾ .... ನೀನು ಹೀಗೆಯೇ ಹೇಳ್ತೀಯಾ ಅಂತ" ಅಂದವಳೇ ಶ್ರಾವ್ಯಾ ತಾಯಿಯನ್ನಪ್ಪಿಕೊಂಡಳು.