Friday, September 6, 2013

ಇಂಬು ನೀಡಿತೇ ನಂಬಿಕೆ?!

 
ಹೌದು ಕಣಪ್ಪಾ, ನಿನಗನ್ನಿಸಿದಂತೆ ಇತ್ತೀಚೆಗೆ ನನಗೂ ನಿನ್ನಿಂದ ನಾನು಼ ಸ್ವಲ್ಪ ದೂರ ಬಂದಿರುವಂತೆ ಅನ್ನಿಸುತ್ತಿದೆ. ಹೇಳುತ್ತಾರಲ್ಲಾ, ನಮ್ಮ ಆತ್ಮಸಾಕ್ಷಿ ನಮ್ಮನ್ನು ಒಪ್ಪದಿದ್ದಾಗ ಯಾರನ್ನೂ ಸುಲಭವಾಗಿ ತಲುಪಲಾಗುವುದಿಲ್ಲವೆಂದು-ಹಾಗಾಗಿದೆ ಈಗ. ಮೊದಲೆಲ್ಲ ನಿನ್ನ ಮುದ್ದು ಮುಖದ ನೆನಪಾದಾಗಲೆಲ್ಲ ನನ್ನ ಮನಃಪಟಲದಲ್ಲಿ ಬಂದು ಪ್ರತಿಷ್ಠಾಪಿತನಾಗುತ್ತಿದ್ದೆ. ಅನಿನ್ನ ಸುಂದರವಾದ , ಕಪಟವಿಲ್ಲದ , ಸಾಂತ್ವನವೀಯುವ ಆತ್ಮೀಯನೋಟ ಹಾಗೂ ತಂಪೆರೆಯುವ ನಗುವಿನಿಂದ ನನ್ನತನವನ್ನೆಲ್ಲ ಆವರಿಸಿ "ನಿನಗೇಕೆ ಚಿಂತೆ ಅನು, ನಾನಿದ್ದೇನೆ " ಎಂಬ ಮಾತುಗಳಿಂದ ನನ್ನ ಮೈಮರೆಸುತ್ತಿದ್ದೆ. ಈಗ ಮಾತ್ರ ನಿನ್ನನ್ನೇ ನೆನೆಯುತ್ತಾ "ಒಮ್ಮೆ ಬಾರೋ, ನಿನ್ನ ಆ ನಗುವಿನ ತಂಪಿಂದ ನನ್ನೊಳಗಿನ ಎಲ್ಲ ಉರಿಯನ್ನು ಆರಿಸೋ. ಅದಿಲ್ಲದಿದ್ದರೆ ಬೇಡ-ನನಗೇನೂ ಕೊಡಬೇಡ ಬಿಡು, ಸುಮ್ಮನೆ ನನ್ನ ಮನದಲ್ಲಿ ಮತ್ತೆ ಸಾಕ್ಷಾತ್ಕಾರವಾಗೋ" ಎಂದು ಕೂಗಿ ಕರೆದರೂ ನೀ ಬರುತ್ತಿಲ್ಲ. ನೀ ಬರುತ್ತಿಲ್ಲ ಅನ್ನುವುದಕ್ಕಿಂತಲೂ, ಮುಂಚಿನಷ್ಟು ಪ್ರಾಮಾಣಿಕವಾಗಿ ನಾ ನಿನ್ನ ಕೂಗಲಾಗುತ್ತಿಲ್ಲ ಎಂದರೇನೇ ಸರಿಯಾಗಿರುತ್ತದೆ ಅನ್ನಿಸುತ್ತದೆ.ಯಾಕೋ ನಾನು ತಪ್ಪು ಮಾಡಿ ಬಿಟ್ಟೆನೇನೋ ಅನ್ನಿಸುತ್ತಿದೆ. ಆ ತಪ್ಪಿತಸ್ಥ ಭಾವನೆಯ ಮುಸುಕಿದ ಮೋಡ ನನ್ನೆಲ್ಲ ಚಿಂತನೆಗಳನ್ನು ಕೊನೆಗೆ ಅತ್ಯಂತ ಪ್ರಾಮಾಣಿಕವಾಗಿದ್ದ ನಿನ್ನಬಗೆಗಿನ ಆಲೋಚನೆಯನ್ನೂ ಮಬ್ಬಾಗಿಸಿದೆ.ಹೌದು ಮುದ್ದೂ, ಆ ಅನಿಶ್ಚಿತತೆಯ ಗಳಿಗೆಗಳಲ್ಲಿ ನೀನು ಸ್ಪಷ್ಟವಾಗಿ ನನ್ನೊಳಗಿನ ನಿನ್ನ ಧ್ವನಿಯ ಸೂಚನೆಯಂತೆ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದ ನಂತರವೇ ನಾನು ಮುಂದುವರೆದದ್ದು. ಅದೂ ಸರಿಯಿಲ್ಲವೆಂದೆನಿಸಿದ ಒಂದು ಕ್ಷಣ -ಆ ಸೂಚನೆಯನ್ನೂ ಮೀರಿ ನಕಾರಾತ್ಮಕ ನಿಲುವನ್ನು ಆ ಕಡೆಗೆ ತೋರಿದ್ದೂ ಆಯಿತು. ಆದರೆ ನನ್ನ ಆಸೆಯನ್ನು ಮೆಟ್ಟಿ ನಿಂತು ಅದರ ತೀವ್ರತೆಯನ್ನೂ ಮೀರಿದ್ದ ಈ ಬೇಡವೆಂಬ ನಿಲುವು ದೃಢವಾಗದಂತೆ ಮಾಡಿದ್ದು ಯಾರೋ ಮುಕುಂದಾ? ಸರಿ, ನಾನು ಮುಂದುವರೆದೆ. ಅದು ತಪ್ಪಾಗಿರಲಾರದೆಂಬ ಭರವಸೆಯಲ್ಲೇ, ಆ ನಿಟ್ಟಿನಲ್ಲೇ ಯಾಕೆ ಆಲೋಚಿಸಿದೆ ಗೊತ್ತಾ? ನೀನು ನನ್ನನ್ನು ಆಧರಿಸಿರುವೆ , ನಿನ್ನ ಆಧಾರದ ತಳಪಾಯದ ಮೇಲೆ ತೆಗೆದುಕೊಳ್ಳುವ ಯಾವ ನಿರ್ಧಾರವೂ ತಪ್ಪಲ್ಲ ಎಂಬುವುದು ನನ್ನ ಅಂದಿನ ಹಾಗೂ ಇಂದಿನ ನಂಬಿಕೆಯೂ ಹೌದು. ಇದು ಸುಳ್ಳಲ್ಲವಲ್ಲಾ? ಹಾಗಾದರೆ ನೀನೇಕೆ ದೂರ ಹೋದೆ? ವಂಚನೆಯಿದ್ದಲ್ಲಿ ನಾನಿರಲಾರೆ ಎಂದೆಯಾ? ಅದು ಮಾತ್ರ ಸುಳ್ಳು. ಎಷ್ಟೋ ಬಾರಿ ಕೆಟ್ಟದರ ಹಾವಳಿಯಿಂದ ಮನುಷ್ಯತ್ವ ನಾಶವಾಗುವ ಘಟ್ಟದಲ್ಲೂ ನೀನಲ್ಲಿರುವುದನ್ನು ನಾನು ನೋಡಿದ್ದೇನೆ. ನಮ್ಮ ನೆರೆಯ ಸಾಧು, ಭೂಗತ ಜಗತ್ತಿನ ಅನಭಿಷಿಕ್ತ ದೊರೆ ಅನಿಸಿಕೊಂಡಿದ್ದವನು, ನಮ್ಮ ಮನೆಯ ಸಾತ್ವಿಕ ವಾತಾವರಣಕ್ಕೆ ಬಾಗಿ ಹಬ್ಬ ಹರಿದಿನಗಳಲ್ಲಿ ಬಂದ್ದು ನಮ್ಮ ತಂದೆಯ ಅಡಿಗಳಿಗೆರಗುತ್ತಿದ್ದ. ಅವನು ತನ್ನ ಭವಿಷ್ಯ ಉಜ್ವಲವಾಗಲೆಂದೋ , ತನಗೆ ದೀರ್ಘಾಯುಷ್ಯ ಸಿಗಲಿ ಎಂದೋ ಬಯಸಲಾಗದು. ಮರುಕ್ಷಣದ ತನ್ನ ಜೀವಿತ ಇನ್ಯಾವನದೋ ಕತ್ತಿಯೇಟಿನ ಹೆಸರಿಗೋ , ಯಾವುದೋ ಪೋಲೀಸನ ಬಂದೂಕದ ಹೆಸರಿಗೋ ಬರೆಯಲ್ಪಡಬಹುದೆಂಬ ಅನಿಶ್ಚಿತತೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ರೌಡಿಯೊಬ್ಬ ಅಶೀರ್ವಾದದ ಆಶಯವಿಲ್ಲದೆ, ಮುಂದಿರುವ ಚೇತನದ ಅಡಿಗೆರಗುವ ವಿನಯದಲ್ಲಿರುವುದು ನೀನಲ್ಲದೆ ಇನ್ನೇನೋ ಹರಿ? ಕಣ್ಣೆದುರು ಯಾವುದೋ ವಾಹನದಡಿ ಬೀಳಹೊರಟಿದ್ದ ಮಗುವನ್ನು ಅವನು ಹಾರಿ ಬಂದು ಎತ್ತಿಹಿಡಿದು, "ನಾ ನೋಡಿರದಿದ್ದರೆ ನಿನ್ನ ಪಾಡೇನಾಗುತ್ತಿತ್ತೋ ಮರೀ?" ಎನ್ನುತ್ತಾ ಕಣ್ಣೀರಿಳಿಸುತ್ತಿದ್ದಾಗ ಅವನ ಕಂಬನಿಯ ಕಣಕಣದಲ್ಲೂ ನಾ ಕಂಡದ್ದು ನಿನ್ನನ್ನೇ. ಎಷ್ಟೋ ಕೊಲೆಗಳನ್ನು ನಿರ್ದಾಕ್ಷಿಣ್ಯವಾಗಿ ಮಾಡಿ ಮುಗಿಸಿದ್ದ ಆ ಕ್ರೂರಿ ಯಾವುದೋ ಒಂದು ಮಗುವಿಗಾಗಿ ಅಳುತ್ತಿದ್ದುದಕ್ಕೆ ಕಾರಣವಾದ ಆ ನಿಸ್ವಾರ್ಥ ಕಳಕಳಿ, ನಿಷ್ಕಲ್ಮಷ ಪ್ರೇಮ ನಿನ್ನ ಸ್ವರೂಪವಲ್ಲದೇ ಇನ್ನೇನು? ಆ ಅಮಾನುಷ ವ್ಯಕ್ತಿತ್ವದಲ್ಲೂ ನೀನಿದ್ದೀಯ ಎಂದದ ಮೇಲೆ ನನ್ನಿಂದ ಅತ್ತತ್ತ ಯಾಕೋ ಸಾಗಿತ್ತಿರುವೆ? ಅವನಿಗಿಂತ ಕಡೆಯೇ ನಾನು? ನಾನು ಮಾಡಿದ್ದು ತಪ್ಪೆನ್ನುತ್ತೀಯಾ? ಅಯ್ಯೋ ನನ್ನ ಬಂಗಾರೂ, ಕ್ಷಣ ಕ್ಷಣವೂ "ನನ್ನಿಂದ ತಾಪ್ಪು ಮಾತ್ರ ಮಾಡಿಸಬೇಡ"ಎಂದು ಕೇಳಿಕೊಂಡದ್ದೆಲ್ಲ ನಿನ್ನನ್ನು ತಲುಪಿರಲೇ ಇಲ್ಲವೇ ಹಾಗಾದರೆ? ನಾ ಹೀಗೆ ಕೇಳಿಕೊಂಡಾಗಲೆಲ್ಲ "ನಾ ತಪ್ಪಾಗಗೊಡೆನು" ಅಂತ ನೀನಂದದ್ದೂ ಸುಳ್ಳೇ ಹಾಗಾದರೆ? ಅಥವಾ ನೀನು ಹಾಗಂದಂತೆ ನನಗನಿಸಿದ್ದು ನನ್ನ ಭ್ರಮೆಯೇ? ಅಲ್ಲವೆಂದಾದರೆ ನಾ ಮಾಡಿದ್ದೇ ತಪ್ಪಾದರೆ ಆ ಹೆಜ್ಜೆ ಇಡಲು ನೀ ಪ್ರೇರೇಪಿಸಿದ್ದೇಕೆ? ನಾನು ಹೆಜ್ಜೆ ಊರಲು ಕಾಲೆತ್ತಿದ್ದಾಗಕೆಳಗೆ ಮೃದುವಾದ ಹೂ ಹಾಸಿನ ಮೆತ್ತೆಯೇ ಕಾಣುವಂತೆ ಮಾಡಿದ್ದೇಕೆ? ಮುಳ್ಳಿರುವಂತೆ ತೋರಿಸಬಾರದಿತ್ತೇ? ಆ ಹೆಜ್ಜೆಗಳು ನಾನು ಸಫಲವಾಗುವತ್ತಲೇ ನನ್ನನ್ನು ಕೊಂಡೊಯ್ಯುವವೆಂಬ ನನ್ನ ನಂಬಿಕೆಗೆ ಒತ್ತು ಕೊಟ್ಟಂತೆ ನನ್ನ ಪ್ರಯತ್ನಗಳಿಗೆ ಅನುಕೂಲವಾಗುವ ಸಂದರ್ಭಗಳನ್ನೇ ಒದಗಿಸಿದ್ದೇಕೆ? ಆಗೆಲ್ಲ ನಾನು ಹೀಗೇ ಆಗುತ್ತದೆಂದುಕೊಂಡಾಗಲೆಲ್ಲ ಹಾಗಾಗದಂತೆ ನೋಡಿಕೊಂಡು ಒಂದೆರದು ನಿದರ್ಶನಗಳಿಂದ ನಿನ್ನ ವಿರೋಧವನ್ನು ನನಗರಿವಾಗಿಸುತ್ತಿದ್ದರೆ, ಬಹುಶಃ ಈ ಯೋಚನೆಯೊಂದು ಯೋಜನೆಯಾಗುತ್ತಿರಲಿಲ್ಲವೆನೋ! ಆದ್ರೆ ನೀನು ಪ್ರತಿಬಾರಿಯೂ ನನ್ನನ್ನು ಪ್ರೋತ್ಸಾಹಿಸಿದೆ. ಅನುಕೂಲ ಸಂದರ್ಭಗಳನ್ನೊದಗಿಸಿದೆ. ನಾನು ಮುಚ್ಚಿಡಬೇಕಾದ್ದನ್ನೆಲ್ಲ ನಿನ್ನ ಲೀಲೆಯಿಂದ ಮರೆಮಾಚಿದೆ. ನನಗೆ ಪೂರಕವಾಗಿದ್ದ ಸಂದರ್ಭಗಳಲ್ಲೆಲ್ಲ ನಿನ್ನ ಒಲವಿನ ಭಾಗವಹಿಸುವಿಕೆಯನ್ನು ನಾ ಕಾಣುತ್ತಿದ್ದೆನಲ್ಲೋ ಮುಕುಂದಾ?ಇದು ನನ್ನ ತಪ್ಪೇ? ಇಲ್ಲವೆನ್ನುತ್ತೀಎಯಾ? ಹಾಗಾದರೆ ನೀ ನನ್ನಿಂದ ದೂರ ಹೋಗಲು ಕಾರಣವಾದ ನನ್ನ ತಪ್ಪೇನು ಹೇಳಿಬಿಡಪ್ಪಾ.
ಓಹೋ! ಆಸೆಯೇ ತಪ್ಪೆನ್ನುತ್ತೀಯಾಹರೀ ? ಸರಿ ಬಿಡು, ಅಣುರೇಣುತೃಣಕಾಷ್ಠಗಳಲ್ಲೂ ಹೊಮ್ಮಿರುವ ನಿನಗೆ ಹೆಣ್ಣಿನ ಮನದೊಳಗೆ ಹೊಕ್ಕಿ ನೋಡಲಾಗಲಿಲ್ಲವೆ? ಹೊಕ್ಕಿದ್ದರೂ ಅಲ್ಲಿದ್ದ ಅತಿಸಹಜ ಬಯಕೆಯೊಂದು ಕಾಣಲಿಲ್ಲವೇ? ಕಂಡಿದ್ದರೂ ಅದರ ತೀವ್ರತೆಯನ್ನು ಮಾತ್ರ ನೀನು ಅರಿತುಕೊಳ್ಳಲಾಗಲಿಲ್ಲವೆಂದಾಯಿತು.ಹೌದು ಕಂದಾ, ನಾನು ಆ ಆಸೆಯ ಬಗ್ಗೆ ನಿನ್ನಲ್ಲಿ ತೋಡಿಕೊಂಡಾಗಲೆಲ್ಲ ಮತ್ತೆ ನೀನಂದಿದ್ದು ಅದೇ ಮಾತು- "ನಾನಿಲ್ಲವೇ ನಿನಗೆ?" ನನ್ನ ಪಾಲಿಗೆ ನೀನಿದ್ದೀಯ ಅಂದುಕೊಂಡು ನಾನು ಮತ್ತೆ ಮತ್ತೆ ನನ್ನ-ನಿನ್ನ ಒಡನಾಟದ ಲೋಕದೊಳಗೆ ಕಳೆದು ಹೋದೆ. ಆ ಭಾವತರಂಗದೊಳಗೆ ಮುಳುಗಿ ತಳದವರೆಗೂ ಹೋಗಿ ಹುಡುಕಾಡಿದೆ. "ಮನುಷ್ಯರ ಮಧ್ಯೆ ವ್ಯಕ್ತಿಸ್ವರೂಪದಲ್ಲಿ ನಾನಿರಲಾರೆ -ನಿನ್ನ ಭಾವನೆಗಳಿಗನುಸಾರವಾಗಿ ನನ್ನನ್ನು ಕಲ್ಪಿಸಿಕೊ" ಎಂದೆಯಲ್ಲಾ ಎಂದು ಕ್ಷಣ ಕ್ಷಣ ನಿನ್ನ ಸಂಗವನ್ನೇ ಕಲ್ಪಿಸಿಕೊಂಡದ್ದಾಯಿತು. ಆದ್ರೆ ನಾನು ತಾಯಿಯಾಗಿ ನಿನ್ನನ್ನು ಕಂದನನ್ನಾಗಿಸಿ ನನ್ನ ಪಾತ್ರವನ್ನು ನಾನು ನಿರ್ವಹಿಸಿದೆನೇ ಹೊರತು ನ್ನಿನ್ನಿಮ್ದ ಯಾವ ಪ್ರತಿಕ್ರಿಯೆಯೂ ಬರಲೇ ಇಲ್ಲ. ಬೆಳಿಗ್ಗೆ ನಿನ್ನನ್ನೆಬ್ಬಿಸುತ್ತಿದ್ದೇನೆಂದುಕೊಳ್ಳುತ್ತಿದ್ದಾಗ-ರಮಿಸಿ, ಓಲೈಸಿ ಏನೇನು ಮಾಡಿದರೂ ನೀನೇಳುತಿಲ್ಲವೆನ್ನಿಸಿ ಕೊನೆಗೆ ನನ್ನ ಮುತ್ತಿನ ಮಾಲೆಯ ಆಮಿಷವೊಡ್ಡಿದಾಗ ಮಣಿದು ನೀನೆದ್ದೆ ಎಂದುಕೊಳ್ಳುತ್ತಿದ್ದೆ. ಎಣೆಯಿಲ್ಲ ಮೌಲ್ಯದ ಮುತ್ತೊಂದು ನನ್ನ ಮುತ್ತಿಗೆ ಹಂಬಲಿಸುವುದು ನನಗೇ ಹೆಮ್ಮೆಯೆಂದೆನಿಸುತ್ತಿದ್ದಾದರೂ ನಾ ನಿನಗೆ ಮುತ್ತಿಡಲಾಗಲೇ ಇಲ್ಲ, ನೀನೇಳಲೇ ಇಲ್ಲ. ಮತ್ತೆ ನಿನ್ನ ತುಂಟಾಟಗಳಿಂದ ಸುಸ್ತಾಗಿ ನಿನ್ನನ್ನೆಳೆದುಕೊಂಡು ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆಂದುಕೊಂಡ ಸಂದರ್ಭ- ಬಿಸಿನೀರು ಕಾಯಿಸಿ ನಿನ್ನ ಮುದ್ದುಶರೀರವನ್ನು ಸ್ನಾನ ಮಾಡಿಸುತ್ತಿದ್ದೇನೆಂದುಕೊಂಡಾಯಿತು, ಸುಂದರಪಾದಗಳ ತೊಳೆಯುವಾಗ ಜಗದೋಧ್ಧಾರನ ಪಾದಗಳನ್ನು ತೊಳೆಯುವ ಭಾಗ್ಯ ನನ್ನದೆಂದು ಧನ್ಯತೆಯನ್ನನುಭವಿಸಿದ್ದೂ ಆಯಿತು. ನಿನ್ನ ಮೈ ಒರೆಸಿ, ನನ್ನ ಕಂದನಿಗೆ ಎಂದುಕೊಂಡು ಅಂಗಡಿಗಳಲ್ಲಿ ಆಸೆಯಿಂದ ನೋಡುತ್ತಿದ್ದ ಅಂಗಿಗಳಲ್ಲೊಂದನ್ನು ನಿನಗೆ ತೊಡಿಸಿದ್ದೂ ಆಯಿತು, ಆದರೆ ಆ ಬಟ್ಟೆಯಿಂದಾವೃತನಾಗಿ ನೀನುಮಾತ್ರ ನನ್ನ ಕಣ್ಣ ಮುಂದೆ ಬರಲೇ ಇಲ್ಲ. ನಿನಗುಣಿಸಲೆಂದು ಬಗೆಬಗೆಯ ತಿಂಡಿಗಳನ್ನು ತಯಾರಿಸಿದ್ದೆನಾದರೂ, ನೀನು ತಿನ್ನಬರಲೇಇಲ್ಲ. ಯಾಕೋ ಕಂದ? ನನ್ನಿಂದ ನಿನಗೆ ಸಮರ್ಪಿತವಾದ ನನ್ನ ಜೀವಿತದ ಪ್ರತಿಗಳಿಗೆಯನ್ನೂ ನೀನು ಉಢಾಫೆಯಾಗಿ ಕಂಡದ್ದೇಕೋ ಮುಕುಂದಾ? ಕಂದಾ, ಮುದ್ದೂ, ಚಿನ್ನಾ, ಬಂಗಾರೂ, ನನ್ನ ಜೀವವೇ, ನನ್ನ ಉಸಿರೇ.... ಎಂದ್ದೆಲ್ಲ ಬಾಯಿನೋಯುವಷ್ಟು ಬಾರಿ ಕರೆದದ್ದಾಯಿತು. ನೀನು ಮಾತ್ರ ಒಮ್ಮೆಯೂ ನನ್ನನ್ನು ಅಮ್ಮಾ ಎನ್ನಲಿಲ್ಲ. ಆ ಕರೆಯನ್ನು ಇನ್ನೆಲ್ಲಿಂದಾದ್ದರೂ ಕೇಳಿಸುವೆಯೇನೋ ಎಂದು ಕಾದೇ ಕಾದೆ. ನೀನೇ ಹೇಳಿದ್ದೆಯಲ್ಲಾ, "ನಿನ್ನ ಕಲ್ಪನೆಯಲ್ಲೇ ನನ್ನನ್ನು ಕಲ್ಪಿಸಿಕೋ. ಎಂದಾದರೊಮ್ಮೆ ಅದು ಸಾಕ್ಷಾತ್ಕಾರ ರೂಪ ತಳೆದೀತು" ಅಂತ? ಹಾಗಾಗಿ ಇನ್ನೆಲ್ಲಿಂದ್ದಾದರೂ ಆ ಕರೆ ಕೇಳಿಸಿದ್ದರೆ ಅದು ನೀನೇ ಎಂದು ನಂಬಿಯೇ ಬಿಡುತ್ತಿದ್ದೆ. ಇನ್ಯಾರಾದರೂ ಇದು ಹೀಗೇ ಎಂದು ನುಡಿದಾಗ ಹಾಗಲ್ಲದಿರಬಾರದೇಕೆ ಎಂದು ಪ್ರಶ್ನಿಸುವ ಮನ ನಿನ್ನ ಮುಂದೆ ಸದಾ ಒಪ್ಪಿಕೊಳ್ಳುತ್ತಿರುತ್ತದೆ ಕಣೊ. ನೂರುಬಾರಿ ನೀನಂದಂತೆ ನಡೆಯದಿದ್ದರೂ, ನೂರೊಂದನೇ ಬಾರಿಯೂ ನಿನ್ನನ್ನು ನಂಬುವಲ್ಲಿ ಮೊದಲಬಾರಿಯ ಶ್ರಧ್ಧೆಯೇ ಇರುವುದು ಅನ್ಯಥಾ ಶರಣಮ್ ನಾಸ್ತಿ ಎಂದಂತೆ ಅಲ್ಲದೆ ಇನ್ನೇನು ಹೇಳೋ ಹರೀ. ಅದಿರಲಿ ಬಿಡು.
ನನ್ನನ್ನೇ ಪೂರ್ತಿಯಾಗಿ ಅವಲಂಬಿಸಿರುವ , ನನ್ನನ್ನು ನಾನೆಂಬ ಒಂದೇ ಕಾರಣಕ್ಕಾಗಿ ಮಾತ್ರ ಪ್ರೀತಿಸುವ ಪುಟ್ಟ ಜೀವವೊಂದಕ್ಕಾಗಿ ಹಂಬಲಿಸಿದ್ದು ತಪ್ಪೇನೋ ಕಂದಾ? ಸಣ್ಣಂದಿನಿಂದಲೂ "ನೀನೇನಾಗುತ್ತೀಯೇ" ಅಂದವರಿಗೆಲ್ಲಾ "ಅಮ್ಮನಾಗುತ್ತೇನೆ" ಅನ್ನುವಷ್ಟು ಪ್ರಬಲ ಆಸೆಯ ಬೀಜವನ್ನು ನನ್ನೊಳಗೆ ಆಗಲೇ ಬಿತ್ತಿದ್ದು ನೀನೇ ಅಲ್ಲವೇನೋ ದೊರೆ? ಅವೇ ದಿನಗಳಲ್ಲೊಂದು ಸಲ ಹಾಲುಗಲ್ಲದ ಹಸುಳೆಯಂತೆ ನಾನು, ಉತ್ಸವದ ದಿನ ತೇರನ್ನೇರಿ ನೀನು ಬರುತ್ತಿದ್ದಾಗ ಅಲ್ಲಿ ನಿಜವಾಗಿಯೂ ನಿನ್ನನ್ನೇ ಕಂಡವಳಂತೆ "ದೇದು, ದೇದು" ಎಂದು ತೇರಿನೆಡೆಗೆ ಓಡಿದ ಘಟನೆಯ ಬಗ್ಗೆ ನಾನು ಕೇಳಿಬಲ್ಲೆ, ನೀನು ನೋಡಿರಬೇಕಲ್ಲಾ? ಮರದ ನಿರ್ಜೀವ ತೇರಿನೊಳಗೆ ಲೋಹದ ಬೊಂಬೆಯೊಂದರಲ್ಲಿ ಅದ್ಯಾವ ಜೀವಂತಿಕೆ ಕಂಡೆನೋ ಗೊತ್ತಿಲ್ಲ, ಇದೂ ನಿನ್ನಾಟವೇ- ಬಲ್ಲೆ ನಾನು.ಆ ವಯಸ್ಸಿನ ಸಹಜಜನಿತ ಭಾವನೆಗೆ ನೀರೆರೆದು ಇಂದಿಗೂ ನಿನ್ನ ರಥೋತ್ಸವದಲ್ಲಿ ತೇರಿನೊಳಗೆ ಕೂತುನಗುತ್ತಾ ನಮ್ಮೆಲ್ಲರನ್ನು ನೋಡುವಂತೆ ಭಾಸವಾಗುವಷ್ಟು ಪರಿಶುಧ್ಧತೆ ನನ್ನೊಳಗಿರಿಸಿರಿವುದು ನೀನೇ ಆದರೆ, ನಾನು ತಾಯಾಗುವ ಆಸೆಯನ್ನೂ ನೀನೇ ನೀರೆರೆದು ಪೋಷಿಸಿದ್ದು ತಾನೇ? ಆಸೆ ತಪ್ಪಾದರೆ ಅದನ್ನು ಪೋಷಿದ್ದೇಕೊ ಹೇಳೋ ದೊರೆ? ಹೇಳಪ್ಪಾ, ಏನಾದರೂ ಹೇಳೋ ಕಂದಾ....."
ನಾನಿದ್ದೇನೆ ಚಿಂತಿಸದಿರು" ಎಂಬ ನಿನ್ನ ಆಶ್ವಾಸನೆ ನನ್ನ ಕಿವಿಗೆ ಬಿದ್ದೂ ಬಿದ್ದೂ ಅದಿಲ್ಲದೆ ಬದುಕಲಾರೆನೆಂಬಂತಾಗಿದೆ ಈಗ. ಬಿಮ್ಮನೆ ಕೂತು ಅತ್ತೆತ್ತಲೋ ಬೇರೆ ಕೆಲಸದಲ್ಲಿ ಮಗ್ನನಾದಂತೆ, ಮಧ್ಯೆ ಒಮ್ಮೊಮ್ಮೆ ನನ್ನತ್ತ ಕಿರುಗಣ್ಣಲ್ಲಿ ನೋಡುತ್ತಿದ್ದರೂ ವಿಮುಖನಾಗಿರುವ ಹಠಮಾರಿ ಕೂಸಿನಂತೆಯೇ ಕಾಣಿಸಿಕೊಳ್ಳುತ್ತಿರುವುದೇಕೋ ಮರಿ? ಅರ್ಥವಿಲ್ಲದ ಈ ಮುನಿಸೇಕೋ ನನ್ನಲ್ಲಿ ಕೂಸೇ? ನಗುತ್ತಾ ಒಮ್ಮೆ ನನ್ನ ಮನದೊಳಗೆ ಬಾರೋ, ನಿನಗೆ ನನ್ನ ಮಡಿಲು ತುಂಬುವ ಇಚ್ಛೆ ಇಲ್ಲದಿದ್ದರೆ ಬೇಡ ಬಿಡು. ಆದರೆ ನನ್ನ ಮನತುಂಬಿದ್ದ ನಿನ್ನ ನಗುಮೊಗದ ಬಿಂಬ ಮಾತ್ರ ಮರೆಮಾಡಬೇಡ, ನಿನ್ನ ದಮ್ಮಯ್ಯ ನನ್ನಪ್ಪಾ.
ನಿನ್ನ ದೇವಸ್ಠಾನ ನಿನ್ನ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಪ್ರಶಸ್ತವಾದ ಜಾಗ.ಅಲ್ಲಿಗೆ ಬರುವಾಗಲೆಲ್ಲಾ ನನ್ನ ಮಡಿಲು ತುಂಬ ಬಾರೋ ಎಂದು ಕೇಳಿಕೊಳ್ಳಲೆಂದು ಬರುತ್ತಿದ್ದೆ. ಆದರೆ ನನ್ನೊಳಗಿನ ನಿನ್ನೆಡೆಗಿನ ಶ್ರಧ್ಧೆ ನಿನ್ನ ಮೂರ್ತಿಯೊಳ ಹೊಕ್ಕೊಡನೆ ನನಗೇನೋ ಮೋಡಿಯಾದಂತಾಗಿ ಏನೂ ಬೇಡಿಕೊಳ್ಳಲಾಗದೇ ಕೊಟ್ಟದ್ದ್ಯಾವುದೂ ಕಿತ್ತುಕೊಳ್ಳದಿರೋ ಹರೀ ಎಂದಷ್ಟೇ ಕೇಳಿಕೊಂಡು ಹಿಂದಿರುಗುತ್ತಿದ್ದೆ. ಆದರೆ ನಾನು ಕೇಳಿದ್ದು ನೀನು ಗಮನಕ್ಕೇ ತಂದುಕೊಂಡಿರಲಿಲ್ಲವೆಂದಾಯಿತು.ಯಾಕೆಂದರೆ ಮನದೊಳಗೆ ಕರೆದೊಡನೆ ಪ್ರತ್ಯಕ್ಷವಾಗುವ ವರವಿತ್ತಿದ್ದವನು ಈಗ ಕಿತ್ತ್ತುಕೊಂಡಿರುವೆಯಲ್ಲಾ?"
ಈಗೇನಾಗಿಬಿಟ್ಟಿದೆ?" ಎಂಬ ಗೇಲಿಯ ನೋಟ ನನ್ನತ್ತ ಎಸೆದೆಯಲ್ಲೋ ಮುರಾರೀ? ನೀನಿಲ್ಲದೇ ನನ್ನದೇನಿಲ್ಲ ಎನ್ನುವ ನನ್ನ ಜೀವಮಂತ್ರ ನನ್ನ ನಿದ್ದೆಗೆಡಿಸಿದೆ. ನೀನಿಲ್ಲ ಅನ್ನುವುದು ಸುಳ್ಳು ಎಂದೆಯಾ? ಅದೂ ಹೌದು.ಅದರೂ ನಿನ್ನನ್ನು ನನ್ನೊಳಗೆ ಕಾಣಲಾರದಾಗಿದ್ದೇನೆ ಎಂದರೆ ಸಮಂಜಸವಾದೀತು. ಯಾಕೆ ಹೀಗಾಯಿತೋ ಕಂದಾ? ನನ್ನೊಳಗಿನ ನೀನು ನಿಸ್ಸಂಶಯವಾದ ಬೆಂಬಲವಿತ್ತರೆ ಮಾತ್ರ ಮುಂದುವರೆಯುವ ನಿರ್ಧಾರ ನನ್ನದಾಗಿತ್ತು. ಅದಿದ್ದಕ್ಕೇ ನಾನು ಮುಂದುವರೆದಿದ್ದು . ಅಂದು ಬೆಂಬಲಿಸಿದ್ದ ನೀನು ಇಂದು ಕಣ್ಣು ಮುಚ್ಚಾಲೆ ಯಾಡುತ್ತಿರುವುದ್ಯಾಕೋ ? ಮುದ್ದು ಸುರಿಸುವ ನಿನ್ನ ಮುಖವನ್ನು ನೋಡುತ್ತಿದ್ದರೆ ಬರೀ ದೂರುವುದು, ಪ್ರಶ್ನಿಸುವುದು ಇಷ್ಟವಾಗುವುದಿಲ್ಲ. ಬರೀ ನೋಡುತ್ತಿರಬೇಕು, ಅನುಭವಿಸುತ್ತಿರುವ ಆ ಆನಂದ ಕಣ್ಣೇರಾಗಿ ಹರಿಯಬೇಕು, ನನ್ನ ನಾನು ಮರೆಯಬೇಕು ಅನ್ನಿಸುತ್ತದೆ. ಆದರದಾಗುತ್ತಿಲ್ಲ, ಇಂದು ನಿನ್ನ ಮುಂದೆ ಬಂದೊಡನೆ "ಯಾಕೋ?" ಎಂಬ ಪ್ರಶ್ನೆ ಹುಟ್ಟುವುದೇ ಹೊರತು ಶಾಂತವಾತಾವರಣ ಹುಟ್ಟುತ್ತಿಲ್ಲ. ಅದು ಬೇಡವಾಗಿ ನಾನು ನಿನ್ನ ಮುಂದೆ ಬರುವುದಕ್ಕೇ ಹಿಂದೇಟು ಹಾಕುತ್ತಿರುವುದು ಕಣೋ ಕಂದಾ.
ನಿನ್ನಲ್ಲಿ ಅತಿ ಕ್ಷೀಣವಾದ ಒಂದು ಅಸಮಾಧಾನವೂ ಇದೆ , ಅದೇನನ್ನ ನಿನ್ನ ಮಧ್ಯ ಬಂದಿರುವುದೂ ಇರಬಹುದು. ಹೆಣ್ಣಾಗಿ ನಾನು ಏನೋ ಪಡೆಯುವ ಭರವಸೆಯಲ್ಲಿ ಏನೆಲ್ಲ ಕಳಕೊಳ್ಳಬಹುದೋ ಾದನ್ನೆಲ ಕಳಕೊಂಡು ಬಿಟ್ಟೆ.ಈಗ ಏನೋ ಕಳೆದುಹೋಯಿತು ಅನ್ನಿಸುತ್ತಿದೆಯಾದರೂ, ಆ ಕಳಕೊಂಡ ಗಳಿಗೆಗಳಲ್ಲಿ ಭರವಸೆಯ ಹಿನ್ನೆಲೆಯಲ್ಲಿನ ಸಾರ್ಥಕ್ಯ ಭಾವ ಮಾತ್ರ ಗೋಚರಿಸಿತ್ತು. "ಮತ್ತೆ ಕಳಕೊಂಡದ್ದೇಕೆ" ಅನ್ನುವೆಯಾ? ನನ್ನೊಡಲಲ್ಲಿ ಜನಿಸಿದರೆ ಅದು ನೀನೇ ಎಂದು ಪ್ರಬಲವಾಗಿ ನಂಬಿದ್ದ, ನಿನಗಾಗಿ ಹಾಗೆ ಎದುರು ನೋಡುತ್ತಾ, ನಿನ್ನನ್ನು ಕಾಲ್ಪನಿಕವಾಗಿ ಅನುಭವಿಸಿ ಖುಶಿ ಪಟ್ಟ ನಾನು, ಭೌತಿಕವಾಗಿಯೂ ಅನುಭವಿಸಬೇಕೆಂದು ಆಸೆ ಪಟ್ಟೆ ಕಣೋ. ಅದಕ್ಕಾಗಿ ಕಳಕೊಂಡೆ ಅಂದರೆ ನಂಬುತ್ತೀಯಾ? ನಂಬಬೇಕು ಕಣೋ ನೀನು. ನನೊಡಲಲ್ಲಿ ನೀನು ಬರುವ ಸಂಭ್ರಮದ ನಿರೀಕ್ಷೆಯಲ್ಲಿ ಯಾವುದೋ ಒಂದು ಸೂಕ್ಷ್ಮ ಗಳಿಗೆಯಲ್ಲಿ ಒಂದೆಡೆ ಮೀಸಲಾಗಿರಬೇಕಗಿದ್ದ ನನ್ನ ಹೆಣ್ತನ ಬೇರೊಂದೆಡೆಯ ಪಾಲಾಗಿಬಿಟ್ಟಿತು. ಅಲ್ಲಿದ್ದುದು ಸ್ತ್ರೀ ಪುರುಷರ ನಡುವಿನ ಕಾಮವಾಂಛೆಯಲ್ಲ, ದೇವ ಭಕ್ತರ ನಡುವಿನ ವಿಶ್ವಾಸ, ನಂಬಿಕೆ. ಎಲ್ಲಕ್ಕಿಂತ ಹೆಚ್ಚಾಗಿ ತೆತ್ತಬೆಲೆಗೆ ಸರಿಯಾಗಿ ದೊರಕಲಿದ್ದ ಪ್ರತಿಫಲದ ನಿರೀಕ್ಷೆ ಅಷ್ಟೆ. ಅಂದಿನ ಆ ನಿರ್ಧಾರ ಬಲಿಯುತ್ತಿದ್ದ ದಿನಗಳಲ್ಲಿ ನನ್ನೊಳಗಿನ ದ್ವಂದ್ವ ಭಾವ ನೀನಲ್ಲದೇ ಇನ್ಯಾರು ಅಷ್ಟು ನಿಖರವಾಗಿ ವೀಕ್ಷಿಸಿರಲು ಸಾಧ್ಯ ಹೇಳು. "ಬೇಡ, ಇದು ಸರಿಯಲ್ಲ" ಎಂಬ ಸೂಚನೆಯನ್ನು ಕೊಡುವಲ್ಲಿ ಯಾಕಷ್ಟು ಹಿಂದೇಟು ಹಾಕುತ್ತಿದ್ದೆಯೋ ನನಗೆತಿಳಿಯದು. ನಿನ್ನ ನಿರ್ವಿಕಾರ ನಿಲುವು "ಹೋಗು" ಎನ್ನಲೂ ಇಲ್ಲ "ಬೇಡ" ಅನ್ನಲೂ ಇಲ್ಲ. "
ನಿನ್ನೊಳಗೆ ಸಕಾರತ್ಮಕ ಬೆಂಬಲ ದೊರೆತರೆ ಮುಂದುವರೆ ಇಲ್ಲದಿದ್ದರೆ ಬೇಡ" ಎಂದು ನಿನ್ನವರಲ್ಲದವರಿಗೆ ಹೇಳುವಂತೆ ಹೇಳಿ ಜಾರಿಕೊಂಡೆ. ನನ್ನೊಳಗೋ ಒಂದೇ ಭಾವನೆ- "ಬೇಕು, ನನಗೆ ಬೇಗ ಬೇಕು, ಹೇಗಾದರೂ ಸರಿ , ನನ್ನದೊಂದು ಜೀವ ಬೇಕು, ಅದರ ವ್ಯಕ್ತಿತ್ವ ಸ್ವತಂತ್ರವಾಗುವವರೆಗೆ ನನ್ನನೇ ನಂಬಿ, ಅವಲಂಬಿಸಿ, ನನ್ನತನದ ಸ್ವಾರ್ಥವನ್ನೆಲ್ಲಾ ಬಗ್ಗುಬಡಿದು, ಸಮರ್ಪಣೆಯ ಅನುಭೂತಿಯ ಶಿಖರದೆತ್ತರಕ್ಕೆ ನನ್ನ ಅನುಭೂತಿಯನ್ನು ಕೊಂಡೊಯ್ಯಬಲ್ಲ ಒಂದು ಹಸುಳೆಯ ಸಂಗ ಬೇಕು ಇವಿಷ್ಟನ್ನೆ ನನ್ನೊಳಗೆ ನಾನು ಕೇಳಬಲ್ಲವಳಾಗಿದ್ದೆ. ಇವೇ ಮಾರ್ನುಡಿದಾಗ ತಪ್ಪು-ಸರಿಗಳ ಬೇರ್ಪಡಿಸುವಿಕೆ ಸೂಕ್ಷ್ಮವಾಗುತ್ತಾ , ಅತಿಸೂಕ್ಷ್ಮವಾಗುತ್ತಾ, ಕೊನೆಗೊಮ್ಮೆ ಅದೇ ಇಲ್ಲವಾಗಿ, ತಪ್ಪು-ಸರಿಗಳು ಒಂದರೊಳಗೊಂದು ಮಿಳಿತವಾದವು. ಏನೋ ಆ ಗಳಿಗೆಗಳು ಅತಿಸಣ್ಣವುಗಳಾಗಿ ಕಳೆದೇ ಹೋದವು.
ಆದರೆ ವಿಧಿ ಮಾತ್ರ ನನ್ನಿಂದೇನನ್ನೋ ಕಸಿದುಕೊಳ್ಳಲುಹೊರಟಿತ್ತು. ಅದೂ ಏನನ್ನು?!! ನನ್ನ ಜೀವಿತದ ಪರಮಧ್ಯೇಯವೆನಿಸಿದ ಅಮ್ಮನ ಪಟ್ಟಕ್ಕೇರುವ ಗುರಿಯನ್ನೇ ನನ್ನ್ನಿಂದ ದೂರ ಸೆಳೆಯಹೊರಟಿತ್ತು.ಕೊನೆಗೊಮ್ಮೆ ಆ ಗುರಿ ಭೂಮಿ-ಬಾನು ಸೇರುವ ಕ್ಷಿತಿಜದಲ್ಲಿರುವಂತೆ, ಹಿಡಿಯಹೋದಷ್ಟೂ ದೂರ ಹೋದಂತೆ ಭಾಸವಾಗತೊದಗಿತು. "ಅಲ್ಲೆಲ್ಲೋ ಇತ್ತಲ್ಲವೇ? ಭರವಸೆ ಯಾಕೆ ಕಳಕೊಂಡೆ?" ಅನ್ನುತ್ತೀಯಾ? ಅದಕ್ಕೂ ಕಾರಣವಿದೆ ಹರೀ. ನಾನು ಮಂತ್ರಕ್ಕೆ ಉದುರುವ ಮಾವಿನಕಾಯಿಯಲ್ಲಾಗಲಿ, ಬೀಜವಿಲ್ಲದೇ ಮೊಳಕೆಯೊಡೆಯುವ ಸಾಧ್ಯತೆಯಲ್ಲಾಗಲಿ, ನನ್ನ ಹೊಟ್ಟೆಯೊಳಗೆ ಯಾವುದೋ ಪವಾಡದಿಂದ ಒಂದು ಜೀವ ಹುಟ್ಟುವ ಆಶಯದಲ್ಲಾಗಲಿ ನಂಬಿಕೆಯಿಡಲಾರೆ. ನಿನ್ನ ಮೇಲೆಷ್ಟಿದೆಯೋ ಮನುಷ್ಯಪ್ರಯತ್ನಕ್ಕನುಗುಣವಾಗಿ ಸಿಗುವ ಪ್ರತಿಫಲದ ಸತ್ಯತೆಯಲ್ಲೂ ಅಷ್ಟೇ ನಂಬಿಕೆಯಿದೆ. ಯಾಕೆಂದರೆ, ಪ್ರಬಲ ಸತ್ಯವೊಂದರ ಆಧಾರದ ಮೇಲಿರುವ ಗುರಿಸಾಧನೆಯ ಕಡೆಗಿನ ನಿಷ್ಠಾವಂತ ಪ್ರಯತ್ನದಲ್ಲಿ ಮಾತ್ರ ನೀನಿರುತ್ತೀಯಾ ಎಂಬುದನ್ನು ನಾನು ನಂಬಿದ್ದೇನೆ. ಹಾಗಿರುವಾಗ ನನ್ನ ಪ್ರಯತ್ನವಿಲ್ಲದೇ ನೀನು ಕೃಪೆದೋರುವ ಪರಿಯಾದರೂ ಹೇಗೆ ಹೇಳು ಬಂಗಾರಾ.
ಸರಿ "ನಾನಿದ್ದೇನೆ ನಿನ್ನೊಂದಿಗೆ" ಎಂದು ನೀನಂದೆ. ನಾನೂ ನಂಬಿದೆ, ನಿನ್ನನ್ನ ಕಲ್ಪಿಸಿಕೊಂಡೆ-ಎಷ್ಟರಮಟ್ಟಿಗೆ? ತೊಂಭತ್ತೊಂಭತ್ತರಷ್ಟೂ ಕಲ್ಪಿಸಿಕೊಂಡೆ. ಆದರೆ ಒಂದರಷ್ಟಾದರೂ ನಿನ್ನ ಹಾಜರಿ ಬೇಕಲ್ಲವೇ ದೊರೆ? ನನ್ನ ನಂಬಿಕೆ ನೀನುಳಿಸಿಕೊಳ್ಳುವುದು ಆಗ ಮಾತ್ರ ಸಾಧ್ಯವಲ್ಲವೇ? " ನಾನ್ಯಾಕುಳಿಸಿಕೊಳ್ಳಬೇಕು?" ಅನ್ನುತ್ತೀಯಾ? ನಾನು ಹುಲುಜೀವಿ. ಸ್ವಾರ್ಥವೇ ಮೈವೆತ್ತು ಬಂದಿರುವ ಸಾಮಾನ್ಯ ಮನುಷ್ಯಪ್ರಾಣಿ. ನನ್ನ ಪ್ರೀತಿಗೆ ನಿನ್ನಿಂದ ಆಗಾಗಲೊಮ್ಮೆಯಾದರೂ ಪ್ರತಿಕ್ರಿಯೆ ಬೇಕು ಕಣೋ. ನಿಸ್ವಾರ್ಥವಾಗಿ ಯಾವುದನ್ನೂ ಅಷ್ಟೊಂದು ಹಚ್ಚಿಕೊಳ್ಳಲಾರದಷ್ಟು ಸಾಮಾನ್ಯಳು ನಾನು. ಹೌದಪ್ಪಾ , ನನ್ನ ಅಂಗಾಂಗಗಳೆಲ್ಲಾ ಸುಸ್ಥಿತಿಯಲ್ಲಿದ್ದುಕೊಂಡು, ಹೊಟ್ಟೆ ತುಂಬ ಊಟ-ಕಣ್ತುಂಬ ನಿದ್ದೆಗಳ ವರದೊಂದಿಗೆ ಬಾಳುತ್ತಿರುವುದೇ ನಿನ್ನ ದೊಡ್ಡ ದಯೆ, ನನಗೂ ಗೊತ್ತು. ಆದರೆ ಮನಸಿನ ಹಸಿವಿಗೇನು ಮಾಡಲೋ ಹರೀ? ಮಗುವೊಂದರ ಸಂಗದಿಂದಷ್ಟೇ ನೀಗಬಹುದಾದ ಅದು ನನ್ನೆಲ್ಲ ಸತ್ವವನ್ನೂ ನುಂಗಿಹಾಕುತ್ತಿತ್ತು. ಆ ಹತಾಶೆಯಲ್ಲೇ ಒಂದು ಬಾರಿ ಈ ದಿಶೆಯಲ್ಲಿ ಪಥವೂರಬೇಕಾಯ್ತು.
ನಾನೇನೋ ಪಡೆಯುವಾಸೆಯಲ್ಲಿ ಕಳಕೊಂಡೆ. ಆದರೆ ವಿಧಿಯ ನಿರ್ಧಾರ ಬೇರೆ ಎಂದು ಆಮೇಲೆ ತಿಳಿಯಿತು. ನೀ ಬರುವ ಆಸೆಯಲ್ಲಿ ನಾ ಕಳಕೊಂಡದ್ದಷ್ಟೇ ಬಂತು.ನನ್ನಿಂದೇನೇನು ಸಾಧ್ಯವೋ ಅದನ್ನೆಲ್ಲಾ ಮಾಡಿಯಾದ ಮೇಲೂ ಕೊನೆಗೆ ಬರಿದಾದ ಮಡಿಲಿನೊಂದಿಗೇ ಉಳಿದಿದ್ದೇನೆ ಮುಕುಂದಾ. ಹೀಗಾದಾಗಲೇ ನಾನು ನಿನ್ನಿಂದ ಸ್ವಲ್ಪ ಸ್ವಲ್ಪವೇ ದೂರಾಗತೊಡಗಿದೆ ಅನ್ನಿಸುತ್ತಿದೆ. ಉದ್ದೇಶಪೂರ್ವಕವಾಗಿಯೋ, ಪ್ರಯತ್ನಪೂರ್ವಕವಾಗಿಯೋ ಅಲ್ಲ, ನನಗರಿವಿಲ್ಲದಂತೆ ಅದಾಗತೊಡಗಿತ್ತು.
ಸರಿ ಬಿಡು, ನಿನಗೇನು ಪ್ರಿಯವೋ ಅದನ್ನೇ ಮಾಡು ದೊರೆ. "ನೀ ಹೇಳದಿದ್ದರೂ ನಾ ಮಾಡುವುದು ಅದನ್ನೇ" ಅನ್ನುತ್ತೀಯ? ಹೌದು ಕಣಪ್ಪಾ, ನಿನಗೆ ನಾ ಬೇಕಾದರೆ ನಿನ್ನೊಲವೇ ನನ್ನ ದಾರಿದೀಪವಾಗುವ ಜೀವನಪಥವನ್ನು ನನ್ನ ಮುಂದೆ ತಾ. "ನನ್ನೊಲವಿಲ್ಲದೇ ಒಂದುಸಿರಿಗೂ ತಾವಿಲ್ಲ" ಅನ್ನುತ್ತೀಯಾ? ಒಪ್ಪಿದ್ದೇನೆ ಕಣೊ. ಆದರೆ ನಿನ್ನ ಸಾಕ್ಷಾತ್ಕಾರ ನನ್ನ ಕಲ್ಪನೆಯಲ್ಲಿಲ್ಲದಿದ್ದರೆ, ನಾನುಳಿಯಲಾರೆ. ದೇಹವುಳಿದರೂ, ಒಳಗೆ ಜೀವನುಳಿಯುವುದಿಲ್ಲ. ಹಾಗಾಗಲಾರದು, ನನಗ್ಗೊತ್ತು. ನರನ ನಾರಾಯಣನಾಗಿಸುವ ನೀನು ಖಂಡಿತಾ ಬರಿದಾಗಿಸಲಾರೆ ಗೋವಿಂದಾ.
ಯಾವುದೋ ಅಶ್ವಾಸನೆ ಸಿಕ್ಕಂತೆ ನಿಟ್ಟುಸಿರಿನೊಂದಿಗೆ ಮೇಲೇಳುತ್ತಿದ್ದ ಪತ್ನಿಯನ್ನು ಕಂಡು ಸುಧೀರನಿಗೆ ನಿರಾಳವೆನಿಸಿತು. ಸುಮಾರು ಆರುವರ್ಷಗಳ ಹಿಂದೊಂದು ದಿನ ಅವಳು ಅವಳ ಗಂಡನ ಮಗುವಿನ ತಾಯಿಯಾಗಲಾರಳು ಎಂಬ ಸತ್ಯವನ್ನು ತಾನೇ ಅವಳಿಗೆ ಮನವರಿಕೆ ಮಾಡಿಕೊಡಬೇಕಾದ ಸಂದರ್ಭ ಬಂದಾಗ ಮೊದಲೊಮ್ಮೆ ಸ್ಥಂಭೀಭೂತಳಾಗಿ ಇದೇ ಫೊಟೋದೆದುರು ಸುಮಾರು ಒಂದುಘಂಟೆಯ ಕಾಲ ನಿಶ್ಚಲಳಾಗಿ ಕೂತದ್ದು ಕಂಡು ಕಂಗಾಲಾಗಿದ್ದ ತನಗೆ ಬರುಬರುತ್ತಾ ಅವಳ ಈ ಕ್ರಿಯೆ ಅಭ್ಯಾಸವಾಗಿತ್ತು. ಆ ಸಮಯದಲ್ಲಿ ಅವಳೆದುರು ಹೋಗಿ ನಿಂತರೂ ಅವಳಿಗೆ ತಿಳಿಯದಷ್ಟು ಆ ಸಂವಾದದಲ್ಲಿ ತಲ್ಲೀನಳಾಗಿರುತ್ತಿದ್ದಳು. ಈ ಆಶ್ವಾಸನೆಯ ನಿಟ್ಟುಸಿರು ಹೀಗಾಗಿ ತನಗೆ ಚಿರಪರಿಚಿತವಾಗಿದ್ದಾಗಿದೆ. ಯಾಕೆಂದರೆ ಆ ಸಂವಾದದಿಂದ ಅವಳು ಹೊರಬರುತ್ತಿದ್ದುದೇ ಇದರ ಜೊತೆ. ಅದಾದ ನಂತರದ ಸ್ವಲ್ಪ ಸಮಯ ಯಾವುದೋ ಭಾರ ಇಳಿಸಿದಂತೆ ನಿರುಮ್ಮುಳತೆಯ ಭಾವ ಅವಳಲ್ಲಿ ಇರುತ್ತಿತ್ತು.
ಯಾವುದೇ ಮುಚ್ಚುಮರೆಯಿಲ್ಲದ, ಒಳಹೊರಗಿನ ಅನಿಸಿಕೆಗಳಲ್ಲಿ ಅಂತರವಿಲ್ಲದ , ಯಾವುದೇ ಭಾವನೆಗಳ ಏರಿಳಿತವನ್ನು ಸ್ಪಷ್ಟವಾಗಿ ತೋರುವ ತೆರೆದ ಪುಸ್ತಕದಂಥಹ ಈ ಸೀದಾಸಾದಾ ಜೀವ ತನ್ನದು ಎನಿಸಿದಾಗ ಸುಧೀರನಲ್ಲಿ ಮಮತೆಯುಕ್ಕಿ ಬಂತು. ಮೇಲೆ ಮುಖವೆತ್ತಿ ನೋಡಿದ, ನೋವುಂಡು ನಲುಗಿಹೋದ, ತನ್ನ ಸುಮಬಾಲೆಯನ್ನು ಕೈಕೊಟ್ಟು ಏಳಿಸಿದ ಸುಧೀರ "ನಾನಿದ್ದೇನೆ ನಿನಗೆ" ಎಂಬ ನೋಟ ಅವಳತ್ತ ಬೀರಿದ. ತನ್ನ ಈ ಹುಚ್ಚು ನಡವಳಿಕೆಯನ್ನು ಬಾಯ್ಮುಚ್ಚಿ ಸಹಿಸುವ, ಅದರ ಬಗ್ಗೆ ಕೆಣಕದೇ, ಪ್ರಶ್ನಿಸದೇ ತಾಳ್ಮೆಯಿಂದಿರುವ ಪತಿಯನ್ನು ನೋಡಿ, ಅನಘಳಿಗೆ "ಇಂಥವರಿಗೆ ನನ್ನಿಂದ ಮೋಸ ಮಾಡಿಸಿದೆಯಲ್ಲಾ?" ಎಂದು ತಿರುಗಿ ಕೃಷ್ಣನನ್ನು ಕೇಳಬೇಕೆನಿಸಿತು. ಆದರೆ ಹಿಂದಿರುಗದೇ, ಏನನ್ನೂ ಮತ್ತೆ ಕೇಳದೇ ಪತಿಯೊಂದಿಗೆ ಆಚೆ ನಡೆದಳು. ಮೊದಲೇ ಹೇಳಿದ್ದಳಲ್ಲಾ, ಮುದ್ದು ಸುರಿಸುವ ಮುಕುಂದನೆದುರು ಪ್ರಶ್ನೆಯಿಡಲು ಮನಸಿಲ್ಲವೆಂದು!

Wednesday, August 28, 2013

**

ದ್ವಾಪರಯುಗದ ಹೆಂಗಳೆಯರ ಪಾಡು ನನಗೆ ಇವತ್ತು ಅನುಭವವೇದ್ಯವಾಯಿತು, ಅರ್ಥವಾಯಿತು.
ಬೆಳಗ್ಗೆ ಏಳುತಲೇ ಇಂದಿನ ದಿನ ಏನೋ ಮೈಮನ ತುಂಬ ಉಲ್ಲಾಸ, ಹುರುಪು, ಹುಮ್ಮಸ್ಸು, ಅಕಾರಣ ಖುಶಿ .. ಇವತ್ತು ನಮ್ಮ ಕೃಷ್ಣ ಹುಟ್ಟಿದ ದಿನ. ಅದಕ್ಕೇನು?! ಏನೂ ಇಲ್ಲ, ಇವತ್ತು ಅಂದರೆ ಅವನು ಪುನಃ ಪುನಃ ನನ್ನ ಮನಸಿನಲ್ಲಿ ವ್ಯಕ್ತವಾಗುವ ಗಳಿಗೆಗಳ ಸಂಚಯ. ಮನೆಯಲ್ಲೂ ಮನದಲ್ಲೂ ಎಡವುವ ಗೆಜ್ಜೆಕಾಲಿನ ಹೆಜ್ಜೆಯಿಡುತ್ತಾ ಪುಟುಪುಟು ಓಡಾಡುತ್ತಾ, ಕಾಲ್ತೊಡರುವ ಪೀತಾಂಬರ, "ಅಯ್ಯೋ ಬಿದ್ದೀತು ಮಗು!!" ಅಂತ ಗಾಭರಿಗೊಳಿಸುತ್ತಾ, "ನಾ ಬಿದ್ದೇನೇನಮ್ಮಾ. ಹಾಗೊಂದು ವೇಳೆ ಬಿದ್ದರೂ ಏನೀಗ, ನೀನಿಲ್ಲವೇ ಎತ್ತಿ ಮುತ್ತಿಕ್ಕಿ ನೋವು ಮರೆಸಲು?" ಅನ್ನುವ ಭಾವದಲೆಂಬಂತೆ ನಗುತ್ತಾ , ಸಿಂಗರಿಸಲ್ಪಟ್ಟ ಕೊಳಲು, ಅವನಷ್ಟೇ ಉದ್ದದ್ದು, ಕೈಯ್ಯಲ್ಲಿ ಅತ್ತಿತ್ತ ಬೀಸುತ್ತಾ ಓಡಾಡುವ ಸಂಭ್ರಮ ಅಕ್ಷರಶಃ ಅನುಭವಕ್ಕೆ ಬರುತ್ತದೆ.. . ತಲೆಯ ನವಿಲುಗರಿಯ ನವಿರುಸ್ಪರ್ಶಕೆ ಗಾಳಿಯೆಲ್ಲಾ ಘಮಘಮಿಸಿದಂತೆ, ಎಲ್ಲೆಡೆ "ಅನುಅಮ್ಮಾ... ಅನುಅಮ್ಮಾ..."ಅವನ ಕೀಟಲೆಯ ದನಿ ಹರಡಿ ಇಡೀ ವಾತಾವರಣವೇ ಇಂಪೆನಿಸಿದಂತೆ.. .. ಭಾವಜೀವಿಯೇ ಹೌದಾದರೂ ಬೇರಾವ ದಿನವೂ ಇಷ್ಟರಮಟ್ಟಿಗೆ ಭಾವವಶವಾಗದವಳು ನೆನಪಿನಲ್ಲಿ ಉಳಿದಿರುವಂತೆ ಎಲ್ಲಾ ಕೃಷ್ಣಾಷ್ಟಮಿಯ ದಿನಗಳಲ್ಲಿ ಮಾತ್ರ ಕಳೆದೇಹೋಗಿಬಿಡುತ್ತೇನೆ, ಅವನ ಕಲ್ಪನೆಯಲ್ಲಿ, ಅಲ್ಲಿನ ನನ್ನ ಅವನ ನಂಟಿನಲ್ಲಿ, ಅದು ಬೆಸೆವ ಬಂಧದಲ್ಲಿ...
ಯಾವತ್ತೂ ಕೃಷ್ಣ ನನಗೊಬ್ಬ ಶಕ್ತಿಶಾಲಿಯಾಗಿ, ಆಪದ್ಬಾಂಧವ, ಅನಾಥರಕ್ಷಕ, ಪವಾಡಗಳ ಮೊತ್ತ, ಜಗದ ಜವಾಬ್ದಾರಿ ಹೊರುವ ದೈವತ್ವವಾಗಿ ಕಂಡುಬರಲಿಲ್ಲ. ಅವನ ಬುದ್ಧಿವಂತಿಕೆ, ಚಾತುರ್ಯತೆ, ಯುದ್ಧನೈಪುಣ್ಯತೆ, ಶೌರ್ಯ, ಮುತ್ಸದ್ದಿತನಗಳು ಮೆರೆದ ಯಾವ ಪಾತ್ರದಲ್ಲೂ ಅವನ ಶ್ರೇಷ್ಠತೆ ವಿಶಿಷ್ಠ ಅನಿಸಲಿಲ್ಲ. ಗೋಕುಲದಲ್ಲಿ ಮುದ್ದುಕಂದನಾಗಿ ನಿರ್ವಹಿಸಿದ ಅವನ ಪಾತ್ರವೇ ಮನದಲ್ಲಿ ಅಚ್ಚಳಿಯದೆ ನಿಚ್ಚಳ ನಿಂತುಬಿಟ್ಟಿದೆ. ಅದಕ್ಕೇ ಅವನ ಹುಟ್ಟುಹಬ್ಬದ ದಿನ ಥೇಟ್ ನನ್ನ ಅರ್ಪಿತಾಳ ಹುಟ್ಟುಹಬ್ಬಕ್ಕೆ ಯಾವ ಸಂಭ್ರಮದಲ್ಲಿ ಅವಳಿಗಿಷ್ಟವಾದದ್ದೆಲ್ಲ ಮಾಡುವ ಆತುರದಲ್ಲಿರುತ್ತೇನೋ ಅದೇ ಆತುರ ಜನ್ಮಾಷ್ಟಮಿಯ ತಯಾರಿಯಲ್ಲೂ ಇರುತ್ತದೆ.. ಅವನಿಂದಿಗೂ, ಎಂದಿಗೂ ಅದೇ ಪುಟ್ಟುಕಂದ, ಮುದ್ದುಬಂಗಾರ ನನ್ನ ಪಾಲಿಗೆ...
ಈ ಬಾರಿ ಮನೆಯಲ್ಲಿ ವಿದ್ಯುಕ್ತವಾಗಿ ನಡೆಯಬೇಕಾದ ಗೋಕುಲಾಷ್ಟಮಿಯ ಆಚರಣೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ನನಗಿಲ್ಲವಾದ ಕಾರಣ, ನಿನ್ನೆ ತಯಾರಿಸಿಟ್ಟ ಕೆಲ ತಿನಿಸುಗಳಷ್ಟೇ ಅವನ ನೈವೇದ್ಯಕ್ಕಿಟ್ಟು ಅಪ್ಪ ಮಗಳು ರಾತ್ರಿ ಅವನಿಗೆ ಅರ್ಘ್ಯವಿತ್ತು ಪೂಜಿಸಲಿದ್ದಾರೆ. ಆದರೂ ಮಗಳಿಗೇಕೋ ಕಸಿವಿಸಿ.. "ನೀನು ಮಾಡಿಟ್ಟದ್ದು, ನಿನ್ನ ಕೃಷ್ಣನಿಗೆ ನೀನೇ ತಿನ್ನಿಸಬೇಕಿತ್ತಮ್ಮಾ..ಯಾಕಮ್ಮಾ ಹೀಗಾಯ್ತು? " ಕೃಷ್ಣನ ಮಾತು ಬಂದಾಗ ಅತಿಭಾವುಕಳಾಗುವ ನನ್ನ ಪರಿ ಮುಂಚೆ ಅವಳಿಗೂ ಅರ್ಥವಾಗುತ್ತಿರಲಿಲ್ಲ.. ಈಗ ಹತ್ತುವರ್ಷದ ವಯಸ್ಸಿನ ಪ್ರಬುದ್ಧತೆಗೆ ತಕ್ಕಂತೆ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾಳೆ. ನನ್ನ ಆ ಆನಂದದ ಕ್ಷಣಗಳಲ್ಲಿ ಅವಳೂ ಭಾಗಿಯಾಗಿ ಆಗಿ ಈಗ ಅವಳಿಗೂ ಕೃಷ್ಣ ನನ್ನಷ್ಟೇ ಪ್ರಿಯ. ಅವನ ಪೂಜೆಯಿಂದ ನಾನು ವಂಚಿತಳಾದೆ ಅನ್ನುವ ನೋವು ಅವಳದು. ದೈಹಿಕವಾಗಷ್ಟೇ ನನ್ನ ಭಾಗವಹಿಸುವಿಕೆಯಿಲ್ಲ, ಮಾನಸಿಕವಾಗಿ ನಾನು ಅವನ ನವವಿಧಪೂಜೆಯಲ್ಲೇ ಇದ್ದೇನೆ ಇಂದು ಮುಂಜಾನೆಯಿಂದ.. ಅವಳಿಗೆ ಹೇಗೆ ಅರ್ಥೈಸಲಿ ಇದನ್ನು?! ತಟ್ಟಂತ ಬಂದ ನನ್ನ ಉತ್ತರ ಹೀಗಿತ್ತು.. "ಇರಲಿ ಬಿಡೇ ಪುಟಾಣಿ, ಇಷ್ಟೊಂದು ಜನ ಕಾದಿರುತ್ತಾರೆ, ತುಂಬಿತುಳುಕುವ ಪ್ರೀತಿ ಅರ್ಪಿಸಲಿಕ್ಕೆ.. ಇವತ್ತು ಅಷ್ಟು ಜನರ ಅಗಾಧ ಪ್ರೀತಿಯುಂಡವನಿಗೆ ನಾಳೆ ಒಂದೇ ಸಲ ಎಲ್ಲ ಮುಗಿದು ಖಾಲಿ ಖಾಲಿ ಅನಿಸದೇ? ಮತ್ತೆ ನಾಳೆಯೂ ಸ್ವಲ್ಪಸ್ವಲ್ಪವಾದರೂ ಪ್ರೀತಿ, ಜನರ ಗಮನಗಳು ಬೇಕೆನಿಸದೇ? ಹಾಗೇ ನಿಧಾನವಾಗಿ ಜನರು ಮಾಮೂಲು ಜೀವನಕ್ಕೆ, ಮತ್ತೆ ಕೃಷ್ಣನೂ ಮಾಮೂಲು ದಿನಗಳಿಗೆ ಹೊಂದಿಕೊಳ್ತಾರೆ. ಅದಕ್ಕೆ ಕೆಲವೊಂದು ಮನೆಗಳಲ್ಲಿ ಇಂಥ ಸನ್ನಿವೇಶ ನಿರ್ಮಾಣ ಮಾಡಿ ನಾಳೆ, ನಾಡಿದ್ದೂ ತನಗೆ ಪ್ರೀತಿಯುಣ್ಣಲು ಸಾಧ್ಯವಾಗುವ ವ್ಯವಸ್ಥೆ ಮಾಡಿಕೊಳ್ಳುತ್ತಿರಬಹುದಲ್ವೇನೇ?" ಅವಳ ಮನಸಿಗೆ ಆ ಗಳಿಗೆಗೆ ಹೌದೆನಿಸಿತು.. "ಕಿಲಾಡಿಯಮ್ಮಾ ನಮ್ಮ ಕೃಷ್ಣ, ಎಷ್ಟು ಬುದ್ಧಿ ಅಲ್ವಾ ಅವನಿಗೆ?!" ನನ್ನ ತಂಗಿಯ ನಾಲ್ಕು ವರ್ಷದ ಪೋರ ಪ್ರವರ್ ಮಾಡುವ ಏನಾದರೊಂದು ಕೀಟಲೆಯ ಬಗ್ಗೆ ಮಾತಾಡಿದಂತಿತ್ತು ಅವಳ ಧಾಟಿ. ಇದು ಎಲ್ಲೆಲ್ಲೂ ಕೃಷ್ಣನೊದಗುವ ಪರಿ. ಅವನೆಲ್ಲೂ ನೆಲ ಬಿಟ್ಟು ಮೇಲಿನ ನೆಲೆಯವನೆನಿಸುವುದಿಲ್ಲ. ಇದೇ ನಾವು ನಿಂತು ನಡೆದಾಡುವ ನೆಲದ ಸಂಬಂಧಗಳಲ್ಲಿ ಅಡಕವಾಗಿರುತ್ತದೆ ಅವನತನ. ಆ ಪಾತ್ರದ ವಿಶಿಷ್ಠತೆಯೇ ಅದು. ಆ ಕಥೆಯ ಪಾತ್ರವೊಂದು ಬರೀ ಕಲ್ಪನೆಯಲ್ಲ, ಸಜೀವಬಂಧಗಳಲ್ಲಿ ಹಾಸುಹೊಕ್ಕಾಗಿರುವ ಅನುಭೂತಿಯೇ ಅನಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಪರಿಕಲ್ಪಿಸಿ, ನಮ್ಮ ಮುಂದಿಟ್ಟ ಆ ಮನಸ್ಸಿಗೆ ನಮೋನಮಃ.
ಸರಿ.. ಅವಳು ಶಾಲೆಗೆ ಹೋದಳು, ಅವಳಪ್ಪ ಆಫೀಸಿಗೆ. ಇವತ್ತು ಬುಧವಾರ.. ನನ್ನ ಸುಗಮಸಂಗೀತದ ಕ್ಲಾಸ್ ನಡೆಯುವ ದಿನ. ಎಲ್ಲರೂ ಬಂದರು, ಎಲ್ಲರ ಕಣ್ಣಲ್ಲೂ ಹೊಳೆಹೊಳೆಯುವ ಮಿಂಚು.. "ಅಷ್ಟಮಿಯ ಶುಭಾಶಯಗಳು ಅನೂ..." ಒಕ್ಕೊರಲಲಿ ಎಲ್ಲರೂ.. ಮಕ್ಕಳು ಬೆಳಿಗ್ಗೆ ಸ್ಕೂಲ್ ನಲ್ಲಿ "ಗುಡ್ ಮಾರ್ನಿಂಗ್ ಮ್ಯಾಮ್" ಅನುವಷ್ಟೇ ಉತ್ಸಾಹದಲ್ಲಿ... "ಏನಪ್ಪ ಎಲ್ಲರೂ ಸೀರೆ ಇವತ್ತು?" ಕೇಳಿದೆ.. "ಮತ್ತೆ ನಮ್ಮ ಕೂಸಿನ ಹುಟ್ಟುಹಬ್ಬ ಅಲ್ಲ್ವಾ ಅನೂ... " ಅವರ ಮನದುಂಬಿದ ಉತ್ತರ. ಒಡಲುತುಂಬಿ ಹಡೆದ ಜಗದೆಲ್ಲ ಮಡಿಲುಗಳಿಂದಲೂ, ಹಡೆಯದ ಮಡಿಲುಗಳಿಂದಲೂ ನಮ್ಮ ಕೂಸು ಅಂತಲೇ ಅನಿಸಿಕೊಳ್ಳುವ ಈ ವ್ಯಕ್ತಿತ್ವದ ವೈಶಾಲ್ಯತೆಗೆ ಏನನ್ನಬೇಕು ಗೊತ್ತಾಗಲಿಲ್ಲ.. ಈ ಕೃಷ್ಣ ಹೆಂಗಳೆಯರ ಮನಸನ್ನಾವರಿಸಿದಂತೆ ಗಂಡುಮನಗಳನ್ನೂ ಹೀಗೇ ತುಂಬಿಕೊಳ್ಳುತ್ತಾನೆಯೇ?.. ಗೊತ್ತಿಲ್ಲ. ಇವತ್ತು ಬರೀ ಕೃಷ್ಣನದೇ ಹಾಡುಗಳು ಅಂತ ನಿರ್ಧರಿತವಾಯ್ತು. ಹತ್ತೂವರೆಯಿಂದ ಹನ್ನೊಂದು ಮುಕ್ಕಾಲು ಹನ್ನೆರಡರವರೆಗೆ ನಡೆಯುವ ಕ್ಲಾಸು ಇವತ್ತು ಹನ್ನೆರಡುವರೆಯಾದರೂ ಮುಗಿಯುವ ಸೂಚನೆಯಿಲ್ಲ. ಕಲಿತವೆಲ್ಲ ಹಾಡಿ, ಹೊಸದು "ಬಾರೋ ಕೃಷ್ಣಯ್ಯಾ.." ಶುರು ಮಾಡಿ, ಯಥಾಪ್ರಕಾರ ಪಲ್ಲವಿ, ಅನುಪಲ್ಲವಿಗೆ ಇವತ್ತಿನ ಹೊಸಪಾಠ ಮುಗಿಯಿತು ಅನ್ನುವಂತೆ ನೋಡಿದರೆ, ಯಾರೂ ಪುಸ್ತಕ ಮಡಿಚುವ ಮೂಡಿನಲ್ಲಿಲ್ಲ.. ನಲವತ್ತರ ಆಸುಪಾಸಿನ ಮಂಡಿಗಳು ಚಕ್ಕಳಮಕ್ಕಳ ಹಾಕಿ ಕೂತು ನೋಯುತಿಲ್ಲ, ಬಾಯಿ ಆಕಳಿಸುತಿಲ್ಲ, ಬೆನ್ನು ನೋಯುತಿಲ್ಲ, ಕೂತ ಭಂಗಿ ಬದಲಿಸಬೇಕೆನಿಸುತಿಲ್ಲ.. ಏನಾಶ್ಚರ್ಯ!! ಇದೇ ಅಲ್ಲವೇ ಅವನ, ಅವನ ಭಕ್ತಿಯ, ಅವನ ಕೀರ್ತನೆಯ, ಅವನ ಸ್ಮರಣೆಯ, ಅವನ ಕಲ್ಪನೆಯ ಮೋಡಿ?!
ಹಾಗೇಹೀಗೇ ಮಾಡಿ ಅವರನ್ನು ಹನ್ನೆರಡುವರೆಗೆ ಕಳುಹಿಸಿಕೊಟ್ಟು ಅಡಿಗೆ ಮನೆಹೊಕ್ಕೆ. ಮಧ್ಯಾಹ್ನದ ಅಡಿಗೆಗೆ ಕುಕ್ಕರ್ ಕೂಗಿತ್ತು, ಉಳಿದುದು ಆಗಬೇಕಿತ್ತು. ಊಟಕ್ಕೆ ಒಂದುವರೆಗೆ ತಾನೇ ಬರುವುದು, ಸ್ವಲ್ಪ ಅವನ, ಅವನ ಮೋಡಿಯ, ಅವನೊಂದಿಗಿನ ಮನಸಿನ ತಾದಾತ್ಮ್ಯದ ಬಗ್ಗೆ ಬರೆಯುತ್ತೇನೆ ಅಂತ ಕಂಪ್ಯೂಟರ್ ಆನ್ ಮಾಡಿ ಕೂತೆ. ಹತ್ತು ಸಾಲಿಗಾಗುವಷ್ಟು ಯೋಚಿಸಿ, ಕಲ್ಪಿಸಿ, ಅನುಭವಿಸಿ, ಸವಿಸವಿದಾಗಲೊಮ್ಮೆ ಒಂದಕ್ಷರ ಮೂಡುತಿತ್ತು. ಹೀಗೇ ಕೆಲಹೊತ್ತು ಬರೆದು, ಹಲಹೊತ್ತು ಅವನ ಒಡನಾಟದಲ್ಲಿ ಮುಳುಗಿ ಕಳೆದುಹೋಗಿ, ಮತ್ತೆ ಈ ಲೋಕಕ್ಕೆ ಬಂದಾಗ ಗಂಟೆ ಒಂದೂವರೆ ತೋರಿಸುತ್ತಿತ್ತು. ದಢಕ್ಕನೆದ್ದವಳೇ ಅಡಿಗೆಮನೆಹೊಕ್ಕು ಗ್ಯಾಸ್ ಹಚ್ಚುವಷ್ಟರಲ್ಲಿ ಬೈಕ್ ನ ಹಾರ್ನ್ ಸದ್ದಾಗಿತ್ತು. ಬಾಗಿಲು ತೆಗೆದು ಬಂದವಳೇ ಮತ್ತೆ ಅಡಿಗೆ ಮನೆಗೋಡಿದೆ. ಬಹುಶಃ ಇಂದು ಅಷ್ಟಮಿಗೆ ಸಂಬಂಧ ಪಟ್ಟಂತೆ ಇದಾಗಬೇಕು, ಅದಾಗಬೇಕು ಅನ್ನುವ ಕಟ್ಟುಪಾಡಿನ ಆಚರಣೆಗಳ ಕಡೆಗಿರದ ಗಮನ ಪೂರ್ತಿಯಾಗಿ ಅವನಲ್ಲಿ ನೆಡಲ್ಪಟ್ಟುದುದಕೆ ನಾನು ಎಂದಿಗಿಂತ ಹೆಚ್ಚು ಅವನ ಹತ್ತಿರಕ್ಕೆ ಹೋಗುವುದು ಸಾಧ್ಯವಾಯಿತೇನೋ! ಹೆಚ್ಚು ತೊಡಗಿಕೊಂಡು ಕಳೆದುಹೋಗುವುದು ಸಾಧ್ಯವಾಯಿತೇನೋ! ದೂರವಿಟ್ಟು ಹತ್ತಿರಕೆ ಸೆಳೆದುಕೊಂಡಿದ್ದ ಮುಕುಂದ. "ಇನ್ನೂ ಆಗಿಲ್ವಾ, ಯಾಕೆ ಹೀಗೆ?" ಅಂತ ಗದರಿಸಿ ಪ್ರಶ್ನಿಸುವವರಿಲ್ಲದಿದ್ದರೂ, "ಹೀಗಾಯ್ತಲ್ಲಾ ಇವತ್ತು!" ಆಶ್ಚರ್ಯ ಅನಿಸಿತು ಒಂದು ಗಳಿಗೆ. ಹದಿನೆಂಟು ವರ್ಷದ ವೈವಾಹಿಕ ಜೀವನದಲ್ಲೆಂದೂ ಇಂಥದ್ದಾಗಿರಲಿಲ್ಲ, ಊಟದ ಹೊತ್ತಿಗೆ ಸರಿಯಾಗಿ ಅಡಿಗೆಯಾಗಿರಲಿಲ್ಲ ಅನ್ನುವ ಸಂದರ್ಭ ನೆನಪಿಲ್ಲ.
ಕಣ್ಮುಂದಿರದೇ ಇಷ್ಟರ ಮಟ್ಟಿಗೆ ನಮ್ಮನಾವರಿಸುವ ಆತ, ಇನ್ನು ಕೊಳಲೂದುತ್ತಾ, ನಗುನಗುತ್ತಾ, ಮಾತಾಡುತ್ತಾ, ಕಷ್ಟಕೊದಗಿ ಆಪ್ತನೆನಿಸುತ್ತಾ, ಅಕ್ಷರಶಃ ಕಣ್ಮುಂದಿದ್ದದ್ದೇ ಆದಲ್ಲಿ ಮನೆಮಠ, ಸಂಸಾರದ ಜವಾಬ್ದಾರಿ ಮರೆತು ಅವನೆದುರು ಪರವಶರಾಗಿ ಆ ಹೆಣ್ಮನಗಳು ಕಳೆದುಹೋಗುತ್ತಿದ್ದುದು, ಮತ್ತೆ ಮನೆಯವರ ಉರಿಗಣ್ಣಿಗೆ ತುತ್ತಾಗುತ್ತಿದ್ದುದು ಕಥೆಯಲ್ಲಿ ಓದಿದ್ದು ಕೃಷ್ಣನ ಬಗೆಗೆ ಓದಿದ ಎಲ್ಲ ವಿಷಯಗಳಲ್ಲಿ ಅನಿಸುವಂತೆ ಬರೀ ಕಥೆಯಿರಲಿಕ್ಕಿಲ್ಲ, ಬರೀ ಕಥೆಯಲ್ಲವೇ ಅಲ್ಲ ಅನಿಸಿತು.

Tuesday, August 20, 2013

***

ಭಾವಗಳನ್ನು ಕಟ್ಟಿಹಾಕುವುದಾಗಲಿ, ಸೀಮಿತಗೊಳಿಸುವುದಾಗಲಿ, ಅಲ್ಲಿಷ್ಟು ಇಲ್ಲಿಷ್ಟು ಕೆತ್ತಿ ಮನಮೋಹಿಸುವಂತೆ ಮೂರ್ತೀಕರಿಸುವುದಾಗಲಿ ಸಾಧ್ಯವಿಲ್ಲದ ಮಾತು. ಅದು ಒಸರಿದರೆ ಮುಗಿಯಿತು, ಅದರ ಸ್ವರೂಪ ಮುಂದೆಷ್ಟೋ ಮಜಲುಗಳನ್ನು ಹಾದುಹೋಗಬೇಕಾಗಿ ಬಂದರೂ ಮೂಲಬಿಂಬವೆಂದಿಗೂ ಭಿನ್ನವಾಗುವುದೇ ಇಲ್ಲ. ಕಾಲಕ್ಕೆ ತಕ್ಕ ಕೋಲವೆಂಬಂತೆ ಕೆಲ ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡಿದೆಯೇನೋ ಅನಿಸಿದರೂ ಅದು ಒಸರಿದ್ದ ಗಳಿಗೆಯ ಅದರ ಸತ್ವತೀವ್ರತೆ ಮುಂದಿನ ಯಾವ ರೂಪಾಂತರ ವೇಷಾಂತರದಲ್ಲೂ ಉಳಿದುಕೊಳ್ಳದು, ಮತ್ತೆ ಆ ರೂಪಾಂತರ ವೇಷಾಂತರಗಳು ಆ ಭಾವದ ರೂಪಾಂತರ ವೇಷಾಂತರಗಳಷ್ಟೇ ಹೊರತು ಆ ಮೂಲ ಭಾವವಾಗುಳಿಯವು. ಇದು ನನ್ನ ಇಂದಿನವರೆಗಿನ ಅನುಭವ. ಬದುಕುತ್ತಾ ಸಾಗುವ ದಾರಿಯಲ್ಲೆ ಮುಖಾಮುಖಿಯಾಗುವ ವ್ಯಕ್ತಿತ್ವಗಳು ನಮ್ಮ ಅರಿವಿನೊಳಗೆ ಹೆಜ್ಜೆಯಿಕ್ಕಿದಾಗ ಗೊತ್ತಿಲ್ಲದೇ ಅವರೆಡೆಗೆ ಅನಿಯಂತ್ರಿತ, ಅನಿರೀಕ್ಷಿತ ಮತ್ತೆ ಕೆಲವೊಮ್ಮೆ ಅನಪೇಕ್ಷಿತವೂ ಹೌದು ಆದಂಥ ಭಾವನೆ ಹುಟ್ಟುತ್ತದೆ. ಅದು ಮುಂದೆ ಆ ಅಪರಿಚಯಗಳು ಹಿತಕರವಾದದ್ದೋ ಅಥವಾ ಅದಲ್ಲದ್ದೋ ಒಂದು ಸಂಬಂಧದಲ್ಲಿ ನಮ್ಮೊಂದಿಗೆ ಬೆಸೆದುಕೊಳ್ಳಲು ಕಾರಣವಾಗುತ್ತದೆ. ಸಂಬಂಧ ಹುಟ್ಟಲು ಈ ಭಾವನೆ ಕಾರಣವಾದರೂ ಆ ಭಾವನೆ ಹುಟ್ಟಲು ಕಾರಣವೊಂದಿರಲೇ ಬೇಕೆಂಬುದೇನೂ ಇಲ್ಲ. ಇಲ್ಲಿ ಎಫ್ ಬಿ ಯಲ್ಲಿ ಹಲವು ಬಂಧಗಳು ಸಿಕ್ಕಿವೆ ನನಗೆ. ಅವು ಹುಟ್ಟಿದ ಗಳಿಗೆಯ ಬಗ್ಗೆ, ಕಾರಣವಾದ ಆ ಭಾವನೆಯ ಬಗ್ಗೆ, ಅವು ಬದುಕಿನ ಭಾಗವಾದ ಬಗ್ಗೆ, ಮತ್ತವು ಕಾಲದೊಂದಿಗೆ ಬಲಯುತವಾಗಿ ಬೆಳೆಯುತ್ತಲೇ ಬರುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರಲ್ಲಿ ಬಹುಪಾಲು ಅಣ್ಣ-ತಮ್ಮಂದಿರದು. ಅಣ್ಣನೆನಿಸಿಕೊಂಡವರು ವಾತ್ಸಲ್ಯಪೂರ್ವಕ ನಡವಳಿಕೆಯಿಂದ ನನ್ನಲ್ಲಿ ಸುರಕ್ಷಿತತೆಯ ಅನಿಸಿಕೆಯನ್ನು ಮೂಡಿಸಿದರೆ, ತಮ್ಮನೆನಿಸಿಕೊಂಡವರು ಅಕ್ಕರೆ, ಆದರ, ಗೌರವ, ಮೆಚ್ಚುಗೆ..ಹೀಗೇ ಎಲ್ಲ ಪ್ರೀತಿಪೂರ್ವಕ ನಡವಳಿಕೆಗಳಿಂದ ನನಗೆ ನನ್ನ ಗರಿಮೆಯನ್ನು ತೋರಿಸಿಕೊಟ್ಟಿದ್ದಾರೆ. ಅಕ್ಕಾ, ತಂಗೀ ಎಂದು ಬಾಯ್ತುಂಬ ಕರೆದು ನನಗೆ ಸಂತೋಷ ತಂದುಕೊಡುವ ಈ ಎಲ್ಲ ಬಂಧಗಳಿಗೂ ನನ್ನ ನಮನಗಳು, ನಿಮ್ಮೆಲ್ಲರ ಬಾಳಿನಲ್ಲಿ ಬರುವ ಸಂಕಟಗಳ ನಿವಾರಣೆಯಲ್ಲಿ ನನ್ನ ಶುಭಹಾರೈಕೆಗಳ ಅಳಿಲುಸೇವೆ ಖಂಡಿತಾ ಸದಾಕಾಲ ಇರುತ್ತದೆ. ಇದೊಂದು ನಿತ್ಯಸತ್ಯ. ಆದರೆ ಇಂದಿನ ದಿನ ನಿಮ್ಮೆಲ್ಲರೊಂದಿಗೆ ಈ ಮಾತನ್ನ ಹಂಚಿಕೊಳ್ಳಬಯಸುತ್ತೇನೆ.


ರಕ್ಷಾಬಂಧನದ ಶುಭಹಾರೈಕೆಗಳು.



ಒಂದು ಮಾತು. ರಕ್ಷಾಬಂಧನದ ಬಗೆಗಿನ ನನ್ನ ಸ್ಟೇಟಸ್ ನ್ನು ಬೆಳಿಗ್ಗೆಯೇ ಹಾಕಬೇಕೆಂಬ ಆಸೆಯಿತ್ತು. ಆದರೆ ಎಫ್ ಬಿಯೊಳಗೆ ಬರುತ್ತಿದ್ದಂತೇ ಕೆಲ ಪೋಸ್ಟ್ ಗಳು ಸಾರಿದ ಮಾತು ಮನಸು ಒಪ್ಪಲಿಲ್ಲ. ಕೂಡಲೇ ಪ್ರತಿಕ್ರಿಯಿಸದೆ, ಕೆಲಹೊತ್ತು ಸುಮ್ಮನಿದ್ದುಬಿಟ್ಟು ಈಗ ಹಂಚ್ಕೊಳ್ಳುತ್ತಿದ್ದೇನೆ. ಬಂಧುಗಳೇ, ಯಾವುದೇ ಒಂದು ಕಡೆ ಒಳ್ಳೆಯ ಅಥವಾ ಒಳ್ಳೆಯದರ ಹಾಗೆ ಕಾಣುವ ವಿಷಯವೊಂದು ಎದುರಾದರೆ ಅದನ್ನು ಅದು ಹಾಗಿರಲಾರದು ಎಂಬ ಸಂಶಯದ ದೃಷ್ಟಿಯಿಂದ ನೋಡುವುದು ಅಗತ್ಯವೇ? ಪ್ರಪಂಚ ಒಳ್ಳೆಯದು ಒಂದಿಷ್ಟೂ ಎಲ್ಲೂ ಕಾಣದಷ್ಟು, ಕಂಡರೂ ಅದನ್ನು ಕೆಟ್ಟದರ ಛದ್ಮವೇಷವೆಂದು ನೋಡುವ ಅಗತ್ಯ ಇಷ್ಟು ತೀವ್ರವಾಗಿರುವಷ್ಟು ಕೆಟ್ಟು ಹೋಗಿದೆಯೇ? ಅಷ್ಟರ ಮಟ್ಟಿಗದು ನಮ್ಮನ್ನು ಭ್ರಮನಿರಸನಗೊಳಿಸಿದೆಯೇ? ಯೋಚಿಸಿನೋಡಿ.. ಒಳ್ಳೆಯದನ್ನು ಕೆಟ್ಟದೆಂದು ಬಿಂಬಿಸುವುದು ಚಿತ್ರದ ಹಸಿಬಣ್ಣದೊಳಗೊಂದು ಹನಿ ಮಸಿಯೆರಚಿದಂತಲ್ಲವೇ? ಒಂದು ಮನಸಿನಲ್ಲಿ ಹುಟ್ಟುವ ಪ್ರತಿಯೊಂದು ಮಾತೂ ಅದರ ಸ್ವಂತದ್ದು ಅದಕ್ಕೆ ಅದರದೇ ಆದ ಹಿನ್ನೆಲೆ ಮತ್ತು ಕಾರಣವಿರುತ್ತದೆ, ಒಪ್ಪುತ್ತೇನೆ. ಆದರೆ ಒಂದು ವಿಷಯವನ್ನು ಜನರಲೈಸ್ ಮಾಡಿ ಪ್ರಕಟಿಸುವಾಗ ಅದರ ಇನ್ನೊಂದು ಮಗ್ಗುಲಿನ ಬಗೆಗೂ ಯೋಚಿಸುವುದು ಒಳ್ಳೆಯದು ಅನ್ನುವುದು ನನ್ನ ಭಾವನೆ.


ಎಷ್ಟೋ ಕಡೆ ರಕ್ತಸಂಬಂಧಗಳಿಗಿಂತ ಮಿಗಿಲಾಗಿ ಯಾವುದೇ ಮೂರ್ತಕೊಂಡಿಗಳಿಲ್ಲದೇ ಬೆಸೆದುಕೊಂಡ ಸಂಬಂಧಗಳು ನಮಗೆ ಲೌಕಿಕವಾಗಿಯೂ, ಮಾನಸಿಕವಾಗಿಯೂ ಒದಗುವುದು ನಮ್ಮೆಲ್ಲರ ಗಮನಕ್ಕೆ ಬಂದಿರುವ ಮಾತೇ. ಮತ್ತೆ ಯಾವುದೇ ಕಾರಣಗಳಿಲ್ಲದೆ ಹುಟ್ಟುವ ಸಂಬಂಧದಲ್ಲಿನ ನಿಸ್ವಾರ್ಥ ಕಳಕಳಿ ಸಂತೋಷ ತಂದುಕೊಡುವುದೂ ಹೆಚ್ಚು ಮತ್ತವು ಪರಿಣಾಮಕಾರಿಯಾಗಿ ಕಷ್ಟಸುಖಗಳಲ್ಲಿ ನಮಗೊದಗುವುದೂ ಹೆಚ್ಚು. ಅಂದಮೇಲೆ ಒಡಹುಟ್ಟಿದ ಅಣ್ಣತಂಮಂದಿರ ಭಾಗ್ಯವಿಲ್ಲದ ನನ್ನಂಥ ಹೆಣ್ಣುಮಕ್ಕಳು ಮತ್ತು ಒಡಹುಟ್ಟಿದ ಅಕ್ಕತಂಗಿಯರಿಲ್ಲದ ಗಂಡುಮಕ್ಕಳು ಅಥವಾ ಇದ್ದವರೂ ಸರಿಯೇ..ಇಲ್ಲಿ ಎದುರಾಗುವ ಕೆಲವ್ಯಕ್ತಿತ್ವಗಳಲ್ಲಿ ಆ ಬಂಧುತ್ವದ ಛಾಯೆ ಕಂಡು ಅದನ್ನು ಹಾಗೇ ಸ್ವೀಕರಿಸಿದರೆ ಅದನ್ನು ಬಲಹೀನವೆನ್ನಲಾದೀತೇ? ತಮ್ಮೊಳಗಿನ ತುಡಿತಕ್ಕೆ ಅಲ್ಲಿ ಪ್ರತಿಕ್ರಿಯೆ ಕಂಡು ಪರಸ್ಪರರನ್ನು ಅಕ್ಕತಮ್ಮಂದಿರೆಂದೋ ಅಣ್ಣತಂಗಿಯಂದಿರೆಂದೋ ಕಂಡುಕೊಂಡರೆ ಅದನ್ನು ನಾಟಕೀಯವೆಂದೋ, ಸ್ವಾರ್ಥಪರ ಅಥವಾ ದೂರದ ಯಾವುದೋ ಉದ್ದೇಶದ ಸಲುವಾಗಿಯೋ ಹುಟ್ಟಿಕೊಂಡವುಗಳು ಎಂಬಂತೆ ಸಂಶಯಿಸುವುದು, ಹೀಗಳೆಯುವುದು, ಕೆಲಸವಿಲ್ಲದವರ ವ್ಯಾಪಾರವೆಂಬಂತೆ ಬಿಂಬಿಸುವುದು..ಇವೆಲ್ಲವುಗಳಿಂದ ಅವನ್ನು ಅತಿ ಪ್ರಾಮಾಣಿಕವಾಗಿ ಅನುಭವಿಸಿ ಸವಿಯುತ್ತಿರುವ ನನ್ನಂಥವರಿಗೆ ಖಂಡಿತಾ ಕಸಿವಿಸಿಯಾಗುತ್ತದೆ. ನಿರ್ಬಲ ಅಥವಾ ಅಶುದ್ಧ ಹಿನ್ನೆಲೆಯ ಮತ್ತು ಉದ್ದೇಶದ ಸಂಬಂಧಗಳೂ ಇಲ್ಲವೇ ಇಲ್ಲವೆಂಬುದು ನನ್ನ ವಾದವಲ್ಲ. ಆದರೆ ಎಲ್ಲವೂ ಅಂಥವುಗಳೇ ಅಥವಾ ಇಂಥವುಗಳೇ ಎಂದು ಸಾರಾಸಗಟಾಗಿ ಘೋಷಿಸುವುದಾಗದು. ಅಯಾಯಾ ಸಂದರ್ಭದಲ್ಲಿ ಅದಕ್ಕನುಗುಣವಾದ ಅಭಿಪ್ರಾಯವನ್ನು ಮಂಡಿಸುವುದೊಳ್ಳೆಯದೇ ಹೊರತು, ನನ್ನ ಅನುಭವ ಇದು, (ಅದರಲ್ಲೂ ಒಂದು ವ್ಯವಸ್ಥೆಯ ಕೆಡುಕನ್ನು ಬಿಂಬಿಸುವ ಮಾತು ಬಂದಾಗ) ಹಾಗಾಗಿ ಇದೇ ಸರ್ವತ್ರವ್ಯಾಪಿ ಸತ್ಯವೆನ್ನುವುದಾಗದು.

Sunday, August 11, 2013

ಮೂರು ಮನಸುಗಳು ಪರಸ್ಪರ ಎದುರಾಗಿ ಬೆತ್ತಲಾಗಿ ನಕ್ಕಾಗ..

ಮೂರು ಮನಸುಗಳು ಪರಸ್ಪರ ಎದುರಾಗಿ ಬೆತ್ತಲಾಗಿ ನಕ್ಕಾಗ..
-----------------------------------------------
ಮತ್ತೊಂದು ದಿನ ಬಂತು.

ಅಲ್ಲೇ, ಅದೇ ಅವಳು, ಮತ್ತವಳ ಜುಳುಜುಳು ಹರಿವು, ಪ್ರಶಾಂತ ತೀರ, ಅರಳಿದ ಕಮಲಗಳ ಶಿಶುಸಮಾನ ಮುಗ್ಧ ಚಂದ, ಹಂಸಗಳ ಧೀರ ಗಂಭೀರ ನಡೆ, ಮೀನುಗಳೆದ್ದೆದ್ದೆದ್ದು ಹಾರಿ ಬಿದ್ದಾಗಿನ ಸದ್ದು -ಪುಳುಕ್ಕ್..ಅದೇ ತುಂಬುಗಾಂಭೀರ್ಯ. ಒಂದು ದಿನವೂ ಬದಲಾಗದಂತೆ ಕಾಯ್ದುಕೊಳುವ ಇವಳ ತೂಕದ ನಡೆ ಆ ಹೆಣ್ಣಿಗೊಂದು ಪ್ರಶ್ನೆ. ಹೆಣ್ಣಲ್ಲವೇನೇ ನೀನು, ಮನಕೆ ಅತಿರೇಕದ ಏರಿಳಿತಗಳು ಸಹಜವಲ್ಲವೇನೇ, ಅನುದಿನದವುಗಳ ಎಲ್ಲಿ ಮುಚ್ಚಿಟ್ಟೀಯೇ ಸಖೀ?!?!

ಅದೇ ತಾನೇ ಮೇಲೇರಿ ಬಂದವನ ಯುವಕಿರಣಗಳ ಜೊತೆ ಕಣ್ಣಾಮುಚ್ಚಾಲೆ ಆಡುವ ಕಪ್ಪು ಕಳಚಿ ನಸುಗೆಂಪುಟ್ಟಿರುವ ಇವಳೊಬ್ಬಳು ಸದಾಯುವತಿ. ಮುದಗೊಳಿಸುವ ಚೆಲುವು.. ಪಕ್ಕದ ದೇಗುಲದ ಮುಂಜಾವಿನಾಗಮನ ಸಾರುವ ಘಂಟೆದನಿ, ಮೆಲುಮಂತ್ರಘೋಷ, ಹಿಮ್ಮೇಳದಲಿ ಹಕ್ಕಿಕಲರವಗಳ ಜೊತೆ ಕಣ್ಣುಕಿವಿಗಳಿಗೆ ಮಾಸದ ಹೊಸಭರವಸೆಯ ಆಶ್ವಾಸನೆಯ ಬೆಳಕನ್ನು ತಂದು ಪ್ರತಿನಸುಕೂ ಮುಂದಿಡುವ ಇವಳೊಡಲ ಸಮೃದ್ಧಿಯೂ ಆ ಹೆಣ್ಣಿಗೊಂದು ಸೋಜಿಗ.. ಪ್ರತಿದಿನವೂ ಇಷ್ಟೊಂದು ಹೊಸತನವೆಲ್ಲಿಂದ ಒಟ್ಟುಗೂಡಿಸಿ ತಂದೀಯೇ ಗೆಳತಿ!?!?...

ದಿನದಿನವೂ ತೀರದಲಿ ಇಷ್ಟಗಲ ಹರಡಿದ ಮರದಡಿ ಬುಡಕೊರಗಿ ಕಾಲು ಮಡಿಚಿ ಎದೆಗಾನಿಸಿ, ಕೈಯ್ಯೆರಡು ಕಾಲಸುತ್ತ ಬೆಸೆದು,
ತಲೆ ಕಾಂಡಕಾನಿಸಿ ಬಿಟ್ಟ ಕಣ್ಣೆರಡರ ದೃಷ್ಟಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರಕೆ ಹಾಯಿಸಿರುವ, ಮೊದಲೇ ಸುಂದರಿ, ಗಮನವಿಟ್ಟು ಸಿಂಗರಿಸಿಕೊಂಡಳೆಂದರೆ, ಅದೂ ಪ್ರೀತಿಯ ಮಧುರಾನುಭೂತಿ ಮೈಮನವೆಲ್ಲಾ ತನ್ನ ಛಾಪೊತ್ತಿದ್ದು, ಅದು ಅವಳ ಛವಿಯಾಗಿ ಹೊಮ್ಮುತ್ತಿದ್ದಾಗ ಶಬ್ಧಗಳಿಗೆ ಸ್ವಲ್ಪವಾದರೂ ಸಿಗದಿರುವ ಹೆಣ್ಣಿನ ಅಂದ ಆ ವಾತಾವರಣದ ಮೊಗಕೆ ಹಣೆಬೊಟ್ಟಂತಿತ್ತು. ಮುಖದಲೇನೋ ನೆನೆಸಿಕೊಂಡು ಅರಳುವ ನಸುನಗು ಸದಾ ಹಾಗೇ ನಳನಳಿಸುವ ಪರಿ ಅವರಿಬ್ಬರಿಗೂ ಒಗಟು. ನಿರೀಕ್ಷೆ ಪ್ರತಿಬಾರಿ ನಿರಾಸೆಯಾಗುವಾಗಲೂ ಅದನ್ನು ನಗುವಾಗಿಸುವ ಸತ್ವವೆಂಥಹುದೇ ಗೆಳತಿ?!?!
ನಸುನಗುತ್ತಾರೆ ಪರಸ್ಪರರ ಪ್ರಶ್ನೆಗಳಿಗೆ ಮೂವರೂ..

ಅಲ್ಲಿನ ವೈಶಿಷ್ಠ್ಯವಿನ್ನೆಂಥ ಕುಂಬಳಕಾಯಿಯೂ ಅಲ್ಲ. ತಾನು ಹೆಣ್ಣೆಂಬುವ ಸತ್ಯವೇ ಆ ಸತ್ವದ ಹಿಂದಿನ ಗುಟ್ಟೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ..

ಆದರಿಂದು ಸ್ವಲ್ಪ ಪರಸ್ಪರರಿಗೆ ತಮ್ಮತಮ್ಮ ಹೆಣ್ತನದ ಸಂದರ್ಭಾನುಸಾರ ನಿಲುವುಗಳು ಮತ್ತಲ್ಲಿನ ಗರಿಮೆ, ಹೆಮ್ಮೆಗಳನ್ನು ವಿವರಿಸಬೇಕೆನಿಸಿತು.

ಹರಿಯುವವಳನ್ನುತ್ತಾಳೆ,
 
"
ನಾ ನದಿ, ಹರಿವೇ ನನ್ನ ಗುರುತು
ಗಾಂಭೀರ್ಯ ಹೊದ್ದೇ ಹರಿದು
ಬರೇ ಮಂಜುಳಗಾನ ಹಾಡಿ
ಸ್ಪರ್ಶಿಸುವರ ಮುದಗೊಳಿಸಿ
ತೇಲಬಯಸುವರ ತೇಲಿಸಿ,
ಮೀರಿ ತಳಕಿಳಿವವರ ಮುಳುಗಿಸಿ
ತೊಳೆದೆಲ್ಲ ಮಡಿಮಾಡಿ
ಮನೆಮಾಡಿದವರ ಪೊರೆದು
ಮುಟ್ಟಿ ತೆರಳುವರಿಗೆ ಉಡಿತುಂಬ ನೆನಪಿತ್ತು...
ಹೀಗೇ ಪೂರಕವಾಗಿರುವುದೆನ್ನ ವಿಧಿ
ಗಾಂಭೀರ್ಯದಡಿಯ ಚಂಚಲತೆ,
ಉಕ್ಕಿ ಹರಿವ ಅಬ್ಬರದ ನಗು
ಒಡಲಾಳದ ಕೊರೆವ ಶೈತ್ಯ
ಬಿಡದೆ ಎಲ್ಲ ಒಳಗೆಳೆವ ಚಕ್ರಸುಳಿ
ತಳದ ಕೊಚ್ಚೆಯೆಬ್ಬಿಸಿ ಮೇಲ್ತಂದು
ಬಳಿಸಾರುವೆಲ್ಲರ ಉಬ್ಬಿಉಕ್ಕಿ
ಮುತ್ತಿಕ್ಕುವ ರೂಪ ನೋಡಿದರೆ
ಉಳಿದೀತೇ ಜಗ, ಭರಿಸೀತೇ ವೇಗ?!"...ಕಿಸಕ್ಕನೆ ನಗುತ್ತಾರೆ ಮೂವರೂ...
 
ಬೆಳಕಮೂಟೆ ಹೊತ್ತು ತರುವವಳೆನುತಾಳೆ,
 
"
ನಾನು ತಾಯಿ ಹೊತ್ತು ಹೆತ್ತು ಪೊರೆವುದೆನ್ನ ದಾರಿ
ಪ್ರತಿಕೂಸಿಗೂ ಅದೇ ಪ್ರೀತಿ
ಅದೇ ಮಮತೆ, ಅದೇ ಗಮನ,
ಅದೇ ಮುನಿಸು, ಅದೇ ತಿನಿಸು
ಅದೇ ಸಿಟ್ಟು, ಅದೇ ಪೆಟ್ಟು
ಪ್ರತಿಗಳಿಗೆಯೂ ಅದೇ ರೂಪ
ಅದೇ ಶಕ್ತಿ, ಅದೇ ತಾಳ್ಮೆ
ಅದೇ ದೃಢತೆ, ಅದೇ ಪ್ರೇಮದೊರತೆ
ಉಣಿಸಿ ಕುಡಿಸಿ ಬೆಳೆಸುವುದೆನ್ನ ಗುರಿ.
ದಿನದಿನವೂ ಅದೇ ಮತ್ತದೇ
ಹೊರಹೊಮ್ಮಿಸುವಾಗ,
ಬೇರೇನೂ ಭಾವವೊಸರದಿರುವಾಗ,
ಒಳಗಲ್ಲಿ ಏಕತಾನತೆ
ಕಾಡದಿರುವಂತೆ,
ನಾ ನನಗೇ ಬೇಜಾರೆನಿಸದಂತೆ
ಹೊಸಹೊಸ ಮನಸುಡುತೇನೆ
ಹೊಸತೆನಿಸುತೇನೆ."....ನೇವರಿಸಿ ಅವಳ ತಲೆ, ಕೈ ಕಣ್ಣಿಗೊತ್ತಿಕೊಂಡು ಉಳಿದಿಬ್ಬರು ಜೊತೆಗವಳೂ ಸೇರಿ ಮೆಲುನಗುತಾರೆ.
 
ದಾರಿಯೊಂದಕೆ ದೃಷ್ಟಿ ಹಾಸಿಯೇ ದಿನಕಳೆವವಳೆನುತಾಳೆ.
 
ನಾನು ಪ್ರೇಮಿ,
ಬಾಳ ಬಂಡವಾಳ ಬರೀ ಅದುಣಿಸಿದ ಸವಿ.
ನಿನ್ನೆಗಳ ನೆನೆನೆನೆದು
ನಾಳೆಗಳ ಚಿತ್ರ ಬರೆದು
ಬಯಕೆಬಣ್ಣ ತುಂಬಿ,
ಆ ನವಿಲಗರಿಯ ಕಚಗುಳಿ,
ತೋಳದಿಂಬಾಗಿಸಿ ಕಣ್ಮುಚ್ಚಿ
ಪಿಸುನುಡಿದ ಹಾಡು,
ಅವನ ಕೊಳಲಗಾನ
ಹುಚ್ಚೆದ್ದು ನರ್ತಿಸಿದ ಮನ
ಮತ್ತದಕೆ ಲಯವಿತ್ತು ಮೈ,
ಮೌನ ಸಾರಿದ
ಪ್ರೇಮದ ಮಹೋನ್ನತ ಸಂದೇಶ
ಮತ್ತವನು ದೂರವಾಗುವ ಗಳಿಗೆ
ಮೀರಿಹರಿವ ಕಣ್ಣಿಗವ ಕಟ್ಟಿದ
ಮುತ್ತಿನ ಅಣೆಕಟ್ಟು.
ಈ ಮೆಲುಕುಗಳೇ ಕೈಯ್ಯೊಳಗಿನ ನಿಧಿ..
ಅವನ ಸಾಕ್ಷಾತ್ಕಾರದಾಸೆಯಲಿ
ಕಾಯುತಾ ಭರವಸೆ,
ನಂಬಿಕೆ, ವಿಶ್ವಾಸವನೇ ಉಸಿರಾಡುತ್ತೇನೆ.
ಅವನಿರದ ಇಂದಿನೆಲ್ಲ ಕ್ಷಣಗಳನ್ನು
ಅವನಿರುವ ಕ್ಷಣಗಳ
ನಾಳೆಗಳಿಂದ ಎರವಲು
ಪಡೆದು ತುಂಬುತ್ತೇನೆ.
ಸವಿಯುತ್ತಾ ಆ ಕ್ಷಣಗಳ
ಅವನ ಸರಸದಾಟಗಳಿಗೆ
ನಾಚುತ್ತೇನೆ, ನಲಿಯುತ್ತೇನೆ,
ಸವಿಯುಂಡು ಮತ್ತೆಮತ್ತೆ ನಗುವಾಗುತ್ತೇನೆ.."..
 
ಈ ಬಾರಿ ನಗಲಾಗಲಿಲ್ಲ ಉಳಿದಿಬ್ಬರಿಗೆ..

ಕಾಯುವಿಕೆಯ ತಪವಾಗಿಸಿ ಬಸವಳಿಯುತಿರುವ ಹಸಿರು ಬಾಳೊಂದು ಬಾಡುವುದರಲ್ಲೂ ಸಾರ್ಥಕತೆ ಕಾಣುತ್ತಿರುವುದು ನಗುವ ಹುಟ್ಟಿಸಲಾರದಾಯಿತು

ಆದರೆ ಅವಳು ಮುಗುಳ್ನಗುತ್ತಲೇ ಇದ್ದಳು.

ಅವರಿಬ್ಬರ ಮುಖದಲ್ಲಿ ಕಾಣದ ತನ್ನ ಪ್ರತಿಫಲನಕೆ ಅವಳ ನಗು ಮಂಕಾಗತೊಡಗಿತು. ಅವರಿಬ್ಬರೂ ಎಚ್ಚೆತ್ತರು.

"
ನಗುವೊಂದು ಬಾಳು ಬೆಳಗುವ ದೀಪ, ಅವ ಬರುವ ಹಾದಿಗೆ ನೀ ಹಚ್ಚಿಡಬೇಕಾದ ದೀಪ,
ಅವನ ನೇರ‍ ನಿನ್ನೆಡೆಗೇ ಕರೆತರಬಲ್ಲ ಮಾರ್ಗದರ್ಶಿ ದೀಪ,
ಆರಗೊಡಬಾರದು.
ಇಗೋ ನಾವೇ ಎರೆಯುತ್ತೇವೆ ಸ್ನೇಹದ ಎಣ್ಣೆ,
ಒದಗಿಸುತ್ತೇವೆ ಪ್ರೀತಿಯ ಬತ್ತಿ.
ನಮ್ಮ ಒತ್ತಾಸೆಯ ಅಂಜಲಿಯೊಡ್ಡಿ ಹತಾಶೆಯ ಗಾಳಿಯ
ಬಳಿಸಾರಗೊಡದೆ ಪೊರೆಯುತ್ತೇವೆ ನಿನ್ನ ನಗುವ.. "

ಎಂದರು, ಮತ್ತೆ ಹಣೆಗೊಂದು ಹೂ ಮುತ್ತಿತ್ತು ಕಣ್ತುಂಬಿ ನಕ್ಕರು.

Friday, August 9, 2013

ಬದಲಾಗುವ ಪಾತ್ರಗಳು.


ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನ ಮಂಚದ ಮೇಲೆ ಜೀವಂತಶವವಾಗಿ ಮಲಗಿದ್ದ ನಾಯಕರ ನಿಶ್ಚಲದಂತೆ ಕಾಣುತ್ತಿದ್ದ ಶರೀರದಲ್ಲಿ ಕಣ್ಣಗುಡ್ಡೆಗಳು ಮಾತ್ರ ಇನ್ನಿಲ್ಲದ ಚಟುವಟಿಕೆಯಿಂದ ಮೇಲೆಕೆಳಗಾಡುತಿದ್ದವು. ಹೊರಗೆ ಅಷ್ಟೇ ಕಾಣುತ್ತಿದ್ದರೂ ಮನಸಿನಾಳದಲ್ಲಿ ಒಂದೇ ಸವನೆ ಭಾವನೆಗಳ ಅಂಕೆಯಿಲ್ಲದ ಹಾರಾಟ..ಕಾಯಿಲೆಗಳ ಮೂಟೆಯಾಗಿದ್ದುದು ದೇಹ; ಮನಸಲ್ಲವಲ್ಲಾ, ವಯಸ್ಸಾದಂತೆ ದೇಹ ಬಲ ಕಳೆದುಕೊಳ್ಳುತ್ತಾ ಸಾಗಿದ್ದರೆ ಮನಸಿನ್ನೂ ಸೂಕ್ಷ್ಮ ಹಾಗೂ ಪ್ರತಿಕ್ರಿಯಿಸುವುದರಲ್ಲಿ ತೀವ್ರವಾಗುತಲೇ ನಡೆದಿತ್ತು
ಚಿಕ್ಕಂದಿನಲ್ಲಿ ಸುಳಿಗಾಳಿಯೆಂದು ಶಂಕುವಿನಾಕಾರದಲ್ಲಿ ಬೀಸುತ್ತಾ ತನ್ನೊಡಲೊಳಗೆ ಹಗುರವಾದದ್ದನ್ನೆಲ್ಲ ಸೇರಿಸಿಕೊಂಡು ಸುರುಳಿ ಸುತ್ತುತ್ತಿದ್ದ ಹಾಗೂ ಅದರ ಜೊತೆ ದುಷ್ಟಶಕ್ತಿಗಳ ಇರುವಿಕೆಯ ಮಾತಿಗೆ ಪಡುತಿದ್ದ ಗಾಭರಿಯ ನೆನಪು ಇಂದೂ ಸಣ್ಣಗೆ ಬೆವರಿಸಿತು. ಬೆನ್ನಲ್ಲೇ ಅಮ್ಮನ ಒದ್ದೆ ಸೆರಗು, ಅದರ ಹಿಂದೆ ಓಡಿಬಂದು ಅವಿತುಕೊಂಡಾಗ ಸಿಗುತ್ತಿದ್ದ ಸುರಕ್ಷಿತತೆಯ ಭಾವನೆಯ ನೆನಪು, ಕಣ್ಣೀಗ ಒದ್ದೆಒದ್ದೆ. ಅಲ್ಲ, ಅಮ್ಮನ ನೆನಪಿಗಲ್ಲ. ತುಂಬುಬಾಳು ಇತ್ತ ಕಣ್ಣೀರ್ಗರೆಸುವ ಬಲುಕಾಟಗಳ ನಡುವೆ ಅಮ್ಮನ ನೆನಪಿನ ಕಾಟ ತುಂಬ ಹಳೆಯದಾಗಿ ತೀವ್ರತೆ ಕಳಕೊಂಡಿತ್ತು. ಇಂದಿನ ಕಣ್ಣೀರೇನಿದ್ದರೂ ತಾನೆದುರು ನೋಡಬಲ್ಲ ಒಂದೇ ಒಂದು ಜೊತೆ ಕಂಗಳ ಆಸರೆಯೂ ಇಲ್ಲದ ತನ್ನ ಒಂಟಿತನದ ಅಸಹಾಯಕತೆಗೆ.
ಮೆಲ್ಲನೆ ಬಾಗಿಲು ದೂಡಿದಂತಾಯಿತು. ಪುನಃ ಚುಚ್ಚಲು ಬಂದಳೇ ನರ್ಸ್?! ಮನಸು ಬೆಚ್ಚಿತು, ದೇಹಕಾಗುವ ನೋವು ಸಹಿಸಿಸಹಿಸಿ ಅದು ಜಡ್ಡುಗಟ್ಟಿದ್ದರೂ ಮನಸು ಅವಲೋಕಿಸುತಲೇ ಇರುತಿತ್ತು. ಸೂಜಿಯ ಮೊನೆ ರಟ್ಟಿನಂತಾದ ಚರ್ಮಕ್ಕೆ ತಗುಲುತ್ತಿದ್ದಂತೇ ಅಯ್ಯೋ ಅಮ್ಮಾ... ನೋವಿನ ಸಂಭಾವ್ಯತೆಗೆ ಪ್ರತಿಯಾಗಿಯೇ ನರಳುವಿಕೆ ಮನಸಲ್ಲಿ ಹುಟ್ಟುತ್ತಿತ್ತು. ಆದರೆ ದನಿಯಾಗಿ ಹೊರಹೊಮ್ಮಲು ಕಾರ್ಯನಿರ್ವಹಿಸಬೇಕಾದ ಅಂಗಗಳೆಲ್ಲ ನಿಷ್ಕ್ರಿಯವಾಗಿದ್ದು ಆ ಮಾತಲ್ಲೇ ಉಡುಗಿ ಹೋಗುತ್ತಿತ್ತು. ಇದೆಂಥ ಯಾತನೆ..! ಎಲ್ಲ ಸಂವೇದನೆಗಳಿದ್ದೂ ಕಲ್ಲಿನಂತೆ ಬಿದ್ದುಕೊಂಡಿರಬೇಕಾದ ಶಾಪ. ಸದ್ಯ ಕಣ್ಣೊಂದು ಚಲನೆ ಕಳಕೊಂಡಿಲ್ಲ, ನೀರೂ ಬತ್ತಿಲ್ಲ. ಅಲ್ಲೊಳಗೊಂದು ಅಕ್ಷಯಪಾತ್ರೆಯಿದೆಯೋ ಎಂಬಂತೆ ಸದಾ ಕಂಬನಿಯ ಒರತೆಯೊಂದು ಒಸರುತಿರುತಿತ್ತು. ಅಲ್ಲಿ ಬಿಳಿಬಟ್ಟೆಯ ಬದಲು ಬಣ್ಣಬಣ್ಣ ಕಂಡು ನಿರಾಳತೆ, ಬೆನ್ನಲ್ಲೇ ಲಕ್ಷವೆಷ್ಟಕ್ಕೋ ಮೀರಿದಷ್ಟು ಬಾರಿ ನಿರಾಸೆಯಾಗಿ ಪರಿವರ್ತಿತವಾಗಿದ್ದರೂ ಮತ್ತೆ ಚಿಗುರೊಡೆದು ಬರುವ ಮೂರ್ಖ ಆಸೆ- ತುಳಸಿಯಿರಬಹುದೇ, ತುಂಗಾಳೇ, ತನ್ಮಯ್ ಇರಬಹುದೇ...?!
"
ಮಾಮಾ... "ಅಕ್ಕರೆಯ ಕಾಳಜಿಪೂರ್ಣ ದನಿ.."ಯಾರಿದು.. ಪರಿಚಿತ ದನಿಯಂತೂ ಅಲ್ಲ..." ತನ್ನ ಯೋಚನೆಗೆ ಮನಸು ತಾನೇ ನಕ್ಕಿತು.. ಪರಿಚಿತ-ಅಪರಿಚಿತ ದನಿಗಳನ್ನು ದೂರವಿಟ್ಟು ಬಂದು ವರ್ಷಗಳೆಷ್ಟೋ ಆಗಿಹೋದವು. ಕಾಲ ಆ ನೆನಪಿನ ಚೀಲ ಬರಿದಾಗಿಸುತ್ತಲೇ ಸಾಗಿದೆ. ಈಗ್ಯಾವುದು ಎದುರು ಬಂದರೂ ಅಪರಿಚಿತವೆನಿಸದಿದ್ದರೂ ತೀರಾ ಪರಿಚಿತವೆನಿಸುವುದೂ ಇಲ್ಲ. "ಏ ಹಾಗೇನೂ ಇಲ್ಲ, ಈಗಲೂ ತುಳಸಿಯೋ, ತುಂಗಾಳೋ ಬಂದು ಕೂಗಿದರೆ ನಾ ಗುರುತಿಸಬಲ್ಲೆ.."ತನಗೆ ತಾನೇ ಹೇಳಿಕೊಂಡಿತು. ಹಿಂದೆಯೇ ಬಿಕ್ಕಿತು.."ತನ್ಮಯ್..ಅತನಿಗೆ ಮಾತೇ ಬರುವುದಿಲ್ಲವಲ್ಲಾ..." ಮತ್ತೆ ಯೋಚನೆ.. ಏನೇ ಆದರೂ ಅವರು ಯಾರೇ ಬಂದರೂ ಅವರ ದೇಹದ ಪರಿಮಳದ ಆಗಮನವೇ ನನ್ನನ್ನೆಚ್ಚರಿಸಬಲ್ಲುದು, ಕೂಗಿ ಹೇಳಬಲ್ಲುದು .."ಇಗೋ ನಿನ್ನವರು ನಾವು ಬಂದಿದ್ದೇವೆ.." ಪುನಃ ಕರೆ.."ಮಾಮಾ, ನಾನು, ನೋಡಿ ನಾನು ಅದಿತಿ ಬಂದಿದ್ದೇನೆ, ನಿಮ್ಮನ್ನ ನೋಡಲೆಂದೇ ಉಡುಪಿಯಿಂದ ಬಂದಿದ್ದೇನೆ, ಹೇಗಿದ್ದೀರಿ?" ಒಂದೂ ಚಲನೆಯಿಲ್ಲ, ಕಣ್ಣಷ್ಟೇ ತುಂಬಿಕೊಳುತಿತ್ತು, ಎದುರಿದ್ದುದನ್ನೂ ಜೊತೆಗೆ ಪ್ರತಿಕ್ರಿಯಿಸಲಾಗದ ನೋವನ್ನೂ.
ಅದಿತಿ ಮೊದಲೆರಡು ವರ್ಷ ತನ್ನೆದೆಯ ಮೇಲೇ ಆಡಿಕೊಂಡು ಬೆಳೆದ ಮಗು, ತನ್ನ ಮುದ್ದಿನ ಸೊಸೆ. ತನ್ನಕ್ಕ ಅನುಸೂಯಳ ಒಬ್ಬಳೇ ಮಗಳು.
"ಮಾಮಾ ನೋಡಿಲ್ಲಿ, ನನ್ನ ಗುರ್ತಾಗ್ತಾ ಇದೆಯಾ, ಇಲ್ಲ್ವಾ, ಏನಾದರೂ ಒಂದು ಸೂಚನೆ ಕೊಡೋ ಮಾಮಾ...ಇರ್ಲಿ ಬಿಡು, ಯೋಚಿಸಬೇಡ, ಎಲ್ಲ ಸರಿಯಾಗ್ತದೆ, ಸರಿಯಾಗಲೇಬೇಕು, ನಿನ್ನ ತುಂಗಾಳ ಮದುವೆ ಮಾಮಾ, ಅದಕ್ಕಾದರೂ ಬರಬೇಕೋ ಬೇಡವೋ, ಬರುವುದೇನು, ನೀನೇ ಎಲ್ಲ ತಯಾರಿ ಮಾಡುವವನಿರುವಾಗ ಹೀಗಿಲ್ಲಿ ಕೈಕಾಲು ಆಡಿಸದೆ ಬಿದ್ದುಕೊಂಡಿದ್ದರಾದೀತೇ? ಎಲ್ಲಿ ನೋಡುವಾ ಕೈ ಕೊಡು ಇಲ್ಲಿ, ನೀನು ನನದು ತೆಗೆದು ತೆಗೆದು ಅಳಿಸ್ತಿದ್ದೆ ಅಲ್ಲ್ವಾ, ಇದೀಗ ನನ್ನ ಬಾರಿ, ನೆಟಿಗೆ ಇದೆಯಾ ನೋಡುವಾ..." ಕಣ್ತುಂಬಿಕೊಂಡು ಇನ್ನಿಲ್ಲದ ಕಳಕಳಿಯಲ್ಲಿ, ನಿಷ್ಕ್ರಿಯ ಬಿದ್ದುಕೊಂಡಿರುವ ಕೈಗಳನ್ನು ಈಗಷ್ಟೇ ಅರಳಿದ ಹೂ ಹಿಡಿದಂತೆ ಹಿಡಿದು ಚಲನೆಗದನ್ನು ಹಚ್ಚುವ ವ್ಯರ್ಥ ಪ್ರಯತ್ನ ಮಾಡುತ್ತಿರುವ ಅಸಹಾಯಕಳ ಈ ನಿಷ್ಕಾಮ ಅಸೀಮ ಪ್ರೀತಿಗೆ ಮತ್ತು ತಾನು ಆ ಬಂಧಗಳಿಗೆ ನೀಡಿದ್ದನ್ನು ನೆನೆದು ತುಂಬಿದ ಕಣ್ಣು ಇನ್ನಷ್ಟು ತುಂಬಿಹರಿದವು.ನಾಲ್ಕರ ಹರಯದಲ್ಲೇ ಅಮ್ಮನನ್ನು ಕಳಕೊಂಡು, ಎರಡನೇ ಮದುವೆಯಾಗಿ ಇದ್ದೂ ಇಲ್ಲದಂತಾದ ಅಪ್ಪನ ಆಶ್ರಯದಲ್ಲಿ ಬಾಳುತ್ತಿದ್ದ ತನಗೆ ಅಕ್ಕ ಒಬ್ಬಳೇ ಆಸರೆಯಾಗಿದ್ದವಳು. ಅಮ್ಮನಾಗಿ ಮತ್ತೆ ಓರಗೆಯವಳಾಗಿ ತನ್ನೆಲ್ಲ ಕಷ್ಟ ಸುಖಗಳಿಗೆ ಪಾಲುದಾರಳಾಗಿದ್ದವಳು. ಅಪ್ಪನೂ ಸತ್ತಾಗ ತಾನಿನ್ನೂ ಮಿಡಲ್ ಸ್ಕೂಲ್ ನಲ್ಲಿದ್ದೆ. ಚಿಕ್ಕಮ್ಮನ ಕೈಯ್ಯಿಂದ ಮನೆಯಿಂದ ಹೊರಗೆ ದಬ್ಬಿಸಿಕೊಂಡಾದ ಮೇಲೆ ತಮ್ಮಿಬ್ಬರನ್ನು ಅತಿಯಾದ ಆಸ್ಥೆ ಎನ್ನಲಾಗದಿದ್ದರೂ ತಕ್ಕಮಟ್ಟಿಗೆ ಸಾಕಿದ್ದು ದೊಡ್ದಪ್ಪ-ದೊಡ್ಡಮ್ಮ. ಮಕ್ಕಳಿರದಿದ್ದ ಅವರಿಗೆ ಆ ಕೊರತೆ ತುಂಬಿಸುವುದಕೆರಡು ಜೀವಗಳು ಮತ್ತೆ ತಮಗೆ ಹೊಟ್ಟೆಬಟ್ಟೆಗೊಂದು ಆಸರೆ ಅಷ್ಟೇ.. ಅದಕ್ಕಿಂತ ಮುಂದಿನ ಹಂತಕ್ಕೆ ಆ ಸಂಬಂಧ ತಲುಪಲೇ ಇಲ್ಲ. ಆದರೆ ಬೆಳಗ್ಗೆ ಎಬ್ಬಿಸುವಾಗಿನ ಹೂಮುತ್ತೊಂದರಿಂದ ಹಿಡಿದು ರಾತ್ರಿ ಲಾಲಿಯ ಅಥವಾ ಕತೆಯೊಂದರ ಜೊತೆ ಮಲಗುವವರೆಗಿನ ಎಲ್ಲಾ ಅಮ್ಮ ಮಾಡುತ್ತಿದ್ದ ಕೆಲಸಗಳನ್ನು ತಪ್ಪದೇ ಮಾಡಿ ತನ್ನ ಜೀವನದಲ್ಲಿ ಯಾವುದೇ ಮುಚ್ಚಟೆಗೆ ಕೊರತೆಯಿಲ್ಲದಂತೆ ಪಾಲಿಸಿದ್ದವಳು ತನ್ನಕ್ಕ. ಅಂಥ ಅಮ್ಮನಂಥ ಅಕ್ಕ ಸಣ್ಣ ವಯಸ್ಸಿಗೇ ಕುಡುಕ ಗಂಡನೊಂದಿಗೆ ಬಾಳಲಾರೆನೆಂದು ಬಿಟ್ಟು ಬಂದಿದ್ದಳು. ಅವಳೇನೂ ಭಾರೀ ಧೈರ್ಯಸ್ಥೆಯೆಂದಲ್ಲ, ತಮ್ಮ ಕೈಬಿಡಲಿಕ್ಕಿಲ್ಲ ಅನ್ನುವ ತನ್ನ ಮೇಲಿನ ನಂಬಿಕೆಯಿಂದ. ಅವನೂ ರಸಹಿಂಡಿದ ಜಲ್ಲೆಯಂತಾಗಿದ್ದ ಅಕ್ಕ ಕಳಚಿಕೊಂಡರೆ ಸಾಕೆಂದಿದ್ದವನು, ನಿರಾಳ ಬಿಟ್ಟುಕೊಟ್ಟ. ಡೈವೋರ್ಸ್ ಬಗ್ಗೆ ಅಕ್ಕ ಯಾಕೋ ಒಲವು ತೋರಲಿಲ್ಲ, ತಾನೂ ಎರಡನೇ ಬಾರಿ ಮಾತಾಡಿರಲಿಲ್ಲ. ದೊಡ್ಡಪ್ಪನ ಹೋಟೆಲ್ ಚೆನ್ನಾಗೇ ನಡೆಯುತ್ತಿದ್ದು ದುಡ್ಡುಕಾಸಿಗೆ ತೊಂದರೆಯಿಲ್ಲವಾಗಿದ್ದು ಅವನಿಂದ ಜೀವನಾಂಶದ ಅಪೇಕ್ಷೆಯೂ ಇರಲಿಲ್ಲ. ಅಂದು ಅವಳು ಈ ಐದಾರು ವರ್ಷದ ಕಂದನ ಕೈಹಿಡಿದು ಬಂದು ತನ್ನ ಕದ ತಟ್ಟಿದಾಗ ನಿರೀಕ್ಷೆ ತುಂಬಿದ ಆ ಕಣ್ಣುಗಳಲ್ಲಿದ್ದ ನಂಬಿಕೆಯ ನೋಟ ತನ್ನನ್ನಿಂದಿಗೂ ತಪ್ಪಿತಸ್ಥ ಭಾವದಿಂದ ಬಿಡುಗಡೆಗೊಳಿಸಿಲ್ಲ.. ತಾನಾಗಷ್ಟೇ ಮದುವೆಯಾಗಿದ್ದು ತುಳಸಿಯ ಪ್ರೀತಿಯ ಹೊಳೆಯಲ್ಲಿ ಕೊಚ್ಚಿಹೋಗುತ್ತಿದ್ದೆ, ವಾಸ್ತವದಿಂದ ಬಲುದೂರ, ಅವಳ ಬಿಟ್ಟಿನ್ನೆಲ್ಲವೂ ಅರ್ಥಹೀನವೆನ್ನುವ ಭ್ರಮೆಯ ಬಲೆಯೊಳಗೆ. ನಯವಾಗಿಯೇ ತುಳಸಿಯ ಮಾತುಗಳನ್ನು ತನ್ನ ದನಿಯಲ್ಲಿ ಅಕ್ಕನೆದುರು ತುಂಬ ಸರಾಗ ನುಡಿದಿದ್ದೆ
"ಅಕ್ಕಾ, ಬೇರೆ ಮನೆ ಮಾಡಿ ಕೊಡುತ್ತೇನೆ, ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತೇನೆ, ಅದಿತಿ ನಿನದಲ್ಲ, ನನ್ನ ಮಗಳೆಂದು ನೋಡಿಕೊಳ್ಳುತ್ತೇನೆ, ಬೇಕಾದ್ದೆಲ್ಲ ತಂದುಹಾಕುತ್ತೇನೆ ..." ಹೀಗೇ ಇನ್ನೂ ಏನೇನೋ... "ಬೇಕಾದ್ದೆಲ್ಲ....." ಅನ್ನುವಾಗ ಬಾಯಿಷ್ಟೂ ತಡವರಿಸಿರಲಿಲ್ಲ, ಅಕ್ಕನಿಗೆ ಆಗ ಬೇಕಾಗಿದ್ದದ್ದೇನು ಎನ್ನುವುದರ ಅರಿವಿದ್ದೂ. ತನ್ನ ಬುದ್ಧಿಯ ಮೇಲೆ ಅಂಥ ಹಿಡಿತವಿತ್ತು ತುಳಸಿಯ ಆಕರ್ಷಣೆಗೆ. ಅಕ್ಕ ಉತ್ತರಿಸಿರಲಿಲ್ಲ, ಮೌನವಾಗಿ ತೋರಿಸಿದ ದಾರಿಯಲ್ಲಿ ನಡೆದಿದ್ದಳು. ಅಂಥ ಘಟ್ಟದಲ್ಲೂ ಅವಳು ಬರೀ ಪ್ರೀತಿಯನ್ನುಳಿದು ಬೇರೇನೂ ತೋರಿರಲಿಲ್ಲ, ಮನಸಲ್ಲೇನೇನಿತ್ತೋ ಆ ದೇವರಿಗೇ ಗೊತ್ತು. ಅಂಥ ಅಮ್ಮನಂಥ ಅಕ್ಕ ಮಗು ಚಿಕಗುನ್ಯಾದಿಂದ ಒದ್ದಾಡುತ್ತಿದ್ದಾಗ ಒಬ್ಬಳೇ ಇರಲು ಭಯವೆಂದು ದಾಕ್ಷಿಣ್ಯದಿಂದಲೇ "ಒಂದು ನಾಲ್ಕಾರು ದಿನ ಬರಲೇನೋ?" ಅಂದಿದ್ದಳು..ತಾನು ಯಥಾಪ್ರಕಾರ ತುಳಸಿಯ ಮುಖ ನೋಡಿದ್ದೆ. ಅವಳು ಸಕಾರಾತ್ಮಕವಾಗಿ ತಲೆಯಾಡಿಸಿದಾಗ ದೇವತೆ ಎನಿಸಿದ್ದಳು. ರಾತ್ರಿ ತಬ್ಬಿಕೊಂಡು "ನಿನ್ನ ಪಡೆಯಲು ಪುಣ್ಯ ಮಾಡಿದ್ದೆ ಚಿನ್ನಾ" ಅಂದಿದ್ದೆ. ನಿಜವಾಗಿ ಹಾಗನಿಸುವಷ್ಟು ಮಂಕು ಬಡಿದಿತ್ತೋ ಅಥವಾ ಬರೀ ತೋರಿಕೆಯ ಸುಳ್ಳಾಡುವುದು ಅಭ್ಯಾಸವಾಗಿ ಬಿಟ್ಟಿತ್ತೋ ಈಗ ನೆನಪಾಗುತ್ತಿಲ್ಲ. ಆಗ ಬಂದ ಅಕ್ಕ ನರಕವನ್ನೇ ನೋಡಿಬಿಟ್ಟಳು ತನ್ನ ಮನೆಯಲ್ಲಿ. ಮೊದಲ ಬಾರಿಗೆ ತುಳಸಿಯ ರಾಕ್ಷಸೀಯ ವರ್ತನೆ ಕಂಡು ತಾನು ಬೆಚ್ಚಿದ್ದೆ, ಆದರೆ ಎದುರಿಸಲಾರದಷ್ಟು ಗುಲಾಮಗಿರಿಯೊಳಗೆ ಕಳೆದುಹೋಗಿದ್ದೆ. ಚಿನ್ನದ ಸೂಜಿಯಲ್ಲಿ ಚುಚ್ಚುವ ಮತ್ತು ಆ ಮೂಲಕ ತನ್ನ ನಿಲುವನ್ನೇ ಪ್ರತಿಪಾದಿಸಿ ಸಾಧಿಸಿಕೊಳ್ಳುವ ತುಳಸಿಯ ಚಾಕಚಕ್ಯತೆಗೆದುರಾಗಿ ನಡೆಯಲಾಗದೆ ಅಸಹಾಯಕತೆಯೆನಿಸಿದರೂ ಅವಳ ತನ್ನೊಂದಿಗಿನ ಅತಿ ಸೌಹಾರ್ದ ಬಾಳ್ವೆ ಮೂಕನನ್ನಾಗಿಸಿತ್ತು. ಹೇಗೋ ಮಗು ಹುಶಾರಾದ ಮೇಲೆ ಹೋದ ಅಕ್ಕ ಮನೆಗೆ ಕಾಲಿಟ್ಟಿರಲಿಲ್ಲ, ತುಳಸಿ ಅದಾಗಗೊಟ್ಟಿರಲಿಲ್ಲ ಅಂದರೆ ಸರಿಯಾದೀತೇನೋ..ಆಮೇಲೆ ತನ್ನ ತುಂಗಾ ಹುಟ್ಟಿದ್ದು, ಆ ಸಮೃದ್ಧತೆಯ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವರ್ತಮಾನದೆದುರು ಭೂತ-ಭವಿಷ್ಯಗಳೆರಡೂ ಮರೆತೇ ಹೋದಂತಿತ್ತು ತನಗೆ. ನೆನಪುಗಳು ಕನಸುಗಳಿಂದ ಮುಕ್ತವಾದ ದಿನಗಳು. ಬರೀ ಸಫಲತೆ, ಪ್ರೀತಿ, ಯಾವುದೇ ಅಡೆತಡೆಯಿರದ ಸುಖದ ಹೊನಲು. ಕೈತುಂಬಾ ಸಂಬಳ, ಚಂದದ ಮನೆ, ಓಡಾಡಲು ಕಾರು, ಮನಮೆಚ್ಚುವ ಮಡದಿ, ಮುದ್ದು ಮಗು..ಬದುಕಿಗೆ ಬೇಕಾದದ್ದು ಬೇಡದಿದ್ದದ್ದು ಎಲ್ಲ ಸವಲತ್ತುಗಳ ನಡುವೆ ಅಕ್ಕ ಎಲ್ಲೋ ಆಗಾಗ ನೆನಪಾಗುತ್ತಿದ್ದರೂ ಅವಳಿಗೆ ಬೇಕಾದ್ದೆಲ್ಲ ಒದಗಿಸಿಕೊಡುತ್ತಿರುವ ಅನುಕೂಲಶಾಸ್ತ್ರದ ಸಮಾಧಾನ ಒದಗುತ್ತಿತ್ತು. ತಪ್ಪಿತಸ್ಥ ಭಾವನೆ ಅಲ್ಲಲ್ಲಿ ಇಣುಕುತ್ತಿದ್ದರೂ ತಲೆಮೇಲೆ ಮೊಟಕಿ ಸುಮ್ಮನಿರಿಸುವ ಈ ಇವೆಲ್ಲಾ ಇದ್ದವಲ್ಲಾ... ಹೀಗೆ ಅದೇ ಊರಲ್ಲಿದ್ದೂ ತಾನು ಅಕ್ಕನನ್ನು ಭೇಟಿ ಮಾಡದೆಯೇ ಅದೆಷ್ಟೋ ಸಮಯ ಕಳೆದೇ ಹೋಯಿತು. ಎಂಟೇ ತಿಂಗಳ ಕೂಸು ಕೈಲಿದ್ದಾಗ ಮತ್ತೆ ತುಳಸಿ ಬಸುರಿಯಾದಳು. ತಮಗದು ಬೇಕಿರಲಿಲ್ಲ, ಆದರೆ ಅವಳ ಅನಿಯಮಿತ ಮುಟ್ಟಿನ ತೊಂದರೆಯ ಕಾರಣದಿಂದಾಗಿ ಮೂರುತಿಂಗಳು ತುಂಬಿದ ಮೇಲೇ ಗರ್ಭ ನಿಂತದ್ದರ ಅರಿವಾಗಿದ್ದು, ಯಾವ ವೈದ್ಯರೂ ತೆಗೆಸಲು ಒಪ್ಪದೇ ಇದ್ದ ಸಂದರ್ಭ, ಇವಳು ಹುಡುಗಾಟಿಕೆಯ ಬುದ್ಧಿಯಲ್ಲಿ ಏನೇನೋ ಮಾತ್ರೆ ತಿಂದೂ ಉಳಕೊಂಡ ಗರ್ಭ ಒಂಬತ್ತು ತಿಂಗಳು ಕಳೆದು ದಯಪಾಲಿಸಿದ್ದು ತನ್ಮಯ್ ನನ್ನು. ಆಕಾಶದಲ್ಲೇ ತೇಲಾಡುತ್ತಿದ್ದ ತಾನು ಈ ಮುದ್ದು ಮಗು ಮಾನಸಿಕ ನ್ಯೂನತೆಗಳ ಮೂಟೆಯಾಗಿದ್ದುದರ ಅರಿವಾದಾಗಲೇ ಧೊಪ್ಪೆಂದು ಧರೆಗಿಳಿದದ್ದು. ಮಗು ಬೆಳೆಯುತ್ತಾ ಬೆಳೆಯುತ್ತಾ ಅದರ ಬೆಳವಣಿಗೆಯಲ್ಲಿನ ಕೊರತೆ ಹೆಚ್ಚುಹೆಚ್ಚು ಕಾಣಿಸಿಕೊಳ್ಳತೊಡಗಿದಂತೆ ಬಾಳಿನೆಲ್ಲ ಸುಖಸಮೃದ್ಧಿಗಳೂ ಕಣ್ಣುತಪ್ಪಿಸಿಕೊಳ್ಳತೊಡಗಿದವು. ಹೆಚ್ಚುಕಮ್ಮಿ ಮಗು ತನದಲ್ಲವೇನೋ ಎಂಬಂತೆ ಉದಾಸೀನಳಾಗಿರುತ್ತಿದ್ದ ತುಳಸಿಯ ವರ್ತನೆ ಚಿಟ್ಟುಹಿಡಿಸುತ್ತಿತ್ತು. ಮತ್ತೆ ಅಕ್ಕ ನಾನೂ ಎದುರುಬದುರಾಗಿದ್ದೆವು. ಸಂಕಟ ಬಂದಾಗ ವೆಂಕಟರಮಣನೆನುತಾ ನಾನು, ನಾನಿಲ್ಲವೇನೋ ಅನುತಾ ಅವಳು. ತನ್ಮಯ್ ನ ಮೊದಲಾರು ವರ್ಷಗಳು ಅಕ್ಕನ ಮಡಿಲಲ್ಲೇ ಅವಳ ಮನೆಯಲ್ಲೇ ಕಳೆದವು. ಅದಿತಿಗಾಗ ಹದಿನೈದು ವರ್ಷ. ಆಮೇಲೆ ಆತನನ್ನು ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಸೇರಿಸಿದಾಗಲೂ ಕಣ್ಣೀರಾದದ್ದು ಅಕ್ಕನೇ ಹೊರತು, ತುಳಸಿಯಲ್ಲ. ಆಮೇಲೂ ಅಲ್ಲಿಗೆ ಹೋಗಿಹೋಗಿ ಅವನನ್ನು, ವಯಸಿನೊಂದಿಗೆ ಸ್ವಲ್ಪವೂ ಮುನ್ನಡೆಯದ ಅವನ ಬೆಳವಣಿಗೆಯನ್ನು, ಅಭಿವೃಧ್ಧಿಯನ್ನು ಕಂಡುಕೊಂಡು ಬಂದು ಮರುಗುತ್ತಿದ್ದವಳೂ ಅವಳೇ. "ಅಯ್ಯೋ ನಾನು ಹೋದರೂ ಅಷ್ಟೆ, ಹೋಗದಿದ್ದರೂ ಅಷ್ಟೆ, ಅವನು ಪಡಕೊಂಡು ಬಂದದ್ದು ಇಂಥ ಬಾಳು, ಸರಿ ಇಲ್ಲದವನಿಗಾಗಿ ಸರಿ ಇರುವ ನನ್ನ ಬಾಳನ್ನು ಅಂದಗೆಡಿಸಿಕೊಳ್ಳಲು ತಯಾರಿಲ್ಲ ನಾನು "ಅನ್ನುತ್ತಿದ್ದ ತುಳಸಿಯ ವರ್ತನೆ ತನಗೆ ವಿಚಿತ್ರವೆನಿಸಿದರೂ ತುಂಬಾ ಪ್ರಾಕ್ಟಿಕಲ್ ಹೆಣ್ಣುಮಗಳೀಕೆ ಅಂದುಕೊಂಡು ಸಮಾಧಾನ ಮಾಡಿಕೊಂಡಿದ್ದೆ. ಹಗಲು ಅವಳ ಬಗೆಗೆಷ್ಟು ಸಂಶಯ ಮೊಳೆಯಿಸಿದರೂ ರಾತ್ರಿಯ ಏಕಾಂತದಲ್ಲಿನ ಅವಳ ಸಾಮೀಪ್ಯ ಮತ್ತು ಅಲ್ಲಿ ಅವಳು ತೋರುತ್ತಿದ್ದ ವಿಶಿಷ್ಠ ಪ್ರೀತಿ ಇತರರ ಗಮನಕ್ಕಾಗಿ ಹಾತೊರೆಯುತ್ತಲೇ ಬೆಳೆದ ತನಗೆ ಹಗಲಿನೆಲ್ಲ ಅಸಮಾಧಾನವನ್ನೂ ಚಿವುಟಿಹಾಕುವಂತೆ ಮಾಡುತ್ತಿದ್ದವು. ಪುನಃ ಮಾರನೆಯ ಬೆಳಿಗ್ಗೆ ಅವಳ ಇಚ್ಛೆಯೆಲ್ಲವನ್ನೂ ಪೂರೈಸುವುದೇ ತನ್ನ ಬಾಳಿನ ಆದ್ಯತೆ ಎನುವಂತೆ ದಿನ ಶುರುಹಚ್ಚಿಕೊಳ್ಳುತ್ತಿದ್ದೆ. ಏನೂ ಕಡಿಮೆ ಮಾಡಿರಲಿಲ್ಲ ಅವಳಿಗೆ ತಾನು. ಐದು ವರ್ಷಕ್ಕೊಮ್ಮೆ ಸುಸ್ಥಿತಿಯಲ್ಲಿರುವ ಮನೆಯ ಮೆಶಿನರಿ ಸಾಮಾನುಗಳನ್ನು ಅವಳ ಖುಶಿಗಾಗಿ ಬದಲಿಸಿಕೊಡುತ್ತಿದ್ದೆ, ಹಳತು ಕೊಟ್ಟು ಹೊಸತು ತಂದಾಗಿನ ಕೆಲಕ್ಷಣ ಅವಳ ಮುಖದಲ್ಲಿ ಕಾಣುವ ಸಂತೃಪ್ತಿಗಾಗಿ ಲೆಕ್ಕವಿಡದೆ ಹಣ ವ್ಯಯಿಸುತ್ತಿದ್ದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮನೆಗೆ ಬಣ್ನ ಹೊಡೆಸುತ್ತಿದ್ದೆ. ಎಲ್ಲವನ್ನೂ ಅವಳಿಗಾಗಿ ನಳನಳಿಸುವಂತೆ ಇಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದೆ. ತನ್ನನ್ನು ಅಷ್ಟರಮಟ್ಟಿಗೆ ವಶೀಕರಣಗೊಳಿಸಿದ ಅವಳ ಸತ್ವವಾದರೂ ಎಂಥದ್ದು ಎಂಬುದು ಅಂದಿನಂತೆಯೇ ಇಂದೂ ಒಗಟಾಗಿಯೇ ಉಳಿದಿದೆ. ತೀರಾ ಸಾಧಾರಣ ರೂಪು, ಮಧ್ಯಮ ದರ್ಜೆಯ ವಿದ್ಯಾಭ್ಯಾಸ ಅದಕ್ಕೆ ತಕ್ಕ ಬೌದ್ಧಿಕತೆ, ಅತಿ ಅಪರೂಪ ಅನ್ನುವ ನಗು, ತೀರಾ ನಾಜೂಕಲ್ಲದ ಸಾಮಾಜಿಕ ನಡವಳಿಕೆ, ತನ್ನನ್ನು ಮಿಕ್ಕೆಲ್ಲ ಸಂಬಂಧಗಳಲ್ಲಿ ಸಣ್ಣ ಅನಾದರ, ಅಕ್ಕಪಕ್ಕದಲ್ಲೂ ಸಾಮಾನ್ಯ ಹೊಂದಾಣಿಕೆ..ಇವೇ ಮುಂತಾದ ಅತಿಸಾಮಾನ್ಯ ಗುಣಗಳಿದ್ದೂ ತನ್ನನ್ನು ಅಷ್ಟರಮಟ್ಟಿಗೆ ಸೆಳೆದದ್ದು ಏನು ಅಂಬುದೇ ಅರ್ಥವಾಗಲೇ ಇಲ್ಲ ನಾಯಕರಿಗೆ. ಹ್ಮ್ಮ್...ಬಿಳಿಯ ಬಣ್ಣ ಸಮೀಪಿಸಿತು, ಏನಪ್ಪಾ, ಮತ್ತೆ ಉಚ್ಚಿನಾ, ಅದೆಷ್ಟು ಸಲ ಹರಿಸ್ತೀರೂ ಹೊಳೆ, ಬೊಳ್ಳ ಬಂದೀತು.. ಅನ್ನುತ್ತಾ ನಗುನಗುತ್ತಾ ಮೂತ್ರದ ಚೀಲವೆತ್ತಿಕೊಳ್ಳುತ್ತಿದ್ದ ಹೆಣ್ಣುಮಗಳು ಸಿಸ್ಟರ್ ಶೀಲಾ, ತುಂಗಾಳನ್ನು ಹೋಲಿಸಿ ನೋಡಿತು ಮನಸು. ತಾನಿಲ್ಲಿಗೆ ಬಂದು ಅದೆಷ್ಟು ವರ್ಷವಾಯಿತೋ, ಆವತ್ತಿಂದ ಇಂದಿನವರೆಗೆ ಅವಳು ತನ್ನ ಅಪ್ಪಾ, ಅಂದು ಕರೆದದ್ದು ನೆನಪಿಲ್ಲ, ಹತ್ತಿರ ಬರುವುದು, ಮುಟ್ಟಿ ಸ್ಪಂದಿಸುವುದು ದೂರದ ಮಾತು, ದೂರದಲ್ಲೇ ಮೂಗು ಮುಚ್ಚಿಕೊಂಡು ಕಣ್ಣಲ್ಲಿ ಇನ್ನಿಲ್ಲದ ಅಸಹ್ಯದ ಭಾವ ಬೀರುತ್ತಾ ಬಾಗಿಲಲ್ಲೇ ನಿಂತು ಹೋಗುತ್ತಿದ್ದಳು ಅವಳಮ್ಮನಂತೆ. ಕಣ್ಣು ಅದಿತಿಗಾಗಿ ತಡಕಾಡಿತು,. ಅರ್ಥವಾಯ್ತೆಂಬಂತೆ "ಇಲ್ಲೇ ಕೂತಿದ್ದರು ಇಷ್ಟು ಹೊತ್ತು, ನೀವೇನೂ ಹೇಳುವುದಿಲ್ಲ, ಕೊನೆಪಕ್ಷ ಅವರನ್ನು ಗುರ್ತಿಸಿದ್ದನ್ನೂ ಅವರಿಗರಿವಾಗಿಸುವುದಿಲ್ಲ, ಕಣ್ಣೀರ್ಗರೆಯುತ್ತಾ ನಿಮ್ಮ ಒಂದು ಕಣ್ಣರಳುವಿಕೆಗಾಗಿ ಕಾದಿದ್ದಾರು. ನೋಡಲಾಗದೆ ನಾವೇ ಊಟ ಮಾಡಿಕೊಂಡು ಬನ್ನಿ ಅಂತ ಕಳಿಸಿದ್ದೇವೆ, ಇನ್ನೇನು ಬರ್ತಾರೆ" ಅಂದಳು ಶೀಲಾ. ಮತ್ತೆ ಕಣ್ಣು ಮಳೆಗರೆಯಲಾರಂಭಿಸಿತು...ದೇಹದೆಲ್ಲ ಭಾಗದ ಸಂಕಟದ ಬಿಸಿ ತಣಿಸಲೋ ಎಂಬಂತೆ.
ತನ್ಮಯ್ ವಸತಿಶಾಲೆ ಸೇರಿದ ಮೇಲೆ ಮತ್ತೆ ಅಕ್ಕ ಅವಳ ಪಾಡಿಗೆ ತಾವು ತಮ್ಮ ಪಾಡಿಗೆ.. ಅವಳು ತನ್ಮಯ್ ನ ಇಷ್ಟು ವರ್ಷಗಳ ತನ್ನ ಸೆರಗಲ್ಲಿ ಭರಿಸಿದ್ದೂ, ನಾವೊ ಅವನು ನಮಗ್ಯಾರೂ ಅಲ್ಲವೆಂಬಂತೆ ಇದ್ದದ್ದು ಅತಿ ಸಹಜವೆಂಬಂತೆ ಬಾಳಲಾರಂಭಿಸಿ ಸಾಗಿಸಿದ್ದ ದಿನಗಳು.. ಅದೇ ದಿನಗಳಲ್ಲೊಂದು ದಿನ ತಾನು ಕಾರ್ ಪಾರ್ಕ್ ಮಾಡಿ ಅಂಗಡಿಯೊಂದಕ್ಕೆ ನಡೆದುಹೋಗುತ್ತಿದ್ದಾಗ ಸ್ವಲ್ಪ ತಲೆ ತಿರುಗಿದಂತಾಗಿದ್ದು, ಸಾವರಿಸಿಕೊಂಡು ಮುನ್ನಡೆದರೂ ಯಾಕೋ ದೇಹ ಸ್ಥಿಮಿತ ಕಳಕೊಳ್ಳುತ್ತಿದ್ದಂತನಿಸಿದ್ದು, ಕೆಲಸ ಮುಗಿಸಿಕೊಂಡು ಕಾರ್ ನ ಹತ್ತಿರ ವಾಪಾಸಾಗುತ್ತಿದ್ದಾಗ ತಲೆ ತಿರುಗಿ ಬಿದ್ದದ್ದು. ಸುಮಾರು ಇಪ್ಪತ್ತನಾಲ್ಕು ಘಂಟೆಕಾಲ ತನಗೆ ಎಚ್ಚರ ಬಂದಿರಲಿಲ್ಲವಂತೆ. ಅಂದಿನಿಂದ ಶುರುವಾಗಿದ್ದು ಈ ಆಸ್ಪತ್ರೆಯ ಓಡಾಟ. ಅದೆಷ್ಟೋ ಪರೀಕ್ಷೆಗಳು, ಚಿಕಿತ್ಸೆಗಳ ನಂತರ ಯಾವುದೋ ನರವೊಂದು ಅತಿಯಾದ ಒತ್ತಡಕ್ಕೊಳಗಾಗಿ ತನ್ನಷ್ಟಕ್ಕೆ ತಾನು ಚಪ್ಪಟೆಯಾಗಿದ್ದೇ ಅಂದಿನ ತಾನು ಬೀಳುವುದಕ್ಕೆ ಕಾರಣವೆಂದರು. ಒಂದಾದ ನಂತರ ಒಂದು ನರ ಹೀಗೆ ಚಪ್ಪಟೆಯಾಗುತ್ತಲೇ ಸಾಗುವ ಈ ಚಟುವಟಿಕೆಯೊಂದು ಹಲವರ ದೇಹದಲ್ಲಿ ಒಮ್ಮಿಂದೊಮ್ಮೆ ಶುರುವಾಗಬಹುದಂತೆ, ಮತ್ತು ಒಂದು ನಿರ್ದಿಷ್ಟ ವಯಸ್ಸಿನ ನಂತರ ಆ ನರಗಳ ಮತ್ತೆ ಚೇತರಿಸಿಕೊಳ್ಳುವಿಕೆ ಅಸಾಧ್ಯವೆಂತಲೂ ಹೇಳಿಬಿಟ್ಟರು. ಆಗ ತುಂಗಾಗೆ ಹನ್ನೆರಡು, ತನ್ಮಯ್ ಗೆ ಹನ್ನೊಂದು ವರ್ಷ. ಅಲ್ಲಿಂದ ಶುರುವಾದ ಈ ತೊಂದರೆ ತನ್ನ ದೇಹದ ಸ್ವಾಧೀನ ತಪ್ಪಿಸುತ್ತಲೇ ನಡೆದಿತ್ತು. ಮುಂದೊಂದು ಹಂತದಲ್ಲಿ ತಾನು ಸ್ವಲ್ಪ ಮಟ್ಟಿಗೆ ಬುದ್ಧಿ ಸ್ವಾಧೀನ ತಪ್ಪಿದಂತೆಯೂ ಆಡತೊಡಗಿದ್ದೆನಂತೆ. ತುಳಸಿ ಮತ್ತು ತುಂಗಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು, ಹೋಟೆಲ್ ನೋಡಿಕೊಳ್ಳಲಿಕ್ಕೆ ತುಳಸಿಯ ಅಕ್ಕನ ಗಂಡ ಬಂದರು, ಎಲ್ಲ ಸುಸೂತ್ರವಾಗಿಯೇ ಒಂದಷ್ಟು ವರ್ಷ ನಡೆಯಿತು. ಅಕ್ಕ ಮಾತ್ರ ಆಗಾಗ ಬಂದು ಹೇಗಿದ್ದವ ಹೇಗಾಗಿಬಿಟ್ಟೆಯಲ್ಲೋ ಅನ್ನುತ್ತ ಮತ್ತವಳ ಜೊತೆ ಈ ಕಂದನೂ ಅಳುವುದು ಬಿಟ್ಟರೆ ಇನ್ಯಾರೂ ತನ್ನ ಈ ದುಸ್ಥಿತಿಯಿಂದ ತುಂಬಾ ವಿಚಲಿತರಾದಂತೆ ಅನಿಸುತ್ತಿರಲಿಲ್ಲ. ಅಲ್ಲೂ ತುಳಸಿಯ ಮನಸ್ಥೈರ್ಯವೇ ತನಗೆ ಕಂಡದ್ದು, ಮೆಚ್ಚುಗೆಯಾದದ್ದು. ಇದ್ದಕಿದ್ದಂತೆ ಒಂದು ದಿನ ತುಳಸಿಯ ಕಣ್ಣುತಪ್ಪಿಸಿ ಮನೆಯಿಂದಾಚೆ ಬಂದವನು ಸುಮ್ಮನೆ ನಡೇಯುತ್ತಾ ಹೋದೆ ಒಂದು ಹತ್ತು ನಿಮಿಷಗಳವರೆಗೆ. ತಿರುಗಿ ನೊಡುತ್ತೇನೆ ಯಾವ ದಾರಿಯೂ ಪರಿಚಿತವೆನಿಸುತ್ತಿಲ್ಲ, ಎಲ್ಲಿದ್ದೇನೆಂಬುದೇ ತಿಳಿಯಲಿಲ್ಲ, ಯಾರ ಮುಖವೂ ಪರಿಚಯದ್ದೆನಿಸುತ್ತಿಲ್ಲ, ಗಾಭರಿಯಾಗಿಬಿಟ್ಟೆ... ಕಂಗೆಟ್ಟು ಕುಸಿದು ಕೂತವನನ್ನು ಕಂಡು ಹಾದುಹೋಗುತ್ತಿದ್ದವರು "ಯಾರಮನೆ?" ಅಂದರು.. ಅವಳ ಹೆಸರೂ ನೆನಪಾಗುತ್ತಿಲ್ಲ. ಅಯ್ಯೋ ಇದೇನಾಯಿತು, ತಾನು ಯಾರು ಎಲ್ಲಿಗೆ ಹೋಗಬೇಕು, ಒಂದೂ ಗೊತ್ತಾಗುತ್ತಿಲ್ಲ, ನಿಮ್ಮ ಹೆಸರೇನು ಅಂದರು ಅದೂ ನೆನಪಾಗುತ್ತಿಲ್ಲ. ಭಾರೀ ಗಾಭರಿಯಾಯಿತು. ಆಚೀಚೆ ನೋಡುತ್ತಿರುವಷ್ಟರಲ್ಲೇ ಅವಳು ಬಂದಳು.. ಯಾರವಳು.. ಛೇ ಹೆಸರೂ ನೆನಪಾಗುತ್ತಿಲ್ಲ, ತನ್ನವಳು ಅವಳೆಂಬುದಷ್ಟೇ ಗೊತ್ತಿತ್ತು ಆಕ್ಷಣ... ತನ್ನಿಂದ ತಾನು ಕಳೆದುಹೋದ ಕ್ಷಣ, ತನ್ನಿಂದಲೇ ಏನು, ತನ್ನದೆಂಬ ಬಾಳಿನಿಂದಲೇ ತಾನು ಸಂಪೂರ್ಣವಾಗಿ ಕಳೆದು ಹೋದ ಕ್ಷಣ.. ಬಂದವಳೇ ದುರುದುರು ನೋಡಿದಳಷ್ಟೇ, ಕೈ ಹಿಡಿದು ಆಧರಿಸಿ ಹಿಡಿದುಕೊಂಡಿದ್ದವರ ಕೈಯ್ಯಿಂದ ಕಿತ್ತುಕೊಂಡಂತೇ ಎಳೆದು ತನ್ನ ಕೈ, ಅವರಿಗೊಂದು ಮಾತು ಕೃತಜ್ಞತೆಯೂ ಹೇಳದೆ ದರದರ ಒಯ್ದಿದ್ದಳು ಮನೆಗೆ. ಅದುವರೆಗೆ ಮೂರುಕೋಣೆಗಳ ಮಿತಿಯಲ್ಲಿ ಸೆರೆಯಲ್ಲಿದ್ದ ತನಗೆ ಅಂದಿನಿಂದ ಒಂದು ಕೋಣೆಯ ಸೆರೆವಾಸ. ಕೆಲವೊಮ್ಮೆ ಎಲ್ಲ ನೆನಪಿರುತ್ತಿತ್ತು, ಅದೇ ಮುಂದಿನ ಕ್ಷಣ ತಲೆಯೊಂದು ಖಾಲಿ ಬಯಲಾಗುತ್ತಿತ್ತು. ಬರುಬರುತ್ತಾ ಹೋಮಿಯೋಪಥಿ ಚಿಕಿತ್ಸೆಯಿಂದ ದಿನದಲ್ಲಿ ನೆನಪಿನ ಶಕ್ತಿ ಹೆಚ್ಚುಕಾಲ ಚಾಲ್ತಿಯಲ್ಲಿರುವಂತೆ ಆಗುತ್ತಾ ಇತ್ತು .ತಾನು ಕಳೆದುಹೋದ ಸುದ್ಧಿ ಯಾರಿಂದಲೋ ತಿಳಿದು ಅಕ್ಕ ಓಡಿ ಬಂದಿದ್ದಳು. ಗೇಟ್ ನಿಂದಲೇ "ಇಲ್ಲ, ಆವರ ಮಾನಸಿಕ ಸ್ಥಿತಿ ತುಂಬಾ ಸೂಕ್ಷ್ಮವಾಗಿದೆ, ಯಾರೂ ಅವರನ್ನು ಭೇಟಿ ಮಾಡಿ, ಇನ್ನೂ ದುರ್ಬಲವಾಗಿಸಬಾರದು ಅಂದಿದ್ದಾರೆ ಡಾಕ್ಟರ್" ಎಂದು ಹೇಳಿ ಕಳುಹಿಸುತ್ತಿದ್ದದ್ದು ಮಹಡಿ ಮೇಲಿನ ಕೋಣೆಯಲ್ಲಿ ಕಂಡಿಗಾತುಕೊಂಡು ನಿಂತಿದ್ದ ತಾನೂ ನೋಡಿದ್ದೆ, ಮೊದಲ ಬಾರಿಗೆ ಅವಳನ್ನಷ್ಟು ದಯನೀಯವಾಗಿ ಕರೆದಿದ್ದೆ.."ತುಳಸೀ... ಅಕ್ಕ...". ತಿರುಗಿ ನೋಡಿದವಳು ಮುಂದೆ ಮಾತಾಡಗೊಟ್ಟಿರಲಿಲ್ಲ. "ಅಕ್ಕನೂ ಇಲ್ಲ, ಅಮ್ಮನೂ ಇಲ್ಲ ಹೋಗಿ ಒಳಗೆ" ಅಂದಿದ್ದಳು ಕೆಕ್ಕರಿಸಿ ನೋಡುತ್ತಾ.. ಅದೂ ಕೆಲತಿಂಗಳಷ್ಟೇ... ಅವಳ ಅಕ್ಕನ ಗಂಡನ ಜೊತೆ ಸೇರಿ ಈ ಒಂದು ಟರ್ಮಿನಲ್ ಕೇರ್ ಯುನಿಟ್ ನ ವಿಳಾಸ ಸಂಪಾದಿಸಿಬಿಟ್ಟಳು. ಇನ್ನಿಲ್ಲದ ಸರ್ಕಸ್ ಎಲ್ಲಾ ಮಾಡಿ, ಅವಳಿಗಾಗದ ಹೃದಯಾಘಾತದ ನೆಪ, ಇದ್ದೊಬ್ಬ ಮಗಳನ್ನೂ ಇಲ್ಲವೆಂದು ಹೇಳುವ ತಾವು ಮಕ್ಕಳಿಲ್ಲದ ದಂಪತಿಯೆಂಬ ಸುಳ್ಳು, ತನ್ನ ಕಾಯಿಲೆಯ ಪರಿಣಾಮಗಳ ಉತ್ಪ್ರೇಕ್ಷೆಯ ವರ್ಣನೆ ..ಇವುಗಳ ಆಧಾರದ ಮೇಲೆ ತನ್ನನ್ನು ನೋಡಿಕೊಳ್ಳುವವರಾರೂ ಇಲ್ಲವೆಂದು ಹೇಳಿ ಇಲ್ಲಿಗೆ ಉಡುಪಿಯಿಂದ ನೂರಾರು ಮೈಲಿ ದೂರದ ಕಾಸರಗೋಡಿನ ಆಶ್ರಯ ಸಂಸ್ಥೆಗೆ ತಂದು ಬಿಟ್ಟು ಹೋಗಿದ್ದಳು. ಅಕ್ಕನಿಗೆ ತಾನಲ್ಲಿ ಇಲ್ಲದಿದ್ದುದು ಯಾವಾಗ ತಿಳಿಯಿತೋ, ಅವಳೆಷ್ಟು ಮರುಗಿದಳೋ ಒಂದೂ ಗೊತ್ತಿಲ್ಲ. ಈಗ ತುಂಗಾಗೆ ಮದುವೆಯಂತೆ. ಅಂದರೆ ಇಪ್ಪತ್ತಾದರೂ ಆಗಿರಬಹುದು ಅವಳಿಗೆ. ಎಂಟು ವರ್ಷಗಳ ಕಾಲ ಇಲ್ಲಿದ್ದೆನೇ ತಾನು, ಒಂಟಿಯಾಗಿ, ಒಂದೇ ಒಂದು ವಾತ್ಸಲ್ಯದ ಸ್ಪರ್ಶಕಾಗಿ, ಪ್ರೀತಿಯ ನೋಟಕಾಗಿ ಹಂಬಲಿಸುತ್ತಾ..!!?ಇದೀಗ ಅಷ್ಟು ವರ್ಷಗಳ ನಂತರ ಅದಿತಿ ಅದು ಹೇಗೋ ತನ್ನನ್ನು ಹುಡುಕಿಕೊಂಡು ಬಂದಿದ್ದಾಳೆ. ಯಾರು ಹೇಳಿದ್ದೋ ತಾನಿಲ್ಲಿದ್ದೇನೆಂದು!
ಮತ್ತೆ ಮನಸ್ಸು ಇಂದಿನ ಈ ಕ್ಷಣಕ್ಕಿಳಿದು ಅದಿತಿಗಾಗಿ ಹುಡುಕಾಡಿದವು ಕಂಗಳು. ಅಲ್ಲೆಲ್ಲೋ ಯಾರನ್ನೋ ಗೋಗರೆಯುತ್ತಿರುವ ಆಕೆಯ ದನಿ.. "ದಯವಿಟ್ಟು ಅರ್ಥ ಮಾಡಿಕೊಳ್ಳಿ ಡಾಕ್ಟರೇ, ನಿಮ್ಮ ದಮ್ಮಯ್ಯ ಅಂತೀನಿ, ಅವರನ್ನು ಕಳಿಸಿಕೊಟ್ಟುಬಿಡಿ ಇದೊಂದು ಬಾರಿ. ಅವರ ಒಬ್ಬಳೇ ಒಬ್ಬಳು ಮಗಳ ಮದುವೆ, ಮಗನದ್ದೇನಾಗುತ್ತದೋ ಮುಂದೆ ಗೊತ್ತಿಲ್ಲ, ಅವನಂತೂ ಇದ್ದೂ ಇಲ್ಲದಂತೆ ನಮ್ಮ ಪಾಲಿಗೆ. ಈ ಒಂದು ಸಂದರ್ಭವಾದರೂ ಅವರಲ್ಲಿರಲಿ, ಕಣ್ತುಂಬ ನೋಡಿ ಅವಳನ್ನು ಹರಸಲಿ, ನಾನೇ ಕರ್ಕೊಂಡು ಹೋಗಿ ಮತ್ತೆ ತಂದಿಲ್ಲಿಗೇ ಬಿಡುತ್ತೇನೆ..."ಇನ್ನೂ ಏನೇನೋ..ಓ ನನ್ನನ್ನಲ್ಲಿಗೆ ಮತ್ತೆ ಒಯ್ಯುವ ಪ್ರಯತ್ನವೇ.. ಮನಸು ಹೂವಾಗಿ ಅರಳಿತು ಅದೆಷ್ಟೋ ದಿನದ ನಂತರ. ಓ ಕೂಸೇ, ಸಾರ್ಥಕವಾಯಿತು ಕಣೇ.. ನಿನ್ನನೊಂದೆರಡು ವರ್ಷವಾದರೂ ಹೊತ್ತಾಡಿಸಿದ್ದು. ಮತ್ತೆ ನನ್ನ ಮನೆಗೆ, ನನ್ನ ತುಳಸಿ, ತುಂಗಾ, ತನ್ಮಯ್, ಅಕ್ಕ..ಅಯ್ಯೋ ದೇವರೇ... ನನ್ನವರು ಅವರೆಲ್ಲರನ್ನೂ ನನ್ನ ಮನೆಯಂಗಳದಲ್ಲಿ ನೋಡಬಲ್ಲೆ. ಇದೊಂದು ಕನಸಾಗದಿರಲೆಂದು ಮನ ಹಾರೈಸಿತು
ಮುಂದಿನದೆಲ್ಲ ನಿಜವಾಗಿಯೂ ಸ್ವಪ್ನದಂತೆಯೇ ನಡೆದುಹೋಗಿತ್ತು. ಮೊದಲು ಇದಕ್ಕೆ ತುಳಸಿ ಒಪ್ಪಲಾರಳೆಂಬ ನೆಪ ಹೇಳಿ, ಅವಳ ಅನುಮತಿಪತ್ರ ತರಬೇಕಾಗಿ ಹೇಳುತ್ತಾ ಒಪ್ಪದೇ ಉಳಿದ ಡಾಕ್ಟರ್ ಆಮೇಲೆ ಅದಿತಿಯ ಗೋಗರೆಯುವಿಕೆ ನೋಡಲಾಗದೆ ಶೀಲಾಳನ್ನು ಜೊತೆಮಾಡಿ ಕಳಿಸಿದ್ದರು. ಉಡುಪಿಯ ತನ್ನ ಮಹಡಿಮನೆಯ ಮುಂದೆ ಬಂದಿಳಿದಾಗ ಮದುವೆಯ ಮನೆಯ ಎಲ್ಲ ಲಕ್ಷಣಗಳಿಂದ ಮನೆಯೂ, ನೆಂಟರಿಷ್ಟರ ಓಡಾಟದಿಂದ ಮನೆಯೊಳಗಿನ ವಾತಾವರಣವೂ ಕಳೆಗಟ್ಟಿತ್ತು. ಸಂತೋಷವಾಯಿತು, ಆದರೆ ಹಿಂದೆಯೇ ತೇಲಿಬಂದ ತುಳಸಿಯ ಮುಂಚಿನಿಂದಲೂ ಕಸಿವಿಸಿಯೆನಿಸುತ್ತಿದ್ದ ಗಟ್ಟಿದನಿಯ ನಗು ಅಲೆಅಲೆಯಾಗಿ ಕಿವಿ ಮನಗಳನ್ನು ಆವರಿಸಿ ಕಹಿಕಹಿಯೆನಿಸಿತು. ತಾನಿಲ್ಲದೇ ತುಳಸಿಯ ಬದುಕು ಇಂಥ ನಗುವಿನಿಂದ ತುಂಬಿದೆಯೇ?!ಇಳಿಸುತ್ತಾರೇನೋ... ಮನ ಕಾದೇ ಕಾಯುತ್ತಿತ್ತು. ಆದರೆ ಕಾರನ್ನು ಹಿಂದೆ ತಿರುಗಿಸಲು ಹೇ:ಳಿದ ಅದಿತಿಯತ್ತ ಮನಸಿಂದ ಪ್ರಶ್ನೆಗಳ ನಿಶ್ಯಬ್ಧ ಸರಮಾಲೆ. "ಇಲ್ಲ ಮಾಮಾ, ನಿನ್ನನ್ನೆಲ್ಲೂ ಕರ್ಕೊಂಡು ಹೋಗ್ತಾ ಇಲ್ಲ..ಮದುವೆ ನಾಳೆ ಅಲ್ಲ್ವಾ, ಸೀದಾ ಮಂಟಪಕ್ಕೇ ಬರುವಾ ಆದೀತಾ? ಈಗ ನಮ್ಮನೆಗೆ .." ಅಲ್ಲಿಂದ ಇಲ್ಲಿಯವರೆಗೂ ತನ್ನ ಕೈಯ್ಯನ್ನು ಕೈಯ್ಯೊಳಗಿರಿಸಿಕೊಂಡೇ ಮುತುವರ್ಜಿಯಿಂದ ಕರೆದುಕೊಂಡು ಬಂದಿದ್ದ ಅದಿತಿ ನಸುನಗುತ್ತಾ ಹೇಳಿದಳು. ಹಾಗಾದರೆ ಅಕ್ಕನನ್ನ ನೋಡಲು?! ಮತ್ತೆ ಮನ ಹುಚ್ಚೆದ್ದು ಕುಣಿಯಿತು. .. ತಾನು ಅಂದು ಮಾಡಿಕೊಟ್ಟ ಅದೇ ಮನೆಯಲ್ಲಿದ್ದಾರೆ ಅಕ್ಕ ಮತ್ತು ಅದಿತಿ. ಡ್ರೈವರ್ ಮತ್ತು ಶೀಲಾರ ಸಹಾಯದಿಂದ ಸ್ಟ್ರೆಚರ್ ನ ಮೇಲಿದ್ದಂತೇ ಮನೆಯೊಳಗೆ ಸಾಗಿಸಿದ ಅದಿತಿ ತನ್ನ ಮನಸೋದಿದವಳಂತೆ ಮಾತಾಡುತ್ತಿದ್ದಳು.. "ಹೂಂ ಮಾಮಾ, ನೀನಂದು ಬಾಡಿಗೆಗೆ ಕೊಡಿಸಿದ ಇದೇ ಮನೆನ್ನ ಖರೀದಿ ಮಾಡಿಬಿಟ್ಟೆ.. ನಮ್ಮ ಕಷ್ಟ-ಸುಖ ,ನಗು-ಅಳುಗಳಿಗೆ ಜೊತೆಯಾದ ಗೋಡೆ ಬಾಗಿಲುಗಳೊಡನೆ ಕಡಿದುಕೊಳ್ಳಲಾರದ ಸಂಬಂಧ ಹುಟ್ಟಿಬಿಟ್ಟಿತ್ತು, ಬಿಟ್ಟುಕೊಡಲಾರದಾದೆ, ಬಿಟ್ಟು ಹೋಗಲಾರದಾದೆ..." ಇವಳೆಲ್ಲಿ, ತನ್ನ ತುಳಸಿ-ತುಂಗಾರೆಲ್ಲಿ?! ಮನಸು ಅಕ್ಕನನ್ನು ಹುಡುಕುತಲೇ ಇತ್ತು... ಸಂಜೆ ಕಳೆದು ರಾತ್ರಿಯಾಯಿತು, ಅಕ್ಕನ ಸುಳಿವಿಲ್ಲ. ಬೆಳಿಗ್ಗೆಯೂ ಆಯಿತು. ಎಲ್ಲ ತನ್ನ ಮನದ ಭಾವಗಳನ್ನೋದಿ ಉತ್ತರಿಸುತ್ತಿದ್ದ ಅದಿತಿಗೆ ಅಕ್ಕನ ಕಾಣುವ ನನ್ನ ಹಪಹಪಿಯೇಕೆ ಅರ್ಥವಾಗುತ್ತಿಲ್ಲ... "ಎಲ್ಲಿಯಾದರೂ ಅಕ್ಕ...?!ಇಲ್ಲ ಇಲ್ಲ ಅಕ್ಕನಿಗೇನೂ ಆಗಲಾರದು, ಅಕ್ಕ ನಾನಿರುವವರೆಗೂ ಇರಬೇಕಾದವಳು ನನಗೆ ಬೇಕಾದಾಗಲೆಲ್ಲ ಆಸರೆಯಾಗಿ ಒದಗಲು..." ಮನಸು ಬಿಡದೆ ಬಡಬಡಿಸುತ್ತಿತ್ತು.
ಶೀಲಾಳ ಸಹಾಯದಿಂದ ಶೇವ್ ಮಾಡಿಸಿ, ಸ್ಪಾಂಜ್ ಬಾತ್ ಮಾಡಿಸಿ, ತನಗಾಗಿ ತಂದಿದ್ದ ಹೊಸ ಕೆನೆ ಬಣ್ಣದ ಜುಬ್ಬ ಪಾಯಿಜಾಮ ತೊಡಿಸಿ ತಯಾರು ಮಾಡಿ, ತಲೆ ಬಾಚುತ್ತ ಕೂತ ಅದಿತಿಯ ವಾತ್ಸಲ್ಯಮಯಿ ಮುಖಭಂಗಿ ಅಕ್ಕನ ಪ್ರತಿರೂಪವೆನಿಸಿತು. ಕಲ್ಯಾಣಮಂಟಪದೆದುರು ಪುನಃ ತನ್ನನ್ನು ಸ್ಟ್ರೆಚರ್ ಸಮೇತ ಒಳಗೊಯ್ದಾಗ ತನಗ್ಯಾರ ಮುಖವೂ ಕಾಣದಿದ್ದರೂ ಅವುಗಳಲ್ಲಿರಬಹುದಾದ ಪ್ರಶ್ನೆಗಳು, ಕರುಣಾಪೂರಿತ ದೃಷ್ಟಿಗಳ ಕಲ್ಪನೆಯೇ ಚುಚ್ಚಿದಂತೆನಿಸಿತು. ಆದರೂ ನನ್ನ ಕಂದಮ್ಮನ ಮದುವೆ, ಪುಳಕದ ಅನುಭವವನ್ನೇ ಮರೆತಿದ್ದ ಮೈಮನಗಳು ಮೊದಲಬಾರಿಗೆಂಬಂತೆ ಪುಳಕಿತವಾದವು.
ಮಂಟಪದೆದುರು ಬಂದು "ಬಾ ತುಂಗಾ.." ಕರೆದ ಅದಿತಿಯ ದನಿಗೆ ತುಂಗಾ ಬಂದಳು,
"ಮಾಮಾಗೆ ನಮಸ್ಕರಿಸಮ್ಮಾ..," ನಮಸ್ಕರಿಸಿದಳು, "ಬಾ ಇಲ್ಲಿ ಸರಿಯಾಗಿ ನಿನ್ನ ಚಂದದ ಮುಖ ನೋಡಲಿ" ಬಂದು ಗೊಂಬೆಯಂತೆ ಮುಂದೆ ನಿಂತ ತುಂಗಾಳ ಮುಖದಲ್ಲೂ ಅಕ್ಕನದೇ ಚೆಲುವು. ಸದ್ಯ ಇವಳು ತುಳಸಿಯನ್ನು ಹೋಲಿಕೊಂಡು ಹುಟ್ಟಿಲ್ಲ.. ಅರೇ..ಇದೇನು, ಮಗಳು ಅವಳಮ್ಮನನ್ನು ಹೋಲುತ್ತಿಲ್ಲವೆಂಬುದು ಅಪ್ಪನಿಗೆ ಖುಶಿ ಕೊಡುತ್ತಿದೆಯೇ?! ಹೌದು... ನಾನೀಗ ತುಳಸಿಯನ್ನು ದ್ವೇಷಿಸುತ್ತಿದ್ದೇನೆ ಚೀರಿಹೇಳಿತು ಅದೇ ಅಂದು ಬೆಟ್ಟದಷ್ಟು ಪ್ರೀತಿಸುತ್ತಿದ್ದ ಮನಸು. ತುಂಗಾಳನ್ನು ಮನಸು ಕೈಚಾಚಿ ಆಶೀರ್ವದಿಸಿತು.. ನೂರ್ಕಾಲ ನಿನ್ನವರೊಂದಿಗಿನ ಬಾಳು ನಿನ್ನನ್ನು ಸಂತೋಷದಲ್ಲಿಡಲಿ.. ಪಕ್ಕದಲ್ಲೇ ಬಾಗಿ ತನ್ನತ್ತ ನೋಡಿದ ತುಳಸಿಯ ಮುಖದಲ್ಲಿದ್ದದ್ದು ಅಸಹನೆಯೇ, ಸಿಟ್ಟೇ, ದ್ವೇಷವೇ, ತಿರಸ್ಕಾರವೇ ಒಂದೂ ಗೊತ್ತಾಗಲಿಲ್ಲ, ಅಲ್ಲಿ ಮಾರ್ದವ ಭಾವವ್ಯಾವುದೂ ಇರಲಿಲ್ಲವೆಂದಷ್ಟೇ ಅರ್ಥವಾಯಿತು. ಧಾರೆಯ ವೇಳೆ, ಕೈಮುಟ್ಟಿಸಿ ಧಾರೆಯ ಕಲಶವನ್ನು ಮಂಟಪದೊಳಕ್ಕೆ ಒಯ್ದರು. ಧಾರೆ ಮುಗಿದು, ಒಪ್ಪಿಸಿಕೊಡುವ ಸಂಪ್ರದಾಯವೂ ಮುಗಿದಾಗ, ಎಲ್ಲೋ ಏನೋ ಕಳಚಿಕೊಂಡಂಥ ಭಾವನೆ. ಅವರಾಗಲೇ ಕಳಚಿಕೊಂಡಿದ್ದರಾದರೂ ತಾನಂಟಿಕೊಂಡೇ ಇದ್ದೆನಲ್ಲಾ.. ಸಂಕಟದ ಗಳಿಗೆ.. ಮತ್ತೆ ಕಣ್ಣು ಅಕ್ಕನನ್ನರಸಿತು.. ಅಕ್ಕ ಕಾಣಲೇ ಇಲ್ಲ, ತನ್ಮಯ್ ನೂ ಕಾಣಲಿಲ್ಲ. ಮದುವೆಯ ಸಂಪ್ರದಾಯ ಎಲ್ಲ ಮುಗಿದಾದ ಮೇಲೆ ತನ್ನನ್ನು ತನ್ನ ಮನೆಗೊಂದು ಗಳಿಗೆಯಾದರೂ ಕರೆದುಕೊಂಡು ಹೋದಾರೇನೋ ಎಂಬ ನಿರೀಕ್ಷೆಯೂ ಅದಿತಿ "ಬಾ ಮಾಮಾ ಮನೆಗೆ ಹೋಗುವಾ.. ನಾಳೆ ನಿನ್ನನ್ನ ಮತ್ತೆ ಬೆಳಿಗ್ಗೆ ಬೇಗ ಅಲ್ಲಿಗೆ ಕರೆದೊಯ್ಯಬೇಕಲ್ಲಾ" ಅಂದಾಗ ಸುಳ್ಳಾಯಿತು. ಬೇಕೆಂದೇ ತುಳಸಿ ಅಕ್ಕಪಕ್ಕ ಇದ್ದಾಗಲೇ ಆ ಮಾತನ್ನು ಹೇಳಿದ್ದಳು ಅದಿತಿ, ಎಲ್ಲೋ ದೂರದ ಆಸೆ, ತಾನೇ ನಿಂತು ಮುತುವರ್ಜಿಯಿಂದ ಮಾಮಾ ಕಟ್ಟಿಸಿದ ಮನೆ, ಅತ್ತೆ ಒಂದು ಗಳಿಗೆಗಾದರೂ ಬರಮಾಡಿಸಿಕೊಂಡಾರೇನೋ ...ಅಂತ. ತುಳಸಿ "ಹೌದು ಹೌದು ಬೇಗನೇ ಹೊರಡಿ ನಾಳೆ, ಅಲ್ಲಿತನಕ ಹೋಗುವಾಗ ಸಂಜೆಯೇ ಆಗಿಬಿಡುತ್ತದೆ.. ನಿನಗೂ ನಾಡಿದ್ದಾದರೂ ಆಫೀಸಿಗೆ ಹೋಗಲೇಬೇಕಲ್ಲಾ" ಅನ್ನುತ್ತಾ ಅತ್ತ ನಡೆದಿದ್ದಳು, ತಾನ್ಯಾರೋ ಎಂಬಂತೆ.. ಅಲ್ಲಿಯವರೆಗೂ ತುಳಸಿಯ ಎಲ್ಲ ತನ್ನೊಂದಿಗಿನ ಸಲ್ಲದ ವ್ಯವಹಾರಗಳಿಗೂ ಏನೋ ಒಂದು ಸುಳ್ಳುಪಳ್ಳಾದರೂ ಸಮಜಾಯಿಷಿ ಕೊಟ್ಟುಕೊಂಡೇ ಬಂದಿದ್ದರಾದರೂ ಈಗಮಾತ್ರ ಮೊದಲ ಬಾರಿಗೆ ಇಲ್ಲೇ ಇದೇ ಗಳಿಗೆ ಸಾಯಬೇಕೆನಿಸಿತು ನಾಯಕರಿಗೆ. ಸಾವಿನ ಮುಂದೆ ಕೈಕಾಲು ಸರಿ ಇರುವವರೇ ನಿರ್ವೀರ್ಯರು, ಇನ್ನು ಇವರು..?! ಮತ್ತೆ ಮನಸು ಕೂಗಿ ಕರೆಯಿತು ಆರ್ತವಾಗಿ.."ಅಕ್ಕಾ..". ಯಾರೂ ಓಗೊಡಲಿಲ್ಲ. ..
ಮನೆಗೆ ಹಿಂತಿರುಗಿದ ಮೇಲೆ ಅದಿತಿ "ನಿನ್ನ ಪುತ್ಥಳಿಯನ್ನ ಅವಳ ಗಂಡನಿಗೊಪ್ಪಿಸಿಬಿಟ್ಟೆ ಅಂತ ಬೇಸರಾನಾ ಮಾಮಾ, ಬಿಡು, ತುಂಗಾಗೇನು, ಮಹಾರಾಣಿಯ ಹಾಗಿರ್ತಾಳೆ ಅನ್ನೋದಕ್ಕೆ ನಾನೇ ಜವಾಬ್ದಾರಿ. ಒಳ್ಳೆಯ ಹುಡುಗ. ನನ್ನ ಗಂಡನ ತಮ್ಮನೇ.. "ಅನ್ನುತ್ತಾ ಹೋದಳು. ಕಣ್ಣು ಅಪ್ರಯತ್ನ ಅವಳ ಕೊರಳ ಕಡೆ ಹೋಯಿತು. ಕರಿಮಣಿ ಇಲ್ಲ.. "ಹೂಂ ಮಾಮಾ, ಕರಿಮಣೀ ಇಲ್ಲ.. ಮದುವೆಯಾಗಿ ಒಂದೇ ವರ್ಷಕ್ಕೆ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಇವರು ವಿದ್ಯುತ್ ಅವಘಡವೊಂದರಲ್ಲಿ ತೀರಿಕೊಂಡರು. ಥೇಟ್ ನೀನಲ್ಲಿ ಇದ್ದಂತೆ ನಾನಿಲ್ಲಿ ಒಂಟಿ ಮಾಮಾ" ಅಂದಳು, ಕಣ್ಣಲ್ಲಿಷ್ಟೂ ನೀರಿರಲಿಲ್ಲ. ಒಂಟಿ?! ಅಕ್ಕ ಎಲ್ಲಿ?! ಅವ್ಯಕ್ತವಾದದ್ದೊಂದು ಭಯದಿಂದಲೋ ಅಥವಾ ಅನಿಶ್ಚಿತತೆಯ ಅಬ್ಬರಕ್ಕೋ ಕಣ್ಣು ಪಟಪಟನೆ ಬಡಿದುಕೊಂಡವು. ಅರ್ಥವಾದವಳಂತೆ.."ಓ ನಿನ್ನಕ್ಕನಾ, ಅವಳಾಗಲೇ ನಾಳೆ ನಾವಲ್ಲಿಗೆ ಹೋದಾಗ ಅಲ್ಲಿ ಜಾಗ ಸರಿ ಇಲ್ದೇ ಇದ್ರೆ... ಅಂತ ನಮ್ಮ ಇರುವಿಕೆಗೆ ಆ ಜಾಗವನ್ನ ತಕ್ಕುದಾಗಿ ಮಾಡಲು ಅತ್ತ ಹೋಗಾಯಿತು.." ಅಂತ ಮೇಲೆ ಕೈತೋರಿದಳು. ಪುನಃ ಕಣ್ಣಲ್ಲದೇ ನಿರ್ವಿಕಾರತೆ. ಇವಳ ಕಣ್ಣೀರೆಲ್ಲಾ ನಾಯಕರೊಳಗೆ ಹರಿದುಬಂದಿದೆಯೇನೋ ಎಂಬಂತೆ ಅವರ ಕಣ್ಣು ಸುರಿಸುತ್ತಲೇ ಇತ್ತು. ಎದೆಯೊಡೆದು ಹೋದಂತೆ, ದುಖಃದ ಅಣೆಕಟ್ಟೊಡೆದು ಮೈಯ್ಯೊಳಗೆಲ್ಲ ಅದೇ ಅದು ತುಂಬಿ ಉಕ್ಕಿ ಹರಿದ ಹಾಗೆ, ತೀವ್ರವಾದ ನೋವೊಂದು ಸರ್ವತ್ರ ವ್ಯಾಪಿಸಿ ಒಂದು ಕ್ಷಣ ಸತ್ತೇ ಹೋದಂತನಿಸಿತು ನಾಯಕರಿಗೆ.. ಆದರೆ ಅವರಿನ್ನೂ ಸತ್ತಿರಲಿಲ್ಲ. ಮತ್ತೆ ಕಣ್ಣಷ್ಟೇ ತುಂಬಿದವು, ತುಂಬಿ ಹರಿದವು.
ಬೆಳಗಾಯಿತು. ಮತ್ತದೇ ಅಂಬುಲೆನ್ಸೆ ನಲ್ಲಿ ಕಾಸರಗೋಡತ್ತ ಪಯಣ..ಕೈ ಮತ್ತೆ ಅದಿತಿಯ ಕೈಯ್ಯೊಳಗೆ.. ಅಕ್ಕನ ಬೆಚ್ಚನೆ ಆತ್ಮೀಯತೆಯೆಲ್ಲ ತನ್ನೊಳಗೆ ಹರಿದುಬರುತ್ತಿದೆಯೇನೋ ಎನ್ನುವಷ್ಟು ಆಪ್ತವಾಗಿತ್ತು ಆ ಸ್ಪರ್ಶ. "ಬಿಟ್ಟುಬಿಡು ಮಾಮಾ.. ನೋಡು ಎಲ್ಲ ಇತರ ಸಂಬಂಧಗಳು ಒಂದು ಉದ್ದೇಶವಿಟ್ಟುಕೊಂಡೇ ಹುಟ್ಟುತ್ತವೆ ,ಉಳಿಯುತ್ತವೆ ಮತ್ತದು ಪೂರ್ತಿಯಾದ ಮೇಲೆ ಅಥವಾ ಎದುರಿನ ವ್ಯಕ್ತಿತ್ವದ ಮಿತಿಯೊಳಗೆ ತಮ್ಮ ನಿರೀಕ್ಷೆ ಫಲಪ್ರದವಲ್ಲ ಅನಿಸಿದಾಗ ಕಳಚಿಕೊಳ್ಳುತ್ತವೆ ಎನ್ನುವುದನ್ನು ಸುಲಭವಾಗಿ ಅರಗಿಸಿಕೊಳ್ಳುವ ನಾವು ಗಂಡ -ಹೆಂಡತಿ ಮತ್ತು ರಕ್ತ ಸಂಬಂಧಗಳ ವಿಷಯ ಬಂದಾಗ ಕೊನೆಯ ಗಳಿಗೆಯವರೆಗೂ ಸರಿಯಾದೀತು ಅನ್ನುವ ನಿರೀಕ್ಷೆಯಲ್ಲಿ ಮತ್ತದು ಸರಿಯಾಗದೆ ಉಳಿಯುವ ನಿರಾಸೆಯಲ್ಲಿ ಬಾಳುವುದು ಯಾಕೆ? ಬಿಡು, ಅವರು ನಿನ್ನಿಂದ ವಿಮುಖರಾಗುವುದೇ ಬಾಳಿನ ಅತ್ಯುತ್ತಮ ನಿರ್ಧಾರ ಅಂದುಕೊಂಡಿರುವಾಗ ಅಲ್ಲಿ ನಿನಗ್ಯಾಕೆ ಅವರ ಒಲವಿನ, ಗಮನದ ನಿರೀಕ್ಷೆ? ಅತ್ತೆ ಅವರ ಮಟ್ಟಿಗೆ ತಾನಿರುವುದೇ ಸರಿ ಅಂದುಕೊಂಡು ಬಾಳುತ್ತಿದ್ದಾರೆ, ತನ್ನಷ್ಟು ಕಷ್ಟದಲ್ಲಿರುವವರು ಯಾರೂ ಇಲ್ಲವೆಂದುಕೊಂಡಿರುವ ಅಲ್ಪಜ್ಞಾನ ಅವರದು. ತುಂಗಾ ಅವರನ್ನೇ ನೋಡಿಕೊಂಡು ಅವರದೇ ನಿಲುವನ್ನು ಒಪ್ಪಿಕೊಳಲಾಗದಿದ್ದರೂ ಸ್ವೀಕರಿಸಿಕೊಂಡು ಬಾಳಿದ ಜೀವ. ಇನ್ನು ತನ್ಮಯ್.. ನಮಗೆ ಅವನದೊಂದು ಶಾಪಗ್ರಸ್ತ ಜೀವನವೆನಿಸಿದರೂ ಅವನ ಮಟ್ಟಿಗೆ ಅವನು ಇವ್ಯಾವುವೂ ಬಂಧಗಳ ಗೋಜಿಲ್ಲದೇ ಬದುಕುತ್ತಿದ್ದಾನೆ. ಆದರೂ ಅಮ್ಮ ಸತ್ತ ಆಸುಪಾಸಿನ ದಿನಗಳಲ್ಲಿ ವ್ಯಘ್ರವಾಗಿತ್ತಂತೆ ಅವನ ನಡವಳಿಕೆ. ವಾರಕ್ಕೊಮ್ಮೆ ಅವನನ್ನೂ ಹೋಗಿ ನೋಡಿಕೊಂಡು ಬರುತ್ತಿದ್ದೇನೆ. ಅವನಿಗೆ ನನ್ನ ಗುರ್ತಿಲ್ಲ, ನನ್ನ ಮನಸಿನ ಸಮಾಧಾನಕ್ಕಷ್ಟೆ....ಮತ್ತೆ ನನ್ನ ಗಂಡನ ಆಫೀಸಿನಲ್ಲಿ ನನಗೆ ಕಾಂಪೆನ್ಸೇಟರಿ ಗ್ರೌಂಡ್ ಮೇಲೆ ಕೆಲಸ ಸಿಕ್ಕಿದೆ. ಹೇಗೋ ಬಾಳುತ್ತಿದ್ದೇನೆ. ನಿನ್ನನ್ನು ನನ್ನ ಮನೆಯಲ್ಲಿ ನಾನೇ ನೋಡಿಕೊಳ್ಳಬೇಕೆಂದು ತುಂಬಾ ಆಸೆಯಿದೆ. ಆದರೆ ನಿನಗೂ ಅತ್ತೆಗೂ ಒಂದೇ ಊರಿನಲ್ಲಿರಿಸಿ ಅದನ್ನೊಂದು ಧರ್ಮಸಂಕಟವಾಗಿಸುವುದು ಬೇಡವೆನಿಸುತ್ತಿದೆ. ಮತ್ತೆ ಇಷ್ಟು ವರ್ಷಗಳಲ್ಲಿ ನೀನೇನಾದರೂ ಕಳಚಿಕೊಳ್ಳುತ್ತ ನಡೆದಿದ್ದರೆ ಮತ್ತೆ ನಿನಗೆ ಅಂಟಿಸುವ, ಅಂಟಿಕೊಳ್ಳುವ ವ್ಯಾಪಾರ ಬೇಡವೆನಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚು ನಿನ್ನ ಈ ಸ್ಥಿತಿ ನಾ ನೋಡಲಾರೆ ಮಾಮಾ.." ಮಾತಾಡುತ್ತಾ ಆಡುತ್ತಾ ಇದುವರೆಗೆ ತುಂಬ ಗಟ್ಟಿ ತಾನೆಂಬಂತೆ ಬಿಂಬಿಸಿಕೊಂಡು ಬಂದ ಹುಡುಗಿ ಬಿಕ್ಕಿಬಿಕ್ಕಿ ಅತ್ತುಬಿಟ್ಟಿತು. ಬಾಚಿ ತಬ್ಬಿ ಸಂತೈಸುವ ಮನಸಾಯಿತು ನಾಯಕರಿಗೆ. ಅದೆಷ್ಟೋ ದಿನಗಳ ನಂತರ ಒಮ್ಮೆ ಕಣ್ಣು ನೀರ್ಗರೆಯುವುದನ್ನು ನಿಲ್ಲಿಸಿದವು "ಬಾ ಕಂದಾ, ನಾನಿಲ್ಲವೇ ನಿನಗೆ, ನಿನ್ನ ಬಾಳಿನ ಒತ್ತಾಸೆಯಾಗಿ ಇಲ್ಲಿ ಹೀಗೆ ಇನ್ನಷ್ಟು ಕಾಲ, ನೀ ನಿಜವಾಗಿಯೂ ಒಂಟಿಬಾಳು ಬಾಳಬಲ್ಲಷ್ಟು ಪೂರ್ತಿ ಗಟ್ಟಿಯಾಗುವವರೆಗೂ ನಿನ್ನ ಪಾಲಿಗೆ ನಾನಿದ್ದೇನೆ..."
ಗಂಟಲುಬ್ಬಿ ಬಂದ ಮಾತುಗಳಲ್ಲೇ ಸೆರೆಯಾದವು. ಆದರೆ ಅವಳಿಗವು ಕೇಳಿಸಿದವು. "ಥ್ಯಾಂಕ್ಸ್ ಮಾಮಾ." ಅಂದಳು ಕೈಯ್ಯನ್ನ ಹಾಗೇ ಮೆಲ್ಲ ಅದುಮುತ್ತಾ, ಕಣ್ಣೊರೆಸಿಕೊಳ್ಳುತ್ತಾ.. ಮರುದಿನ ವಾಪಾಸು ಬಂದವಳೇ ಆಫೀಸಿಗೆ ಹೊರಡುತ್ತಿದ್ದಾಗ ಮೊಬೈಲ್ ರಿಂಗಣಿಸಿತು. ಎತ್ತಿಕೊಂಡು ಹಲೋ ಅಂದಳು. ಅತ್ತಲಿಂದ ಶೀಲಾ ಬಿಕ್ಕುತ್ತಿದ್ದಾಳೆ. "ಅಕ್ಕಾ, ಅಪ್ಪಾ..." ಮುಂದೆ ಹೇಳಲಾಗಲಿಲ್ಲ ಅವಳಿಗೆ. "ಅಯ್ಯೋ ನಿನ್ನಾ... ನಿನ್ನೆ ತಾನೇ ನಾನಿರುತ್ತೇನೆ ಅಂದಿದ್ದೆಯಲ್ಲೋ ಮಾಮಾ, ಅಕ್ಕನಿರುವ ಜಾಗ ಗೊತ್ತಾದ ಕೂಡಲೇ ಅಕ್ಕನ ಮಗಳ ಯೋಚನೆಗಿಂತ ಅವಳ ಸಾನ್ನಿಧ್ಯದ ಆಸೆಯೇ ಮೇಲಾಯಿತೇನೋ ನಿನಗೆ..." ತನ್ನಷ್ಟಕ್ಕೇ ಗೊಣಗುತ್ತಾ ಕುಸಿದು ಕೂತ ಅದಿತಿಗೆ ತನಗೇನಾದರೂ ಹುಚ್ಚು ಹಿಡಿಯುತ್ತಿದೆಯೇ ಅನ್ನಿಸಿತೊಂದು ಬಾರಿ. ಸಾವರಿಸಿಕೊಂಡು ಫೋನ್ ನಲ್ಲಿ "ಸರಿಸರಿ...ನಾವೆಲ್ಲ ಈಗಲೇ ಹೊರಟು ಬರುತ್ತಿದ್ದೇವೆ" ಅಂದಳು. ಮಾಮಾನ ಮನೆಗೆ ಹೋದರೆ ಅತ್ತೆ ಒಂದು ಕಡೆ ಸುಮ್ಮನೆ ಕೂತಿದ್ದರೂ, ಮುಖದಲ್ಲೇನೂ ನೋವಿನ ಸೂಚನೆಯಿಲ್ಲ, ಕೈ ತಲೆಯ ಮೇಲಿಲ್ಲ, ಬೆರಳು ಸೀರೆ ಸೆರಗಿನಂಚಿನೊಡನೆ ಆಟವಾಡುತ್ತಿವೆ, ತನ್ನನ್ನು ಕಂಡೊಡನೆ " ನಿನ್ನ ಮಾಮಾನ ನಿನ್ನೆ ಕರೆದುಕೊಂಡು ಬಂದು ನಮಗೆಲ್ಲ ಅವರ ಕೊನೆಯ ದರ್ಶನ ಮಾಡಿಸಿ ಪುಣ್ಯ ಮಾಡಿದೆ ಅನ್ನಬೇಕೋ, ಅಥವಾ ಅವರ ದೇಹಕ್ಕೆ ಇನ್ನಿಲ್ಲದ ಆಯಾಸ ಕೊಟ್ಟು ಅವರ ಸಾವಿಗೆ ಕಾರಣವಾದ ಪಾಪ ಮಾಡಿದೆ ಅನ್ನಬೇಕೋ ಗೊತ್ತಾಗುತ್ತಿಲ್ಲ" ಅಂದರು. ಅಯ್ಯೋ ನಿಮ್ಮದು ಇದ್ದದ್ದೇ ಅಂದುಕೊಂಡು "ಏನೂ ಅನ್ನಬೇಡಿ ಅತ್ತೆ, ನಡೀರಿ, ತುಂಗಾ, ಅವಳ ಗಂಡ ಎಲ್ಲರನ್ನೂ ಸೇರಿಸಿಕೊಂಡು ಹೋಗಿ ಮಾಮಾನ್ನ ಅವರ ಮನೆಗೆ ಈಗಲಾದ್ರೂ ಕರ್ಕೊಂಡು ಬರೋಣ" ಅಂದಳು. ".. ಸುಮ್ನಿರು, ತುಂಗಾ ಈಗಷ್ಟೇ ಅತ್ತೆ ಮನೆಗೆ ಕಾಲಿಟ್ಟಿದ್ದಾಳೆ, ಅವಳನ್ನೇನು ಕರೆದುಕೊಂಡು ಹೋಗುವುದು, ಇಷ್ಟಕ್ಕೂ ನಾವೇಕೆ ಹೋಗಬೇಕು, ಇಲ್ಲಿಗೇ ಹೆಣ ಕಳಿಸಲು ಹೇಳಿದ್ದೇನೆ. ಸಂಜೆಯೊಳಗೆ ಬರ್ತದೆ. .."ನಿರ್ವಿಕಾರ ಹೇಳುತ್ತಲೇ ಹೋಗುತ್ತಿದ್ದ ಅತ್ತೆಯ ಮಾತಿಗೆ ಅದಿತಿಯ ಮೌನ ಕಟ್ಟೆಯೊಡೆಯಿತು..
" ಮನುಷ್ಯರಾ ನೀವು? ಅವರ ಜೀವನದ ಒಂದೊಂದು ಕ್ಷಣವನ್ನೂ ನಿಮ್ಮದೊಂದು ನಗುವಿಗಾಗಿ ಮುಡಿಪಿಟ್ಟು ಬಾಳಿದವರು, ನಿಮಗಾಗಿ ಮಾಡಬಾರದ್ದನ್ನೆಲ್ಲ ಮಾಡಿ, ತನ್ನೆದೆಯ ಮೇಲೆ ಕಲ್ಲಿಟ್ಟುಕೊಂಡು ಬಾಳಿದವರು ಸತ್ತು ಮಲಗಿದಾಗಲೂ ನಿಮಗೇನೂ ಅನಿಸುತ್ತಿಲ್ಲವೇ ಅತ್ತೆ? ಅವರ ದುಡಿಮೆಯ ಕಾಸುಕಾಸನ್ನು ನೀರಿನಂತೆ ಖರ್ಚು ಮಾಡುವಾಗಲೂ ಅವರ ಕಡೆಗಿನ ಋಣೀ ಪ್ರಜ್ಞೆ ಎದ್ದೇಳಲಿಲ್ಲವೇ? ಅವರು ಬೆವರು ಸುರಿಸಿ ಕಟ್ಟಿಸಿದ ಮನೆಯೊಳಗೆ ಹಾಯಾಗಿ ಕೂತಿದೀರಲ್ಲಾ, ಬದುಕಿದ್ದಾಗ ಚಡಪಡಿಸಿಯೇ ಕಳೆದರು, ಈಗ ಸತ್ತಾಗಿದೆ, ಇನ್ನು ಅವರಿಲ್ಲಿಗೆ ಹೆಣ ತರುವಷ್ಟು ಹೊತ್ತು ಆ ಆತ್ಮ ತನ್ನವರು ಕೊಡುವ ಗಮನಕ್ಕಾಗಿ ಕಾಯುತ್ತಾ ಮುಳ್ಳಿನ ಮೇಲೆ ಕೂತಂತೆ ಚಡಪಡಿಸುತ್ತಿರುತ್ತದೆ ಅನ್ನುವ ಯೋಚನೆಯೂ ಬರುವುದಿಲ್ಲವೇ ನಿಮಗೆ? ಊದಿಕೊಂಡು ಗುರ್ತಿಸಲಾಗದಷ್ಟು ಅದು ಬದಲಾಗುವ ಮುನ್ನ ಸಾಧ್ಯವಾದಷ್ಟು ಬೇಗ ಹೋಗಿ ಅವರ ಮುಖದರ್ಶನ ಮಾಡುವ ಅನಿಸುವುದಿಲ್ಲವೇ? ಥೂ.. ನಿಮ್ಮನ್ನು ಕಟ್ಟಿಕೊಂಡ ದಿನವೇ ಮಾಮನ ಜೀವನದ ದುರ್ದೆಶೆ ಆರಂಭವಾಯಿತು, ಅವನದನ್ನೇ ಸುಖದ ಪರಮಾವಧಿ ಅಂದುಕೊಂಡು ಬಾಳಿದ ಪಾಪ, ನೀವು ಕಾಲಲೊದ್ದು ದೂಡಿದರೂ ನಿಮ್ಮ ನೆನಪಿನ ಕಾಟದಲ್ಲಿ ಬಾಳು ಅಸಹನೀಯವಾಗಿಸಿಕೊಂಡಾದರೂ ಮಾನಸಿಕವಾಗಿ ನಿಮಗಂಟಿಕೊಂಡೇ ನರಳಿ ನರಳಿ ಬದುಕಿದ. ಈಗ ಅವ ಸತ್ತದ್ದಲ್ಲ, ಅಂದುಕೊಳ್ತೇನೆ, ನೀವು ಕಾಲಿಟ್ಟ ಈ ನೆಲದ ಮೇಲಿದ್ದಷ್ಟೂ ಸಮಯ ನಿಮ್ಮಗಳ ಯೋಚನೆಯಿಂದ ಬಿಡುಗಡೆಯಾಗುವುದು ಸಾಧ್ಯ ಇರಲಿಲ್ಲ ಅವನಿಗೆ, ಸತ್ತು ಮುಕ್ತನಾದ. ಯಾರಂದದ್ದು ಅಂತಕನ ದೂತರಿಗೆ ದಯವಿಲ್ಲಾ ಅಂತ, ಅವರ ದಯೆಯಿಂದಲೇ ನನ್ನ ಮಾಮನಿಗೆ ಮುಕ್ತಿ ಸಿಕ್ಕಿದ್ದು ನಿಮ್ಮ ಸಹವಾಸದಿಂದ. ಹಾಳಾಗಿ ಹೋಗಿ, ನಾನಂತೂ ಹೋಗುವವಳೇ, ನನ್ನ ಮಾಮನ್ನ ನಾನೇ ಕರ್ಕೊಂಡು ಬರುವವಳು.." ಬುಸುಗುಡುತ್ತಾ ಎಂದೂ ತೋರದ ರೂಪತೋರಿದ ಅದಿತಿಯನ್ನು ಬಿಟ್ಟ ಬಾಯಿಂದ ನೋಡುತ್ತಾ ಕುಳಿತಳು ತುಳಸಿ. ಫೋನೆತ್ತಿಕೊಂಡು ಕಾಸರಗೋಡಿಗೆ ಮಾತಾಡಿದವಳೇ "ಛೇ...ಹೊರಟಾಯ್ತಾ?!" ಅಂದಳು. ಬುಸುಬುಸು ಎನ್ನುತ್ತಾ ಹೊರಬಂದವಳು ಗೇಟ್ ನ ಎದುರಿನ ಕಲ್ಲುಬೆಂಚಿನಲ್ಲೇ ಕೂತಳು ಮನೆಯೊಳಗೆ ಕಾಲಿಡುವುದಕ್ಕೇ ಅಸಹ್ಯವೆನಿಸಿದಂತೆ. ರಾತ್ರಿಯ ಆಯಿತು. ಹೆಣ ಬರುವಷ್ಟು ಹೊತ್ತಿಗೆ. ಅಲ್ಲಿನವರು ಗಾಡಿಯಿಂದಿಳಿದ ಕೂಡಲೇ ಧಾವಿಸಿ ಬಂದವಳು..ಹೊರತಂದ ಬಾಡಿಯನ್ನು ತನದೊಂದು ವಸ್ತುವನ್ನು ಯಾರೋ ದೂರದಿಂದ ತಂದುಕೊಟ್ಟಾಗ ಕಸಿದುಕೊಳ್ಳುವ ಹಾಗೆ ಎಲ್ಲಿ.. ಎಲ್ಲಿ..ಅನ್ನುತ್ತ ತಳ್ಳಿಕೊಂಡು ಬಳಿಸಾರಿದಳು. ಕೆಳಗಿಳಿಸಿದ ಕೂಡಲೇ "ಅಯ್ಯೋ ಕಣ್ಣು, ಬಾಯಿ ಮುಚ್ಚದೇ ಎಂಥದು ನೀವು?! ಕಾಲ್ಬೆರಳುಗಳನ್ನಾದರೂ ಸೇರಿಸಿ ಕಟ್ಟಬಹುದಿತ್ತಲ್ಲಾ, ನೋಡಿ ಹೇಗೆ ಸೆಟೆದುಕೊಂಡಿವೆ, ಈಗ ಬಲಾತ್ಕಾರದಲ್ಲಿ ಅವನ್ನ ಕಟ್ಟಬೇಕು.. ಛೇ..ಜೀವ ಇಲ್ಲದಿದ್ರೂ, ಅವ್ನಿಗೆ ನೋವಾಗದಿದ್ರೂ ನಮಗೆ ಅಷ್ಟು ಬಲಾತ್ಕಾರ ಮಾಡ್ಲಿಕ್ಕೆ ಹಿಂಸೆ ಆಗಲ್ವೇನ್ರೀ.. ಇರ್ಲಿ ಬಿಡಿ, ಅವನ ಋಣದಲ್ಲಿ ಬಿದ್ದು ಹೊರಳಾಡುತ್ತಿರುವವರೇ ಕೊಡಬೇಕಾದ ಕನಿಷ್ಠ ಗಮನ ಕೊಡುವ ಮನಸ್ಥಿತಿಯಲ್ಲಿಲ್ಲ, ಅಲ್ಲಿ ದಿನಕ್ಕೆಷ್ಟು ಇಂಥ ಹೆಣಗಳ ವಿಲೇವಾರಿ ಮಾಡಬೇಕೋ ಏನೋ ನೀವು, ನಿಮಗೆ ಅವನ ಕಾಳಜಿ ಬಂದೀತೆಂದು ನಾನು ಹೇಗೆ ನಿರೀಕ್ಷಿಸಬಲ್ಲೆ?!.."ಅನ್ನುತ್ತಾ ಮಾತಾಡುತ್ತಲೇ ಪುರೋಹಿತರನ್ನು ಕರೆಯುತ್ತಾ, ಚಟ್ಟ ಕಟ್ಟುವವರನ್ನು ವಿಚಾರಿಸಿಕೊಳ್ಳುತ್ತಾ, ಮುಂದಿನ ಕಾರ್ಯಗಳತ್ತ ಗಮನ ಹರಿಸತೊಡಗಿದ ಅದಿತಿಯನ್ನು ಬಿಟ್ಟ ಕಂಗಳಿಂದ ನೋಡುತ್ತಾ ನಿಂತಿದ್ದರು ತುಳಸಿ ಮತ್ತು ತುಂಗಾ.. ಮೊದಲಬಾರಿಗೆ ತಮ್ಮದೇ ಮನೆಯಂಗಳದಲ್ಲಿ ತಾವೇ ಪರಕೀಯರು ಅನಿಸತೊಡಗಿತು ಅವರಿಗೆ.